Numbers - Chapter 28
Holy Bible

1 : ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದ್ದೇನೆಂದರೆ:
2 : “ನನಗೆ ಸಮರ್ಪಿಸಬೇಕಾದ ಬಲಿಗಳನ್ನು, ಅಂದರೆ ದಹನಬಲಿಗಾಗಿ ಇಸ್ರಯೇಲರು ನನಗೆ ತರುವ ಆಹಾರವನ್ನು ತಕ್ಕಕಾಲದಲ್ಲಿ ತಂದು ಎಚ್ಚರಿಕೆಯಿಂದ ಸಮರ್ಪಿಸಬೇಕೆಂದು ವಿಧಿಸು.
3 : ಆ ವಿಷಯದಲ್ಲಿ ನೀನು ಅವರಿಗೆ ಹೀಗೆಂದು ಅಪ್ಪಣೆಮಾಡು:
4 : ‘ಪ್ರತಿದಿನ ನೀವು ಸರ್ವೇಶ್ವರನಿಗೆ ದಹನ ಬಲಿಗಾಗಿ ಬೆಳಿಗ್ಗೆ ಒಂದು ಕುರಿ, ಸಂಜೆ ಒಂದು ಕುರಿ ಹೀಗೆ ಎರಡು ಕಳಂಕರಹಿತವಾದ ಒಂದು ವರ್ಷದ ಕುರಿಗಳನ್ನು ಸಮರ್ಪಿಸಬೇಕು.
5 : ಬೆಳಿಗ್ಗೆ ಆ ಕುರಿಯೊಂದಿಗೆ ಧಾನ್ಯ ನೈವೇದ್ಯಕ್ಕಾಗಿ ಒಂದುವರೆ ಸೇರು ಶ್ರೇಷ್ಠವಾದ ಎಣ್ಣೆಯನ್ನು ಮತ್ತು ಮೂರು ಸೇರು ಗೋದಿಹಿಟ್ಟನ್ನು ಬೆರೆಸಿ ಸಮರ್ಪಿಸಬೇಕು.
6 : ನೀವು ಪ್ರತಿನಿತ್ಯವು ಸರ್ವೇಶ್ವರನಿಗೆ ಸುಗಂಧಕರವಾದ ಈ ದಹನಬಲಿಯನ್ನು ಮಾಡಬೇಕೆಂದು ಸೀನಾಯಿ ಬೆಟ್ಟದಲ್ಲೇ ನೇಮಕವಾಯಿತು.
7 : ಆ ಕುರಿಯೊಂದಿಗೆ ಪಾನದ್ರವ್ಯಾರ್ಪಣೆಗಾಗಿ ಒಂದುವರೆ ಸೇರು ಮದ್ಯವನ್ನು ಪವಿತ್ರಸ್ಥಾನದಲ್ಲಿ ಪೀಠದ ಮೇಲೆ ಸುರಿಯಬೇಕು.
8 : ಸಂಜೆ ಎರಡನೇ ಕುರಿಯನ್ನು ದಹನಬಲಿ ಕೊಡುವಾಗ ಬೆಳಿಗ್ಗೆ ಮಾಡಿದಂತೆಯೇ ಅದರೊಂದಿಗೆ ಧಾನ್ಯ ಹಾಗು ಪಾನದ್ರವ್ಯಗಳನ್ನು ಸಮರ್ಪಿಸಬೇಕು.
9 : ‘ಪ್ರತಿದಿನ ಅರ್ಪಿಸಬೇಕಾದ ದಹನಬಲಿ ಹಾಗು ಅದಕ್ಕೆ ಸಂಬಂಧಿಸಿದ ಪಾನದ್ರವ್ಯ ಇವುಗಳ ಜೊತೆಗೆ
10 : ನೀವು ಸಬ್ಬತ್ ದಿನದಂದು ಹೆಚ್ಚಾಗಿ ಎರಡು ಕಳಂಕರಹಿತವಾದ ವರ್ಷದ ಕುರಿಗಳನ್ನು ಮತ್ತು ಧಾನ್ಯನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಆರು ಸೇರು ಗೋದಿಹಿಟ್ಟನ್ನು ಅದಕ್ಕೆ ತಕ್ಕ ಪಾನದ್ರವ್ಯವನ್ನೂ ಸಮರ್ಪಿಸಬೇಕು.
11 : ‘ಅಮಾವಾಸ್ಯೆಯಲ್ಲಿ ದಹನಬಲಿಗಾಗಿ ಕಳಂಕರಹಿತವಾದ ಟಗರು, ವರ್ಷದ ಎರಡು ಹೋರಿ, ಒಂದು ಟಗರು, ವರ್ಷದ ಏಳು ಕುರಿಗಳು - ಇವುಗಳನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕು.
12 : ಇವುಗಳ ಜೊತೆಗೆ ಧಾನ್ಯನೈವೇದ್ಯಕ್ಕಾಗಿ ಪ್ರತಿಯೊಂದು ಹೋರಿಗೆ ಒಂಬತ್ತು ಸೇರು, ಟಗರಿಗೆ ಆರು ಸೇರು,
13 : ಕುರಿಯೊಂದಕ್ಕೆ ಮೂರು ಸೇರು - ಈ ಮೇರೆಗೆ ಎಣ್ಣೆಬೆರೆಸಿದ ಗೋದಿಹಿಟ್ಟನ್ನು ಸಮರ್ಪಿಸಬೇಕು. ಇದು ಸರ್ವೇಶ್ವರನಿಗೆ ಸುಗಂಧಕರವಾದ ದಹನಬಲಿಯಾಗುವುದು.
14 : ಇವುಗಳಿಗೆ ತಕ್ಕ ಪಾನಾರ್ಪಣೆ ಯಾವುವೆಂದರೆ - ಒಂದೊಂದು ಹೋರಿಯೊಡನೆ ಮೂರು ಸೇರು, ಟಗರಿನೊಡನೆ ಎರಡು ಸೇರು, ಕುರಿಯೊಡನೆ ಒಂದು ಸೇರು ದ್ರಾಕ್ಷಾರಸ. ವರ್ಷದ ಪ್ರತಿ ಅಮಾವಾಸ್ಯೆಯಲ್ಲಿ ಹೀಗೆ ದಹನಬಲಿಯನ್ನು ಕೊಡಬೇಕು.
15 : ಅಮಾವಾಸ್ಯೆಯಲ್ಲಿ ದಹನಬಲಿಯನ್ನೂ ಅದಕ್ಕೆ ಸಂಬಂಧಿಸಿದ ಪಾನದ್ರವ್ಯವನ್ನೂ ಅರ್ಪಿಸುವುದಲ್ಲದೆ ಪಾಪಪರಿಹಾರಕ ಬಲಿಗಾಗಿ ಒಂದು ಹೋತವನ್ನು ಸರ್ವೇಶ್ವರನಿಗೆ ಹೆಚ್ಚಾಗಿ ಸಮರ್ಪಿಸಬೇಕು.
16 : ‘ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಂದು ಸರ್ವೇಶ್ವರಸ್ವಾಮಿ ನೇಮಿಸಿದ ಪಾಸ್ಕಹಬ್ಬವಾಗಬೇಕು.
17 : ಅದೇ ತಿಂಗಳ ಹದಿನೈದನೆಯ ದಿನದಲ್ಲಿ ಜಾತ್ರೆ ಆರಂಭವಾಗಬೇಕು. ಏಳು ದಿನಗಳವರೆಗೂ ಹುಳಿಯಿಲ್ಲದ ರೊಟ್ಟಿಗಳನ್ನು ಊಟಮಾಡಬೇಕು.
18 : ಮೊದಲನೆಯ ದಿನ ದೇವಾರಾಧನೆಗಾಗಿ ಸಭೆಸೇರಬೇಕು. ಆ ದಿನ ಯಾವ ದುಡಿಮೆಯನ್ನೂ ಮಾಡಬಾರದು.
19 : ಸರ್ವೇಶ್ವರನಿಗೆ ದಹನಬಲಿಗಾಗಿ ಎರಡು ಹೋರಿಗಳನ್ನೂ ಒಂದು ಟಗರನ್ನೂ ಹಾಗು ವರ್ಷದ ಏಳು ಕುರಿಗಳನ್ನೂ ಸಮರ್ಪಿಸಬೇಕು. ಈ ಪ್ರಾಣಿಗಳು ಕಳಂಕರಹಿತವಾಗಿರಬೇಕು.
20 : ಇವುಗಳ ಜೊತೆಗೆ ಧಾನ್ಯನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಹಿಟ್ಟನ್ನು ತಂದುಕೊಡಬೇಕು. ಹೋರಿಗೆ ಒಂಬತ್ತು ಸೇರು, ಟಗರಿಗೆ ಆರು ಸೇರು
21 : ಒಂದೊಂದು ಕುರಿಗೆ ಮೂರು ಸೇರು ಹೀಗೆ ತಂದುಕೊಡಬೇಕು.
22 : ಇದಲ್ಲದೆ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ಸಮರ್ಪಿಸಬೇಕು.
23 : ನಿತ್ಯಗಟ್ಟಲೆಯಾಗಿ ಪ್ರತಿದಿನ ಬೆಳಿಗ್ಗೆ ಒಪ್ಪಿಸಲಾಗುವ ದಹನಬಲಿಯ ಜೊತೆಗೆ ಇವುಗಳನ್ನು ಸೇರಿಸಿ ಸಮರ್ಪಿಸಬೇಕು.
24 : ಆ ಏಳು ದಿನಗಳಲ್ಲೂ ದೈನಿಕ ದಹನಬಲಿಯನ್ನು ಮತ್ತು ಅದಕ್ಕೆ ಸೇರಿದ ಪಾನಾರ್ಪಣೆಯನ್ನು ಒಪ್ಪಿಸಬೇಕಲ್ಲದೆ ಮೇಲೆ ಹೇಳಿದ ಕ್ರಮದ ಮೇರೆಗೆ ಪ್ರತಿದಿನವೂ ದಹನಬಲಿ ರೂಪವಾಗಿ ಸರ್ವೇಶ್ವರನಿಗೆ ಅನ್ನಾರ್ಪಣೆ ಮಾಡಿ ಅವರಿಗೆ ಸುಗಂಧ ಸುವಾಸನೆಯನ್ನು ಉಂಟುಮಾಡಬೇಕು.
25 : ಏಳನೆಯ ದಿನದಲ್ಲೂ ಸಭೆ ಕೂಡಬೇಕು. ಆ ದಿನದಂದು ಯಾವ ದುಡಿಮೆಯನ್ನೂ ಮಾಡಬಾರದು.
26 : ‘ಪಾಸ್ಕವಾದ ಏಳು ವಾರಗಳ ಮೇಲೆ ನೀವು ಹೊಸ ಬೆಳೆಯ ಗೋದಿಯನ್ನು ನೈವೇದ್ಯ ಮಾಡಬೇಕು. ಆ ಪ್ರಥಮ ಫಲಾರ್ಪಣೆಯ ದಿನ ನೀವು ಯಾವ ದುಡಿಮೆಯನ್ನೂ ಮಾಡದೆ ದೇವಾರಾಧನೆಗಾಗಿ ಸಭೆಸೇರಬೇಕು.
27 : ಆ ದಿನ ಸರ್ವೇಶ್ವರನಿಗೆ ಸುಗಂಧ ಸುವಾಸನೆಯುಂಟು ಮಾಡುವುದಕ್ಕಾಗಿ ಎರಡು ಹೋರಿ, ಒಂದು ಟಗರು, ಹಾಗು ವರ್ಷದ ಏಳು ಕುರಿ ಇವುಗಳನ್ನು,
28 : ಹಾಗು ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರೆಸಿದ ಗೋದಿಹಿಟ್ಟನ್ನು ಅಂದರೆ, ಪ್ರತಿಯೊಂದು ಹೋರಿಗೆ ಒಂಬತ್ತು ಸೇರು,
29 : ಟಗರಿಗೆ ಆರು ಸೇರು, ಕುರಿಗೆ ಮೂರು ಸೇರು ಹಿಟ್ಟನ್ನು;
30 : ಮತ್ತು ಪಾಪಪರಿಹಾರಕ ಬಲಿಗಾಗಿ ಒಂದು ಹೋತವನ್ನು ಸಮರ್ಪಿಸಬೇಕು.
31 : ಈ ಪ್ರಾಣಿಗಳೆಲ್ಲಾ ಕಳಂಕ ರಹಿತವಾಗಿರಬೇಕು. ದೈನಿಕ ದಹನಬಲಿ ಮತ್ತು ಅದಕ್ಕೆ ಸೇರಿದ ಧಾನ್ಯನೈವೇದ್ಯ ಇವುಗಳ ಜೊತೆಗೆ ಮೇಲೆ ಹೇಳಿದ ಬಲಿಗಳನ್ನೂ ಅವುಗಳೊಡನೆ ಕೊಡಬೇಕಾದ ಪಾನಾರ್ಪಣೆಗಳನ್ನೂ ಸೇರಿಸಿ ಸಮರ್ಪಿಸಬೇಕು.

Holydivine