Proverbs - Chapter 11
Holy Bible

1 : ಕಳ್ಳತಕ್ಕಡಿ ಸರ್ವೇಶ್ವರನಿಗೆ ಅಸಹ್ಯ; ನ್ಯಾಯವಾದ ತೂಕ ಆತನಿಗೆ ಪ್ರಿಯ.
2 : ಅಹಂಕಾರವಿದ್ದಲ್ಲಿ ಅವಮಾನ; ಸ್ವಾರ್ಥ ನಿಗ್ರಹವಿದ್ದಲ್ಲಿ ಸುಜ್ಞಾನ.
3 : ಸಜ್ಜನರಿಗೆ ಸರಳತೆ ಮಾರ್ಗದರ್ಶನ, ದುರ್ಜನರಿಗೆ ಅವರ ವಕ್ರತೆ ಸಂಹಾರಕ.
4 : ತೀರ್ಪಿನ ದಿನ ನೆರವಾಗದು ಆಸ್ತಿಪಾಸ್ತಿ; ಸನ್ನಡತೆಯಿಂದಲೆ ಮರಣದಿಂದ ವಿಮುಕ್ತಿ.
5 : ನಿರ್ದೋಷಿಯ ಮಾರ್ಗ ಸರಾಗ; ದುಷ್ಟತನದಿಂದ ದುರುಳನ ಪತನ.
6 : ಸಜ್ಜನರ ಬಿಡುಗಡೆ ಸದಾಚಾರದಿಂದ; ವಂಚಕರ ಬಂಧನ ದುರಾಶೆಯಿಂದ.
7 : ದುರುಳನೊಂದಿಗೆ ಸಾಯುವುದು ಅವನ ನಿರೀಕ್ಷೆ; ಅಳಿವುದು ಸಾಮಥ್ರ್ಯದ ಮೇಲಿಟ್ಟ ಅವನ ನಂಬಿಕೆ.
8 : ಸಜ್ಜನನು ಇಕ್ಕಟ್ಟಿನಿಂದ ಪಾರಾಗುವನು; ದುರ್ಜನನು ಅದರೊಳಗೆ ಸಿಕ್ಕಿಬೀಳುವನು.
9 : ಅನೀತಿವಂತನು ಮಾತಿನಿಂದ ನೆರೆಯವನನ್ನು ನಾಶಮಾಡುವನು; ನೀತಿವಂತನು ತಿಳುವಳಿಕೆಯಿಂದ ಅವನನ್ನು ಉದ್ದಾರಮಾಡುವನು.
10 : ಸಜ್ಜನರು ಸುಖಿಗಳಾದರೆ ಊರಿಗೆ ಉಲ್ಲಾಸ; ದುರ್ಜನರು ಹಾಳಾದರೆ ಮಾಡುವರು ಜಯಘೋಷ.
11 : ಸತ್ಪುರುಷರ ಆಶೀರ್ವಾದದಿಂದ ಪುರೋದ್ದಾರ; ದುಷ್ಟ ಜನರ ಕೆಟ್ಟ ಬಾಯಿಂದ ಅದರ ಸಂಹಾರ.
12 : ನೆರೆಯವನನ್ನು ತೃಣೀಕರಿಸುವವನು ಬುದ್ಧಿಹೀನ; ವಿವೇಕಿಯು ಅದರ ಬಗ್ಗೆ ತಾಳುವನು ಮೌನ.
13 : ಚಾಡಿಕೋರನು ಗುಟ್ಟನ್ನು ರಟ್ಟುಮಾಡುವನು; ನಂಬಿಕಸ್ತನು ಅದನ್ನು ಮುಚ್ಚಿ ಮರೆಮಾಡವನು.
14 : ನಾಯಕನಿಲ್ಲದ ಜನತೆ ನಾಶವಾಗುವುದು; ಹಲವರು ಸುಮಂತ್ರಿಗಳಿರುವಲ್ಲಿ ಸಂರಕ್ಷಣೆ ಇರುವುದು.
15 : ಅಪರಿಚಿತನಿಗೆ ಜಾಮೀನು ನಿಂತರೆ ಹಾನಿ; ಜಾಮೀನನ್ನು ತೊರೆದುಬಿಟ್ಟರೆ ನೆಮ್ಮದಿ.
16 : ಸದ್ಗುಣಸ್ತ್ರೀ ಕಾಪಾಡಿಕೊಳ್ಳುತ್ತಾಳೆ ಸನ್ಮಾನವನ್ನು; ಬಲವಂತವ್ಯಕ್ತಿ ಕಾಪಾಡಿಕೊಳ್ಳುತ್ತಾನೆ ಆಸ್ತಿಪಾಸ್ತಿಯನ್ನು.
17 : ಪರೋಪಕಾರಿ ತನಗೂ ಉಪಕಾರಿ; ಕ್ರೂರಿಯಾದವನು ತನ್ನ ದೇಹಕ್ಕೂ ಕ್ರೂರಿ.
18 : ದುರುಳನು ಪಡೆವ ಸಂಬಳ ಜೊಳ್ಳು ಸಂಬಳ; ನೀತಿಯನ್ನು ಬಿತ್ತುವವನು ಪಡೆವನು ಸತ್ಫಲ.
19 : ಧರ್ಮನಿರತನಿಗೆ ದೊರಕುವುದು ಜೀವ; ಅಧರ್ಮಾಸಕ್ತನಿಗೆ ಸಿಗುವುದು ಮರಣ.
20 : ವಕ್ರಹ್ಲದಯರು ಸರ್ವೇಶ್ವರನಿಗೆ ಅಸಹ್ಯರು; ಸನ್ಮಾರ್ಗಿಗಳು ಆತನ ಕೃಪೆಗೆ ಪಾತ್ರರು.
21 : ದುಷ್ಟನಿಗೆ ದಂಡನೆ ಕಟ್ಟಿಟ್ಟ ಬುತ್ತಿ; ಶಿಷ್ಯ ಸಂತಾನಕ್ಕೆ ಸಿಗುವುದು ಮುಕ್ತಿ.
22 : ಲಜ್ಜೆಗೆಟ್ಟು ನಡೆಯುವ ಸೌಂದರ್ಯವತಿ, ಹಂದಿಯ ಮೂತಿಗೆ ಚಿನ್ನದ ಮೂಗುತಿ.
23 : ಸಜ್ಜನರ ಕೋರಿಕೆ ಕಲ್ಯಾಣ ಸಾಧಕ; ದುರ್ಜನರ ನಿರೀಕ್ಷೆ ಕೋಪಾಗ್ನಿ ಸಾಧಕ.
24 : ಅಳತೆಯಿಲ್ಲದೆ ಕೊಡುವವನು ಧನಾಢ್ಯನಾಗುವನು; ಕೊಡಬೇಕಾದುದನ್ನೂ ಬಿಗಿಹಿಡಿದವನು ಬಡವನಾಗುವನು.
25 : ದಾನ ಗುಣವುಳ್ಳವನು ಧನವಂತನಾಗುವನು; ನೀರುಹಾಯಿಸುವವನಿಗೆ ನೀರು ದೊರಕುವುದು.
26 : ಧಾನ್ಯವನ್ನು ಕೊಡದೆ ತುಂಬಿಟ್ಟುಕೊಳ್ಳುವವನ ಮೇಲೆ ಜನರ ಶಾಪ; ಧಾನ್ಯವನ್ನು ಮಾರುವವನ ತಲೆಯ ಮೇಲೆ ಆಶೀರ್ವಾದ.
27 : ಒಳಿತಿಗಾಗಿ ಹಂಬಲಿಸುವವನು ಕೃಪಾರ್ಥಿ; ಕೇಡನ್ನು ಹುಡುಕುವವನಿಗೆ ಕೇಡೇ ಗತಿ.
28 : ದ್ರವ್ಯವನ್ನು ನಂಬಿದವನು ಉದುರಿಹೋಗುವನು; ದೈವಭಕ್ತನು ಕುಡಿಯಂತೆ ಚಿಗುರವನು.
29 : ಮನೆಯವರನ್ನೆ ಬಾಧಿಸುವವನು ಗಳಿಸುವುದು ಗಾಳಿ; ಬಿದ್ದಿರುವನವನು ಜ್ಞಾನಿಗೆ ಊಳಿಗನಾಗಿ.
30 : ಸಜ್ಜನರು ಈವುದು ಜೀವಫಲ; ದುರ್ಜನರು ಪಡೆವುದು ಅಕಾಲಮರಣ.
31 : ಸಜ್ಜನರೇ ಜಗದೊಳು ತಮ್ಮ ಕರ್ಮದ ಫಲವನ್ನು ಅನುಭವಿಸುವಲ್ಲಿ; ಹೇಳಬೇಕೆ ಇನ್ನು ದುರ್ಜನರ, ಹಾಗೂ ಪಾಪಿಗಳ ಪರಿಸ್ಥಿತಿ?

Holydivine