Proverbs - Chapter 3
Holy Bible

1 : ಮಗನೇ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ನಿನ್ನ ಹೃದಯದಲ್ಲಿಡು.
2 : ಅವು ನಿನ್ನ ದಿನಗಳನ್ನು ಹೆಚ್ಚಿಸುತ್ತವೆ; ನಿನಗೆ ದೀರ್ಘಾಯುಸ್ಸನ್ನು ತರುತ್ತವೆ, ನಿನಗೆ ಸುಕ್ಷೇಮವನ್ನು ಉಂಟುಮಾಡುತ್ತವೆ.
3 : ಪ್ರೀತಿ ಸತ್ಯತೆಗಳು ನಿನ್ನನ್ನು ಬಿಡದಿರಲಿ; ಅವು ನಿನ್ನ ಕೊರಳಿನ ಪಟ್ಟಿಯಾಗಿರಲಿ, ಹೃದಯದ ಹಲಗೆಯಲ್ಲಿ ಲಿಖಿತವಾಗಿರಲಿ.
4 : ಆಗ ದೇವರಿಗೂ ಮಾನವರಿಗೂ ಪ್ರಿಯನಾಗುವೆ, ದಯೆ ದಾಕ್ಷಿಣ್ಯವನ್ನು ಪಡೆಯುವೆ.
5 : ನಿನ್ನ ಸ್ವಂತ ಬುದ್ದಿಯನ್ನೇ ನೆಚ್ಚಿಕೊಂಡಿರದಿರು; ಪೂರ್ಣ ಮನಸ್ಸಿನಿಂದ ಸರ್ವೇಶ್ವರನಲ್ಲಿ ನಂಬಿಕೆಯಿಡು.
6 : ನಿನ್ನ ನಡತೆಯಲ್ಲೆಲ್ಲಾ ನಿವೇದಿಸು ಆತನನ್ನು, ಆಗ ಸರಾಗಮಾಡುವನು ನಿನ್ನ ಮಾರ್ಗವನ್ನು.
7 : ನೀನೇ ಬುದ್ದಿವಂತನೆಂದು ಎಣಿಸದಿರು. ಸರ್ವೇಶ್ವರನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದು ಬಿಡು.
8 : ಆಗ ನಿನಗೆ ದೇಹಾರೋಗ್ಯ ದೊರಕುವುದು, ನಿನ್ನ ಎಲುಬುಗಳಿಗೆ ಶಕ್ತಿಸಾರತ್ವ ಸಿಗುವುದು.
9 : ನಿನ್ನ ಆಸ್ತಿಯನ್ನರ್ಪಿಸಿ ಸರ್ವೇಶ್ವರನನ್ನು ಸನ್ಮಾನಿಸು, ನಿನ್ನ ಬೆಳೆಯ ಪ್ರಥಮ ಫಲವನ್ನು ಕಾಣಿಕೆಯಾಗಿಕೊಡು.
10 : ಆಗ ನಿನ್ನ ಕಣಜಗಳು ದವಸಧಾನ್ಯದಿಂದ ಭರ್ತಿಯಾಗುವುವು, ನಿನ್ನ ತೊಟ್ಟಿಗಳು ದ್ರಾಕ್ಷಾರಸದಿಂದ ತುಂಬಿ ತುಳುಕುವುವು.
11 : ಮಗನೇ, ಸರ್ವೇಶ್ವರನ ಶಿಕ್ಷೆಯನ್ನು ತಾತ್ಸಾರಮಾಡಬೇಡ, ಆತನು ನೀಡುವ ಎಚ್ಚರಿಕೆಗೆ ಬೇಸರಗೊಳ್ಳಬೇಡ.
12 : ತನ್ನ ಮುದ್ದು ಮಗನನ್ನು ತಂದೆ ಗದರಿಸುವಂತೆ, ಸರ್ವೇಶ್ವರ ತಾನು ಪ್ರೀತಿಸುವವರನ್ನು ಗದರಿಸುತ್ತಾನೆ.
13 : ಜ್ಞಾನವನ್ನು ಕಂಡು ಹಿಡಿಯುವವನು ಧನ್ಯನು, ವಿವೇಕವನ್ನು ಗಳಿಸುವವನು ಭಾಗ್ಯವಂತನು.
14 : ಬೆಳ್ಳಿಗಿಂತ ಜ್ಞಾನ ಗಳಿಕೆ ಶ್ರೇಷ್ಠ, ಬಂಗಾರಕ್ಕಿಂತ ಜ್ಞಾನ ಸಂಪಾದನೆ ಉತ್ಕøಷ್ಟ.
15 : ಮಾಣಿಕ್ಯಕ್ಕಿಂತ ಜ್ಞಾನದ ಬೆಲೆ ಅಮೂಲ್ಯ, ನಿನಗಿಷ್ಟವಾದುದಾವುದೂ ಅದಕ್ಕೆ ಸಾಟಿಯಲ್ಲ.
16 : ದೀರ್ಘಾಯುಷ್ಯ, ಜ್ಞಾನವೆಂಬ ಆಕೆಯ ಬಲಗೈಯಲ್ಲಿದೆ; ಘನತೆ, ಶ್ರೀಮಂತಿಕೆಯೂ ಆಕೆಯ ಎಡಗೈಯಲ್ಲಿವೆ.
17 : ಆಕೆಯ ದಾರಿ ಸುಖಕರ, ಆಕೆಯ ಮಾರ್ಗ ಕ್ಷೇಮಕರ.
18 : ತನ್ನನ್ನು ಅಪ್ಪಿಕೊಂಡವರಿಗೆ ಜ್ಞಾನವು ಜೀವವೃಕ್ಷ; ಅದನ್ನು ಅವಲಂಬಿಸುವ ಪ್ರತಿಯೊಬ್ಬನಿಗೆ ಸೌಭಾಗ್ಯ.
19 : ಸರ್ವೇಶ್ವರಸ್ವಾಮಿ ಜ್ಞಾನದ ಮೂಲಕ ಜಗವನ್ನು ಸ್ಥಾಪಿಸಿದ ವಿವೇಕದ ಮುಖಾಂತರ ಗಗನವನ್ನು ಸ್ಥಿರಗೊಳಿಸಿದ.
20 : ಆತನ ಜ್ಞಾನದಿಂದಲೆ ಅಡಿಸಾಗರ ಒಡೆಯುತ್ತದೆ ಆಕಾಶಮಂಡಳ ಇಬ್ಬನಿಯನ್ನು ಸುರಿಸುತ್ತದೆ.
21 : ಮಗನೇ, ಸುಜ್ಞಾನ, ಸದ್ಬುದ್ಧಿಗಳು ನಿನ್ನಲ್ಲಿ ಸ್ಥಿರವಾಗಿರಲಿ; ನಿನ್ನ ಕಣ್ಣುಗಳಿಂದ ಅವು ಮರೆಯಾಗದಿರಲಿ.
22 : ಅವು ನಿನ್ನಾತ್ಮಕ್ಕೆ ಜೀವಪ್ರದಾನವಾಗಿವೆ, ನಿನ್ನ ಕೊರಳಿಗೆ ಭೂಷಣವಾಗಿವೆ.
23 : ಹೀಗೆ ನೀನು ಎಡವದೆ ನಡೆಯುವೆ, ನಿನ್ನ ಮಾರ್ಗದೊಳು ಭಯವಿಲ್ಲದೆ ಸಾಗುವೆ.
24 : ಮಲಗುವಾಗ ನಿನಗೆ ಹೆದರಿಕೆಯಿರದು, ಮಲಗಿದ ಮೇಲೆ ಸುಖನಿದ್ರೆ ಬರುವುದು.
25 : ಆಕಸ್ಮಿಕ ಅಪಾಯಕ್ಕೆ ನೀನು ಅಂಜಲಾರೆ, ದುರುಳರಿಗೆ ಬಂದೊದಗುವ ನಾಶಕ್ಕೆ ಹೆದರಲಾರೆ.
26 : ಸರ್ವೇಶ್ವರನೇ ನಿನಗೆ ಆಧಾರವಾಗಿರುವನು, ನಿನ್ನ ಕಾಲು ಉರುಲಿಗೆ ಸಿಕ್ಕದಂತೆ ಕಾಪಾಡುವನು.
27 : ನಿನ್ನ ಕೈಲಾದಾಗ ಉಪಕಾರಮಾಡು, ಕೇಳುವವರಿಗೆ ಅದನ್ನು ನಿರಾಕರಿಸಬೇಡ.
28 : ನೆರೆಯವನಿಗೆ ನೀಡಲು ಇದೀಗಲೇ ನಿನ್ನಲ್ಲಿರುವಾಗ, “ಹೋಗಿ ಬಾ, ನಾಳೆ ಕೊಡುತ್ತೇನೆ” ಎನ್ನಬೇಡ.
29 : ಕೇಡನ್ನು ಬಗೆಯಬೇಡ ನೆರೆಯವನಿಗೆ, ಪಕ್ಕದಲ್ಲೆ ನಂಬಿಕೆಯಿಂದ ವಾಸಿಸುವವನಿಗೆ.
30 : ನಿನಗೆ ಕೇಡು ಮಾಡದವನ ಸಂಗಡ, ಕಾರಣವಿಲ್ಲದೆ ಜಗಳವಾಡಬೇಡ.
31 : ಹಿಂಸಾತ್ಮಕನನ್ನು ನೋಡಿ ಹೊಟ್ಟೆಕಿಚ್ಚು ಪಡಬೇಡ, ಅವನ ನಡತೆಯನ್ನು ಎಷ್ಟು ಮಾತ್ರಕ್ಕೂ ಅನುಸರಿಸಬೇಡ.
32 : ವಕ್ರಬುದ್ದಿಯವನು ಸರ್ವೇಶ್ವರನಿಗೆ ಅಸಹ್ಯನು, ಸತ್ಯಸಂಧರು ಆತನಿಗೆ ಪ್ರೀತಿಪಾತ್ರರು.
33 : ದುರುಳರ ಮನೆಯನ್ನು ಸರ್ವೇಶ್ವರ ಶಪಿಸುವನು; ನೀತಿವಂತರ ನಿವಾಸವನ್ನು ಆತ ಆಶೀರ್ವದಿಸುವನು.
34 : ಅಪಹಾಸ್ಯ ಮಾಡುವವರನ್ನು ಆತ ಅಪಹಾಸ್ಯ ಮಾಡುವನು; ನಮ್ರರಿಗಾದರೋ ಕೃಪಾಶೀರ್ವಾದವನ್ನು ಅನುಗ್ರಹಿಸುವನು.
35 : ಜ್ಞಾನಿಗಳಿಗೆ ಲಭಿಸುವುದು ಸನ್ಮಾನ; ಜ್ಞಾನಹೀನರಿಗೆ ಸಿಗುವ ಸಂಭಾವನೆ ಅವಮಾನ.

Holydivine