Isaiah - Chapter 14
Holy Bible

1 : ದಯೆತೋರಿಸುವರು ಸರ್ವೇಶ್ವರ ಯಕೋಬ್ಯರಿಗೆ, ಆರಿಸಿಕೊಳ್ಳುವರು ಮತ್ತೆ ಇಸ್ರಯೇಲರನ್ನೆ, ನೆಲೆಗೊಳಿಸುವರವರನ್ನು ತಾಯಿನಾಡಿನಲ್ಲೆ. ಹೊರನಾಡಿಗರು ಕೂಡಿಕೊಳ್ಳುವರು ಅವರೊಡನೆ, ಸೇರಿಕೊಳ್ಳುವರವರು ಯಕೋಬ ಮನೆತನಕ್ಕೆ.
2 : ರಾಷ್ಟ್ರಗಳೇ ಇಸ್ರಯೇಲರನ್ನು ಕರೆತಂದು ಸೇರಿಸುವುವು ಸ್ವಂತ ನಾಡಿಗೆ. ಸರ್ವೇಶ್ವರನ ಆ ನಾಡಿನಲಿ ದಾಸದಾಸಿಯರನ್ನಾಗಿಸಿಕೊಳ್ಳುವುದು ಇಸ್ರಯೇಲ್ ಮನೆತನವು ಆ ರಾಷ್ಟ್ರಗಳನ್ನೇ. ಸೆರೆಹಿಡಿಯುವರು ತಮ್ಮನ್ನು ಸೆರೆಹಿಡಿದವರನ್ನೇ. ಅಧೀನಪಡಿಸುವರು ತಮ್ಮನ್ನು ಹಿಂಸಿಸಿದವರನ್ನೇ.
3 : ಸಂಕಟದಿಂದಲೂ ನೋವುನಷ್ಟದಿಂದಲೂ ಕ್ರೂರವಾದ ಬಿಟ್ಟಿಜೀತದಿಂದಲೂ ಸರ್ವೇಶ್ವರ ನಿಮ್ಮನ್ನು ಬಿಡುಗಡೆ ಮಾಡುವರು. ಆ ದಿನದಂದು ಬಾಬಿಲೋನಿನ ಅರಸನನ್ನು ಮೂದಲಿಸಿ ಈ ಪದ್ಯವನ್ನು ನೀವು ಹಾಡಬೇಕು:
4 : ಬಿದ್ದುಹೋದನಿದೊ ವಿಧ್ವಂಸಕ ಸದ್ದಿಲ್ಲದಾಗಿದೆ ಅವನ ಅಟ್ಟಹಾಸದ ಬಿಂಕ.
5 : ಮುರಿದಿಹನು ಸರ್ವೇಶ್ವರ ದುರುಳರಾ ಗದೆಯನು ಮುರಿದಿಹನು ಅರಸರ ರಾಜದಂಡವನು.
6 : ಏಕೆನೆ, ಎಡೆಬಿಡದೆ ದಂಡಿಸಿದರು ಪ್ರಜೆಗಳನು ಕೋಪೋದ್ರೇಕದಿಂದ ತಡೆಯಿಲ್ಲದೆ ದಬ್ಬಾಳಿಕೆ ನಡೆಸಿದರು ರಾಷ್ಟ್ರಗಳ ಮೇಲೆ ಸಿಟ್ಟಿನಿಂದ.
7 : ಕಟ್ಟಕಡೆಗೆ ಶಾಂತಿಯಿಂದ ಸುರಕ್ಷಿತವಾಗಿದೆ ಜಗವೆಲ್ಲ ಹರ್ಷಧ್ವನಿಗೈಯುತ ಹಾಡುತಿಹರು ಜನರೆಲ್ಲ.
8 : ನಲಿಯುತಿಹವು ತುರಾಯಿ, ಲೆಬನೋನಿನ ದೇವದಾರು ವೃಕ್ಷಗಳು ಕೂಡಾ, ‘ಮಡಿದು ಹೋದನಿವನು, ಇನ್ನು, ಕಡಿವವರಾರು ನಮ್ಮನು?’ ಎನ್ನುತಾ.
9 : ನಿನ್ನ ಸ್ವಾಗತಿಸಲು ಸಡಗರದಿಂದಿದೆ ಪಾತಾಳ ಲೋಕವು, ಚೇತನಗೊಂಡಿವೆ ಲೋಕಮುಖಂಡರ ಪ್ರೇತಗಳು, ಎದ್ದು ನಿಂತಿಹರು ಸಕಲ ರಾಷ್ಟ್ರಗಳ ಅರಸರುಗಳು.
10 : ಇವರೆಲ್ಲರು ಇಂತೆನ್ನುವರು ನಿನಗೆ: ‘ನೀನು ಸಹ ದುರ್ಬಲನಾದೆ ನಮ್ಮ ಹಾಗೆ ನೀನೂ ಸರಿಸಮಾನನಾದೆ ನಮಗೆ’.
11 : ಇಳಿದಿದೆ ನಿನ್ನ ವೈಭವ, ವೀಣಾನಾದ ಪಾತಾಳಕೆ ನಿನಗೀಗ ಹುಳುಗಳೇ ಹಾಸಿಗೆ, ಕ್ರಿಮಿಗಳೇ ಹೊದಿಕೆ.
12 : ಮುಂಜಾನೆಯ ನಕ್ಷತ್ರವೆ, ಉದಯ ಕುಮಾರನೆ, ಆಗಸದಿಂದ ಹೇಗೆ ಬಿದ್ದೆ? ರಾಷ್ಟ್ರಗಳನ್ನು ಗೆದ್ದ ನೀನು, ನೆಲಕ್ಕೆ ಅದು ಹೇಗೆ ಉರುಳಿದೆ?
13 : ‘ಹತ್ತಿಹೋಗುವೆನು ನಾನು ಆಕಾಶ ಮಂಡಲಕೆ ಉತ್ತರದಿಕ್ಕಿನ ಕೊನೆಗಿರುವ ಸುರಗಣ ಪರ್ವತಕ್ಕೆ ಎತ್ತುವೆ ಸಿಂಹಾಸನವನ್ನು ದೇವ ನಕ್ಷತ್ರಗಳ ಮೇಲಕೆ ‘ಕುಳಿತಲ್ಲಿ ರಾಜ್ಯವಾಳುವೆ’ ಎಂದುಕೊಂಡೆ ನಿನ್ನೊಳಗೆ.
14 : ‘ಏರುವೆ ಉನ್ನತ ಮೇಘಮಂಡಲದ ಮೇಲಕೆ, ಸರಿಸಮಾನನಾಗುವೆ ಉನ್ನತೋನ್ನತನಿಗೆ’.
15 : ಇಂತೆಂದ ನೀನು ದೂಡಲಾಗಿರುವೆ ಪಾತಾಳಕೆ ಅಧೋಲೋಕದ ಅಗಾಧ ಕೂಪಗಳಿಗೆ.
16 : ಸತ್ತವರು ದಿಟ್ಟಿಸಿ ನಿನ್ನನು: ‘ಭುವಿಯನು ನಡುಗಿಸಿದವನು, ರಾಜ್ಯಗಳನು ಕದಲಿಸಿದವನು,
17 : ನಗರಗಳನು ಕೆಡವಿಸಿದವನು, ನಾಡನು ಕಾಡಾಗಿಸಿದವನು, ಖೈದಿಗಳನು ಬಂಧನದಿಂದ ಬಿಡಿಸಿದವನು ಈತನೇ ಅಲ್ಲವೆ?’ ಎಂದಾಡಿಕೊಳ್ವರು.
18 : ಸಂಭ್ರಮದಿ ಸ್ವಂತ ಸಮಾಧಿಗಳಲಿ ನಿರಂತರ ನಿದ್ರಿಸುತಿಹರು ಸಕಲ ರಾಷ್ಟ್ರಗಳ ಅರಸರು, ಸಮಸ್ತ ರಾಜರು.
19 : ನಿನ್ನನ್ನಾದರೊ ಕೊಳೆತ ಕಡ್ಡಿಯಂತೆ ಬಿಸಾಡಿಹರು ಕೆಳಕೆ ಗೋರಿಯಿಲ್ಲದ ನಿನ್ನ ಶವ ಈಡಾಗಿದೆ ಪರರ ತುಳಿತಕ್ಕೆ, ಕತ್ತಿ ತಿವಿದ, ಕಲ್ಲುಗುಂಡಿಗೆ ಪಾಲಾದ ಹೆಣಗಳೇ ನಿನ್ನ ಹೊದಿಕೆ.
20 : ಸ್ವಂತ ಜನರನೇ ಕೊಂದ ನಿನಗೆ ಸ್ವಂತ ನಾಡನೇ ನಾಶಗೈದ ನಿನಗೆ ಸಿಗದು ರಾಜ್ಯವೈಭವದ ಸಂಸ್ಕಾರ ಗೋರಿಗೆ, ‘ಹೇಳಹೆಸರಿಲ್ಲದ ಗತಿ ದುರುಳರ ಸಂತಾನಕೆ’.
21 : ತಲೆಯೆತ್ತಿ ಪೃಥ್ವಿಯನೇ ವಶಪಡಿಸಿಕೊಳ್ಳದಂತೆ, ಧರೆಯ ಮೇಲೆಲ್ಲ ನಗರಗಳನ್ನು ಕಟ್ಟಿಕೊಳ್ಳದಂತೆ, ಸಿದ್ಧಮಾಡಿರಿವನ ಮಕ್ಕಳಿಗೆ ವಧ್ಯಸ್ಥಾನ, ಈತನ ಪಿತಾಪಿತೃಗಳ ಪಾಪಕೃತ್ಯಗಳ ಕಾರಣ.
22 : ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿಗಳು: “ನಾನವರಿಗೆ ವಿರುದ್ಧವಾಗಿ ಎದ್ದು ನಿರ್ನಾಮಮಾಡುವೆನು, ಬಾಬಿಲೋನಿನ ಹೆಸರನು, ಜನಶೇಷವನು, ಪುತ್ರಪೌತ್ರರನು.
23 : ಪರಿವರ್ತಿಸುವೆನಾ ನಾಡನು ಜವುಗು ನೆಲವನ್ನಾಗಿ, ಅಹುದು, ಮುಳ್ಳುಹಂದಿಗಳ ರೊಪ್ಪವನ್ನಾಗಿ, ಗುಡಿಸಿಬಿಡುವೆನು ನಾಶವೆಂಬ ಪೊರಕೆಯಿಂದ ಪೂರ್ತಿಯಾಗಿ”.
24 : ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ಪ್ರತಿಜ್ಞೆಯಿದು: “ನೆರವೇರಿಯೇ ತೀರುವುದು ನಾ ಸಂಕಲ್ಪಿಸಿದ್ದು, ಈಡೇರಿಯೇ ತೀರುವುದು ನಾ ಯೋಚಿಸಿದ್ದು.
25 : ನಶಿಸಿಬಿಡುವೆನಾ ಅಸ್ಸೀರಿಯರನು ನನ್ನ ನಾಡಿನಲಿ, ತುಳಿದುಬಿಡುವೆನು ಅವರನು ನನ್ನ ಬೆಟ್ಟಗಳಲಿ, ನೀಗುವುದಾಗ ನನ್ನ ಜನರಿಂದ ಅವರು ಹೂಡಿದ ನೊಗವು, ತೊಲಗುವುದಾಗ ಅವರು ಹೊರಿಸಿದ ಹೊರೆಯು.
26 : ವಿಶ್ವದ ಬಗ್ಗೆ ನಾ ಮಾಡಿರುವೆ ಯೋಜನೆಯಿದು, ರಾಷ್ಟ್ರಗಳನ್ನು ದಂಡಿಸಲೆತ್ತಿರುವ ಕೈಯಿದು”.
27 : ವ್ಯರ್ಥಗೊಳಿಸುವವರಾರು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ಯೋಜನೆಯನು? ಹಿಂತೆಗೆವವರಾರು ಅವರೆತ್ತಿದ ಕೈಯನು?
28 : ಅರಸ ಆಹಾಜನು ಕಾಲವಾದ ವರುಷದಲಿ ಕೇಳಿಬಂದಿತು ಈ ದೈವೋಕ್ತಿ:
29 : “ನಲಿಯದಿರಿ, ಎಲೈ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿಯಿತೆಂದು. ಹಾವು ಸತ್ತರೂ ಅದರ ಮೂಲದಿಂದ ಹುಟ್ಟುವುದು ಕ್ರೂರ ಕಾಳಿಂಗವು, ಅದರ ಮೊಟ್ಟೆಯಿಂದ ಹೊರಬರುವುದು ಹಾರುವ ಘಟಸರ್ಪವು.
30 : ಪೋಷಣೆಪಡೆಯುವರು ದೀನದಲಿತರು, ನಿರ್ಭಯದಿಂದ ನಿದ್ರಿಸುವರು ದಿಕ್ಕಿಲ್ಲದವರು. ನಿನ್ನ ಸಂತಾನದವರಾದರೋ ಸಾಯುವರು ಕ್ಷಾಮದಿಂದ, ಅಳಿದುಳಿದವರು ಹತರಾಗುವರು ಆ ಘಟಸರ್ಪದಿಂದ.
31 : ಪುರದ್ವಾರವೇ, ಗೋಳಾಡು; ಪಟ್ಟಣವೇ, ಬೊಬ್ಬೆಯಿಡು, ಫಿಲಿಷ್ಟಿಯವೇ, ಕರಗಿಹೋಗು, ಉತ್ತರದಿಂದ ಬರುತ್ತಿದೆ ಧೂಮಧೂಳಿ ಆ ದಂಡಿನಲ್ಲಿಲ್ಲ ನೋಡು, ಯಾವ ಹೇಡಿ.
32 : ಹೊರನಾಡಿನ ರಾಯಭಾರಿಗಳಿಗೆ ನಮ್ಮ ಉತ್ತರವೇನು? “ಸರ್ವೇಶ್ವರಸ್ವಾಮಿ ಸ್ಥಾಪಿಸಿಹರು ಸಿಯೋನನ್ನು, ದೀನದಲಿತರು ಆಶ್ರಯಿಸಿಕೊಳ್ಳುವರು ಅದನ್ನು.”

Holydivine