Sirach - Chapter 6
Holy Bible

1 : ಲಜ್ಜಾಪಮಾನಗಳು ಕೆಟ್ಟ ಹೆಸರಿನಿಂದ ಬರುತ್ತವೆ. ಎರಡು ನಾಲಗೆಯುಳ್ಳ ಪಾಪಿಗಳ ಗತಿ ಇಂತಹುದೇ.
2 : ಆಶಾಪಾಶದಿಂದ ಉಬ್ಬಿಹೋಗಬೇಡ ಮನಸ್ಸು ಬಂದಂತೆ ನಿನ್ನ ಹೃದಯವನ್ನು ಅವು ಸೀಳಿಬಿಟ್ಟಾವು ಹೋರಿಯಂತೆ.
3 : ನಿನ್ನ ಎಲೆಗಳನ್ನು ನೀನೇ ತಿಂದು ಫಲವನ್ನು ಹಾಳುಮಾಡಿಕೊಳ್ಳುವೆ ಅಂತಿಮವಾಗಿ, ಒಣಗಿದ ಬರಲುಮರದಂತೆ ನಿಂತುಕೊಳ್ಳುವೆ.
4 : ಯಾವನಲ್ಲಿ ಕೆಟ್ಟ ಮನಸ್ಸಿದೆಯೋ ಅದು ಕೆಡಿಸುವುದು ಅವನನ್ನೆ ಅವನನ್ನು ನಗೆಗೀಡು ಮಾಡುವುದದು ವೈರಿಗಳ ಎದುರಿನಲ್ಲೆ.
5 : ಸವಿನುಡಿ ಹೆಚ್ಚಿಸುವುದು ಸ್ನೇಹಿತರನ್ನು ಸರಳ ನುಡಿ ಹೆಚ್ಚಿಸುವುದು ಸತ್ಕಾರವನ್ನು.
6 : ಸಮಾಧಾನದಿಂದ ವರ್ತಿಸು ಹಲವರೊಡನೆ ಸಲಹೆಗಾರ ಮಾತ್ರ ನಿನಗಿರಲಿ ಸಾವಿರದಲ್ಲೊಬ್ಬನೇ.
7 : ಸ್ನೇಹಬೆಳೆಸುವ ಮುನ್ನ ವ್ಯಕ್ತಿಯನ್ನು ಪರೀಕ್ಷಿಸು ಯಾರನ್ನೂ ಕೂಡಲೇ ನಂಬಿಬಿಡಲು ಅವಸರಪಡದಿರು.
8 : ಸ್ನೇಹಬೆಳೆಸುವ ಗೆಳೆಯರಿದ್ದಾರೆ ಸಮಯ ಸಾಧಕರಾಗಿ ಕೈಕೊಡುವರವರು ನಿನಗೆ ಕಷ್ಟಕಾಲದಲಿ.
9 : ಇಂದು ಗೆಳೆಯ, ನಾಳೆ ಶತ್ರು ಆಗುವವನೂ ಇದ್ದಾನೆ ಇಂಥವನು ನಿನ್ನೊಡನೆ ಜಗಳವಾಡಿ ನಿನ್ನ ಮಾನಕಳೆಯುತ್ತಾನೆ.
10 : ಸಹವಾಸ ಮಾಡುವವರಿದ್ದಾರೆ ನಿನ್ನ ತಿಂಡಿ ತೀರ್ಥಕ್ಕಾಗಿ ನಿನ್ನ ಸಂಗಡ ಇರುವುದಿಲ್ಲ ಕಷ್ಟದಲ್ಲಿ ಸಹಾಯ ಮಾಡಲಿಕ್ಕಾಗಿ.
11 : ನಿನ್ನ ಸುಖದ ದಿನಗಳಲ್ಲಿ ಪ್ರಾಣಸ್ನೇಹಿತನಂತಿರುವನು ನಿನ್ನ ಆಳುಹೋಳುಗಳನ್ನು ಬೆದರಿಸಿ ಕೆಲಸಮಾಡಿಸಿಕೊಳ್ಳುವನು
12 : ನಿನ್ನ ದುಃಖದ ದಿನಗಳಲ್ಲಿ ವಿರೋಧಿಯಾಗುವನು ತನ್ನ ಮುಖವನ್ನು ನಿನ್ನಿಂದ ಮರೆಸಿಕೊಳ್ಳುವನು.
13 : ನಿನ್ನ ವೈರಿಗಳಿಂದ ಆದಷ್ಟು ದೂರವಿರು ನಿನ್ನ ಸಂಗಡಿಗರ ವಿಷಯದಲ್ಲಿ ಎಚ್ಚರಿಕೆಯಿಂದಿರು.
14 : ನಂಬಿಗಸ್ಥ ಗೆಳೆಯ, ಸುರಕ್ಷಿತ ಆಶ್ರಯಗಿರಿಯಂತೆ ಅಂಥವನು ಸಿಕ್ಕುವುದು ಸಂಪತ್ತಿನ ನಿಧಿ ಸಿಕ್ಕಿದಂತೆ.
15 : ಯಾವುದೂ ಸಾಟಿಯಿಲ್ಲ ನಂಬಿಕಸ್ಥ ಗೆಳೆಯನಿಗೆ ಅಷ್ಟಿಷ್ಟಲ್ಲ ಅಂಥವನ ಶ್ರೇಷ್ಠತೆ.
16 : ನಂಬಿಕಸ್ಥ ಗೆಳೆಯ ಸಂಜೀವಿನಿಯಂತೆ ಸಿಗುವನವನು ದೇವರಿಗೆ ಭಯಪಡುವವನಿಗೆ.
17 : ದೇವಭಕ್ತನು ಸ್ನೇಹಿತನನ್ನು ಆಪ್ತನನ್ನಾಗಿಸಿ ಕೊಳ್ಳುವನು, ಏಕೆಂದರೆ ತನ್ನಂತೆಯೇ ಅವನನ್ನು ಕಂಡು ಭಾವಿಸುವನು.
18 : ಸುಜ್ಞಾನದಿಂದ ಕಲಿಕೆ ಮಗನೇ, ತಾರುಣ್ಯದಿಂದಲೆ ಆರಿಸಿಕೊ ಶಿಕ್ಷಣವನು, ಕೂದಲು ನರೆಯುವತನಕ ಹೊಂದುವೆ ಸುಜ್ಞಾನವನು.
19 : ಜ್ಞಾನದ ಕೃಷಿಮಾಡು ಉತ್ತು ಬಿತ್ತುವ ರೈತನಂತೆ ಉತ್ತಮ ಫಲಕ್ಕಾಗಿ ಕಾದುಕೊಂಡಿರುವವನಂತೆ. ಅದರ ಕೃಷಿ ಶ್ರಮವು ಅಲ್ಪ ಅದರಿಂದ ಲಭಿಸುವ ಫಲವು ತ್ವರಿತ;
20 : ನಿಷ್ಠೂರವಾಗಿರುವುದದು ಶಿಕ್ಷಣವಿಲ್ಲದವರಿಗೆ ಅದರ ನೆಲೆ ಹಿಡಿಸದು ವಿವೇಕಹೀನರಿಗೆ;
21 : ವಿವೇಕಹೀನನಿಗೆ ಭಾರವದು ಬಂಡೆಯಂತೆ ತಳ್ಳಿಹಾಕುವನದನ್ನು ತಡಮಾಡದೆ.
22 : ಶಿಕ್ಷಣ ತನ್ನ ಹೆಸರಿಗೆ ತಕ್ಕಂತೆ ಕಠಿಣ ಆಗದದು ಎಲ್ಲರಿಗೂ ಪ್ರತ್ಯಕ್ಷ.
23 : ಮಗನೇ, ಆಲಿಸು ನನ್ನ ನೀತಿಯ ನುಡಿಯನು ಅಲ್ಲಗಳೆಯಬೇಡ ನನ್ನ ಸಲಹೆಯನು.
24 : ನಿನ್ನ ಕಾಲುಗಳಿಗೆ ಕಟ್ಟು ಸುಜ್ಞಾನದ ಸಂಕೋಲೆಗಳನು ನಿನ್ನ ಕೊರಳಲ್ಲಿ ಧರಿಸಿಕೊ ಅದರ ಸರಪಣಿಯನು.
25 : ಹೊತ್ತುಕೊ ಅದನ್ನು ನಿನ್ನ ಹೆಗಲಮೇಲೆ ಮರುಗಬೇಡ ಅದರ ಬಂಧನಗಳಿಗೆ.
26 : ಅದರ ನೆರೆ ಸೇರು ಪೂರ್ಣ ಹೃದಯದಿಂದ ಅದರ ಸದಾಚಾರವನ್ನು ಕಾಪಾಡು ಪೂರ್ಣಶಕ್ತಿಯಿಂದ.
27 : ವೇದ್ಯವಾಗುವುದದು ಲವಲವಿಕೆಯಿಂದ ಹುಡುಕಿದರೆ ಕಳೆದುಕೊಳ್ಳಬೇಡ ಅದು ನಿನ್ನ ಕೈವಶವಾದ ಮೇಲೆ.
28 : ಕೊನೆಯಲ್ಲಿ ದೊರಕುವುದು ನಿನಗೆ ಅದರಿಂದ ವಿಶ್ರಾಂತಿ ಆಗ ಅದು ಪರಿಣಮಿಸುವುದು ನಿನಗೆ ಆನಂದವಾಗಿ.
29 : ಅದರ ಸಂಕೋಲೆಗಳು ಇರುವುವು ನಿನಗೆ ಬಲವಾದ ಕವಚದಂತೆ ಅದರ ಎಳೆಯ ಕೊಂಬೆಗಳು ಶೋಭಾಯಮಾನ ನಿಲುವಂಗಿಗಳಂತೆ.
30 : ಅದರ ಮೇಲಿರುವುದು ಚಿನ್ನದ ಆಭರಣ ಅದರ ಕಟ್ಟು ಪಟ್ಟಿಗಳೆಲ್ಲವು ನೀಲಾಂಬರ.
31 : ಧರಿಸಿಕೊಳ್ಳುವೆ ನೀನದನ್ನು ಸುಂದರ ನಿಲುವಂಗಿಯಂತೆ ಹಾಕಿಕೊಳ್ಳುವೆ ಅದನ್ನು ಸಂತಸದ ಹಾರದಂತೆ.
32 : ಮಗನೇ, ಶಿಕ್ಷಣ ನಿನಗೆ ಲಭ್ಯ, ನೀನು ಇಷ್ಟಪಟ್ಟರೆ; ಜಾಣನಾಗುವೆ ನೀನು ಮನಸ್ಸಿಟ್ಟು ಕಲಿತರೆ.
33 : ಪಡೆದುಕೊಳ್ಳುವೆ ಅದನ್ನು ಆಲಿಸಲು ಒಲಿದರೆ ಬುದ್ಧಿವಂತನಾಗುವೆ ಅದಕ್ಕೆ ಕಿವಿಗೊಟ್ಟರೆ
34 : ಹಿರಿಯರ ಗುಂಪಿಗೆ ಸೇರಿಕೊಂಡಿರು ಜ್ಞಾನಿಯಾದವನಿಗೆ ಅಂಜಿಕೊಂಡಿರು.
35 : ಸದಾ ಸಿದ್ಧನಾಗಿರು ಒಳ್ಳೆಯ ಮಾತುಕತೆ ಕೇಳಲು ನಿನ್ನ ಕಿವಿಗೆ ಬೀಳದೆ ಹೋಗದಿರಲಿ ಜ್ಞಾನೋಕ್ತಿಗಳು.
36 : ಜ್ಞಾನಿಯನ್ನು ಕಂಡಾಗ, ಅವನಲ್ಲಿಗೆ ಹೋಗಿ ಬಾ ಲವಲವಿಕೆಯಿಂದ, ಅವನ ಬಾಗಿಲ ಮೆಟ್ಟಲುಗಳು ಸವೆದುಹೋಗಲಿ ನಿನ್ನ ಪಾದಗಳಿಂದ.
37 : ನಿನ್ನ ಮನಸ್ಸು ನಾಟಿರಲಿ ಸರ್ವೇಶ್ವರನ ವಿಧಿನಿಯಮಗಳ ಮೇಲೆ ನಿರಂತರ ಮನನ ಮಾಡುತ್ತಿರು ಆತನ ಆಜ್ಞೆಗಳನ್ನೆ. ಸ್ಥಿರಗೊಳಿಸುವನಾತ ನಿನ್ನ ಹೃದಯವನ್ನು ದಯಪಾಲಿಸುವನಾತ ನೀನಾಶಿಸುವ ಜ್ಞಾನಾಮೃತವನ್ನು.

Holydivine