Job - Chapter 34
Holy Bible

1 : ಎಲೀಹುವನು ಮತ್ತೆ ಹೀಗೆಂದನು:
2 : “ಜ್ಞಾನಿಗಳೇ, ನನ್ನ ಮಾತನ್ನು ಗಮನಿಸಿ: ಮೇಧಾವಿಗಳೇ, ನನಗೆ ಕಿವಿಗೊಡಿ:
3 : ನಾಲಿಗೆ ಆಹಾರವನು ರುಚಿನೋಡುವಂತೆ ಕಿವಿ ನುಡಿಮಾತುಗಳನು ವಿವೇಚಿಸುತ್ತದೆ.
4 : ಸರಿಯಾದುದನ್ನೇ ಆಯ್ದುಕೊಳ್ಳೋಣ ಒಳಿತಾದುದನ್ನು ನಮ್ಮ ನಮ್ಮಲ್ಲೇ ನಿಶ್ಚಯಿಸಿಕೊಳ್ಳೋಣ.
5 : ಇಂತಿದೆ ಯೋಬನ ವಾದ - ‘ನಾನು ಸತ್ಯವಂತ ನನಗೆ ದೇವರಿಂದ ನ್ಯಾಯದೊರೆತಿಲ್ಲ.
6 : ನನ್ನಲ್ಲಿ ನ್ಯಾಯವಿದ್ದರೂ ಸುಳ್ಳುಗಾರನೆನಿಸಿಕೊಂಡಿದ್ದೇನೆ ನಿರ್ದೋಷಿಯಾಗಿದ್ದರೂ ನನಗೆ ದೇವರ ಪೆಟ್ಟು ಬಾಣಬಿಟ್ಟಂತಿದೆ.’
7 : ಈ ಯೋಬನಂಥ ಮನುಜನು ಯಾರಿದ್ದಾನೆ? ಇಗೋ, ದೇವದೂಷಣೆಯನು ನೀರಿನಂತೆ ಕುಡಿಯುತ್ತಿದ್ದಾನೆ!
8 : ಇವನು ದುರ್ಜನರ ಸಂಗಡ ಸಂಚರಿಸುವವನು ಕೆಡುಕರ ಸಂಗಡ ನಡೆದಾಡುವವನು.
9 : ದೇವರನು ಪ್ರೀತಿಸಿ ಬಾಳುವುದರಿಂದ ಪ್ರಯೋಜನವಿಲ್ಲವೆಂಬುದು ಇವನ ವಾದ.
10 : ಹೀಗಿರಲು ಬುದ್ದಿವಂತರೇ, ನನ್ನ ಮಾತುಗಳಿಗೆ ಕಿವಿಗೊಡಿ ದೇವರು ಕೆಟ್ಟದ್ದನು ಮಾಡಿಯಾನೆಂಬ ಯೋಚನೆ ದೂರವಿರಲಿ ಸರ್ವಶಕ್ತನು ಅನ್ಯಾಯವನು ಎಸಗಿಯಾನೆಂಬ ಭಾವನೆ ಬಾರದಿರಲಿ.
11 : ದೇವರು ನರನಿಗೆ ಅವನ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲವನ್ನೀಯುತ್ತಾನೆ ಪ್ರತಿಯೊಬ್ಬನು ಅವನವನ ಕರ್ಮಕ್ಕೆ ತಕ್ಕಂತೆ ಅನುಭವಿಸಮಾಡುತ್ತಾನೆ.
12 : ಹೌದು, ದೇವರು ಎಂದಿಗೂ ಕೆಡುಕನು ಮಾಡನು ಸರ್ವಶಕ್ತನು ಎಂದಿಗೂ ನೇರವಾದುದನು ಡೊಂಕುಮಾಡನು.
13 : ಭೂಲೋಕವನು ಆತನ ವಶಕ್ಕೆ ಕೊಟ್ಟವನುಂಟೆ? ಆತನಲ್ಲದೆ ಭೂಮಂಡಲವನು ಕ್ರಮಪಡಿಸಿದವನುಂಟೆ?
14 : ದೇವರು ಮನಸ್ಸುಮಾಡಿ ತನ್ನ ಆತ್ಮವನ್ನು ಹಿಂದಕ್ಕೆ ತೆಗೆದುಕೊಂಡನಾದರೆ ತನ್ನ ಶ್ವಾಸವನ್ನು ಹಿಂದಕ್ಕೆ ಎಳೆದುಕೊಂಡನಾದರೆ,
15 : ಸಮಸ್ತ ಜನರು ಒಟ್ಟಾಗಿ ಅಳಿದು ಹೋಗುವರು ಮರಳಿ ಮನುಷ್ಯರೆಲ್ಲರೂ ಮಣ್ಣಾಗಿ ಮಾರ್ಪಡುವರು.
16 : ಬುದ್ದಿಯಿದ್ದರೆ ಇದನು ಕೇಳಿ ನನ್ನ ಮಾತಿನ ದನಿಗೆ ಕಿವಿಗೊಡಿ.
17 : ನ್ಯಾಯವನ್ನು ದ್ವೇಷಿಸುವವನು, ಶಿಸ್ತನು ಪಾಲಿಸುವನೋ? ಸತ್ಯಸ್ವರೂಪಿ, ಸರ್ವಶಕ್ತ ಆದ ದೇವರನು ಕೆಟ್ಟವನೆನ್ನುವಿಯೋ?
18 : ದೇವರು ರಾಜನಿಗೆ “ಮೂರ್ಖ” ಎಂದು ಹೇಳಬಲ್ಲನು ಪ್ರಭುಗಳನ್ನು “ದುಷ್ಟರು” ಎಂದು ಕರೆಯಬಲ್ಲನು.
19 : ಅಧಿಪತಿಗಳಿಗೆ ಮುಖದಾಕ್ಷಿಣ್ಯವನ್ನು ತೋರಿಸನು ಬಡವ-ಬಲ್ಲಿದನೆಂಬ ಭೇದವನ್ನು ಮಾಡನು. ಏಕೆಂದರೆ ಅವರೆಲ್ಲರು ಆ ದೇವನಿಂದಲೇ ಸೃಷ್ಟಿಯಾದವರು.
20 : ಕ್ಷಣಮಾತ್ರದೊಳು, ನಡುರಾತ್ರಿಯೊಳು ಸತ್ತುಹೋಗುವರು ನಾಡಿನ ಪ್ರಜೆಗಳು ತಲ್ಲಣಗೊಂಡು ಇಲ್ಲದೆ ಹೋಗುವರು ಮನುಷ್ಯರ ಕೈಸೋಂಕದೆಯೆ ಪರಾಕ್ರಮಿಗಳು ಮಾಯವಾಗುವರು.
21 : ದೇವರ ಕಣ್ಣು ಮನುಷ್ಯನ ಮಾರ್ಗಗಳ ಮೇಲೆ ಅವನ ಹೆಜ್ಜೆಗಳೆಲ್ಲ ಗೋಚರವಾಗಿವೆ ಆತನಿಗೆ.
22 : ಆತನ ದೃಷ್ಟಿಯಿಂದ ದುರುಳರು ಅಡಗಿಕೊಳ್ಳುವಂತಿಲ್ಲ ಅಂಥವರನ್ನು ಅಡಗಿಸಬಲ್ಲ ಇರುಳಿಲ್ಲ, ಕಾರಿರುಳೂ ಇಲ್ಲ.
23 : ದೇವರು ಮನುಷ್ಯನ ಮೇಲೆ ಹೆಚ್ಚು ಗಮನ ಇಡಬೇಕಾಗಿಲ್ಲ ಅವನನ್ನು ನ್ಯಾಯವಿಚಾರಣೆಗೆ ಕರೆಯುವ ಅವಶ್ಯಕತೆ ಇಲ್ಲ.
24 : ವಿಚಾರಣೆ ಇಲ್ಲದೆಯೆ ಪರಾಕ್ರಮಿಗಳನು ಸದೆಬಡಿಯುವನು ಅವರ ಸ್ಥಾನದಲ್ಲಿ ಇತರರನ್ನು ನಿಲ್ಲಿಸಬಲ್ಲನು.
25 : ದುಷ್ಕಾರ್ಯಗಳು ಆತನಿಗೆ ತಿಳಿದಿರುವ ಕಾರಣ ಇರುಳಲ್ಲೇ ದುರುಳರನು ಕೆಡವಿ ನಾಶಕ್ಕೆ ಗುರಿಮಾಡುವನು.
26 : ಅಪರಾಧಿಗಳಂತೆ ಅವರನು ದಂಡಿಸುವನು ಎಲ್ಲರು ನೋಡುವಂತೆ ಅವರನು ಖಂಡಿಸುವನು.
27 : ದೇವರ ಮಾರ್ಗಗಳೆಲ್ಲವನು ಅವರು ಅಲಕ್ಷ್ಯ ಮಾಡಿದರು ಆತನಿಗೆ ವಿಧೇಯರಾಗದೆ ತಿರುಗಿಬಿದ್ದರು.
28 : ಬಡವರ ಗೋಳಾಟ ದೇವರಿಗೆ ಮುಟ್ಟುವಂತೆ ಮಾಡಿದ್ದರು ದಿಕ್ಕಿಲ್ಲದವರ ಗೋಗರೆತ ಆತನ ಕಿವಿಗೆ ಬೀಳುವಂತೆ ಮಾಡಿದ್ದರು.
29 : ವ್ಯಕ್ತಿಯಾಗಿರಲಿ, ರಾಷ್ಟ್ರವಾಗಿರಲಿ, ಯಾರಾಗಿದ್ದರೇನು? ದೇವರು ಸುಮ್ಮನಿದ್ದರೆ ತಪ್ಪು ಹೊರಿಸುವವರಾರು? ವಿಮುಖನಾದರೆ ಆತನ ದರ್ಶನ ಪಡೆಯಬಲ್ಲವರಾರು?
30 : ಭಕ್ತಿಹೀನನು ಜನರನು ಆಳಬಾರದು ಅಂಥವನು ಜನರಿಗೆ ಉರುಲಾಗಬಾರದು.
31 : ಅಂಥ ಮನುಷ್ಯನು ದೇವರಿಗೆ: ‘ಪ್ರಾಯಶ್ಚಿತ್ತ ಮಾಡಿರುವೆ, ಇನ್ನು ಮುಂದೆ ಪಾಪಮಾಡೆ.
32 : ಕಾಣದಿರುವ ಮಾರ್ಗವನ್ನು ತೋರೆನತೆ ತಪ್ಪುಮಾಡಿದ್ದರೂ ಮತ್ತೆ ಮಾಡೆ’ ಎಂದು ಹೇಳಿದ್ದಾದರೆ,
33 : ದೇವರು ಅಂಥವರನ್ನು ದಂಡಿಸಬೇಕೆನ್ನುತ್ತೀಯೋ? ಆತನ ತೀರ್ಪನ್ನು ನೀನೇ ಅಲ್ಲಗಳೆದಿರುವೆಯಲ್ಲವೆ? ಈಗ ನಾನು ಹೇಳಲಾರೆ, ನೀನೇ ಹೇಳು, ನಿನ್ನ ಅಭಿಪ್ರಾಯವನು ನಮಗೆ ತಿಳಿಸು.
34 : ಬುದ್ಧಿವಂತರು, ನನ್ನನಾಲಿಸಿದ ಜ್ಞಾನಿಗಳು ನಿನ್ನ ವಿಷಯವಾಗಿ ಹೇಳುವ ಮಾತುಗಳಿವು:
35 : ಯೋಬನು ತಿಳುವಳಿಕೆಯಿಲ್ಲದೆ ನುಡಿ ದಿದ್ದಾನೆ ಅವನ ಮಾತುಗಳಲ್ಲಿ ಬುದ್ದಿವಂತಿಕೆ ಇಲ್ಲ.
36 : ಅವನ ಪರಿಶೋಧನೆ ಇನ್ನೂ ಮುಂದುವರೆದರೆ ಒಳಿತು ಅವನು ಕೊಟ್ಟ ಉತ್ತರ ದುರುಳರಿಗೆ ತಕ್ಕುದಾದುದು.
37 : ಅವನು ಅಪರಾಧಿ ಮಾತ್ರವಲ್ಲ, ದೇವದ್ರೋಹವೆಸಗಿದ್ದಾನೆ ನಮ್ಮ ಮಧ್ಯೆ ಸಂದೇಹವನು ಎಬ್ಬಿಸಿದ್ದಾನೆ ದೇವರಿಗೆ ವಿರುದ್ಧವಾಗಿ ಅಧಿಕ ಪ್ರಸಂಗಮಾಡುತ್ತಾನೆ’.”

Holydivine