Job - Chapter 15
Holy Bible

1 : ಆಗ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದು ಹೇಳಿದನು:
2 : “ಬುದ್ಧಿವಂತನು ಗಾಳಿಮಾತನ್ನಾಡುವುದು ಸರಿಯೆ? ಸುಡುಗಾಳಿಯಿಂದ ಹೊಟ್ಟೆ ತುಂಬಿಸಿಕೊಳ್ಳಬಹುದೇ?
3 : ಅಂಥವನು ನಿಷ್ಪ್ರಯೋಜಕವಾಗಿ ವಾದಿಸುತ್ತಾನೆಯೆ? ನಿರರ್ಥಕವಾಗಿ ವ್ಯಾಜ್ಯವಾಡುತ್ತಾನೆಯೆ?
4 : ನೀನಾದರೊ ದೇವರ ಭಯಭಕ್ತಿಯನ್ನು ಕೆಡಿಸುತ್ತಿರುವೆ ದೇವರ ಧ್ಯಾನಕ್ಕೆ ಅಡ್ಡಿಬರುತ್ತಿರುವೆ.
5 : ನಿನ್ನ ಪಾಪವೆ ನಿನಗೆ ಮಾತನು ಕಲಿಸಿಕೊಟ್ಟಿದೆ ಕಪಟಿಗಳಾಡುವ ನುಡಿಯನೇ ನೀನು ಆರಿಸಿಕೊಂಡಿರುವೆ.
6 : ನಾನಲ್ಲ, ನಿನ್ನ ಬಾಯೇ, ನಿನ್ನನು ಅಪರಾಧಿಯನ್ನಾಗಿಸುತ್ತಿದೆ ನಿನ್ನ ತುಟಿಗಳೇ ನಿನಗೆ ವಿರುದ್ಧ ಸಾಕ್ಷಿಕೊಡುತ್ತಿವೆ.
7 : ನೀನು ಮನ್ಮಜರಿಗೆಲ್ಲ ಆದಿಪುರುಷನೋ? ಬೆಟ್ಟಗಳಿಗಿಂತ ಮುಂಚಿತವಾಗಿ ಹುಟ್ಟಿದವನೋ?
8 : ದೇವರ ಆಲೋಚನಾಸಭೆಯಲಿ ನೀನು ಭಾಗವಹಿಸಿದ್ದೆಯೋ? ಜ್ಞಾನವೆಂಬುದು ನಿನಗೆ ಮಾತ್ರ ಮೀಸಲೋ?
9 : ನಮಗೆ ತಿಳಿಯದಿರುವುದು ನಿನಗೆ ತಿಳಿದಿದೆಯೆ? ನಮಗೆ ಅರ್ಥವಾಗದಿರುವುದು ನಿನಗೆ ಅರ್ಥವಾಗಿದೆಯೆ?
10 : ನಮ್ಮಲ್ಲಿದ್ದಾರೆ ತಲೆನರೆತವರು, ವಯೋವೃದ್ಧರು ನಿಮ್ಮಪ್ಪನಿಗಿಂತಲೂ ಹೆಚ್ಚು ಮುದುಕರಾದವರು.
11 : ಕೇವಲವಾಯಿತೋ ನಿನಗೆ ದೇವರಿತ್ತ ಸಾಂತ್ವನ? ನಿನಗೆ ದೊರೆತ ಮೃದುವಾದ ಹಿತವಚನ?
12 : ನಿನ್ನ ಹೃದಯ ನಿನ್ನನ್ನು ದೂರ ಒಯ್ದಿದೆ, ಏಕೆ? ನಿನ್ನ ಕಣ್ಣು ಕಿಡಿಕಾರುತ್ತಿದೆ ಏಕೆ?
13 : ದೇವರಿಗೆ ವಿರುದ್ಧ ಕುದಿಯುತ್ತಿರುವೆ ಏಕೆ? ಬಾಯಿಂದ ಮಾತು ಹರಿಯುತ್ತಿವೆ ಏಕೆ?
14 : ನರನು ಎಷ್ಟರವನು? ಅವನು ಪರಿಶುದ್ಧನಿರಲು ಸಾಧ್ಯವೆ? ಸ್ತ್ರೀಯರಲ್ಲಿ ಹುಟ್ಟಿದವನು ನೀತಿವಂತನಾಗಿರಬಹುದೆ?
15 : ದೇವರಿಗೋ, ತನ್ನ ದೂತರಲ್ಲೂ ನಂಬಿಕೆಯಿಲ್ಲ ಆಕಾಶವೂ ಆತನ ದೃಷ್ಟಿಯಲ್ಲಿ ನಿರ್ಮಲವಲ್ಲ
16 : ಇಂತಿರಲು, ಮತ್ತಷ್ಟೂ ಮಲಿನನಲ್ಲವೆ ನರಮಾನವನು? ಅಸಹ್ಯನು, ಅಕ್ರಮಿಯು, ಕೇಡನ್ನು ನೀರಿನಂತೆ ಕುಡಿಯುವವನು?
17 : ಕೇಳು ನಾನು ತಿಳಿಸುವ ಈ ಸಂಗತಿಯನು ನಾನು ಕಂಡದ್ದನ್ನೇ ನಿನಗೆ ವಿವರಿಸುವೆನು:
18 : ಜ್ಞಾನಿಗಳು ತಮ್ಮ ಪೂರ್ವಜರಿಂದ ಕಲಿತಿದ್ದನು ಮುಚ್ಚುಮರೆಯಿಲ್ಲದೆ ಪ್ರಕಟಿಸಿದವುಗಳನು ಕೇಳು-ನಾನು ನಿನಗೆ ತಿಳಿಸುವೆನು:
19 : ಅವರು ತಮ್ಮ ನಾಡಿನ ಬಾಧ್ಯತೆಯನ್ನು ಕಳೆದುಕೊಂಡವರಲ್ಲ ಪರದೇಶೀಯರು ಅವರ ಮಧ್ಯೆ ಹಾದು ಹೋಗುವಂತಿರಲಿಲ್ಲ.
20 : ಹಿಂಸಾತ್ಮಕನ ವರುಷಗಳು ಎಣಿಸಲಾಗಿವೆ ಆ ದುಷ್ಟನು ಜೀವಮಾನವೆಲ್ಲ ಬಾಧೆ ಪೀಡಿತನೆ.
21 : ಭಯಹುಟ್ಟಿಸುವ ಅಪಾಯಗಳ ಸಪ್ಪಳ ಅವನ ಕಿವಿಯಲ್ಲಿ ಸೂರೆಗಾರನ ಧಾಳಿಯ ದಿಗಿಲು ಅವನು ಸುಖವಿರುವಲ್ಲಿ.
22 : ಕತ್ತಲಿಂದ ಹಿಂದಿರುಗುವ ನಂಬಿಕೆ ಅವನಿಗಿಲ್ಲ ಕತ್ತಿ ತನಗಾಗಿ ಕಾದಿದೆಯೆಂಬುದರಲ್ಲಿ ಸಂದೇಹವಿಲ್ಲ.
23 : ಹೊಟ್ಟೆಪಾಡಿಗಾಗಿ ಹುಡುಕುತ್ತಾ ಅಲೆದಾಡುತ್ತಾನೆ ಆ ಕತ್ತಲ ದಿನ ಹತ್ತಿರವಿದೆಯೆಂದು ಅರಿತಿದ್ದಾನೆ.
24 : ಸಂಕಟ-ಪೇಚಾಟ ಅವನನ್ನು ಕಾಡುತ್ತಿರುತ್ತವೆ ಯುದ್ಧಸನ್ನದ್ಧ ರಾಜರಂತೆ ಅವನಿಗೆ ಸೋಲನು ತರುತ್ತವೆ.
25 : ದೇವರಿಗೆ ವಿರುದ್ಧ ಅವನು ಮುಷ್ಟಿ ತೋರಿದನಲ್ಲವೆ? ಸರ್ವಶಕ್ತನನು ಧಿಕ್ಕರಿಸುತಾ ಶೂರನಂತೆ ಮೆರೆದನಲ್ಲವೆ?
26 : ಗಟ್ಟಿಮುಟ್ಟಾದ ಗುರಾಣಿಯನ್ನು ಹಿಡಿದುಕೊಂಡೇ ಆತನ ಮೇಲೆ ಬೀಳಲು ತಲೆ ನಿಮಿರಿ ಓಡಿದನಲ್ಲವೆ?
27 : ಕೊಬ್ಬೇರಿತ್ತು ಅವನ ಮೋರೆಯಲಿ ಬೊಜ್ಜು ಬೆಳೆದಿತ್ತು ಅವನ ಸೊಂಟದಲಿ.
28 : ಹಾಳು ಮಾಡಿದ್ದ ಪಟ್ಟಣಗಳಲ್ಲೆ ಅವನು ಸೇರಿಕೊಂಡಿದ್ದ ಯಾರೂ ವಾಸಮಾಡದೆ ದಿಬ್ಬವಾಗಿ ಮಾರ್ಪಟ್ಟಿದ್ದ ಶಾಪಗ್ರಸ್ತ ಮನೆಗಳಲ್ಲಿ ವಾಸಮಾಡಿಕೊಂಡಿದ್ದ.
29 : ಇಂಥವನು ಸಿರಿವಂತನಾಗಿ ಉಳಿಯನು ಅವನ ಆಸ್ತಿ ಸ್ಥಿರವಾಗಿ ನಿಲ್ಲದು ಅವನು ಧರೆಯಲ್ಲಿ ಬೇರೂರಿ ಬೆಳೆಯನು.
30 : ಕತ್ತಲೊಳಗಿಂದ ಪಾರಾಗನವನು ಸುಡುವುದು ಕಿಚ್ಚು ಅವನ ಕೊಂಬೆಯನು ಬಡಿದೊಯ್ಯುವುದು ಗಾಳಿ ಅದರ ಫಲವನು.
31 : ವ್ಯರ್ಥವಾದುದನು ನಂಬಿ ಅವನು ಮೋಸ ಹೋಗದಿರಲಿ ಇಲ್ಲವಾದರೆ ಅವನಿಗೆ ಸಿಗುವ ಪ್ರತಿಫಲ ವ್ಯರ್ಥವೇ ಸರಿ.
32 : ಅವನ ಬುಡ ಒಣಗುವುದು ಕಾಲಕ್ಕೆ ಮುಂಚೆ ಪಚ್ಚೆಪಸಿರಾಗದು ಅವನ ಕೊಂಬೆ.
33 : ಅವನಾಗುವನು ಮಾಗದ ಹಣ್ಣನ್ನು ಕಳೆದು ಕೊಂಡ ದ್ರಾಕ್ಷಿಬಳ್ಳಿಯಂತೆ ಹೂಗಳನ್ನು ಉದುರಿಸಿಕೊಂಡ ಓಲಿವ್ ಎಣ್ಣೆ ವ್ಮರದಂತೆ.
34 : ದುರುಳರ ಸಂಘವದು ಬರಡಾದುದು ಸುಡುವುದು ಬೆಂಕಿ ಲಂಚಕೋರರ ಗುಡಾರವನು.
35 : ಉದರದಲ್ಲಿ ವಂಚನೆಯನ್ನು ಗರ್ಭಧರಿಸುವರು ಕೇಡನು ಹಡೆವೆನೆಚಿದೆಣಿಸಿ ಶೂನ್ಯವ ಹೆರುವುದ ನೋಡು.

Holydivine