Proverbs - Chapter 22
Holy Bible

1 : ಅತುಳ ಐಶ್ವರ್ಯಕ್ಕಿಂತ ಒಳ್ಳೆಯ ಹೆಸರು ಉತ್ತಮ; ಬೆಳ್ಳಿಬಂಗಾರಕ್ಕಿಂತ ಪ್ರೀತಿ ವಿಶ್ವಾಸ ಅಮೂಲ್ಯ.
2 : ಬಡವರು ಬಲ್ಲಿದರು ಸ್ಥಿತಿಯಲ್ಲಿ ಎದುರು ಬದುರು; ಅವರೆಲ್ಲರನ್ನು ಸೃಷ್ಟಿಸಿದಾತ ಸರ್ವೇಶ್ವರನು.
3 : ಜಾಣ ಕೇಡನ್ನು ಕಂಡು ಅಡಗಿಕೊಳ್ಳುತ್ತಾನೆ; ಕೋಣ ಮುನ್ನುಗ್ಗಿ ಹಾನಿಗೆ ಈಡಾಗುತ್ತಾನೆ.
4 : ಸರ್ವೇಶ್ವರನಲ್ಲಿ ಭಯಭಕ್ತಿ, ದೀನ ಮನೋಭಾವ, ಇವು ನೀಡುವ ಫಲ-ಸಂಪತ್ತು ಸನ್ಮಾನ, ಆಯುಸ್ಸು.
5 : ವಕ್ರಬುದ್ಧಿಯುಳ್ಳವನ ಹಾದಿತುಂಬ ಮುಳ್ಳು, ಉರುಳು; ಅದರಿಂದ ದೂರವಿರುವನು ಪ್ರಾಣದಾಸೆಯುಳ್ಳವನು.
6 : ಬಾಲ್ಯದಲ್ಲೇ ಮಕ್ಕಳನ್ನು ಸರಿದಾರಿಯಲ್ಲಿ ಪಳಗಿಸು; ಮುಪ್ಪಿನಲ್ಲೂ ಅವರು ಆ ಪದ್ಧತಿ ಮೀರಿ ನಡೆಯದಿರಲಿ.
7 : ಬಲ್ಲಿದನು ಬಡವನಿಗೆ ಒಡೆಯ; ಸಾಲಗಾರನು ಸಾಲಕೊಟ್ಟವನಿಗೆ ಸೇವಕ.
8 : ಕೆಟ್ಟತನವನ್ನು ಬಿತ್ತುವವನು ಕೇಡನ್ನೆ ಕೊಯ್ಯುವನು; ಅವನ ಸಿಟ್ಟು ಅವನನ್ನೆ ಸುಟ್ಟು ಬಿಡುವುದು.
9 : ಉದಾರ ದೃಷ್ಟಿಯುಳ್ಳವನು ಆಶೀರ್ವದಿತನು; ಆಹಾರವನ್ನು ಬಡವರೊಂದಿಗೆ ಆತ ಹಂಚಿಕೊಳ್ಳುವನು.
10 : ಕುಚೋದ್ಯನನ್ನು ಓಡಿಸಿಬಿಟ್ಟರೆ ಜಗಳ ನಿಲ್ಲುವುದು, ವ್ಯಾಜ್ಯ ಮುಗಿಯುವುದು, ನಿಂದೆ ಅವಮಾನ ಇಲ್ಲದಾಗುವುದು.
11 : ಸವಿಮಾತಿನಿಂದ ಅರಸನ ಗೆಳೆತನ ಪಡೆಯಬಹುದು; ಸರ್ವೇಶ್ವರ ಬಯಸುವುದು ಅಂತರಂಗ ಶುದ್ಧಿಯನ್ನು
12 : ಸರ್ವೇಶ್ವರನ ದೃಷ್ಟಿ ಸಜ್ಜನರನ್ನು ಕಾಯುವುದು; ವಂಚಕರ ಮಾತನ್ನು ನಿರರ್ಥಕಗೊಳಿಸುವುದು.
13 : “ಹೊರಗಡೆ ಕಾದಿದೆ ಸಿಂಹ, ಬೀದಿಗೆ ಕಾಲಿಟ್ಟರೆ ತಿಂದುಬಿಡುವುದು!” ಇದು ಮೈಗಳ್ಳನ ಪಿಳ್ಳೆಯ ನೆವ.
14 : ವ್ಯಭಿಚಾರಿಣಿಯ ಬಾಯಿ ಆಳವಾದ ಬಾವಿ; ಸರ್ವೇಶ್ವರನಿಗೆ ಸಿಟ್ಟೆಬ್ಬಿಸಿದವನು ಬೀಳುವನು ಅದರಲ್ಲಿ.
15 : ಮಂಕುತನ ಮಕ್ಕಳ ಮನಸ್ಸಿಗೆ ಸಹಜ; ಬೆತ್ತದ ಬಿಸಿಯಿಂದ ಅದನ್ನು ತೊಲಗಿಸಲು ಸಾಧ್ಯ.
16 : ಹಣ ಹೆಚ್ಚಿಸಲು ಬಡವರನ್ನು ಪೀಡಿಸುವವನಿಗೆ, ಲಂಚಕೊಟ್ಟು ಬಲ್ಲಿದರನ್ನು ಒಲಿಸುವವನಿಗೆ, ಕೊರತೆಯೆ ಕಟ್ಟಿಟ್ಟ ಬುತ್ತಿ.
17 : ಜ್ಞಾನಿಗಳ ನುಡಿಗಳನ್ನು ಕಿವಿಗೊಟ್ಟು ಕೇಳು; ನನ್ನ ಬೋಧನೆಯನ್ನು ಮನಸ್ಸಿನಲ್ಲಿಡು.
18 : ಆ ನುಡಿಗಳನ್ನು ನಿನ್ನ ಅಂತರಂಗದಲ್ಲಿ ಕಾದಿಡು; ಅವು ನಿನ್ನ ತುಟಿಯ ಮೇಲೆ ಸಿದ್ಧವಿದ್ದರೆ ಒಳಿತು.
19 : ಸರ್ವೇಶ್ವರನಲ್ಲಿ ನೀನು ಭರವಸೆ ಇಡುವಂತೆ, ಅವುಗಳನ್ನು ತಿಳಿಸಿರುವೆನು ಇಂದೆ.
20 : ಉಚಿತಾ ಲೋಚನೆಯನ್ನೂ ತಿಳುವಳಿಕೆಯನ್ನೂ ನೀಡಬಲ್ಲ ಮೂವತ್ತು ವಚನಗಳನ್ನು ನಿನಗೆ ಈ ಮುಂಚೆಯೆ ಬರೆದಿರುವೆನಲ್ಲಾ.
21 : ಸತ್ಯವಾದ ಆ ವಚನಗಳು ಎಷ್ಟೋ ಯಥಾರ್ಥವೆಂದು ತಿಳಿದು ನಿನ್ನನ್ನು ಪ್ರಶ್ನಿಸಿದವರಿಗೆ ಅವುಗಳನ್ನು ಅರಿಕೆಮಾಡು.
22 : ಬಡವರಿಗೆ ದಿಕ್ಕಿಲ್ಲವೆಂದು ಅವರನ್ನು ಶೋಷಣೆಗೆ ಗುರಿಮಾಡಬೇಡ; ನ್ಯಾಯಾಲಯದಲ್ಲಿ ಆ ದಟ್ಟದರಿದ್ರರನ್ನು ಬಾಧಿಸಬೇಡ.
23 : ಸರ್ವೇಶ್ವರನೇ ಅವರ ಪರವಾಗಿ ವಾದಿಸುವನು; ಸೂರೆ ಮಾಡಬಂದವರ ಪ್ರಾಣವನ್ನು ಆತನೆ ಸೂರೆ ಮಾಡುವನು.
24 : ಕೋಪಿಷ್ಠನ ಸಂಗಡ ಸ್ನೇಹಬೆಳೆಸಬೇಡ, ಸಿಟ್ಟುಗಾರನ ಸಹವಾಸ ಮಾಡಬೇಡ.
25 : ಹಾಗೆ ಮಾಡಿದರೆ ಅವರ ದುರ್ನಡತೆಯನ್ನು ಕಲಿತುಕೊಳ್ಳುವೆ, ನಿನ್ನ ಪ್ರಾಣ ಉರುಲಿಗೆ ತುತ್ತಾಗುವುದು, ಎಚ್ಚರಿಕೆ!
26 : ಬೇರೆಯವರ ಸಾಲಕ್ಕೆ ಹೊಣೆಯಾಗಬೇಡ, ಅದಕ್ಕಾಗಿ ಕೈ ಮೇಲೆ ಕೈ ಇಟ್ಟು ಜಾಮೀನು ನಿಲ್ಲಬೇಡ.
27 : ಆ ಸಾಲತೀರಿಸಲು ನಿನ್ನಿಂದ ಸಾಧ್ಯವಾಗದಿರಲು, ಅವನೇಕೆ ನೀನು ಮಲಗಿರುವ ಹಾಸಿಗೆಯನ್ನೇ ಕಿತ್ತುಕೊಳ್ಳಬೇಕು?
28 : ನಿನ್ನ ಪೂರ್ವಜರು ಹಾಕಿರುವರು ಎಲ್ಲೆ ಗುರುತನ್ನು, ಸ್ಥಳಾಂತರಿಸಬೇಡ ನೀನು.
29 : ತನ್ನ ಕೆಲಸದಲ್ಲಿ ನಿಪುಣನಾದವನನ್ನು ಗುರುತುಹಚ್ಚು; ಅಂಥವನು ರಾಜರನ್ನಲ್ಲದೆ ನೀಚರನ್ನು ಸೇವಿಸಲಾರನು.

Holydivine