Proverbs - Chapter 14
Holy Bible

1 : ಬುದ್ಧಿವಂತೆ ತನ್ನ ಮನೆಯನ್ನು ಕಟ್ಟೆಬ್ಬಿಸುತ್ತಾಳೆ; ಬುದ್ಧಿಹೀನೆ ಅದನ್ನು ಕೈಯಿಂದ ಕೆಡವಿಹಾಕುತ್ತಾಳೆ.
2 : ಸನ್ಮಾರ್ಗಿಯು ಸರ್ವೇಶ್ವರನಿಗೆ ಭಯಪಡುತ್ತಾನೆ; ದುರ್ಮಾರ್ಗಿಯು ಆತನನ್ನು ಅಸಡ್ಡೆಮಾಡುತ್ತಾನೆ.
3 : ಮೂರ್ಖನ ಬಾಯಲ್ಲಿ ಗರ್ವವು ಅಂಕುರಿಸುವುದು; ಜ್ಞಾನಿಗಳ ವಚನಗಳು ಅವರನ್ನು ಕಾಪಾಡುವುವು.
4 : ಎತ್ತುಗಳಿಲ್ಲದಿರುವಾಗ ಗೋದಲಿ ಶುದ್ಧ; ಆದರೆ ಎತ್ತಿನ ಶಕ್ತಿಯಿಂದಲೇ ಬೆಳೆಯ ಉತ್ಪನ್ನ.
5 : ಸತ್ಯಸಾಕ್ಷಿ ಸುಳ್ಳಾಡದ ವ್ಯಕ್ತಿ; ಸುಳ್ಳುಸಾಕ್ಷಿ ಅಬದ್ಧಪ್ರಿಯ ವ್ಯಕ್ತಿ.
6 : ಕುಚೋದ್ಯನಿಗೆ ಜ್ಞಾನ ಹುಡುಕಿದರೂ ಸಿಕ್ಕದು; ವಿವೇಕಿಗೆ ತಿಳುವಳಿಕೆ ಸುಲಭವಾಗಿ ದಕ್ಕುವುದು.
7 : ಮೂರ್ಖನಿಂದ ದೂರವಿರು; ಜ್ಞಾನವಚನ ಅವನಲ್ಲಿ ಕಾಣಸಿಗದು.
8 : ವಿವೇಕಿಯ ಜ್ಞಾನ ಸನ್ಮಾರ್ಗದಲ್ಲಿ ನಡೆಸುತ್ತದೆ; ಮೂಢರ ಮೂರ್ಖತನ ಮೋಸಗೊಳಿಸುತ್ತದೆ.
9 : ಪಾಪ ಪರಿಹಾರವನ್ನು ಪರಿಹಾಸ್ಯಮಾಡುತ್ತಾರೆ ಮೂರ್ಖರು; ಪಾಪಕ್ಷಮೆಯನ್ನು ಕೋರುತ್ತಾರೆ ಸತ್ಪುರುಷರು.
10 : ಆಯಾಯ ಹೃದಯಕ್ಕೆ ಗೊತ್ತು ಅದರ ಗೋಳು; ಅದರ ಸಂತೋಷದಲ್ಲೂ ಪಾಲುಗೊಳ್ಳಲಾಗದು ಬೇರೆಯವರು.
11 : ದುಷ್ಟರ ಮನೆಮಠ ನಿರ್ಮೂಲವಾಗುವುದು; ಸಜ್ಜನರ ಗುಡಾರ ಉದ್ಧಾರವಾಗುವುದು.
12 : ಒಂದು ಮಾರ್ಗ ಒಬ್ಬನಿಗೆ ನೇರವೆಂದು ತೋರಬಹುದು; ಕೊನೆಗೆ ಅದು ಮರಣಕ್ಕೊಯ್ಯುವ ಹಾದಿಯಾಗಬಹುದು.
13 : ನಗೆಯಲ್ಲೂ ಅಳು ಉಂಟು; ನಲಿವು ನೋವಾಗಿ ಕೊನೆಗೊಳ್ಳುವುದುಂಟು.
14 : ಕೆಟ್ಟವನು ತನ್ನ ಕರ್ಮದ ಕಹಿಫಲದಿಂದ ತಿಂದುತೇಗುವನು; ಒಳ್ಳೆಯವನು ತನ್ನ ಕಾರ್ಯದ ಸತ್ಫಲದಿಂದ ತೃಪ್ತನಾಗುವನು.
15 : ಪೆದ್ದನು ಕಿವಿಗೆ ಬಿದ್ದುದೆಲ್ಲವನ್ನು ನಂಬಿ ಬಿಡುವನು; ಜಾಣನು ವಿವೇಚನೆ ಮಾಡಿ ಹೆಜ್ಜೆ ಇಡುವನು.
16 : ಬುದ್ಧಿವಂತನು ಕೇಡಿಗೆ ಅಂಜಿ ಓರೆಯಾಗುವನು; ಬುದ್ಧಿಹೀನನು ಸೊಕ್ಕಿನಿಂದ ಅದರತ್ತ ಧಾವಿಸುವನು.
17 : ಮುಂಗೋಪಿಗೆ ಬುದ್ಧಿಮಟ್ಟುಂಟು; ವಿವೇಕಿಗಾದರೊ ಸಹನೆಯುಂಟು.
18 : ದಡ್ಡರ ಸೊತ್ತು ಮೂಢತನ; ಜಾಣರಿಗೆ ಜ್ಞಾನವೆ ಭೂಷಣ.
19 : ಕೆಟ್ಟವರು ಒಳ್ಳೆಯವರಿಗೆ ಬಾಗಬೇಕಾಗುವುದು; ದುಷ್ಟರು ಸಜ್ಜನರ ಬಾಗಿಲಿಗೆ ಅಡ್ಡ ಬೀಳಬೇಕಾಗುವುದು.
20 : ಬಡವನನ್ನು ನೆರೆಯವರೂ ತುಚ್ಛವಾಗಿ ಕಾಣುವರು; ಹಣವಂತನಿಗಾದರೊ ಬಹು ಜನ ಮಿತ್ರರು
21 : ಹಸಿದವನನ್ನು ತಿರಸ್ಕರಿಸುವವನು ಪಾಪಿಷ್ಠನು; ದಲಿತರಿಗೆ ದಯೆತೋರಿಸುವವನು ಭಾಗ್ಯವಂತನು.
22 : ಕೆಟ್ಟದ್ದನ್ನು ಕಲ್ಪಿಸುವವರು ಮಾರ್ಗಭ್ರಷ್ಟರು; ಒಳ್ಳೆಯದನ್ನು ಕಲ್ಪಿಸುವವರು ಮರ್ಯಾದಸ್ಥರು.
23 : ದುಡಿಮೆಯಿಂದ ಸದಾ ಲಾಭವುಂಟು; ಬರಿಮಾತಿನಿಂದ ಬಡತನ ಬರುವುದುಂಟು.
24 : ಬುದ್ಧಿವಂತಹ ಕಿರೀಟ ಅವರ ಜ್ಞಾನವೇ; ದಡ್ಡರ ಶಿರಮುಕುಟ ಅವರ ದಡ್ಡತನವೆ.
25 : ಸತ್ಯವಾಡುವವನ ಸಾಕ್ಷಿ ಪ್ರಾಣಕ್ಕೆ ರಕ್ಷಣೆ; ಸುಳ್ಳಾಡುವವನ ಮಾತು ಬರೀ ವಂಚನೆ.
26 : ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಿಗೆ ಇದೆ ದೃಢಭರವಸೆ; ಆತನ ಮಕ್ಕಳಿಗೆ ಆಶ್ರಯ ಇದ್ದೇ ಇರುತ್ತದೆ.
27 : ಸರ್ವೇಶ್ವರನಲ್ಲಿ ಭಯಭಕ್ತಿಯು ಜೀವಜಲದ ಚಿಲುಮೆಯು; ಮರಣಪಾಶದಿಂದ ತಪ್ಪಿಸಿಕೊಳ್ಳಲು ಅದುವೆ ಸಾಧನವು.
28 : ಪ್ರಜೆಗಳ ಬಹುಸಂಖ್ಯೆ ಅರಸನಿಗೆ ಅತಿ ಹಿರಿಮೆ; ಪ್ರಜೆಗಳ ಕೊರತೆ ರಾಜಕುವರನಿಗೂ ಅಂಜಿಕೆ.
29 : ದೀರ್ಘಶಾಂತನು ಬಹುಬುದ್ಧಿವಂತನು; ಉಗ್ರಕೋಪಿ ಎತ್ತಿಹಿಡಿವನು ಮೂರ್ಖತನವನ್ನು.
30 : ಶಾಂತಗುಣವು ದೇಹಕ್ಕೆ ಆರೋಗ್ಯದಾಯಕವು; ಹೊಟ್ಟೆಕಿಚ್ಚು ಎಲುಬಿಗೆ ಕ್ಷಯ ರೋಗವು.
31 : ಬಡವರನ್ನು ಹಿಂಸಿಸುವವನು ತನ್ನ ಸೃಷ್ಟಿಕರ್ತನನ್ನೇ ಹೀನೈಸುತ್ತಾನೆ; ನಿರ್ಗತಿಕನಿಗೆ ದಯೆ ತೋರಿಸುವವನು ಆತನನ್ನು ಘನಪಡಿಸುತ್ತಾನೆ.
32 : ಆಪತ್ಕಾಲ ಬಂದಾಗ ದುಷ್ಟನು ಹಾಳಾಗುತ್ತಾನೆ; ಮರಣವೇಳೆಯಲ್ಲೂ ನೀತಿವಂತ ನಂಬಿಕೆ ಯಿಂದಿರುತ್ತಾನೆ.
33 : ಬುದ್ಧಿವಂತರ ಹೃದಯ ಜ್ಞಾನದ ಆಶ್ರಯ; ಬುದ್ಧಿಹೀನರ ಹೃದಯ ಜ್ಞಾನದ ಶೂನ್ಯ.
34 : ಸದಾಚಾರದಿಂದ ನಾಡಿನ ಉನ್ನತಿ; ಅನಾಚಾರದಿಂದ ಅದರ ಅವನತಿ.
35 : ಜಾಣನಾದ ಸೇವಕನ ಮೇಲೆ ರಾಜನ ಕೃಪೆಯಿರುತ್ತದೆ; ಲಜ್ಜಾಸ್ಪದ ಸೇವಕನ ಮೇಲೆ ಅವನ ಕೋಪ ಎರಗುತ್ತದೆ.

Holydivine