Proverbs - Chapter 24
Holy Bible

1 : ಕೆಟ್ಟವರನ್ನು ನೋಡಿ ಹೊಟ್ಟೆಕಿಚ್ಚು ಪಡಬೇಡ. ಅವರ ಒಡನಾಟವನ್ನು ಬಯಸಬೇಡ.
2 : ಅವರ ಮನಸ್ಸು ಯೋಚಿಸುವುದು ಹಿಂಸೆಯನ್ನು, ಅವರ ತುಟಿ ಪ್ರಸ್ತಾಪಿಸುವುದು ಹಾನಿಯನ್ನು.
3 : ಮನೆಕಟ್ಟುವುದಕ್ಕೆ ಜ್ಞಾನವೇ ಸಾಧನ, ಅದನ್ನು ಸ್ಥಿರಗೊಳಿಸುವುದಕ್ಕೆ ವಿವೇಕವೇ ಆಧಾರ.
4 : ಮೌಲ್ಯವೂ ಸುಂದರವೂ ಆದವುಗಳಿಂದ ಅದರ ಕೋಣೆಗಳನ್ನು ತುಂಬಿಸಲು ತಿಳುವಳಿಕೆಯೇ ಉಪಕರಣ.
5 : ಬಲವಂತನಿಗಿಂತ ಬುದ್ಧಿವಂತ ಶಕ್ತಿಶಾಲಿ; ಶೂರನಿಗಿಂತ ಜ್ಞಾನಿಯೇ ಬಲಶಾಲಿ.
6 : ಬುದ್ಧಿವಂತನು ನಾಯಕನನ್ನಿಟ್ಟು ಯುದ್ಧ ನಡೆಸುವನು; ಸುಮಂತ್ರಿಗಳು ಹಲವರಿದ್ದರೆ ಸಂರಕ್ಷಣೆಯಿರುವುದು.
7 : ಜ್ಞಾನವು ಮೂರ್ಖನಿಗೆ ಎಟುಕದಷ್ಟು ಎತ್ತರ; ನ್ಯಾಯಸ್ಥಾನದಲ್ಲಿ ಅವನು ಬಾಯಿಬಿಡಲಾರ.
8 : ಕೇಡನ್ನು ಯೋಚಿಸುವವನು ತುಂಟನು ಎನಿಸಿಕೊಳ್ಳುವನು.
9 : ಮೂರ್ಖನ ಯೋಜನೆ ಪಾಪಮಯ; ಕುಚೋದ್ಯನು ಜನರಿಂದ ತಿರಸ್ಕøತನು.
10 : ಆಪತ್ತುಕಾಲದಲ್ಲಿ ನೀನು ಎದೆಗುಂದಿದವನಾದರೆ ನನ್ನ ಬಲವು ಅಸಮರ್ಪಕವಾದುದೆ.
11 : ಮರಣಕ್ಕೆ ಒಯ್ಯಲ್ಪಟ್ಟವನನ್ನು ಬಿಡಿಸಲು ಯತ್ನಿಸು; ಕೊಲೆಗೆ ಗುರಿಯಾದವನನ್ನು ತಪ್ಪಿಸಲು ಯತ್ನಿಸು.
12 : ಈ ಸಂಗತಿ ಗೊತ್ತಿರಲಿಲ್ಲವೆಂದು ನೆವ ಹೇಳಬೇಡ; ಅಂತರಂಗ ಪರಿಶೋಧಕನಿಗೆ ನಿನ್ನ ಯೋಜನೆ ತಿಳಿದಿಲ್ಲವೆ? ನಿನ್ನ ಮನಸ್ಸನ್ನು ಸಮೀಕ್ಷಿಸುವ ಆತನಿಗೆ ಇದು ಮರೆಯೇ? ಮಾನವನ ಕಾರ್ಯಗಳಿಗೆ ತಕ್ಕಂತೆ ಪ್ರತಿಫಲವನ್ನಾತ ನೀಡುವನಲ್ಲವೆ?
13 : ಮಗನೇ, ಜೇನು ತಿನ್ನು, ಅದು ಚೆನ್ನಾಗಿದೆ; ತೊಟ್ಟಿಕ್ಕುವ ಜೇನುತುಪ್ಪ ನಿನ್ನ ಬಾಯಿಗೆ ಸಿಹಿ ಅಲ್ಲವೇ?
14 : ಅಂತೆಯೇ ಜ್ಞಾನ ನಿನ್ನ ಆತ್ಮಕ್ಕೆ ಸಿಹಿಯೆಂದು ತಿಳಿ; ಅದನ್ನು ಪಡೆದೆಯಾದರೆ ನಿನ್ನ ಭವಿಷ್ಯ ಶುಭಕರ, ನಿನ್ನ ನಿರೀಕ್ಷೆ ಆಗದು ನಿರರ್ಥಕ.
15 : ದುಷ್ಟನೇ, ನೀತಿವಂತನ ಮನೆಗೆ ಕನ್ನಹಾಕಬೇಡ; ಅವನು ಕೂಡಿಸಿದ್ದನ್ನು ಕೊಳ್ಳೆಹೊಡೆಯಬೇಡ.
16 : ನೀತಿವಂತನು ಏಳುಸಾರಿ ಬಿದ್ದರೂ ಮತ್ತೆ ಏಳುವನು; ದುಷ್ಟನು ಕೇಡುಬಂದಾಗಲೆ ಕುಸಿದು ಬೀಳುವನು.
17 : ನಿನ್ನ ಶತ್ರುಬಿದ್ದರೆ ಹಿಗ್ಗಬೇಡ; ಎಡವಿದರೆ ಮನೋಲ್ಲಾಸ ಪಡಬೇಡ.
18 : ಸರ್ವೇಶ್ವರ ನಿನ್ನ ಹರ್ಷವನ್ನು ಕಂಡು ಬೇಸರಗೊಂಡಾನು; ತನ್ನ ಕೋಪವನ್ನು ಅವನ ಕಡೆಯಿಂದ ತಿರುಗಿಸಿಬಿಟ್ಟಾನು.
19 : ಕೆಡುಕರನ್ನು ಕಂಡು ಉರಿಗೊಳ್ಳಬೇಡ; ದುಷ್ಟರನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ.
20 : ಕೆಟ್ಟವನಿಗೆ ಶುಭಕಾಲ ಬಾರದು, ದುಷ್ಟರ ದೀಪ ಆರಿಹೋಗುವುದು.
21 : ಮಗನೇ, ಸರ್ವೇಶ್ವರನಿಗೂ ರಾಜನಿಗೂ ಭಯಪಡು; ಅವರನ್ನು ವಿರೋಧಿಸುವವರ ಗೊಡವೆಗೆ ಹೋಗಬೇಡ.
22 : ಅವರಿಬ್ಬರು ವಿಧಿಸುವ ವಿಪತ್ತು ಫಕ್ಕನೆ ಸಂಭವಿಸೀತು, ಅವರಿಂದಾಗುವ ನಾಶವು ಯಾರಿಗೆ ತಿಳಿದೀತು?
23 : ಜ್ಞಾನಿಗಳ ಬೇರೆ ಕೆಲವು ಹೇಳಿಕೆಗಳು ಇವು: ನ್ಯಾಯವಿಚಾರಣೆಯಲ್ಲಿ ಪಕ್ಷಪಾತ ಸರಿಯಲ್ಲ.
24 : ಅಪರಾಧಿಗೆ “ನೀನು ನಿರಪರಾಧಿ” ಎಂದು ತೀರ್ಪು ಕೊಡುವವನನ್ನು ಜನರು ಶಪಿಸುವರು, ಪ್ರಜೆಗಳು ದೂಷಿಸುವರು.
25 : ತಪ್ಪು ಮಾಡಿದವರನ್ನು ದಂಡಿಸುವವರಿಗೆ ಶುಭವಾಗುವುದು, ಸುಖಕರವಾದ ಆಶೀರ್ವಾದವು ಅವರಿಗೆ ಲಭಿಸುವುದು.
26 : ಸತ್ಯವಾದ ಉತ್ತರ ತುಟಿಗೊಂದು ಚುಂಬನ.
27 : ಕೆಲಸದ ಸಾಮಾನುಗಳನ್ನು ಅಣಿಮಾಡು, ಹೊಲಗದ್ದೆಗಳ ಕೆಲಸವನ್ನು ಮುಗಿಸು, ಆ ಬಳಿಕ ಮನೆ ಕಟ್ಟಲು ತೊಡಗು.
28 : ನೆರೆಯವನಿಗೆ ವಿರುದ್ಧ ಆಧಾರವಿಲ್ಲದ ಸಾಕ್ಷಿಹೇಳಬೇಡ; ಮಾತಿನಲ್ಲಿ ಅವನಿಗೆ ಮೋಸ ಮಾಡಬೇಡ.
29 : “ಅವನು ನನಗೆ ಮಾಡಿದಂತೆ ನಾನೂ ಅವನಿಗೆ ಮಾಡುವೆ, ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿತೀರಿಸುವೆ” ಎನ್ನಬೇಡ.
30 : ಸೋಮಾರಿಯ ಹೊಲದ ಮೇಲೆ ನಡೆದು ಹೋದೆ; ಮತಿಗೆಟ್ಟವನ ತೋಟದ ಮೇಲೆ ಹಾದು ಹೋದೆ.
31 : ಅವುಗಳಲ್ಲಿ ಮುಳ್ಳುಗಿಡಗಳು ಹರಡಿಕೊಂಡಿದ್ದವು, ಕಳೆಗಳು ಮುಚ್ಚಿಕೊಂಡಿದ್ದವು, ಕಲ್ಲಿನಗೋಡೆ ಹಾಳಾಗಿತ್ತು.
32 : ಅದನ್ನು ನೋಡಿ ಚಿಂತಿಸತೊಡಗಿದೆ; ಆ ದೃಶ್ಯದಿಂದ ಈ ಪಾಠ ಕಲಿತೆ:
33 : “ಇನ್ನೂ ಸ್ವಲ್ಪ ನಿದ್ರೆ, ಇನ್ನೂ ತುಸು ತೂಕಡಿಕೆ, ಕೈ ಮುದುಡಿಕೊಂಡು ಇನ್ನೂ ಕೊಂಚ ಮಲಗಿಕೊಳ್ಳುವೆ” ಎನ್ನುವೆಯಾ?
34 : ಆಗ ಬಡತನ ಎರಗುವುದು ದಾರಿಗಳ್ಳನಂತೆ; ಕೊರತೆಯು ನಿನ್ನ ಮೇಲೆ ಬೀಳುವುದು ಪಂಜುಗಳ್ಳನಂತೆ.

Holydivine