Proverbs - Chapter 16
Holy Bible

1 : ಆಲೋಚನೆ ಮಾಡುವುದು ಮನುಷ್ಯನ ಇಚ್ಛೆ; ಅದನ್ನು ಸಫಲವಾಗಿಸುವುದು ಸರ್ವೇಶ್ವರನ ಇಚ್ಛೆ.
2 : ಮನುಷ್ಯನ ನಡತೆಯೆಲ್ಲಾ ಸ್ವಂತ ದೃಷ್ಟಿಗೆ ಶುದ್ಧ; ಆದರೆ ಅವನ ಅಂತರಂಗವನ್ನು ವೀಕ್ಷಿಸುವಂಥವನು ಸರ್ವೇಶ್ವರ.
3 : ನಿನ್ನ ಕಾರ್ಯಭಾರವನ್ನು ಸರ್ವೇಶ್ವರನಿಗೆ ವಹಿಸು; ಆಗ ಸಫಲವಾಗುವುದು ನಿನ್ನ ಯೋಜನೆಯು.
4 : ಸರ್ವೇಶ್ವರ ಒಂದೊಂದನ್ನೂ ಸೃಷ್ಟಿಸಿರುವುದು ಒಂದು ಗುರಿಯಿಟ್ಟೇ ಹೌದು; ಕೆಡುಕರನ್ನು ಉಂಟುಮಾಡಿರುವುದು ಕೇಡಿನ ದಿನಕ್ಕಾಗಿಯೇ.
5 : ಗರ್ವಿಷ್ಠನು ಯಾರೇ ಆಗಿರಲಿ, ಅವನು ಸರ್ವೇಶ್ವರನಿಗೆ ಅಸಹ್ಯ; ಅವನಿಗೆ ದಂಡನೆ ತಪ್ಪದು, ಇದು ಖಂಡಿತ.
6 : ಪ್ರೀತಿ ಸತ್ಯತೆಗಳಿಂದ ಪಾಪನಿವಾರಣೆ; ಸರ್ವೇಶ್ವರನ ಭಯಭಕ್ತಿಯಿಂದ ಹಾನಿ ನಿವಾರಣೆ.
7 : ಒಬ್ಬನ ನಡತೆಯನ್ನು ಸರ್ವೇಶ್ವರ ಮೆಚ್ಚಿದರೆ, ಅವನ ಶತ್ರುಗಳನ್ನು ಆತ ಮಿತ್ರರನ್ನಾಗಿಸುತ್ತಾನೆ.
8 : ಅನ್ಯಾಯದಿಂದ ಗಳಿಸಿದ ಅಪಾರ ನಿಧಿಗಿಂತಲು ನ್ಯಾಯದಿಂದ ಕೂಡಿಸಿದ ಅಲ್ಪ ಧನ ಲೇಸು.
9 : ಮನುಷ್ಯ ಮನಬಂದಂತೆ ಮಾರ್ಗವನ್ನಾರಿಸಿಕೊಂಡರೂ ಸರ್ವೇಶ್ವರನೇ ಅವನ ನಡತೆಯನ್ನು ಪರಾಂಬರಿಸುವವನು.
10 : ದೈವೋಕ್ತಿ ಹೊರಡುವುದು ಅರಸನ ಬಾಯಿಂದ; ತಪ್ಪುಮಾಡದು ಅವನ ಬಾಯಿ ತೀರ್ಪು ನೀಡುವಾಗ.
11 : ನ್ಯಾಯದ ತ್ರಾಸುತಕ್ಕಡಿಗಳೆಲ್ಲ ಸರ್ವೇಶ್ವರನ ಏರ್ಪಾಡು; ಚೀಲದ ಕಲ್ಲುತೂಕಗಳೆಲ್ಲ ಆತನ ಕೈಕೆಲಸ.
12 : ರಾಜರಲ್ಲಿ ದುಷ್ಟಕಾರ್ಯ ಖಂಡನೀಯ; ಸದಾಚಾರ ಸಿಂಹಾಸನಕ್ಕೆ ನಿಜ ಆಧಾರ.
13 : ನೀತಿಯುತ ಮಾತನ್ನು ಅರಸನು ಮೆಚ್ಚುವನು; ಸತ್ಯವಾದಿಯನ್ನು ಆತನು ಪ್ರೀತಿಸುವನು.
14 : ಭೂಪನ ಕೋಪ ಮೃತ್ಯುವಿನ ದೂತ; ಅದನ್ನು ಶಮನಪಡಿಸಲು ಜಾಣನು ಶಕ್ತ.
15 : ಪ್ರಭುವಿನ ಮುಖಪ್ರಸನ್ನತೆ ಜೀವದ ಒರತೆ; ಆತನ ಕರುಣೆ ಮುಂಗಾರು ಮಳೆ.
16 : ಬಂಗಾರಕ್ಕಿಂತ ಜ್ಞಾನಾರ್ಜನೆ ಎಷ್ಟೋ ಮೇಲು; ಬೆಳ್ಳಿಗಿಂತ ವಿವೇಕಾರ್ಜನೆ ಎಷ್ಟೋ ಲೇಸು.
17 : ಸಜ್ಜನರ ರಾಜಮಾರ್ಗ ಹಾನಿಗೆ ದೂರ; ಸನ್ನಡತೆಯುಳ್ಳವ ಪ್ರಾಣಸಂರಕ್ಷಕ.
18 : ವಿನಾಶಕ್ಕೆ ಮುಂಚೆ ವಿಪರೀತ ಬುದ್ಧಿ; ನೆಲಕ್ಕುರುಳುವುದಕ್ಕೆ ಮುಂಚೆ ನೆತ್ತಿಗೇರಿತು ಸೊಕ್ಕು.
19 : ಸೊಕ್ಕಿನವರ ಸಂಗಡ ಸೂರೆಹಂಚಿಕೊಳ್ಳುವುದಕ್ಕಿಂತಲು ದೀನದಲಿತರ ಸಂಗಡ ದೈನ್ಯದಿಂದಿ ರುವುದು ಮೇಲು.
20 : ದೇವರ ವಾಕ್ಯ ಸ್ಮರಿಸುವವನು ಸುಕ್ಷೇಮದಿಂದ ಬಾಳುವನು; ಸರ್ವೇಶ್ವರನಲ್ಲಿ ಭರವಸೆ ಇಡುವವನು ಭಾಗ್ಯವಂತನು.
21 : ಜ್ಞಾನ ಹೃದಯರಿಗೆ ಜಾಣರೆಂಬ ಬಿರುದು; ಮಧುರ ಮಾತಿನಿಂದ ಬೋಧನಾಶಕ್ತಿ ಹಿರಿದು.
22 : ವಿವೇಕಿಗೆ ವಿವೇಕವೇ ಜೀವದ ಬುಗ್ಗೆ; ಮೂರ್ಖನಿಗೆ ಮೂರ್ಖತನವೇ ತಕ್ಕ ದಂಡನೆ.
23 : ಜ್ಞಾನಿಯ ಹೃದಯದಿಂದ ಬಾಯಿಗೆ ಜಾಣತನ; ಅವನ ತುಟಿಗಳಿಗೆ ಕಲಿಕೆಯ ಚೂಟಿತನ.
24 : ಸವಿನುಡಿಯು ಜೇನಿನ ಕೊಡವು; ಅದು ಆತ್ಮಕ್ಕೆ ಇಂಪು, ದೇಹಕ್ಕೆ ತಂಪು.
25 : ಒಂದು ಮಾರ್ಗ ಒಬ್ಬನಿಗೆ ನೇರವೆಂದು ತೋರಬಹುದು; ಕೊನೆಗೆ ಅದು ಮರಣಕ್ಕೆ ಒಯ್ಯುವ ಹಾದಿಯಾಗಬಹುದು
26 : ದುಡಿಯುವವನು ಹೊಟ್ಟೆಪಾಡಿಗಾಗಿ ದುಡಿಯುತ್ತಾನೆ; ಹೊಟ್ಟೆಕಾಟವೆ ಸಾಕು ಅವನನ್ನು ದುಡಿಸಲಿಕ್ಕೆ.
27 : ನೀಚನು ಕೇಡೆಂಬ ಗುಳಿಯನ್ನು ತೋಡುತ್ತಾನೆ; ಸುಡುವ ಬೆಂಕಿಯ ಜ್ವಾಲೆ ಅವನ ನಾಲಿಗೆ.
28 : ತುಂಟನು ಜಗಳವನ್ನು ಹುಟ್ಟಿಸುತ್ತಾನೆ; ಚಾಡಿಕೋರನು ಮಿತ್ರರನ್ನು ಬೇರ್ಪಡಿಸುತ್ತಾನೆ.
29 : ಹಿಂಸಾತ್ಮಕನು ನೆರೆಯವನನ್ನು ಮರುಳುಗೊಳಿಸುತ್ತಾನೆ; ಅವನನ್ನು ದುರ್ಮಾರ್ಗಕ್ಕೆ ಎಳೆಯುತ್ತಾನೆ.
30 : ಕಣ್ಣು ಮಿಟುಕಿಸುವವನು ಕುಯುಕ್ತಿಯನ್ನು ಕಲ್ಪಿಸುತ್ತಾನೆ; ತುಟಿಕಚ್ಚುವವನು ಕೇಡನ್ನು ಸಾಧಿಸುತ್ತಾನೆ.
31 : ನರೆಗೂದಲು ಸುಂದರ ಕಿರೀಟ, ಸನ್ನಡತೆಗೆ ಸಿಗುವ ಪ್ರತಿಫಲ.
32 : ದೀರ್ಘಶಾಂತನು ಪರಾಕ್ರಮಶಾಲಿಗಿಂತ ಶ್ರೇಷ್ಠ; ತನ್ನನ್ನು ತಾನೆ ಗೆದ್ದವನು ಪಟ್ಟಣ ಗೆದ್ದವನಿಗಿಂತ ಬಲಿಷ್ಠ.
33 : ಅದೃಷ್ಟದ ಚೀಟನ್ನು ಕುಲುಕಿ ಮಡಲಿಗೆ ಹಾಕಬಹುದು; ಆದರೆ ತೀರ್ಪು ಸರ್ವೇಶ್ವರನ ಕೈಯಲ್ಲಿರುವುದು.

Holydivine