Isaiah - Chapter 17
Holy Bible

1 : ದಮಸ್ಕಸ್ ವಿಷಯವಾಗಿ ದೈವೋಕ್ತಿ: “ಇದೋ, ದಮಸ್ಕಸ್ ಊರಾಗಿ ಉಳಿಯದು, ಅದೊಂದು ಹಾಳುದಿಬ್ಬವಾಗುವುದು.
2 : ಸಿರಿಯದ ನಗರಗಳೆಲ್ಲ ನಿರ್ಜನ ಪ್ರದೇಶಗಳಾಗಿ ಗೋಮಾಳವಾಗುವುವು. ಅಲ್ಲಿ ದನಕರುಗಳು ನಿರ್ಭಯದಿಂದ ತಂಗುವುವು.
3 : ಎಫ್ರಯಿಮಿಗೆ ಕೋಟೆ ಕೊತ್ತಲಗಳು, ದಮಸ್ಕಸ್ಸಿಗೆ ರಾಜ್ಯಾಡಳಿತವು ಇಲ್ಲದಂತಾಗುವುವು. ಸಿರಿಯದಲ್ಲಿ ಅಳಿದುಳಿದವರು ಅಪಮಾನಕ್ಕೀಡಾಗುವರು,” ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ.
4 “ಆ ದಿನದಂದು ಇಸ್ರಯೇಲಿನ ಕೊಬ್ಬು ಕರಗುವುದು. ಅದರ ಮಹಿಮೆ ಕ್ಷಯಿಸಿಹೋಗುವುದು.
5 : ಅದು ಕೊಯ್ದ ಹೊಲದಂತಿರುವುದು, ತೆನೆಕತ್ತರಿಸಿದ ಹುಲ್ಲಿನಂತಿರುವುದು. ಕೂಳೆಯನ್ನೂ ಬಿಡದೆ ಆಯ್ದುಕೊಂಡ ರೆಫಾಯಿಮ್ ಕಣಿವೆಯಂತೆ ಇರುವುದು.
6 : ಓಲಿವ್ ಮರದಲ್ಲಿ ಕಾಯಿಯನ್ನು ಉದುರಿಸಿದ ನಂತರ ಅದರ ತುತ್ತ ತುದಿಯಲ್ಲಿ ಎರಡು ಮೂರೇ ಕಾಯಿಗಳಿರುವುವು: ಅದರ ಫಲಭರಿತ ರೆಂಬೆಗಳಲ್ಲಿ ನಾಲ್ಕೈದೇ ಕಾಯಿಗಳಿರುವುವು. ಅಂತೆಯೇ ಇಸ್ರಯೇಲಿನಲ್ಲಿ ಅಳಿದುಳಿಯುವವರು ಕೆಲವರು ಮಾತ್ರ” ಎನ್ನುತ್ತಾರೆ ಇಸ್ರಯೇಲಿನ ದೇವರಾದ ಸರ್ವೇಶ್ವರ.
7 : ಆ ದಿನದಂದು ಜನರು ತಮ್ಮ ಕೈಯಿಂದ ಕಟ್ಟಿದ ಬಲಿಪೀಠಗಳನ್ನಾಗಲೀ, ಬೆರಳುಗಳಿಂದ ನಿರ್ಮಿಸಿದ ಆಶೇರಾ ದೇವತೆಯ ಸ್ತಂಭಗಳನ್ನಾಗಲೀ, ಧೂಪವೇದಿಕೆಗಳನ್ನಾಗಲೀ ಪೂಜಿಸದೆ ತಮ್ಮ ಸೃಷ್ಟಿಕರ್ತನನ್ನೇ ಲಕ್ಷಿಸಿ, ಇಸ್ರಯೇಲಿನ ಪರಮ ಪಾವನಸ್ವಾಮಿಯ ಕಡೆ ತಿರುಗಿಕೊಳ್ಳುವರು.
8 : ಆ ದಿನದಂದು ಜನರು ತಮ್ಮ ಕೈಯಿಂದ ಕಟ್ಟಿದ ಬಲಿಪೀಠಗಳನ್ನಾಗಲೀ, ಬೆರಳುಗಳಿಂದ ನಿರ್ಮಿಸಿದ ಆಶೇರಾ ದೇವತೆಯ ಸ್ತಂಭಗಳನ್ನಾಗಲೀ, ಧೂಪವೇದಿಕೆಗಳನ್ನಾಗಲೀ ಪೂಜಿಸದೆ ತಮ್ಮ ಸೃಷ್ಟಿಕರ್ತನನ್ನೇ ಲಕ್ಷಿಸಿ, ಇಸ್ರಯೇಲಿನ ಪರಮ ಪಾವನಸ್ವಾಮಿಯ ಕಡೆ ತಿರುಗಿಕೊಳ್ಳುವರು.
9 : ಆ ದಿನದಂದು ನಾಡಿನ ಸುಭದ್ರವಾದ ನಗರಗಳು ನಿರ್ಜನ ಪ್ರದೇಶಗಳಾಗುವುವು. ಇಸ್ರಯೇಲರಿಗೆ ಹೆದರಿ ಅಮೋರ್ಯರು ಮತ್ತು ಹಿವ್ವಿಯರು ಬಿಟ್ಟುಹೋದ ಹಾಳು ನಿವೇಶನಗಳಂತಾಗುವುವು, ನಾಡೆಲ್ಲ ಹಾಳು ಬೀಳುವುದು.
10 : ಇಸ್ರಯೇಲೇ, ನಿನ್ನ ಉದ್ಧಾರಕನಾದ ದೇವರನ್ನು ನೀನು ಸ್ಮರಿಸಲಿಲ್ಲ. ನಿನಗೆ ಆಶ್ರಯವಿತ್ತ ಪೊರೆಬಂಡೆಯನ್ನು ಮರೆತುಹೋದೆ. ಬದಲಿಗೆ ಅನ್ಯದೇವರ ಆರಾಧನೆಗಾಗಿ ನಿನಗಿಷ್ಟವಾದ ಉದ್ಯಾನವನಗಳನ್ನು ನೆಟ್ಟೆ.
11 : ಬೀಜವನ್ನು ನೆಟ್ಟ ದಿನವೇ ಬೇಲಿಕಟ್ಟಿದೆ. ಮಾರನೆಯ ದಿನವೇ ಅದು ಮೊಳೆಯುವಂತೆ ಮಾಡಿದೆ. ಆದರೂ ನಿನಗೆ ಸಿಗುವ ಸುಗ್ಗಿ, ವ್ಯಾಧಿ ಮತ್ತು ಅತೀವ ವ್ಯಥೆಯೇ. ಶತ್ರುರಾಷ್ಟ್ರಗಳ ಪರಾಜಯ
12 : ಸಮುದ್ರದಂತೆ ಭೋರ್ಗರೆಯುವ, ಪ್ರಚಂಡ ಜಲಪ್ರವಾಹಗಳಂತೆ ಗರ್ಜಿಸುವ ಪ್ರಬಲ ರಾಷ್ಟ್ರಗಳ ಆರ್ಭಟವನ್ನು ಕೇಳಿ,
13 : ಹೌದು, ಪ್ರಚಂಡ ಜಲಪ್ರವಾಹಗಳಂತೆ ಪ್ರಬಲ ರಾಷ್ಟ್ರಗಳು ಆರ್ಭಟಿಸುತ್ತವೆ. ಆದರೆ ದೇವರು ಅವರನ್ನು ಗದರಿಸುವರು. ಅವರು ಬಿರುಗಾಳಿಗೆ ಸಿಕ್ಕಿದ ಬೆಟ್ಟದ ಹೊಟ್ಟಿನಂತೆ, ಸುಂಟರಗಾಳಿಗೆ ಸುತ್ತುವ ಧೂಳಿನಂತೆ ಓಡುವರು.
14 : ಬೈಗಿನಲ್ಲಿ ಇಗೋ, ಎಲ್ಲೆಲ್ಲೂ ಭಯ, ಬೆಳಗಾದಾಗ ಅವೆಲ್ಲ ಮಾಯ; ಇದೇ ನಮ್ಮನ್ನು ಸೂರೆ ಮಾಡುವವರ ಗತಿ, ನಮ್ಮನ್ನು ಕೊಳ್ಳೆ ಹೊಡೆಯುವವರ ಪಾಡು!

Holydivine