Job - Chapter 21
Holy Bible

1 : ಅದಕ್ಕೆ ಯೋಬನು ಕೊಟ್ಟ ಉತ್ತರ ಇದು:
2 : “ಗಮನಕೊಡಿ ನನ್ನ ಮಾತುಗಳಿಗೆ ನಾನು ನಿಮ್ಮಿಂದ ಬಯಸುವ ಉಪಶಮನ ಇದುವೆ:
3 : ನಾನು ಮಾತಾಡುವಾಗ ತಾಳ್ಮೆಯಿಂದಿರಿ ಬಳಿಕ ಬೇಕಾದರೆ ಪರಿಹಾಸ್ಯ ಮಾಡಿ.
4 : ನನ್ನ ದೂರು ಮನುಷ್ಯನ ವಿರುದ್ಧವೆ? ಸಾಕಷ್ಟು ಕಾರಣವಿರಲು, ನಾನು ಬೇಸರಗೊಳ್ಳಬಾರದೆ?
5 : ನನ್ನ ಕಡೆಗೆ ಗಮನ ಕೊಡಿ ಬಾಯಿಯಮೇಲೆ ಕೈಯಿಟ್ಟು ನಿಬ್ಬೆರಗಾಗಿರಿ.
6 : ಇದನ್ನು ನೆನೆದಾಗ ನನಗೆ ತಲ್ಲಣವಾಗುತ್ತದೆ ನನ್ನ ದೇಹಕ್ಕೆ ನಡುಕ ಬರುತ್ತದೆ:
7 : ದುರುಳರು ಮುದುಕರಾಗುವವರೆಗೂ ಬದುಕುವುದೇಕೆ? ಅಂಥವರು ಪ್ರಬಲರು, ಬಲಿಷ್ಟರು ಆಗುವುದೇಕೆ?
8 : ಅವರ ಸಂತಾನ ಅವರ ಸಮ್ಮುಖದಲ್ಲಿ ಸುಸ್ಥಿರವಾಗಿದೆ ಅವರ ಕುಟುಂಬ ಅವರ ಕಣ್ಮುಂದೆಯೇ ಅಚಲವಾಗಿದೆ.
9 : ಅವರ ಮನೆ ನಿರ್ಭೀತ, ಹಾಗೂ ಸುರಕ್ಷಿತ ಅವರ ಮೇಲೆ ಬೀಳದು ದೇವರ ದಂಡ.
10 : ಅವರ ಹೋರಿ ತಪ್ಪದೆ ಫಲವತ್ತಾಗಿಸುತ್ತದೆ ಅವರ ಗೋವು ಕಂದುಹಾಕದೆ ಈಯುತ್ತದೆ.
11 : ಅವರ ಮಕ್ಕಳು ಮುನ್ನಡೆಯುತ್ತಾರೆ ಮಂದೆಯಂತೆ ಅವರ ಬಾಲಬಾಲೆಯರು ಕುಣಿದಾಡುತ್ತಾರೆ ಈಂಕೆಯಂತೆ.
12 : ಹಾಡುತ್ತಾರೆ ತಂಬೂರಿ ವೀಣೆಗಳನು ನುಡಿಸುತ್ತಾ ಉಲ್ಲಾಸಿಸುತ್ತಾರೆ ಕೊಳಲಿನ ಸ್ವರ ಕೇಳುತ್ತಾ.
13 : ದಿನಗಳನು ಕಳೆಯುತ್ತಾರೆ ಸುಖಸಂತೋಷದಿಂದ ಸಮಾಧಿ ಸೇರುತ್ತಾರೆ ಸಮಾಧಾನದಿಂದ.
14 : ಆದರೆ ಈ ದುರುಳರೇ, ದೇವರಿಗೆ, ‘ನಮ್ಮನ್ನು ಬಿಟ್ಟು ತೊಲಗು, ನಮಗೆ ಬೇಡವಾಗಿದೆ ನಿನ್ನ ಮಾರ್ಗದ ಅರಿವು’.
15 : ‘ಈ ಸರ್ವಶಕ್ತ ಎಷ್ಟರವನು: ಆತನ ಸೇವೆ ನಮಗೇಕೆ? ಆತನಿಗೆ ಪ್ರಾರ್ಥನೆಮಾಡಿ ಪ್ರಯೋಜನವೇನು?’ ಎಂದಿದ್ದಾರೆ.
16 : ಆಹಾ! ಸದ್ಯಕ್ಕೆ ಸುಖಶಾಂತಿ ನೆಲಸಿಲ್ಲ ಅವರ ಕೈಯಲಿ ಆ ದುರುಳರ ಆಲೋಚನೆ ನನ್ನಿಂದ ದೂರವಿರಲಿ.
17 : ಆ ದುರುಳರ ದೀಪ ಆರಿಹೋದದ್ದು ಎಷ್ಟು ಸಾರಿ? ಅವರಿಗೆ ವಿಪತ್ತು ಸಂಭವಿಸಿದ್ದು ಎಷ್ಟು ಸಾರಿ? ಅವರ ಕೋಪ ಅವರಿಗೆ ಸಂಕಟ ತಂದದ್ದು ಎಷ್ಟು ಬಾರಿ?
18 : ಅವರು ಗಾಳಿಗೆ ತೂರಿಹೋದ ಹುಲ್ಲಾದುದು ಎಷ್ಟು ಸಲ? ಬಿರುಗಾಳಿ ಕೊಚ್ಚಿಕೊಂಡು ಹೋದ ಹೊಟ್ಟಾದುದು ಎಷ್ಟು ಸಲ?
19 : ದುಷ್ಟ ತಂದೆಯ ಪಾಪಫಲವನು ಮಕ್ಕಳಿಗೆ ಕಾದಿಟ್ಟಿದ್ದಾರೆಯೇ ದೇವರು? ಅವನಿಗೇ ಆ ದಂಡನೆ ಆಗಲಿ ಆ ದುಷ್ಟನೇ ಅದನ್ನು ಅನುಭವಿಸಲಿ.
20 : ಅವನೇ ತನ್ನ ವಿನಾಶವನು ಕಣ್ಣಾರೆ ಕಾಣಲಿ ಅವನೇ ಸರ್ವಶಕ್ತನಾ ರೌದ್ರರಸವನು ಸವಿಯಲಿ.
21 : ಅವನ ಆಯುಸ್ಸೇ ಕತ್ತರಿಸಿ ಹೋದ ಮೇಲೆ ಅವನಿಗೆಲ್ಲಿಯದು ತನ್ನಾನಂತರ ಬರುವ ಸಂತತಿಯ ಚಿಂತೆ?
22 : ದೇವರಿಗೆ ಜ್ಞಾನಬೋಧೆ ಮಾಡಬಲ್ಲವನು ಇದ್ದಾನೆಯೇ? ಉನ್ನತರಿಗೂ ನ್ಯಾಯತೀರಿಸುವಂಥವನು ಆತನೇ ಅಲ್ಲವೇ?
23 : ಒಬ್ಬ ಸಾಯುತ್ತಾನೆ ಸಮೃದ್ಧನಾಗಿರುವಾಗ ಸುಖಶಾಂತಿಯಿಂದ ನೆಮ್ಮದಿಯಾಗಿರುವಾಗ.
24 : ಅವನ ದೇಹ ಬೆಳೆದು ಕೊಬ್ಬೇರಿರುತ್ತದೆ ಅವನ ಆಸ್ತಿಗಳ ವ್ಮಜ್ಜೆ ಸಾರವತ್ತಾಗಿರುತ್ತದೆ.
25 : ಮತ್ತೊಬ್ಬ ಕಿಂಚಿತ್ತೂ ಸುಖಾನುಭವವಿಲ್ಲದೆ ಮನೋವ್ಯಥೆ ಪಡುತ್ತಾ ಪ್ರಾಣಬಿಡುತ್ತಾನೆ.
26 : ಇವರಿಬ್ಬರೂ ಮಣ್ಣಿನಲ್ಲಿ ಹೂಣಲ್ಪಡುತ್ತಾರೆ ಹುಳುಗಳು ಅವರನು ಮುತ್ತಿಕೊಳ್ಳುತ್ತವೆ.
27 : ಕೇಳಿ, ನಿಮ್ಮ ಆಲೋಚನೆಗಳನು ನಾನು ಬಲ್ಲೆ ನನಗೆ ವಿರುದ್ಧ ನೀವು ಮಾಡುವ ಕುಯುಕ್ತಿ ನನಗೆ ತಿಳಿದಿದೆ.
28 : ನಿಮ್ಮ ಪ್ರಶ್ನೆ ಇದು: “ಆ ಖದೀಮನ ಮನೆ ಏನಾಯಿತು? ಆ ದುರುಳರು ನಿವಾಸಿಸುತ್ತಿದ್ದ ಗುಡಾರ ಏನಾಯಿತು?”
29 : ದಾರಿಹೋಕರನ್ನು ನೀವು ವಿಚಾರಿಸಿಲ್ಲವೆ? ಅವರು ಕೊಟ್ಟ ದೃಷ್ಟಾಂತ ನಿಮಗೆ ಹಿಡಿಸಿಲ್ಲವೆ?
30 : ದುರುಳನು ಆಪತ್ತಿನಾ ದಿನ ಸುರಕ್ಷಿತನಾಗಿರುತ್ತಾನೆ ದೇವರ ಆ ಕೋಪೋದ್ರೇಕದ ದಿನ ಆಶ್ರಯ ಪಡೆಯುತ್ತಾನೆ.
31 : ಅವನಿಗೆ ‘ನೀನು ದುರ್ಮಾರ್ಗಿ’ ಎಂದು ಮುಖಾಮುಖಿಯಾಗಿ ಹೇಳಿದವರಾರು? ಅವನು ಮಾಡಿದ ದುಷ್ಕøತ್ಯಗಳಿಗೆ ಮುಯ್ಯಿತೀರಿಸುವವರಾರು?
32 : ಮೆರವಣಿಗೆಯಾಗಿ ಅವನನ್ನು ಸಮಾಧಿಗೆ ಒಯ್ಯುತ್ತಾರೆ ಅವನ ಗೋರಿಗೆ ಕಾವಲು ಕೂಡ ಇಡುತ್ತಾರೆ.
33 : ಅವನಿಗೆ ಹಿಡಿಸುತ್ತದೆ ತಗ್ಗಿನಾ ಹೆಂಟೆಮಣ್ಣು ಅವನನು ಹಿಂಬಾಲಿಸುತ್ತಾರೆ ಅಸಂಖ್ಯಾತ ಜನರು ಮುಂದಕ್ಕೂ ಹಿಂಬಾಲಿಸುತ್ತಾರೆ ಲೆಕ್ಕವಿಲ್ಲದ ಜನರು.
34 : ಇಂತಿರಲು ನಿಮ್ಮ ಉಪಶಮನದ ಮಾತು ವ್ಯರ್ಥ ನಿಮ್ಮ ಮಾತುಗಳ ಸಾರಾಂಶ ಮಿತ್ರದ್ರೋಹ.”

Holydivine