Isaiah - Chapter 23
Holy Bible

1 : ಟೈರ್ ನಗರವನ್ನು ಕುರಿತ ದೈವೋಕ್ತಿ: “ಗೋಳಾಡಿರಿ ತಾರ್ಷಿಷಿನ ನಾವಿಕರೆಲ್ಲ, ಹಾಳಾಗಿವೆ ನಿಮ್ಮ ಬಂದರುಗಳೆಲ್ಲ; ಹಡಗುಗಳಿಗೆ ರೇವಿಲ್ಲ, ನೆಲೆಯಿಲ್ಲ, ಸೈಪ್ರಸ್ಸಿನಿಂದ ಬಂದ ನಾವಿಕರಿಂದ ಈ ಸುದ್ದಿ ನಿಮಗೆ ತಿಳಿಯುವುದು.”
2 : ಕರಾವಳಿಯ ನಿವಾಸಿಗಳೇ, ಸಿದೋನಿನ ವರ್ತಕರೇ, ಮೌನತಾಳಿರಿ. ನಿಮ್ಮ ಜನರು ವ್ಯಾಪಾರಕ್ಕಾಗಿ ವಿಶಾಲವಾದ ಸಮುದ್ರವನ್ನು ದಾಟುವಂತೆ ಮಾಡಿದಿರಿ.
3 : ಶೀಹೋರಿನ ಧಾನ್ಯದಿಂದಲೂ ನೈಲಿನ ಬೆಳೆಯಿಂದಲೂ ಆದಾಯ ಪಡೆದಿರಿ, ನಿಮ್ಮ ನಗರ ಹಲವಾರು ನಾಡುಗಳಿಗೆ ಮಾರುಕಟ್ಟೆಯಾಗಿತ್ತು.
4 : ಸಿದೋನ್ ನಗರವೇ, ನಿನಗೆ ನಾಚಿಕೆ ಗೇಡು! ಸಮುದ್ರವೂ ಸಮುದ್ರ ತಳವೂ ನಿನ್ನನ್ನು ನಿರಾಕರಿಸುತ್ತಾ; “ನಾನು ಗರ್ಭಧರಿಸಲಿಲ್ಲ, ಪ್ರಸವಿಸಲಿಲ್ಲ, ಪುತ್ರಪುತ್ರಿಯರನ್ನು ಸಾಕಿ ಸಲಹಲಿಲ್ಲ” ಎಂದು ನುಡಿದಿದೆ.
5 : ಟೈರಿನ ದುರ್ಗತಿಯ ಸುದ್ದಿಯನ್ನು ಕೇಳಿದ ಈಜಿಪ್ಟಿನವರು ಸಹ ಕಳವಳಪಡುವರು.
6 : ಕರಾವಳಿಯ ನಿವಾಸಿಗಳೇ, ಗೋಳಾಡಿರಿ, ಸಮುದ್ರವನ್ನು ದಾಟಿ ತಾರ್ಷೀಷಿಗೆ ಹೋಗಿರಿ.
7 : ಇದು ತಾನೋ, ನಿಮ್ಮ ವಸಾಹತುಗಳನ್ನು ನಿರ್ಮಿಸಿಕೊಳ್ಳಲು ಜನರನ್ನು ಕಳುಹಿಸಿದ ನಗರ! ಇದರ ವರ್ತಕರು ಪ್ರಭುಗಳು!
8 : ಇದರ ವ್ಯಾಪಾರಿಗಳು ವಿಶ್ವವಿಖ್ಯಾತರು. ಇಂಥ ಟೈರ್ ಪಟ್ಟಣಕ್ಕೆ ನಾಶವೊದಗಿದುದನ್ನು ಯೋಚಿಸಿದವರಾರು?
9 : ಇದು ಸೇನಾಧೀಶ್ವರ ಸರ್ವೇಶ್ವರ ಮಾಡಿದ ಸಂಕಲ್ಪವೇ ಸರಿ. ಗರ್ವಿಗಳ ಸಕಲ ದರ್ಪವನ್ನು ದಮನ ಮಾಡಲು, ವಿಶ್ವವಿಖ್ಯಾತರನ್ನು ಅವಮಾನಗೊಳಿಸಲು ಸೇನಾಧೀಶ್ವರ ಸರ್ವೇಶ್ವರ ಮಾಡಿದ ಯೋಜನೆಯಿದು.
10 : ತಾರ್ಷೀಷ್ ನಗರವೇ, ನೈಲ್ ನದಿಯಂತೆ ನಿನ್ನ ನಾಡನ್ನು ಕೃಷಿ ಮಾಡು. ನಿನಗೆ ಬಂದರು ಇಲ್ಲವೇ ಇಲ್ಲ.
11 : ಸರ್ವೇಶ್ವರ ಸಮುದ್ರದ ಮೇಲೆ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾರೆ. ಕಾನಾನಿನ ದುರ್ಗಗಳನ್ನು ನಾಶಮಾಡಲು ಅಪ್ಪಣೆಕೊಟ್ಟಿದ್ದಾರೆ.
12 : “ಹಿಂಸೆಗೆ ಈಡಾದ ಕನ್ಯೆಯಂತೆ ಇರುವ ಸಿದೋನ್ ನಗರವೇ, ಇನ್ನು ಮೇಲೆ ನಿನಗಿರದು ಸಂತೃಪ್ತಿ: ಸಮುದ್ರ ದಾಟಿ ಸೈಪ್ರಸ್ಸಿಗೆ ಹಾದು ಹೋಗು, ಅಲ್ಲಿಯೂ ನಿನಗೆ ದೊರಕದು ವಿಶ್ರಾಂತಿ” ಎಂದು ಹೇಳಿದ್ದಾರೆ.
13 : ಬಾಬಿಲೋನಿನ ನಾಡನ್ನು ನೋಡು. ಅದರ ಜನಾಂಗ ನಿರ್ನಾಮವಾಯಿತು. ಅಸ್ಸೀರಿಯದವರು ಆ ನಾಡನ್ನು ಕಾಡುಮೃಗಗಳಿಗೆ ಈಡುಮಾಡಿದರು. ಅಲ್ಲಿ ಬುರುಜುಗಳನ್ನು ಕಟ್ಟಿ ಕೊಂಡರು. ಇದರ ಕೋಟೆಗಳನ್ನಾದರೋ ಕೆಡವಿ ನಾಶಮಾಡಿದರು.
14 : ‘ಗೋಳಾಡಿರಿ, ತಾರ್ಷೀಷಿನ ನಾವಿಕರೆಲ್ಲರು; ಹಾಳಾಗಿವೆ ನಿಮ್ಮ ಬಂದರುಗಳೆಲ್ಲವು.’
15 : ಒಬ್ಬ ಅರಸನ ಜೀವಮಾನ ಕಾಲದಷ್ಟು ದಿನ - ಅಂದರೆ ಎಪ್ಪತ್ತು ವರ್ಷ ಕಾಲ - ನಗರವು ಯಾರ ನೆನಪಿಗೂ ಬಾರದೆ ಹೋಗುವುದು. ಆ ಅವಧಿಯು ಮುಗಿದ ಮೇಲೆ ಅದರ ಗತಿ ವೇಶ್ಯೆಯ ಗೀತದಂತಾಗುವುದು:
16 : ‘ಓ ವೇಶ್ಯೆಯೇ, ಮರೆತಿಹರು, ನೋಡು, ಜನರು ನಿನ್ನನು; ಎಂದೇ ತೆಗೆದುಕೋ ಕೈಯಲಿ ಕಿನ್ನರಿಯನು; ನುಡಿಸು ಇಂಪಾಗಿ ನಿನ್ನ ವಾದ್ಯವನು; ಹಾಡು ಅನೇಕಾನೇಕ ಗೀತಗಳನು; ಆಗಲಾದರೂ ನೆನಸಿಕೊಳ್ಳಲಿ ಜನರು ನಿನ್ನನು.’
17 : ಎಪ್ಪತ್ತು ವರ್ಷಗಳಾದ ಮೇಲೆ ಸರ್ವೇಶ್ವರ ಟೈರಿಗೆ ಭೇಟಿ ನೀಡುವರು. ಆ ನಗರಿ ತನ್ನ ಕಸುಬಿಗೆ ಹಿಂದಿರುಗುವಳು. ಜಗದ ಎಲ್ಲ ರಾಷ್ಟ್ರಗಳೊಂದಿಗೆ ವ್ಯಾಪಾರ ಗೈಯುವಳು.
18 : ಅವಳ ವ್ಯಾಪಾರದಿಂದ ಬಂದ ಆದಾಯ ಅವಳಿಗೆ ನಿಧಿ ನಿಕ್ಷೇಪವಾಗದೆ ಸರ್ವೇಶ್ವರಸ್ವಾಮಿಗೆ ಮೀಸಲಾಗುವುದು. ಅದು ಸರ್ವೇಶ್ವರಸ್ವಾಮಿಯ ಸನ್ನಿಧಾನದಲ್ಲಿ ವಾಸಮಾಡುವವರಿಗೆ ಬೇಕಾದಷ್ಟು ಆಹಾರವನ್ನೂ ಅತ್ಯುತ್ತಮವಾದ ಉಡುಪನ್ನೂ ಒದಗಿಸುವುದು.

Holydivine