Sirach - Chapter 30
Holy Bible

1 : ಮಕ್ಕಳ ಪಾಲನೆ ಮಗನನ್ನು ಪ್ರೀತಿಸುವ ತಂದೆ ಅವನಿಗೆ ಪೆಟ್ಟು ಕೊಡುತ್ತಿರುತ್ತಾನೆ ಆಗಾಗ್ಗೆ. ಕೊನೆಗೆ ಆ ಮಗನಿಂದಲೇ ಉಪಶಮನ ಪಡೆಯುತ್ತಾನೆ.
2 : ತನ್ನ ಮಗನನ್ನು ಶಿಕ್ಷಿಸುವವನು ಅವನಿಂದ ಸುಖ ಪಡೆಯುವನು ತನ್ನ ಪರಿಚಿತರಲ್ಲಿ ಅವನನ್ನು ಕುರಿತು ಹೆಮ್ಮೆಪಡುವನು.
3 : ಮಗನಿಗೆ ಬೋಧನೆ ನೀಡುವವನು ಶತ್ರುವನ್ನು ಸಂಕಟಪಡಿಸುವನು ಆದರೆ ಆ ಮಗನಿಗಾಗಿ ಸ್ನೇಹಿತರಲಿ ಸಂತೋಷಪಡುವನು.
4 : ತಂದೆ ತೀರಿಹೋದರೂ ತೀರದಂತಿದ್ದಾನೆ ತನ್ನಂಥ ಮಗನನ್ನು ಬಿಟ್ಟುಹೋಗಿದ್ದಾನೆ.
5 : ಮಗನನ್ನು ಕಂಡು ಸಂತೋಷಪಟ್ಟನು ಜೀವಿಸುವಾಗ ದುಃಖಿತನಾಗಿರಲಿಲ್ಲ ತಾನು ಸಾಯುವಾಗ.
6 : ವೈರಿಗಳಿಗೆ ಪ್ರತೀಕಾರ ಮಾಡುವುದಕ್ಕೆ ಸ್ನೇಹಿತರಿಗೆ ದಯೆತೋರಿಸುವುದಕ್ಕೆ ಒಬ್ಬನನು ಬಿಟ್ಟುಹೋಗಿದ್ದಾನೆ.
7 : ತನ್ನ ಮಗನನ್ನು ಮುದ್ದಿಸುವವನು ಅವನ ಗಾಯಗಳನ್ನು ಕಟ್ಟುವನು ಅವನು ಅಳುವಾಗಲೆಲ್ಲ ಮನಸ್ಸಿನಲ್ಲೇ ಮರುಗುತ್ತಿರುವನು.
8 : ಪಳಗಿಸದ ಕುದುರೆ ಚಂಡಿಯಾಗುವುದು ಮನಬಂದಂತೆ ನಡೆಯಲು ಬಿಟ್ಟ ಮಗ ಹಟಮಾರಿಯಾಗುವನು.
9 : ಮುದ್ದಿಸಿ ಮಗನನ್ನು ಬೆಳೆಸಿದರೆ ಅವನಿಂದ ನಿನಗೆ ಕಂಟಕವಾಗುವುದು ಅವನೊಂದಿಗೆ ಸರಸವಾಡಿದರೆ ಮುಂದೆ ನಿನಗೆ ಸಂಕಟವಾಗುವುದು
10 : ಅವನೊಂದಿಗೆ ನಗೆಯಬೇಡ; ದುಃಖ ಪಡಬೇಕಾದೀತು ಕೊನೆಯಲಿ ಹಲ್ಲು ಕಡಿಯಬೇಕಾದೀತು!
11 : ಚಿಕ್ಕವನಾಗಿರುವಾಗ ಮಗನಿಗೆ ಸ್ವಾತಂತ್ರ್ಯ ಕೊಡಬೇಡ ಅವನ ಮೂರ್ಖತನವನ್ನು ನೋಡಿ ಅಲಕ್ಷ್ಯ ಮಾಡಬೇಡ.
12 : ಅಂಕೆಯಲ್ಲಿಡು ಮಗನನ್ನು ಚಿಕ್ಕವನಾಗಿರುವಾಗಲೇ ಅವನ ಬೆನ್ನಿಗೆ ಏಟುಕೊಡು ಎಳೆಯವನಾಗಿರುವಾಗಲೇ. ಇಲ್ಲವಾದರೆ, ಬೆಳೆಯುವನು ಮದೋನ್ಮತ್ತನಾಗಿ, ಅವಿಧೇಯನಾಗಿ ನಿನ್ನ ಮನಸ್ಸನ್ನು ನೋಯಿಸುವನು ತೀಕ್ಷ್ಣವಾಗಿ.
13 : ನಿನ್ನ ಮಗನನ್ನು ಶಿಕ್ಷಿಸು, ಕಟ್ಟುನಿಟ್ಟಾಗಿ ನಡೆಸು ಆಗ ನಿನಗೆ ಶೋಕತರದು ಅವನ ಬಾಳು – ಮಾನಗೆಟ್ಟು.
14 : ಆರೋಗ್ಯ ರೋಗಪೀಡಿತನಾದ ಸಿರಿವಂತನಿಗಿಂತಲೂ ಸ್ವಸ್ಥನೂ ದೃಢಕಾಯನೂ ಆದ ಬಡವನೇ ಮೇಲು.
15 : ಆರೋಗ್ಯವೂ ದೇಹಸ್ವಸ್ಥತೆಯೂ ಚಿನ್ನಕ್ಕಿಂತಲೂ ಮೇಲು ಗಟ್ಟಿಮುಟ್ಟಾದ ಕಾಯ ಅಪಾರ ಧನಕ್ಕಿಂತಲೂ ಲೇಸು.
16 : ದೃಢಕಾಯಕ್ಕಿಂತ ಮೇಲಾದ ಐಶ್ವರ್ಯವಿಲ್ಲ ಹೃದಯಾನಂದಕ್ಕಿಂತ ಮಿಗಿಲಾದ ಆನಂದವಿಲ್ಲ.
17 : ಕಷ್ಟದಲಿ ಬಳಲುವುದಕ್ಕಿಂತ ಸಾವೇ ಲೇಸು ಸದಾ ಬೇನೆಯಿಂದ ನರಳುವುದಕ್ಕಿಂತ ಶಾಶ್ವತ ಶಾಂತಿ ಲೇಸು.
18 : ಮುಚ್ಚಿದ ಬಾಯಿಯ ಮೇಲೆ ಮೃಷ್ಟಾನ್ನ ಸಮಾಧಿಯ ಮೇಲೆ ರಾಶಿ ಅನ್ನ, ಏನು ಲಾಭ?
19 : ನೈವೇದ್ಯದಿಂದ ವಿಗ್ರಹಕ್ಕೆ ಲಾಭವಿದೆಯೆ? ಅದಕ್ಕೆ ತಿನ್ನಲೂ ಮೂಸಲೂ ಸಾಧ್ಯವೆ? ಸರ್ವೇಶ್ವರನಿಂದ ದಂಡನೆ ಪಡೆದವನೂ ಅದರಂತೆಯೇ.
20 : ಕನ್ನಿಕೆಯನ್ನಪ್ಪಿ ನಿಟ್ಟುಸಿರುಬಿಡುವ ನಪುಂಸಕನಂತೆ ಕಣ್ಣಿನಿಂದ ನೋಡಿ ಮೂಲುಗುತ್ತಾನಷ್ಟೆ.
21 : ಸಂತೋಷ ಚಿಂತೆಗೊಳಗಾಗಬೇಡ ನಿನ್ನ ಆಲೋಚನೆಯಲ್ಲೇ ಕುಗ್ಗಬೇಡ.
22 : ಮನೋಲ್ಲಾಸವೇ ಮನುಷ್ಯನಿಗೆ ಜೀವ ಸುಖಸಂತೋಷವೇ ದೀರ್ಘಾಯುಷ್ಯ.
23 : ಸುಖವನ್ನು ಅನುಭವಿಸು, ಮನಸ್ಸಿಗೆ ಸಮಾಧಾನ ಕೊಡು ಚಿಂತೆಯನ್ನು ದೂರ ಮಾಡು; ಅದು ನಾಶಗೊಳಿಸಿದೆ ಅನೇಕರನ್ನು ಅದರಿಂದ ಪ್ರಯೋಜನ ಇರದು ಯಾರಿಗು.
24 : ಸಿಟ್ಟೂ ಹೊಟ್ಟೇಕಿಚ್ಚೂ ಆಯುಷ್ಯವನ್ನು ಕಡಿಮೆಮಾಡುತ್ತವೆ ಚಿಂತೆಯು ಅಕಾಲದ ಮುಪ್ಪನ್ನು ಬರಮಾಡುತ್ತದೆ.
25 : ಸಂತೋಷದ ಮತ್ತು ಸರಳ ಹೃದಯದ ವ್ಯಕ್ತಿ ಅನ್ನ ಆಹಾರಗಳಿಂದ ಪಡೆವನು ಸಂತೃಪ್ತಿ.

Holydivine