Isaiah - Chapter 26
Holy Bible

1 : ಕಾಲ ಬರುವುದು; ಆಗ ಹಾಡುವರು ಜುದೇಯ ನಾಡಿನಲ್ಲಿ ಈ ಗೀತೆಯನು: ನಮಗಿದೆ ಸುಭದ್ರ ನಗರ, ದೇವರೇ ಅದರ ದುರ್ಗ, ಪ್ರಾಕಾರ.
2 : ತೆರೆಯಿರಿ ನಗರ ದ್ವಾರಗಳನು, ಪ್ರವೇಶಿಸಲಿ ವಿಶ್ವಾಸವುಳ್ಳ ಸಜ್ಜನರು.
3 : ನಿನ್ನ ನೆಚ್ಚಿದವರಿಗೆ, ಸ್ಥಿರ ಚಿತ್ತವುಳ್ಳವರಿಗೆ, ಚಿರಶಾಂತಿಯ ನೀ ನೀಡುವೆ.
4 : ಶಾಶ್ವತ ಆಶ್ರಯಗಿರಿ, ಸ್ವಾಮಿ ಸರ್ವೇಶ್ವರನೇ, ಸತತ ಭರವಸೆಯಿಡಿರಿ ಆತನಲ್ಲೇ.
5 : ತಗ್ಗಿಸುವನಾತ ಎತ್ತರದಲಿ ವಾಸಿಸುವವರನು, ಕೆಡವಿ, ನೆಲಸಮಮಾಡಿ, ಧೂಳಾಗಿಸುವನು ಅವರು ವಾಸಮಾಡುವಾ ಉನ್ನತ ನಗರವನು.
6 : ಈಡಾಗುವುದದು ಕಾಲತುಳಿತಕೆ ದೀನದಲಿತರ ಪಾದತುಳಿತಕೆ.
7 : ನೇರವಾಗಿದೆ ಸಜ್ಜನನ ದಾರಿ ಸುಗಮವಾಗಿದೆ ನಿನ್ನಿಂದ ಆತನ ಹಾದಿ.
8 : ನಡೆವೆವು ನಾವು, ಸರ್ವೇಶ್ವರಾ, ನಿನ್ನ ನೀತಿ ಮಾರ್ಗದೊಳು ಕಾದಿರುವೆವು ನಿನಗಾಗಿ ಭರವಸೆಯಿಟ್ಟು ನಿನ್ನೊಳು ನಿನ್ನ ನಾಮಸ್ಮರಣೆಯ ಬಯಕೆ ನಮ್ಮ ಅಂತರಾತ್ಮದೊಳು.
9 : ಹಾರೈಸಿದೆ ಎನ್ನಾತ್ಮ ನಿನ್ನನು ಇರುಳೊಳು ಅರಸಿತೆನ್ನ ಮನ ನಿನ್ನನು ಮುಂಜಾನೆಯೊಳು. ನೀನೀಯುವಾಗ ಜಗಕೆ ನ್ಯಾಯತೀರ್ಪನು ಕಲಿತುಕೊಳ್ಳುವರು ಭೂನಿವಾಸಿಗಳು ನ್ಯಾಯನೀತಿಯನು.
10 : ದಯೆತೋರಿದರೂ ಕಲಿಯನು ದುಷ್ಟನು ಆ ನ್ಯಾಯನೀತಿಯನು ಧರ್ಮಕ್ಷೇತ್ರದೊಳು ಸಹ ಗೈವನು ಅಕ್ರಮವನು ಗೌರವಿಸನು ಸರ್ವೇಶ್ವರನ ಮಹಿಮೆಯನು.
11 : ಅವರ ಮೇಲೆ ನೀ ಕೈಯೆತ್ತಿದರೂ, ಸರ್ವೇಶ್ವರಾ, ಲಕ್ಷಿಸರವರು ನಿನ್ನನ್ನು. ನಾಚಲಿ ಅವರು ನೋಡಿ ನಿನ್ನ ಸ್ವಜನಾಭಿಮಾನವನು ದಹಿಸಿಬಿಡಲಿ ಅಗ್ನಿಜ್ವಾಲೆಯು ಆ ನಿನ್ನ ವಿರೋಧಿಗಳನು.
12 : ಸರ್ವೇಶ್ವರಾ, ನೀಡೆಮಗೆ ಶಾಂತಿ ಸಮಾಧಾನ ನಮ್ಮ ಸತ್ಕಾರ್ಯಗಳೆಲ್ಲವೂ ನಿನ್ನ ಕೃಪಾಸಾಧನ.
13 : ನಮ್ಮ ದೇವರಾದ ಸರ್ವೇಶ್ವರಾ, ಇಗೋ, ನೋಡು ನಮ್ಮ ನಾಳಿಹರು ಭೂರಾಜರು ನಿನ್ನ ಬಿಟ್ಟು. ಆದರೇನು, ಹೊಗಳುವೆವು ನಿನ್ನ ನಾಮವನೆ ಮುನ್ನಿಟ್ಟು.
14 : ಮಡಿದುಹೋದರು ಆ ಒಡೆಯರೆಲ್ಲ ಮರಳಿ ಅವರ ಪ್ರೇತಗಳು ಎದ್ದು ಬರುವಂತಿಲ್ಲ. ನೀನವರನು ಬಡಿದು ನಸುಕಿ ಹಾಕಿರುವೆ ಅವರ ನೆನಪನೆ ಅಳಿಸಿ ಹಾಕಿರುವೆ.
15 : ಹೆಚ್ಚಿಸಿರುವೆ ಸರ್ವೇಶ್ವರಾ, ನಿನ್ನ ಜನರನು ಹೌದು, ವೃದ್ಧಿಗೊಳಿಸಿರುವೆ ನಿನ್ನ ಪ್ರಜೆಯನು. ವಿಸ್ತರಿಸಿರುವೆ ನಾಡಿನ ಮೇರೆಗಳನು ಈಪರಿ ಪಡೆದಿರುವೆ ಮಹಿಮೆಯನು.
16 : ನಿನ್ನಾಶ್ರಯ ಕೋರಿದರು, ಸರ್ವೇಶ್ವರಾ, ಜನ ಇಕ್ಕಟ್ಟಿಗೆ ಸಿಕ್ಕಿದಾಗ ಪ್ರಾರ್ಥನೆ ಗೈದರವರು ನಿನ್ನ ಶಿಕ್ಷೆಗೆ ಗುರಿಯಾದಾಗ.
17 : ಹೆರಿಗೆ ಹತ್ತಿರವಾದ ಗರ್ಭಿಣಿ ಚೀರುವಂತೆ ಯಾತನೆಪಡುವ ಬೇನೆಯಿಂದಾಕೆ ಅರಚುವಂತೆ ಮಾಡಿರುವೆ, ಸರ್ವೇಶ್ವರಾ, ನಿನಗಾಗಿ ನಾವು ಮೊರೆಯಿಡುವಂತೆ.
18 : ಪ್ರಸವವೇದನೆಪಟ್ಟು ನಾವು ಹಡೆದದ್ದು ಗಾಳಿಯನ್ನೆ ಆಗಲಿಲ್ಲ ಜಗಕೆ ನಮ್ಮಿಂದ ಯಾವ ರಕ್ಷಣೆ ನೀಡಲಿಲ್ಲ ನಾವು ಜನ್ಮ ಲೋಕನಿವಾಸಿಗಳಿಗೆ.
19 : ಬದುಕುವರು ನಿಧನರಾದ ನಮ್ಮ ಜನರು ಜೀವದಿಂದೇಳುವುವು ನಮ್ಮವರ ಶವಗಳು. ಎದ್ದು ಹರ್ಷಧ್ವನಿಗೈಯಲಿ ನೆಲದಲಿ ಬಿದ್ದಿರುವವರು. ನೀ ಸುರಿಸುವ ಇಬ್ಬನಿ ಜ್ಯೋತಿರ್ಮಯ, ಆದುದರಿಂದ ಸತ್ತವರು ಪುನರುತ್ಥಾನ ಹೊಂದುವರು ನೆಲದಿಂದ. ದೈವದಂಡನೆ
20 : ನನ್ನ ಜನರೇ, ಹೋಗಿ; ನಿಮ್ಮ ನಿಮ್ಮ ಮನೆಗಳನ್ನು ಸೇರಿ ಬಾಗಿಲು ಮುಚ್ಚಿಕೊಳ್ಳಿ. ದೇವರ ಕೋಪ ತೀರುವತನಕ ಕೊಂಚಕಾಲ ಅವಿತುಕೊಳ್ಳಿ.
21 : ಇಗೋ, ಸರ್ವೇಶ್ವರ ಜಗದ ಜನಕ್ಕೆ ಅವರವರ ಪಾಪದ ಫಲವನ್ನು ಉಣಿಸಲು ತಮ್ಮ ನಿವಾಸದಿಂದ ಹೊರಟಿರುವರು. ಭೂಮಿ ತನ್ನಲ್ಲಿ ಇಂಗಿದ ರಕ್ತವನ್ನು ಬೆಳಕಿಗೆ ತರುವುದು; ಭೂನಿವಾಸಿಗಳಲ್ಲಿ ಹತರಾದವರನ್ನು ಇನ್ನು ಮರೆಮಾಚದು.

Holydivine