Sirach - Chapter 39
Holy Bible

1 : ಧರ್ಮಶಾಸ್ತ್ರಜ್ಞ ಹೀಗಲ್ಲ, ಮಹೋನ್ನತನ ಧರ್ಮ ಶಾಸ್ತ್ರವನ್ನು ಮನಸ್ಸಿಟ್ಟು ಧ್ಯಾನಿಸುವವನು: ಪೂರ್ವಜರ ಜ್ಞಾನವನ್ನು ಅಧ್ಯಯನ ಮಾಡುವನವನು ಪ್ರವಾದನೆಗಳನ್ನು ಅರಿಯುವುದರಲ್ಲಿ ಸಮಯ ಕಳೆಯುವನವನು.
2 : ಈತ ಸುಪ್ರಸಿದ್ಧ ಜನರ ಹೇಳಿಕೆಗಳನ್ನು ಕಾದಿರಿಸಿಕೊಳ್ಳುವನು ಸಾಮತಿಗಳ ಸೂಕ್ಷ್ಮ ಚರ್ಚೆಗಳಲ್ಲಿ ಭಾಗವಹಿಸುವನು.
3 : ಒಗಟುಗಳ ಗೂಡಾರ್ಥವನ್ನು ಹುಡುಕಿ ತೆಗೆಯುವನು ಸಾಮತಿಗಳ ಅವ್ಯಕ್ತ ಅರ್ಥವನ್ನು ಅರಿತವನಾಗಿರುವನು.
4 : ಗಣ್ಯವ್ಯಕ್ತಿಗಳ ಮಧ್ಯೆ ಸೇವೆ ಕೈಗೊಳ್ಳುವನು ಆಳುವವರ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುವನು ಪರದೇಶಗಳಲ್ಲಿಯೂ ಸಂಚಾರಮಾಡುವನು ಮಾನವನಲ್ಲಿರುವ ಒಳಿತು-ಕೆಡುಕುಗಳನ್ನು ಪರೀಕ್ಷಿಸುವನು.
5 : ಮುಂಜಾನೆಯೇ ಆಸಕ್ತಿಯಿಂದ ಎದ್ದೇಳುವನು ತನ್ನ ಸೃಷ್ಟಿಕರ್ತ ದೇವನಿಗೆ ಮೊರೆಯಿಡುವನು ಮಹೋನ್ನತನ ಸನ್ನಿಧಿಯಲಿ ವಿಜ್ಞಾಪಿಸಿ, ಬಾಯ್ದೆರೆದು ಬೇಡಿಕೊಳ್ಳುವನು ತನ್ನ ಪಾಪಗಳಿಗೆ ಆತನಲಿ ಕ್ಷಮೆಯನ್ನು ಯಾಚಿಸುವನು.
6 : ಸರ್ವೋಚ್ಛ ಸರ್ವೇಶ್ವರನ ಚಿತ್ತವಾದರೆ, ತುಂಬುವುದವನಲ್ಲಿ ತಿಳುವಳಿಕೆಯ ಚೈತನ್ಯವು ಸುರಿಸುವನವನು ಸುಜ್ಞಾನದ ಮಾತುಗಳನು ಪ್ರಾರ್ಥನೆಯ ಸಮಯದಲ್ಲಿ ಆ ಸರ್ವೇಶ್ವರನಿಗೆ ಮಾಡುವನು ಕೃತಜ್ಞತಾಸ್ತುತಿಯನ್ನು.
7 : ಸರಿಯಾಗಿ ಸಾಗಿಸುವನು ತನ್ನಾಲೋಚನೆಗಳನ್ನು ಮನನ ಮಾಡುವನು ಗುಪ್ತವಿಚಾರಗಳನ್ನು.
8 : ತಾನು ಕಲಿತುಕೊಂಡ ಶಿಕ್ಷಣವನ್ನು ಪ್ರಕಟಿಸುವನು ಸರ್ವೇಶ್ವರನ ಒಡಂಬಡಿಕೆಯ ಧರ್ಮಶಾಸ್ತ್ರದಲ್ಲಿ ಹೆಚ್ಚಳಪಡುವನು.
9 : ಅನೇಕರು ಹೊಗಳುವರು ಅವನ ಜ್ಞಾನವನ್ನು ಅದು ಅಳಿಸಿಹೋಗದು ಲೋಕಾಂತ್ಯದವರೆಗು. ಮರೆತುಹೋಗದು ಅವನ ಸ್ಮರಣೆ ಉಳಿಯುವುದು ಅವನ ಹೆಸರು ತಲತಲಾಂತರದವರೆಗು.
10 : ಜನಾಂಗಗಳು ಅವನ ಜ್ಞಾನವನ್ನು ಘೋಷಿಸುವರು ಇಸ್ರಯೇಲ್ ಸಭೆಯು ಅವನನ್ನು ಹೊಗಳುವುದು.
11 : ಹೀಗೆ ಮುಂದುವರೆದರೆ ಸಾವಿರ ಜನಕ್ಕಿಂತ ಕೀರ್ತಿಶ್ರೇಷ್ಠನಾಗುವನು ಸತ್ತರೆ ಇನ್ನೂ ಹೆಸರುವಾಸಿಯಾಗುವನು.
12 : ಸರ್ವೇಶ್ವರನ ಸ್ತುತಿ ನನ್ನ ಆಲೋಚನೆಗಳನ್ನು ಇನ್ನೂ ಹೇಳುವೆ ಪೂರ್ಣಚಂದ್ರನಂತೆ ನಾ ತುಂಬಿಕೊಂಡಿರುವೆ.
13 : ಭಕ್ತಿಯುಳ್ಳ ಮಕ್ಕಳೇ, ನನ್ನ ಮಾತನ್ನು ಕೇಳಿರಿ ನದಿಯ ದಂಡೆಯಲ್ಲಿ ಬೆಳೆಯುವ ಗುಲಾಬಿಗಿಡದಂತೆ ವಿಕಾಸಗೊಳ್ಳಿರಿ.
14 : ಧೂಪದ ಸುವಾಸನೆಯನ್ನು ಬೀರಿರಿ ನೈದಿಲೆಯಂತೆ ಹೂ ಬಿಡಿರಿ ಸುತ್ತಲೂ ಸುಗಂಧವನ್ನು ಹರಡಿರಿ, ಸ್ತುತಿಗೀತೆ ಹಾಡಿರಿ ಸರ್ವೇಶ್ವರನನ್ನು ಆತನ ಎಲ್ಲಾ ಕಾರ್ಯಗಳಿಗಾಗಿ ಕೊಂಡಾಡಿರಿ.
15 : ಕೀರ್ತನೆಗಳಿಂದ, ಕಿನ್ನರಿಗಳಿಂದ ಆತನ ಸ್ತುತಿಗೈಯಿರಿ: ಆತನ ನಾಮವನ್ನು ಈ ಪರಿ ಘನಪಡಿಸಿರಿ:
16 : ಅತ್ಯುತ್ತಮವಾಗಿದೆ ಸರ್ವೇಶ್ವರನ ಕಾರ್ಯಗಳೆಲ್ಲ ಸಕಾಲದಲಿ ನೆರವೇರುವುವು ಆತನ ಆಜ್ಞೆಗಳೆಲ್ಲ.
17 : ಹೇಳದಿರಲಿ ಯಾರೂ ‘ಇದು ಏನು? ಅದು ಏಕೆ?’ ಎಂದು ಸಕಾಲದಲಿ ತಿಳಿಯುವುದು ಅವುಗಳ ಫಲಿತಾಂಶವು. ಜಲವು ಕುಪ್ಪೆಯಾಗಿ ನಿಂತಿತು ಆತನ ಅಪ್ಪಣೆಗೆ ಜಲಾಶಯಗಳು ನಿಂತವು ಕೇವಲ ಆತನ ಬಾಯಿಮಾತಿಗೆ.
18 : ಆತನು ಮೆಚ್ಚುವುದೆಲ್ಲವೂ ನಡೆಯುವುದು ಆತನ ಅಪ್ಪಣೆಯ ಮೇರೆಗೆ ತಡೆಯೊಡ್ಡುವವನಾರೂ ಇಲ್ಲ ಆತನ ರಕ್ಷಣಾಕಾರ್ಯಕ್ಕೆ.
19 : ಎಲ್ಲಾ ಜೀವಿಗಳ ಕಾರ್ಯಕಲಾಪಗಳು ಆತನ ಎದುರಿನಲ್ಲಿವೆ ಯಾವುದೂ ಮರೆಯಾಗಿರಲು ಸಾಧ್ಯವಿಲ್ಲ ಆತನ ಕಣ್ಣಿಗೆ.
20 : ಆತನ ದೃಷ್ಟಿ ಹರಿಯುವುದು ಯುಗಯುಗಾಂತರಕ್ಕೆ ಆಶ್ಚರ್ಯವಾದುದೇನೂ ಇಲ್ಲ ಆತನ ನಯನಕ್ಕೆ.
21 : ಯಾರೂ ಅನ್ನದಿರಲಿ ‘ಇದು ಏನು? ಅದು ಏಕೆ?’ ಎಂದು ಅದರದರ ಉಪಯೋಗಕ್ಕಾಗಿಯೇ ನಿರ್ಮಿಸಲಾಗಿದೆ ಒಂದೊಂದು ವಸ್ತುವು.
22 : ಆತನ ಆಶೀರ್ವಾದ ಆವರಿಸಿತು ಒಣಭೂಮಿಯನ್ನು ಹೊಳೆಯಂತೆ ಅದನ್ನು ತೋಯಿಸಿತು ಮಹಾಪೂರದಂತೆ.
23 : ಆತ ನೀರನ್ನು ಉಪ್ಪು ನೀರನ್ನಾಗಿ ಮಾರ್ಪಡಿಸಿದಂತೆ ಆತನ ಕೋಪ ಅನ್ಯರಿಗೆ ತಗಲುವುದು ಪೂರ್ವಾರ್ಜಿತ ಆಸ್ತಿಯಂತೆ.
24 : ಸಜ್ಜನರಿಗೆ ಆತನ ಮಾರ್ಗಗಳು ಸರಾಗವಾಗಿವೆ ಆದರೆ ದುರ್ಜನರಿಗೆ ಅವು ತೊಡಕಾಗಿವೆ.
25 : ಆದಿಯಿಂದ ಒಳ್ಳೆಯವು ನಿರ್ಮಿತವಾದವು ಒಳ್ಳೆಯವರಿಗೆ ಅಂತೆಯೇ ಕೆಟ್ಟವುಗಳು ನಿರ್ಮಿತವಾದವು ಪಾಪಿಗಳಿಗೆ.
26 : ನೀರು, ಬೆಂಕಿ, ಕಬ್ಬಿಣ, ಉಪ್ಪು ಗೋದಿ ಹಿಟ್ಟು, ಜೇನುತುಪ್ಪ, ಹಾಲು, ದ್ರಾಕ್ಷಾರಸ, ಎಣ್ಣೆ, ಬಟ್ಟೆಗಳು ಇವು ಮಾನವ ಜೀವನಕ್ಕೆ ಎಲ್ಲಕ್ಕಿಂತ ಮುಖ್ಯವಾದವುಗಳು.
27 : ಈ ವಸ್ತುಗಳೆಲ್ಲ ಇರುವುದು ಭಕ್ತರ ಹಿತಕ್ಕಾಗಿ ಪಾಪಿಗಳಿಗೆ ಅವು ಪರಿಣಮಿಸುವುವು ಕೆಡುಕಾಗಿ.
28 : ಮುಯ್ಯಿ ತೀರಿಸುವುದಕ್ಕೆಂದು ನಿರ್ಮಿತವಾಗಿವೆ ಕೆಲವು ಚಂಡಮಾರುತಗಳು ಪ್ರಕೋಪಗೊಂಡಾಗ ತೀಕ್ಷ್ಣವಾಗಿರುವುವು ಅವುಗಳ ಭಾದೆಗಳು ತಮ್ಮ ಬಲವನ್ನು ತೋರಿಸುವುವು ಪರಿಸಮಾಪ್ತಿಯ ಕಾಲದೊಳು ಹೀಗೆ ತಣಿಸುವುವು ಅವುಗಳನ್ನು ನಿರ್ಮಿಸಿದಾತನ ಕೋಪವನ್ನು.
29 : ಬೆಂಕಿ, ಆಲಿಕಲ್ಲು, ಕ್ಷಾಮ, ಸಾವು ಇವು ಮುಯ್ಯಿ ತೀರಿಸಲೆಂದೇ ನಿರ್ಮಿತವಾದವು.
30 : ಕಾಡುಮೃಗಗಳ ಹಲ್ಲುಗಳು, ಚೇಳು, ಹೆಬ್ಬಾವುಗಳು ಆದುವು ಅದಕ್ಕಾಗಿಯೆ ಅಧರ್ಮಿಗಳು ನಾಶವಾಗುವಂತೆ ಅವರನ್ನು ಶಿಕ್ಷಿಸುವ ಕತ್ತಿಯೂ ಇದೆ.
31 : ಅವು ಆನಂದಗೊಳ್ಳುವುವು ಆತನ ಅಪ್ಪಣೆಯಲ್ಲಿ ಅಗತ್ಯಬಿದ್ದರೆ ಒದಗಲು ಸಿದ್ಧವಾಗಿವೆ ಈ ಲೋಕದಲ್ಲಿ ಆತನ ಮಾತನ್ನು ಅವು ಮೀರವು ತಕ್ಕ ಸಮಯ ಬಂದಲ್ಲಿ.
32 : ಇದನ್ನೆಲ್ಲ ಆಲೋಚನೆ ಮಾಡಿ ಬರೆದಿಟ್ಟೆ ಮೊದಲಿನಿಂದಲೇ ನಾನು ನಿಶ್ಚಯಿಸಿದಂತೆ.
33 : ಸರ್ವೇಶ್ವರನ ಕಾರ್ಯಗಳೆಲ್ಲವು ಒಳ್ಳೆಯವು ತಕ್ಕಕಾಲದಲ್ಲಿ ಒದಗಿಸುವನಾತ ಅಗತ್ಯವಿದ್ದವುಗಳನ್ನು. ಯಾರೂ ಹೇಳಲಾರರು ‘ಇದು ಅದಕ್ಕಿಂತ ಕೆಟ್ಟದು’ ಎಂದು ಸೂಕ್ತಸಮಯದಲ್ಲಿ ಸಮರ್ಥನೆಗೊಳ್ಳುವುವು ಅವು ಸರಿಯಾದವುಗಳೆಂದು.
34 : ಈಗ ಹಾಡಿರಿ ನಿಮ್ಮ ಹೃದಯದಿಂದಲೂ ಬಾಯಿಂದಲೂ ಸ್ತುತಿಗೀತೆಯನ್ನು; ಕೀರ್ತಿಸಿರಿ ಸರ್ವೇಶ್ವರನ ನಾಮವನ್ನು.

Holydivine