Proverbs - Chapter 28
Holy Bible

1 : ಹಿಂದಟ್ಟದಿದ್ದರೂ ದುಷ್ಟನು ಹೆದರಿ ಓಡುವನು; ಸತ್ಯಸಂಧನು ಸಿಂಹದಂತೆ ಧೈರ್ಯದಿಂದಿರುವನು.
2 : ಅರಾಜಕತೆಯಿಂದ ನಾಡಿನಲ್ಲಿ ನಾಯಕರನೇಕರು ತಲೆಯೆತ್ತುವರು; ಜ್ಞಾನ ಹಾಗೂ ವಿವೇಕದಿಂದ ನಾಡು ಸುಸ್ಥಿರವಾಗುವುದು.
3 : ದಲಿತರನ್ನೇ ಹಿಂಸಿಸುವ ಬಡವ, ಕಾಳೂ ಉಳಿಯದಂತೆ ಜಡಿಯುವ ಮಳೆಗೆ ಸಮಾನ.
4 : ಧರ್ಮಶಾಸ್ತ್ರವನ್ನು ಕೈಗೊಳ್ಳದವರು ದುಷ್ಟರನ್ನು ಹೊಗಳುವರು; ಕೈಗೊಳ್ಳುವವರು ಅವರ ವಿರುದ್ಧ ಹೋರಾಡುವರು.
5 : ಕೆಟ್ಟವರು ನ್ಯಾಯ ನೀತಿಯನ್ನು ಗ್ರಹಿಸರು; ಸರ್ವೇಶ್ವರನ ಭಕ್ತರು ಅದನ್ನು ಪೂರ್ತಿಯಾಗಿ ಗ್ರಹಿಸುವರು.
6 : ದುರ್ಮಾರ್ಗಿಯಾದ ಧನವಂತನಿಗಿಂತ ನಿರ್ದೋಷಿಯಾಗಿ ನಡೆವ ದರಿದ್ರನೇ ಲೇಸು.
7 : ಜ್ಞಾನಿಯಾದ ಮಗ ಧರ್ಮಶಾಸ್ತ್ರವನ್ನು ಕೈಗೊಳ್ಳುವನು; ಹೊಟ್ಟೆಬಾಕರ ಗೆಳೆಯ ತಂದೆಗೆ ಅಪಕೀರ್ತಿ ತರುವನು.
8 : ಬಡ್ಡಿಬಾಕಿಗಳಿಂದ ಬೆಳೆದ ಆಸ್ತಿ, ಬಡವರಲ್ಲಿ ಕನಿಕರವುಳ್ಳವನಿಗೆ ನಿಧಿ.
9 : ಧರ್ಮಶಾಸ್ತ್ರಕ್ಕೆ ಕಿವಿಮುಚ್ಚಿಕೊಳ್ಳುವವನ ಪ್ರಾರ್ಥನೆ, ದೇವರಿಂದ ತಿರಸ್ಕøತವಾದ ಪ್ರಾರ್ಥನೆ.
10 : ನೆಟ್ಟಗೆ ನಡೆವವರನ್ನು ಕೆಟ್ಟದಾರಿಗೆ ಎಳೆಯುವವನು ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು; ನಿರ್ದೋಷಿಗು ಸುಖ ಸಂತೋಷಕ್ಕೆ ಬಾಧ್ಯಸ್ತರು.
11 : ಹಣವಂತ ತಾನೇ ಜ್ಞಾನಿಯೆಂದು ಎಣಿಸಿಕೊಳ್ಳುವನು; ವಿವೇಕಿಯಾದ ಬಡವ ಅವನೆಂಥವನೆಂದು ಅರ್ಥಮಾಡಿಕೊಳ್ಳುವನು.
12 : ಸತ್ಯಸಂಧರಿಗೆ ಜಯವಾದರೆ ಸಂಭ್ರಮ ಸಡಗರ; ದುಷ್ಟರನ್ನು ಉನ್ನತಿಗೇರಿಸಿದರೆ ಬೇರೆಯವರು ಮರೆಯಾಗುವರು.
13 : ಪಾಪಗಳನ್ನು ಮುಚ್ಚಿಟ್ಟುಕೊಳ್ಳುವವನಿಗೆ ಮುಕ್ತಿ ದೊರಕದು; ಅವುಗಳನ್ನು ಒಪ್ಪಿಕೊಂಡು ಬಿಟ್ಟರೆ ಕರುಣೆ ದೊರಕುವುದು.
14 : ಭಯದಿಂದ ನಡೆದುಕೊಳ್ಳುವವನು ಭಾಗ್ಯವಂತನು; ಕಠಿಣ ಹೃದಯನು ಕೇಡಿಗೆ ತುತ್ತಾಗುವನು.
15 : ದಲಿತರನ್ನಾಳುವ ದುರುಳರಾಜ ಗರ್ಜಿಸುವ ಸಿಂಹ, ಹುಡುಕಾಡುವ ಕರಡಿ.
16 : ವಿವೇಕಶೂನ್ಯನಾದ ಒಡೆಯ ಮಹಾಹಿಂಸಕ; ದುರ್ಲಾಭವನ್ನು ವಿರೋಧಿಸುವವನಿಗೆ ದೀರ್ಘಾಯುಷ್ಯ.
17 : ನರಹತ್ಯಮಾಡಿದ ಪಾಪಾತ್ಮನು ಪಾತಾಳದತ್ತ ಓಡೋಡುತ್ತಿರುವನು; ಅವನನ್ನು ಯಾರೂ ತಡೆಯಬಾರದು.
18 : ಸನ್ಮಾರ್ಗಿಗಳಿಗೆ ಸಂರಕ್ಷಣೆ, ದುರ್ಮಾರ್ಗಿಗಳಿಗೆ ಪತನ ತಟ್ಟನೆ.
19 : ದುಡಿದು ಹೊಲ ಗೇಯುವವನಿಗೆ ಹೊಟ್ಟೆ ತುಂಬ ಅನ್ನ; ವ್ಯರ್ಥಕಾರ್ಯಗಳಲ್ಲಿ ಆಸಕ್ತನಾದವನಿಗೆ ಬೇಕಾದಷ್ಟು ಬಡತನ.
20 : ಪ್ರಾಮಾಣಿಕನಿಗೆ ಪೂರ್ಣಾಶೀರ್ವಾದ; ಹಣವಂತನಾಗಲು ಹಾತೊರೆಯುವವನು ಶಿಕ್ಷಾರ್ಹ.
21 : ಪಕ್ಷಪಾತ ತಕ್ಕುದಲ್ಲ; ತುತ್ತನ್ನಕ್ಕಾಗಿ ತಪ್ಪು ಮಾಡುವವರುಂಟು.
22 : ಆಸ್ತಿಗಳಿಸಲು ಲೋಭಿಗೆ ಆತುರ; ತನಗೆ ಕೊರತೆ ಕಾದಿದೆಯೆಂದು ಆತ ಅರಿಯ.
23 : ಮುಖಸ್ತುತಿ ಮಾಡುವವನಿಗಿಂತ ಗದರಿಸುವವನೇ ಕೊನೆಗೆ ಹೆಚ್ಚು ದಯಾವಂತ.
24 : “ಅದು ತಪ್ಪಲ್ಲ” ಎಂದು ಹೆತ್ತವರ ಆಸ್ತಿಯನ್ನು ಕದಿಯುವವನು ಕೊಳ್ಳೆ ಹೊಡೆಯುವವರ ಸಂಗಡಿಗನು.
25 : ಅತ್ಯಾಸೆಪಡುವವನು ಜಗಳವೆಬ್ಬಿಸುವನು; ಸರ್ವೇಶ್ವರನಲ್ಲಿ ಭರವಸೆಯಿಟ್ಟವನು ಬಲಿಷ್ಠನು.
26 : ತನ್ನ ಶಕ್ತಿಯಲ್ಲೆ ಭರವಸೆ ಇಡುವವನು ಮೂಢನು; ಜ್ಞಾನಿಗಳ ಮಾರ್ಗದಲ್ಲಿ ನಡೆವವನು ವಿಮುಕ್ತನಾಗುವನು.
27 : ಬಡವರಿಗೆ ಕೊಡುವವನು ಕೊರತೆಪಡನು; ಅವರನ್ನು ಕಂಡೂ ಕಾಣದಂತೆ ಇರುವವನು ಬಹುಶಾಪಗ್ರಸ್ಥನು.
28 : ದುಷ್ಟರು ಪ್ರಬಲವಾದರೆ ಜನರು ತಲೆ ಮರೆಸಿಕೊಳ್ಳುವರು; ದುಷ್ಟರು ನಾಶವಾದರೆ ಶಿಷ್ಟರು ವೃದ್ಧಿಯಾಗುವರು.

Holydivine