Sirach - Chapter 33
Holy Bible

1 : ಸರ್ವೇಶ್ವರನಲಿ ಭಯಭಕ್ತಿ ಇದ್ದರೆ ಅಂಥವನಿಗೆ ಯಾವ ಹಾನಿಯೂ ತಟ್ಟದು ಶೋಧನೆಯ ಸಮಯದಲಿ ಆತನಿಗೆ ಮೇಲಿಂದ ಮೇಲೆ ಸಂರಕ್ಷಣೆ ದೊರಕುವುದು.
2 : ಬುದ್ಧಿವಂತನು ಧರ್ಮಶಾಸ್ತ್ರವನು ದ್ವೇಷಿಸನು ಅದರ ಬಗ್ಗೆ ಕಪಟಿಯಾಗಿರುವವನು ಬಿರುಗಾಳಿಗೆ ಸಿಕ್ಕ ಹಡಗಿನಂತಿರುವನು.
3 : ವಿವೇಕಿಗೆ ಧರ್ಮಶಾಸ್ತ್ರದಲಿ ಭರವಸೆಯಿರುತ್ತದೆ ಅದು ಅವನಿಗೆ ನೀತಿವಾಕ್ಯದಂತೆ ನಂಬಲರ್ಹವಾಗಿರುತ್ತದೆ.
4 : ನಿನ್ನ ಭಾಷಣ, ತಯಾರಿಸಿದ್ದಾಗಿದ್ದರೆ ಅದನು ಜನರು ಆಲಿಸುವರು ವಿಷಯಗಳನ್ನೆಲ್ಲ ಸಂಗ್ರಹಿಸಿಕೊಂಡ ವನಾಗಿದ್ದರೆ ಉತ್ತರಹೇಳು.
5 : ಮೂರ್ಖನ ಹೃದಯ ಬಂಡಿಯ ಚಕ್ರದಂತೆ ಅವನ ಆಲೋಚನೆ ಉರುಳುವ ಇರಸಿನಂತೆ.
6 : ಬೀಜದ ಕುದುರೆಯು ಅಣಕಿಸುವ ಗೆಳೆಯನಂತಿದೆ ಅದರ ಮೇಲೆ ಯಾರು ಕೂತರೂ ಅದು ಕೆನೆಯುತ್ತದೆ.
7 : ಅಸಮಾನತೆ ವರ್ಷದಲಿ ಪ್ರತೀದಿನದ ಬೆಳಕು ಬರುವುದು ಸೂರ್ಯನಿಂದಲ್ಲವೆ? ಹೀಗಿರುವಲ್ಲಿ ಒಂದು ದಿನ ಇನ್ನೊಂದಕ್ಕಿಂತ ಪವಿತ್ರವಾದುದು ಹೇಗೆ?
8 : ಅವು ವೈಶಿಷ್ಟ್ಯ ಪಡೆದಿರುವುದು ಸರ್ವೇಶ್ವರನ ಜ್ಞಾನದಿಂದಲೇ ಋತುಗಳು, ಹಬ್ಬ ದಿನಗಳು ಬೇರೆ ಬೇರೆ ಆಗಿರುವುದು ಆತನಿಂದಲೇ.
9 : ಅವುಗಳಲ್ಲಿ ಕೆಲವನು ಗುರುತಿಸಿ ಪವಿತ್ರ ಗೊಳಿಸಿದನು ಇನ್ನು ಕೆಲವನು ಸಾಧಾರಣ ದಿನಗಳನ್ನಾಗಿ ಮಾಡಿದನು.
10 : ನರಮಾನವರೆಲ್ಲರು ಉತ್ಪನ್ನವಾದುದು ಭೂಮಿಯಿಂದಲೇ ಆದಾಮನೂ ನಿರ್ಮಿತನಾದುದು ಮಣ್ಣಿನಿಂದಲೇ.
11 : ಸರ್ವೇಶ್ವರನ ತನ್ನ ಸಂಪೂರ್ಣ ಜ್ಞಾನದಿಂದ ಅವರಲಿ ವ್ಯತ್ಯಾಸವಿರಿಸಿದನು ಅವರ ಹಾದಿಗಳನ್ನು ವಿಧವಿಧವಾಗಿ ನೇಮಿಸಿದನು.
12 : ಕೆಲವರನು ಆಶೀರ್ವದಿಸಿ ಮೇಲಕ್ಕೆತ್ತಿದನು ಇನ್ನು ಕೆಲವರನು ಪ್ರತ್ಯೇಕಿಸಿ ತನ್ನ ಬಳಿಗೆ ತಂದುಕೊಂಡನು ಮತ್ತೆ ಕೆಲವರನು ಶಪಿಸಿ, ಹೀನಸ್ಥಿತಿಗೆ ಇಳಿಸಿದನು ಹಾಗು ಅವರ ಆ ಸ್ಥಾನದಿಂದ ಅವರನು ತಳ್ಳಿಹಾಕಿದನು.
13 : ಆತನ ಹಾದಿಗಳೆಲ್ಲ ಆತನ ಸುಚಿತ್ತದ ಪ್ರಕಾರ ಇವೆ ಕುಂಬಾರನ ಕೈಯೊಳಗಿನ ಜೇಡಿಮಣ್ಣಿನಂತೆ ಮನುಷ್ಯರು ಸೃಷ್ಟಿಕರ್ತನ ಕೈಯಲ್ಲಿರುವುದು ಅಂತೆಯೆ ಆತನು ಅವರಿಗೆ ಮಾಡುತ್ತಾನೆ ತನಗೆ ಸರಿಕಂಡಂತೆ.
14 : ಕೆಡುಕಿಗೆ ಇದಿರಾಗಿದೆ ಒಳಿತು ಸಾವಿಗೆ ಇದಿರಾಗಿದೆ ಜೀವವು ಅಂತೆಯೆ ಸದ್ಧರ್ಮಿಗೆ ಇದಿರಾಗಿ ಅಧರ್ಮಿಯು.
15 : ಈ ರೀತಿ ಮಹೋನ್ನತನ ಕಾರ್ಯಗಳಿವೆ, ನೋಡು; ದ್ವಂದ್ವಗಳು, ಒಂದರ ಇದುರಾಗಿ ಇನ್ನೊಂದು.
16 : ದ್ರಾಕ್ಷಿಯನು ಕೂಡಿಸುವವರ ಹಿಂದೆ ಹಕ್ಕಲಾಯುವವನಂತೆ ಕೊನೆಯಲಿ ನಾನು ಎಚ್ಚೆತ್ತುಕೊಂಡೆ;
17 : ಸರ್ವೇಶ್ವರನ ಕೃಪೆಯಿಂದ ನಾನವರಿಗಿಂತ ಮುಂದಾದೆ ದ್ರಾಕ್ಷಿ ಕೂಡಿಸುವವನಂತೆ ನಾನು ತೊಟ್ಟಿಯನು ತುಂಬಿದೆ.
18 : ನೋಡು, ನಾನು ಶ್ರಮಪಟ್ಟಿದ್ದು ನನ್ನೊಬ್ಬನಿಗೋಸ್ಕರವೇ ಅಲ್ಲ: ಶಿಕ್ಷಣವನ್ನು ಅರಸುವವರೆಲ್ಲರಿಗೋಸ್ಕರ ಕೂಡ.
19 : ಜನಾಂಗಗಳಲ್ಲಿ ಗಣ್ಯರೆನಿಸಿಕೊಂಡವರೇ, ನನ್ನನ್ನು ಆಲಿಸಿರಿ ಜನಾಧಿಪತಿಗಳೇ, ನನಗೆ ಲಕ್ಷ್ಯಕೊಟ್ಟು ಕೇಳಿರಿ.
20 : ಸ್ವಾತಂತ್ರ್ಯ ಮಗನಿಗೆ, ಹೆಂಡತಿಗೆ, ಸಹೋದರನಿಗೆ, ಸ್ನೇಹಿತನಿಗೆ ಇವರಾರಿಗಾಗಲೀ ಅಧಿಕಾರ ನಡೆಸಗೊಡಬೇಡ ನೀನು ಜೀವದಿಂದಿರುವಾಗ; ದುಡುಕಿನಿಂದ ಪರರಿಗೆ ಕೊಟ್ಟುಬಿಡಬೇಡ ನಿನ್ನ ಆಸ್ತಿಪಾಸ್ತಿಯಿಂದ ತರುವಾಯ ಬಂದೀತು ಅದನ್ನು ಪಶ್ಚಾತ್ತಾಪ ದಿಂದ ತಿರುಗಿ ಕೇಳುವ ಸಂದರ್ಭ!
21 : ನೀನು ಬದುಕಿರುವಾಗ, ನಿನ್ನಲಿ ಉಸಿರಿರುವಾಗ ನಿನ್ನನೇ ಯಾರಿಗೂ ಒಪ್ಪಿಸಿಬಿಡಬೇಡ.
22 : ನೀನು ನಿನ್ನ ಮಕ್ಕಳ ಕೈಯಿಂದ ಕೇಳುವುದಕ್ಕಿಂತಲು ಅವರೇ ನಿನ್ನನ್ನು ಕೇಳಿ ಪಡೆದುಕೊಳ್ಳುವುದು ಮೇಲು.
23 : ನಿನ್ನ ಕಾರ್ಯಗಳಲ್ಲೆಲ್ಲ ನಿನ್ನ ಕೈಯೇ ಮೇಲಾಗಿರಲಿ ನಿನ್ನ ಗೌರವಕ್ಕೆ ಕುಂದು ಬಾರದಂತಿರಲಿ.
24 : ನಿನ್ನ ಜೀವನದ ದಿನಗಳು ಮುಗಿಯುತ್ತಿರಲು ಮರಣಕಾಲದಲಿ ನಿನ್ನ ಆಸ್ತಿಯನು ಹಂಚಿಕೊಡು.
25 : ಸೇವಕರು ಮೇವು, ಕೋಲು, ಹೊರೆ ಕತ್ತೆಗೆ ಅನ್ನ, ಶಿಕ್ಷಣ, ಕೆಲಸ ಊಳಿಗದವನಿಗೆ.
26 : ನಿನ್ನ ಊಳಿಗದವನಿಗೆ ಕೆಲಸಹಚ್ಚು, ಆರಾಮವಾಗುವುದು ನಿನಗೆ ಕೆಲಸವಿಲ್ಲದೆ ಬಿಟ್ಟರೆ ಅವನು ಸ್ವಾತಂತ್ರ್ಯ ಹುಡುಕುವನು.
27 : ನೊಗ, ಬಾರುಗಳು ಎತ್ತಿನ ಹೆಗಲಿಗೆ ಕೈಕೋಳ, ಉಪದ್ರವಗಳು ದುಷ್ಟ ಊಳಿಗದವನಿಗೆ.
28 : ಅವನು ಮೈಗಳ್ಳನಾಗದಂತೆ ದುಡಿಮೆ ಹೆಚ್ಚಿಸು ಏಕೆಂದರೆ ಸೋಮಾರಿತನ ತುಂಟತನವನ್ನು ಕಲಿಸುವುದು.
29 : ಅವನಿಗೆ ಸರಿಯಾದ ಕೆಲಸವನ್ನು ಕೊಡು ಅವಿಧೇಯನಾದರೆ ಬೇಡಿಗಳ ಭಾರವನ್ನು ಹೆಚ್ಚಿಸು.
30 : ಯಾರ ವಿಷಯದಲೂ ಮಿತಿಮೀರಬೇಡ ವಿಚಾರವಿಲ್ಲದೆ ಯಾವುದನ್ನು ಮಾಡಬೇಡ.
31 : ನಿನಗೊಬ್ಬ ಊಳಿಗದವನಿದ್ದರೆ ಅವನನ್ನು ನೋಡಿಕೊ ನಿನ್ನಂತೆ ಅವನನ್ನು ಕೊಂಡುಕೊಂಡಿದ್ದೀಯೆ ನೆತ್ತರವಿತ್ತೆ.
32 : ನಿನಗೊಬ್ಬ ಊಳಿಗದವನಿದ್ದರೆ ನಿನ್ನಂತೆಯೆ ಅವನನು ಸುಧಾರಿಸು ನಿನ್ನ ಸ್ವಂತ ಪ್ರಾಣದಂತೆ, ಅವನ ಅಗತ್ಯ ನಿನಗುಂಟು.
33 : ಅವನನ್ನು ನಿರ್ದಯದಿಂದ ಕಂಡರೆ ಓಡಿಹೋಗಿ ಬಿಟ್ಟಾನು ಆಗ ಅವನನು ಹುಡುಕಿಕೊಂಡು ಎಲ್ಲೆಡೆ ಸುತ್ತಬೇಕಾದೀತು.

Holydivine