Numbers - Chapter 31
Holy Bible

1 : ಸರ್ವೇಶ್ವರಸ್ವಾಮಿ ಮೋಶೆಗೆ:
2 : “ಮಿದ್ಯಾನರು ಇಸ್ರಯೇಲರಿಗೆ ಮಾಡಿದ ಹಿಂಸೆಗಾಗಿ ನೀನು ಮುಯ್ಯಿತೀರಿಸಬೇಕು. ಅನಂತರ ನಿನ್ನ ಪೂರ್ವಜರ ಬಳಿಗೆ ನೀನು ಸೇರಬೇಕು,” ಎಂದರು.
3 : ಆಗ ಮೋಶೆ ಇಸ್ರಯೇಲರಿಗೆ, “ನೀವು ಒಂದೊಂದು ಕುಲದಿಂದ ಸಾವಿರ ಜನರ ಮೇರೆಗೆ ಕಾದಾಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿಕೊಳ್ಳಿ.
4 : ಅವರು ಮಿದ್ಯಾನರಿಗೆ ಸರ್ವೇಶ್ವರ ಆಜ್ಞಾಪಿಸಿದ ದಂಡನೆಯನ್ನು ಮಾಡಬೇಕು,” ಎಂದು ಅಪ್ಪಣೆಕೊಟ್ಟನು.
5 : ಅಂತೆಯೇ ಇಸ್ರಯೇಲರು ಕುಲ ಒಂದಕ್ಕೆ ಸಾವಿರ ಮಂದಿಯ ಮೇರೆಗೆ ಯುದ್ಧಕ್ಕೆ ಸನ್ನದ್ಧರಾದ ಹನ್ನೆರಡು ಸಾವಿರ ಮಂದಿಯನ್ನು ಲೆಕ್ಕಿಸಿಕೊಟ್ಟರು.
6 : ಮೋಶೆ ಇವರನ್ನು ಮಹಾಯಾಜಕನಾದ ಎಲ್ಲಾಜಾರನ ಮಗ ಫೀನೆಹಾಸನ ಮುಂದಾಳತ್ವದಲ್ಲಿ ಪವಿತ್ರ ಉಪಕರಣಗಳೊಂದಿಗೂ ಯುದ್ಧಕಹಳೆಗಳೊಂದಿಗೂ ಯುದ್ಧಕ್ಕೆ ಕಳುಹಿಸಿದನು.
7 : ಸರ್ವೇಶ್ವರನ ಆಜ್ಞೆಯಂತೆ ಅವರು ಮಿದ್ಯಾನರೊಡನೆ ಯುದ್ಧಮಾಡಿ ಗಂಡಸರೆಲ್ಲರನ್ನು ಸಂಹಾರ ಮಾಡಿದರು.
8 : ಹತರಾದವರಲ್ಲಿ ಎವೀ, ರೆಕೆಮ್, ಚೂರ್, ಹೂರ್ ಹಾಗು ರೆಬಾ ಎಂಬ ಮಿದ್ಯಾನರ ಐದು ಮಂದಿ ರಾಜರು ಇದ್ದರು. ಅದೂ ಅಲ್ಲದೆ ಬೆಯೋರನ ಮಗ ಬಿಳಾಮನನ್ನು ಕತ್ತಿಯಿಂದ ಕೊಂದುಹಾಕಿದರು.
9 : ಇಸ್ರಯೇಲರು ಮಿದ್ಯಾನರ ಎಲ್ಲಾ ಮಡದಿ ಮಕ್ಕಳನ್ನೂ ಸೆರೆಹಿಡಿದರು; ಎಲ್ಲಾ ದನಕುರಿಗಳನ್ನೂ ಆಸ್ತಿಪಾಸ್ತಿಯನ್ನೂ ಸೂರೆಮಾಡಿದರು.
10 : ಅವರಿದ್ದ ಊರುಕೇರಿಗಳನ್ನು ಸುಟ್ಟುಹಾಕಿದರು.
11 : ನರಮಾನವರೆನ್ನದೆ, ಪಶುಪ್ರಾಣಿಗಳೆನ್ನದೆ ಏನನ್ನೂ ಬಿಡದೆ ಎಲ್ಲವನ್ನು ಕೊಳ್ಳೆಹೊಡೆದರು.
12 : ಹೀಗೆ ಸೆರೆಯಾಳುಗಳನ್ನೂ ಪಶುಪ್ರಾಣಿಗಳನ್ನೂ ಆಸ್ತಿಪಾಸ್ತಿಯನ್ನೂ ತೆಗೆದುಕೊಂಡು ಜೆರಿಕೋ ಪಟ್ಟಣದ ಎದುರಿಗಿರುವ ಜೋರ್ಡನ್ ನದಿಯ ತೀರಕ್ಕೆ ಬಂದರು. ಅಲ್ಲಿ ಮೋವಾಬ್ಯರ ಮೈದಾನದ ಪಾಳೆಯದಲ್ಲಿದ್ದ ಮೋಶೆ, ಮಹಾಯಾಜಕ ಎಲ್ಲಾಜಾರ್ ಹಾಗು ಇಸ್ರಯೇಲರ ಸರ್ವಸಮಾಜದವರ ಬಳಿಗೆ ಬಂದರು.
13 : ಮೋಶೆ, ಮಹಾಯಾಜಕ ಎಲ್ಲಾಜಾರನು ಮತ್ತು ಸಮಾಜದ ಮುಖಂಡರು ಪಾಳೆಯದ ಹೊರಗೆ ಬಂದು ಯುದ್ಧವೀರರನ್ನು ಎದುರುಗೊಂಡರು.
14 : ಯುದ್ಧಭೂಮಿಯಿಂದ ಬಂದಿದ್ದ ಆ ಸೈನ್ಯದ ಸಹಸ್ರಾಧಿಪತಿಗಳನ್ನು ಹಾಗು ಶತಾಧಿಪತಿಗಳನ್ನು ಕಂಡು ಮೋಶೆ ಕೋಪಗೊಂಡನು.
15 : “ನೀವು ಮಹಿಳೆಯರನ್ನೆಲ್ಲ ಉಳಿಸಿದ್ದೇಕೆ?
16 : ಪೆಗೋರದ ಬಾಳನ ವಿಷಯದಲ್ಲಿ ಬಿಳಾಮನ ದುರಾಲೋಚನೆಯನ್ನು ಅನುಸರಿಸಿ, ಇಸ್ರಯೇಲರನ್ನು ಸರ್ವೇಶ್ವರನಿಗೆ ದ್ರೋಹಿಗಳನ್ನಾಗಿಸಿ, ಸಮಾಜದವರಲ್ಲಿ ಘೋರ ವ್ಯಾಧಿಯುಂಟಾಗುವಂತೆ ಮಾಡಿದವರು ಅವರೇ ಅಲ್ಲವೆ?
17 : ಆದಕಾರಣ ಈ ಗುಂಪಿನಲ್ಲಿರುವ ಎಲ್ಲ ಗಂಡು ಮಕ್ಕಳನ್ನು ಮತ್ತು ಪುರುಷ ಸಂಗಮಮಾಡಿದ ಎಲ್ಲ ಹೆಂಗಸರನ್ನು ಕೊಲ್ಲಬೇಕು.
18 : ಪುರುಷ ಸಂಗಮ ಮಾಡದಿರುವ ಕನ್ಯೆಯರನ್ನು ನಿಮಗೋಸ್ಕರ ಉಳಿಸಿಕೊಳ್ಳಬೇಕು.
19 : ನಿಮ್ಮಲ್ಲಿ ಮನುಷ್ಯಪ್ರಾಣ ತೆಗೆದವರು ಹಾಗು ಶವಸೋಂಕಿದವರು ಏಳು ದಿನದವರೆಗೆ ಪಾಳೆಯದ ಹೊರಗಡೆ ಇರಬೇಕು. ಮೂರನೆಯ ಮತ್ತು ಏಳನೆಯ ದಿನ ನಿಮ್ಮನ್ನೂ ಸೆರೆಯಾಳುಗಳನ್ನೂ ಶುದ್ಧೀಕರಿಸಿಕೊಳ್ಳಬೇಕು.
20 : ಎಲ್ಲ ಬಟ್ಟೆಬರೆಗಳನ್ನೂ ತೊಗಲಿನ ಸಾಮಾನುಗಳನ್ನೂ ಮೇಕೆ ಕೂದಲಿನ ವಸ್ತ್ರಗಳನ್ನೂ ಹಾಗು ಮರದ ಸಾಮಾನುಗಳನ್ನೂ ಶುದ್ಧಮಾಡಿಕೊಳ್ಳಬೇಕು,” ಎಂದು ಹೇಳಿದನು.
21 : ಮಹಾಯಾಜಕ ಎಲ್ಲಾಜಾರನು ಯುದ್ಧಕ್ಕೆ ಹೋಗಿ ಬಂದಿದ್ದ ಸೈನಿಕರಿಗೆ ಹೀಗೆಂದನು: “ಸರ್ವೇಶ್ವರಸ್ವಾಮಿ ಮೋಶೆಗೆ ಅಪ್ಪಣೆಮಾಡಿದ ವಿಧಿನಿಯಮ ಹೀಗಿದೆ -
22 : ಬೆಂಕಿಯನ್ನು ತಡೆಯುವ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ, ಸೀಸ ಮೊದಲಾದುವುಗಳನ್ನು ಬೆಂಕಿದಾಟಿಸಿ ಶುದ್ಧಿಮಾಡಬೇಕು.
23 : ಅವುಗಳನ್ನು, ಹೊಲೆ ಹೋಗಲಾಡಿಸುವ ನೀರಿನಿಂದಲೂ ಶುದ್ಧಮಾಡಬೇಕು. ಬೆಂಕಿಯನ್ನು ತಡೆಯಲಾರದ ವಸ್ತುಗಳನ್ನು ನೀರಿನಿಂದ ತೊಳೆದು ಶುದ್ಧಮಾಡಬೇಕು.
24 : ಏಳನೆಯ ದಿನದಲ್ಲಿ ನಿಮ್ಮ ಬಟ್ಟೆಗಳನ್ನು ಒಗೆದುಕೊಂಡ ನಂತರ ಶುದ್ಧರಾಗುವಿರಿ. ಆ ಬಳಿಕ ನೀವು ಪಾಳೆಯದೊಳಗೆ ಬರಬಹುದು.”
25 : ಸರ್ವೇಶ್ವರ ಮೋಶೆಗೆ:
26 : ನೀನು, ಮಹಾಯಾಜಕ ಎಲ್ಲಾಜಾರನು ಮತ್ತು ಕುಲನಾಯಕರು ಸೈನಿಕರ ಕೈಗೆ ಸಿಕ್ಕಿರುವ ಸೆರೆಯಾಳುಗಳನ್ನೂ ಪಶುಪ್ರಾಣಿಗಳನ್ನೂ ಲೆಕ್ಕಮಾಡಿ ಒಟ್ಟು ಎಷ್ಟೆಂದು ತಿಳಿದುಕೊಳ್ಳಿ.
27 : ಅದನ್ನು ಎರಡು ಭಾಗಮಾಡಿ ಯುದ್ಧಕ್ಕೆ ಹೋಗಿದ್ದ ಸೈನಿಕರಿಗೆ ಅರ್ಧವನ್ನೂ ಮಿಕ್ಕ ಸಮಾಜದವರಿಗೆ ಅರ್ಧವನ್ನೂ ಹಂಚಿಕೊಡಿ.
28 : ಯುದ್ಧಕ್ಕೆ ಹೋಗಿದ್ದ ಸೈನಿಕರಿಗೆ ಬರುವ ಭಾಗದಿಂದ ಸೆರೆಯಾಳು, ದನ, ಕತ್ತೆ, ಆಡು, ಕುರಿ
29 : ಇವುಗಳಲ್ಲಿ ಐನೂರರಲ್ಲಿ ಒಂದರ ಮೇರೆಗೆ ಸರ್ವೇಶ್ವರನಿಗೋಸ್ಕರ ಕಪ್ಪವನ್ನು ತೆಗೆದುಕೊಳ್ಳಿ. ಇದನ್ನು ಪ್ರತ್ಯೇಕಿಸಿ ಮಹಾಯಾಜಕ ಎಲ್ಲಾಜಾರನಿಗೆ ಒಪ್ಪಿಸಿರಿ.
30 : ಮಿಕ್ಕ ಇಸ್ರಯೇಲರಿಗೆ ಬರುವ ಭಾಗದಿಂದ ಸೆರೆಯಾಳು, ದನ, ಕತ್ತೆ, ಆಡು, ಕುರಿ ಇವುಗಳಲ್ಲಿ ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಂಡು ಸರ್ವೇಶ್ವರನ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಡಿ,” ಎಂದು ಆಜ್ಞಾಪಿಸಿದರು.
31 : ಸರ್ವೇಶ್ವರನ ಅಪ್ಪಣೆಯಂತೆಯೇ ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರನು ಮಾಡಿದರು.
32 : ಸೈನಿಕರು ತಂದ ಸುಲಿಗೆಯಲ್ಲಿ ಹಂಚಿಕೊಳ್ಳಲು ಉಳಿದುದರ ವಿವರ ಇದು: ಆಡುಕುರಿಗಳು 675,000;
33 : ದನಕರುಗಳು 72,000;
34 : ಕತ್ತೆಗಳು 61,000;
35 : ಕನ್ಯೆಯರು 32,000;
36 : ಯುದ್ಧಕ್ಕೆ ಹೋಗಿದ್ದ ಸೈನಿಕರಿಗೆ ದೊರಕಿದ ಅರ್ಧಭಾಗ ಆಗಿರುವ 337,500 ಆಡುಕುರಿಗಳಲ್ಲಿ
37 : 675 ಆಡುಕುರಿಗಳು ಸರ್ವೇಶ್ವರನಿಗೆ ಬಂದ ಕಪ್ಪ.
38 : ಹಾಗೆಯೇ ಅವರಿಗೆ ದೊರಕಿದ 36,000 ದನಕರುಗಳಲ್ಲಿ 72 ದನಕರುಗಳು,
39 : 0,500 ಕತ್ತೆಗಳಲ್ಲಿ 61 ಕತ್ತೆಗಳು,
40 : 16,000 ಕನ್ಯೆಯರಲ್ಲಿ 32 ಮಂದಿ ಸರ್ವೇಶ್ವರನಿಗೆ ಬಂದ ಕಪ್ಪ.
41 : ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಈ ಕಪ್ಪವನ್ನು ಸರ್ವೇಶ್ವರನಿಗೆ ಪ್ರತ್ಯೇಕಿಸಿ ಮಹಾಯಾಜಕ ಎಲ್ಲಾಜಾರನಿಗೆ ಒಪ್ಪಿಸಿದನು.
42 : ಸೈನಿಕರು ತಂದ ಸುಲಿಗೆಯಲ್ಲಿ ಮೋಶೆ ಪ್ರತ್ಯೇಕಿಸಿದ ಮಿಕ್ಕ ಅರ್ಧಭಾಗದ ವಿವರ ಇದು:
43 : 337,500 ಆಡುಕುರಿಗಳು;
44 : 36,000 ದನಕರುಗಳು;
45 : 30,500 ಕತ್ತೆಗಳು; 16,000 ಕನ್ಯೆಯರು,
46 : ಇಷ್ಟು ಇಸ್ರಯೇಲ ಸಮಾಜದವರ ಪಾಲಿಗೆ ಬಂದವುಗಳು.
47 : ಇವುಗಳಲ್ಲಿ ಮೋಶೆ ಸರ್ವೇಶ್ವರನ ಅಪ್ಪಣೆಯ ಪ್ರಕಾರ ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಂಡು ಸರ್ವೇಶ್ವರನ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಟ್ಟನು.
48 : ಸೈನ್ಯದ ಸಹಸ್ರಾಧಿಪತಿಗಳು ಹಾಗು ಶತಾಧಿಪತಿಗಳು ಮೋಶೆ ಬಳಿಗೆ ಬಂದು,
49 : “ನಿಮ್ಮ ದಾಸರಾದ ನಾವು ನಮ್ಮ ಅಧಿಕಾರಕ್ಕೆ ಒಳಪಟ್ಟ ಸೈನಿಕರನ್ನು ಲೆಕ್ಕಿಸಿದಾಗ ಒಬ್ಬನಾದರೂ ಕಡಿಮೆ ಆಗಿಲ್ಲವೆಂದು ಗೊತ್ತಾಯಿತು.
50 : ಸರ್ವೇಶ್ವರಸ್ವಾಮಿ ನಮ್ಮ ಪ್ರಾಣಗಳನ್ನು ಕಾಪಾಡಿದ್ದಾರೆ. ಅದಕ್ಕೆ ಈಡಾಗಿ ಅವರಿಗೆ ಕಾಣಿಕೆಯಾಗಿ ನಮ್ಮಲ್ಲಿ ಒಬ್ಬೊಬ್ಬನು ತನಗೆ ಸಿಕ್ಕಿದ ಚಿನ್ನದ ಒಡವೆಗಳನ್ನು, ಅಂದರೆ ತೋಳ್ಬಳೆ, ಕಡಗ, ಮುದ್ರೆಯುಂಗುರ, ಮುರುವು, ಕಂಠಮಾಲೆ, ಮುಂತಾದುವುಗಳನ್ನು ತಂದಿದ್ದೇವೆ,” ಎಂದರು.
51 : ಅವರು ಕೊಟ್ಟ ಆ ಚಿನ್ನದ ಒಡವೆಗಳನ್ನೂ ವಿಚಿತ್ರ ಆಭರಣಗಳನ್ನೂ ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರನು ತೆಗೆದುಕೊಂಡರು.
52 : ಸಹಸ್ರಾಧಿಪತಿಗಳು ಹಾಗು ಶತಾಧಿಪತಿಗಳು ಸರ್ವೇಶ್ವರನಿಗೆ ಹೀಗೆ ಪ್ರತ್ಯೇಕಿಸಿ ಸಮರ್ಪಿಸಿದ ಕಾಣಿಕೆಯ ಒಟ್ಟು ತೂಕ 16,750 ಶೆಕೆಲ್‍ಗಳು.
53 : ಪ್ರತಿಯೊಬ್ಬ ಸೈನಿಕನೂ ಸ್ವಂತಕ್ಕಾಗಿ ಲೂಟಿಯನ್ನು ಇಟ್ಟುಕೊಂಡಿದ್ದನು. 54ಆದರೆ ಸಹಸ್ರಾಧಿಪತಿಗಳು ಮತ್ತು ಶತಾಧಿಪತಿಗಳು ಕೊಟ್ಟ ಚಿನ್ನವನ್ನು ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರನು ಸ್ವೀಕರಿಸಿ ಅದನ್ನು ಇಸ್ರಯೇಲರಿಗೋಸ್ಕರ ಸ್ಮರಣಾರ್ಥವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ದೇವದರ್ಶನದ ಗುಡಾರದೊಳಗಿಟ್ಟರು.

Holydivine