Proverbs - Chapter 15
Holy Bible

1 : ಮೃದುವಾದ ಮಾತು ಸಿಟ್ಟನ್ನಾರಿಸುತ್ತದೆ; ಬಿರುಸಾದ ನುಡಿ ಸಿಟ್ಟನ್ನೇರಿಸುತ್ತದೆ.
2 : ಜ್ಞಾನಿಗಳ ನಾಲಿಗೆ ತಿಳುವಳಿಕೆಯನ್ನು ಸಾರ್ಥಕಪಡಿಸುತ್ತದೆ; ಜ್ಞಾನಹೀನರ ಬಾಯಿ ಮೂರ್ಖತನವನ್ನು ಕಕ್ಕುತ್ತದೆ.
3 : ಸರ್ವೇಶ್ವರನ ದೃಷ್ಟಿ ಸರ್ವವ್ಯಾಪ್ತ; ಕೆಟ್ಟವರ ಮೇಲೂ ಒಳ್ಳೆಯವರ ಮೇಲೂ ಆತನ ನೋಟ.
4 : ಸಂತೈಸುವ ನಾಲಿಗೆ ಜೀವವೃಕ್ಷಕ್ಕೆ ಸಮಾನ; ಹಿಂಸಾತ್ಮಕ ನಾಲಿಗೆ ಮನಮುರಿತಕ್ಕೆ ಸಾಧನ.
5 : ಮೂರ್ಖನು ತಂದೆಯ ಶಿಕ್ಷಣವನ್ನು ನಿರ್ಲಕ್ಷ್ಯ ಮಾಡುತ್ತಾನೆ; ಜಾಣನು ಆತನ ಗದರಿಕೆಯನ್ನೂ ಗಮನಿಸುತ್ತಾನೆ.
6 : ನೀತಿವಂತನ ಮನೆಯೊಳು ನಿಧಿನಿಕ್ಷೇಪ; ಅನೀತಿವಂತನ ಆದಾಯ ದುಃಖತಾಪ.
7 : ತಿಳುವಳಿಕೆಯ ಬಿತ್ತನೆ ಜ್ಞಾನಿಗಳ ಬಾಯಿಂದ; ದುರುಳರ ಹೃದಯಕ್ಕೆ ಅದು ಅಸಾಧ್ಯ.
8 : ದುರುಳರು ಅರ್ಪಿಸುವ ಬಲಿ ಸರ್ವೇಶ್ವರನಿಗೆ ಅಸಹ್ಯ; ಸಜ್ಜನರು ಮಾಡುವ ಪ್ರಾರ್ಥನೆ ಆತನಿಗೆ ಪ್ರಿಯ.
9 : ದುರುಳರ ನಡತೆ ಸರ್ವೇಶ್ವರನಿಗೆ ಹೇಯ; ನೀತಿವಂತರ ನಡತೆ ಆತನಿಗೆ ಸುಪ್ರಿಯ.
10 : ಸನ್ಮಾರ್ಗವನ್ನು ತೊರೆದವನಿಗೆ ಬರುವ ಶಿಕ್ಷೆ ಕಠಿಣ; ಬುದ್ಧಿವಾದವನ್ನು ಕೇಳಲೊಲ್ಲದವನಿಗೆ ಬರುವುದು ಮರಣ.
11 : ಸರ್ವೇಶ್ವರನ ಕಣ್ಣಿಗೆ ನರಕಪಾತಾಳಗಳೇ ಬಟ್ಟಬಯಲಾಗಿರಲು; ನರಮಾನವರ ಹೃದಯ ಆತನಿಗೆ ಮುಚ್ಚುಮರೆಯೇ?
12 : ಕುಚೋದ್ಯನಿಗೆ ಬೇಡ ಬುದ್ದಿವಾದ; ಅವನಿಗೆ ಬೇಡ ಜ್ಞಾನಿಗಳ ಸತ್ಸಂಘ.
13 : ಹರ್ಷಹೃದಯದಿಂದ ಮುಖ ಅರಳುವುದು; ಮನೋವ್ಯಥೆಯಿಂದ ಚೈತನ್ಯ ಕುಂದುವುದು.
14 : ವಿವೇಕಿಯ ಮನ ತಿಳುವಳಿಕೆಯನ್ನು ಅರಸುವುದು; ಮತಿಹೀನನ ಬಾಯಿ ಮೂರ್ಖತನವನ್ನು ಮುಕ್ಕುವುದು.
15 : ದಲಿತರ ದಿನಗಳೆಲ್ಲ ದುಃಖಭರಿತ; ಹರ್ಷ ಹೃದಯನಿಗೆ ಸದಾ ಹಬ್ಬದಾನಂದ.
16 : ನೆಮ್ಮದಿಯಿಲ್ಲದ ಸಿರಿಸಂಪತ್ತಿಗಿಂತಲು, ಸರ್ವೇಶ್ವರನ ಭಯಭಕ್ತಿಯಿಂದ ಕೂಡಿದ ಕಿಂಚಿತ್ತೇ ಮೇಲು.
17 : ದ್ವೇಷವಿರುವಲ್ಲಿ ಕೊಬ್ಬಿದ ಮಾಂಸ ಭೋಜನಕ್ಕಿಂತ ಪ್ರೀತಿಯಿರುವಲ್ಲಿ ಸೊಪ್ಪಿನ ಊಟವೇ ಲೇಸು.
18 : ಉಗ್ರಕೋಪಿ ವ್ಯಾಜ್ಯವೆಬ್ಬಿಸುತ್ತಾನೆ; ದಿರ್ಘಶಾಂತನು ಜಗಳ ತೀರಿಸುತ್ತಾನೆ.
19 : ಸೋಮಾರಿಯ ದಾರಿ ಮುಳ್ಳಿನಬೇಲಿ; ಸಜ್ಜನರ ಮಾರ್ಗ ರಾಜಬೀದಿ.
20 : ಬುದ್ಧಿವಂತ ಮಗ ತಂದೆಯನ್ನು ಸಂತೋಷಗೊಳಿಸುತ್ತಾನೆ; ಬುದ್ಧಿಹೀನನು ಹೆತ್ತ ತಾಯಿಯನ್ನು ತಿರಸ್ಕರಿಸುತ್ತಾನೆ.
21 : ಬುದ್ಧಿಹೀನನು ಮೂರ್ಖತನದಲ್ಲಿ ಆನಂದಿಸುತ್ತಾನೆ; ಬುದ್ಧಿವಂತನು ಸನ್ಮಾರ್ಗದಲ್ಲಿ ಮುಂದುವರಿಯುತ್ತಾನೆ.
22 : ಆಲೋಚನೆಯಿಲ್ಲದೆ ಉದ್ದೇಶಗಳು ಈಡೇರವು; ಹಲವಾರು ಆಲೋಚನಾಪರರಿರುವಲ್ಲಿ ಅವು ಕೈಗೂಡುವುವು.
23 : ಸದುತ್ತರ ಕೊಡುವವನಿಗೆ ಎಷ್ಟೋ ಸಂತೋಷ; ಸಮಯೋಚಿತ ವಚನ ಎಷ್ಟೋ ಸ್ವಾರಸ್ಯ.
24 : ವಿವೇಕಿಗಳ ಮಾರ್ಗ ಏರಿಸುವುದು ಸಜ್ಜೀವಕ್ಕೆ; ಅದನ್ನು ಕೈಗೊಳ್ಳುವವರು ಇಳಿಯರು ಪಾತಾಳಕ್ಕೆ.
25 : ಗರ್ವಿಷ್ಠನ ಮನೆಯನ್ನು ಸರ್ವೇಶ್ವರ ಕೆಡವಿಬಿಡುವನು; ವಿಧವೆಯ ಎಲ್ಲೆ ಮೇರೆಯನ್ನು ಸುಭದ್ರಪಡಿಸುವನು.
26 : ದುರುಳರ ಕುಯುಕ್ತಿ ಸರ್ವೇಶ್ವರನಿಗೆ ಅಸಹ್ಯ; ಸಜ್ಜನರ ಸುಸೂಕ್ತಿ ಆತನಿಗೆ ಪ್ರಿಯ.
27 : ಸೂರೆಮಾಡುವವನು ಸವಂತ ಮನೆಗೇ ಕೇಡು ಮಾಡುತ್ತಾನೆ; ಲಂಚವನ್ನು ದ್ವೇಷಿಸುವವನು ಸುಖವಾಗಿ ಬಾಳುತ್ತಾನೆ.
28 : ಸಜ್ಜನರು ಸಮಾಲೋಚಿಸಿ ಉತ್ತರಿಸುತ್ತಾರೆ; ದುರ್ಜನರು ಕೆಟ್ಟದ್ದನ್ನು ಕಕ್ಕುತ್ತಿರುತ್ತಾರೆ.
29 : ಸರ್ವೇಶ್ವರನು ದುರುಳರಿಗೆ ದೂರ; ನೀತಿವಂತರ ಪ್ರಾರ್ಥನೆಗೆ ಹತ್ತಿರ.
30 : ಹಸನ್ಮುಖ ಕಂಡಾಗ ಹೃದಯಕ್ಕೆ ಆನಂದ; ಶುಭಸಮಾಚಾರದಿಂದ ದೇಹಕ್ಕೆ ಉತ್ತೇಜನ.
31 : ಹಿತಕರ ಬುದ್ಧಿವಾದಕ್ಕೆ ಕಿವಿಗೊಡುವವನು ಸಜ್ಜನರ ಸತ್ಸಂಘದಲ್ಲಿ ಪಾಲ್ಗೊಳ್ಳುವನು
32 : ಶಿಸ್ತನ್ನು ನಿರಾಕರಿಸುವವನು ತನ್ನನ್ನೇ ತೃಣೀಕರಿಸುತ್ತಾನೆ; ಬುದ್ಧಿವಾದವನ್ನು ಅಂಗೀಕರಿಸುವವನು ಜ್ಞಾನ ಹೊಂದುತ್ತಾನೆ.
33 : ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಿಗೆ ಜ್ಞಾನೋದಯ; ಘನತೆಗೌರವಕ್ಕೆ ಮುಂಚೆ ಸವಿನಯ.

Holydivine