Numbers - Chapter 10
Holy Bible

1 : ಸರ್ವೇಶ್ವರಸ್ವಾಮಿ ಮೋಶೆಗೆ ಹೀಗೆಂದು ಆಜ್ಞಾಪಿಸಿದರು:
2 : “ನೀನು ಬೆಳ್ಳಿಯ ತಗಡಿನಿಂದ ಎರಡು ಕಹಳೆಗಳನ್ನು ಮಾಡಿಸು. ಜನರನ್ನು ಸಭೆಸೇರಿಸುವುದಕ್ಕೂ ಹಾಗೂ ದಂಡನ್ನು ಹೊರಡಿಸುವುದಕ್ಕೂ ಅವುಗಳನ್ನು ಉಪಯೋಗಿಸು.
3 : ಅವೆರಡನ್ನೂ ನೀನು ಊದಿಸುವಾಗ ಜನರೆಲ್ಲರೂ ನಿನ್ನ ಹತ್ತಿರ ದೇವದರ್ಶನದ ಗುಡಾರದ ಬಾಗಿಲಿಗೆ ಕೂಡಿಬರಬೇಕು.
4 : ಒಂದನ್ನು ಮಾತ್ರ ಊದಿಸಿದಾಗ ಇಸ್ರಯೇಲರಲ್ಲಿ ಸಹಸ್ರಾಧಿಪತಿಗಳಾದ ಮುಖ್ಯಸ್ಥರು ನಿನ್ನ ಬಳಿಗೆ ಕೂಡಿಬರಬೇಕು.
5 : ಆರ್ಭಟವಾಗಿ ಮೊಳಗಿಸುವಾಗ ಪೂರ್ವದಿಕ್ಕಿನ ದಂಡುಗಳು ಹೊರಡಬೇಕು.
6 : ಎರಡನೆಯ ಸಾರಿ ಆರ್ಭಟವಾಗಿ ಮೊಳಗಿಸಿದಾಗ ದಕ್ಷಿಣ ದಿಕ್ಕಿನ ದಂಡುಗಳು ಹೊರಡಬೇಕು. ಹೀಗೆ ಪ್ರಯಾಣ ಹೊರಡಬೇಕಾದಾಗ ಆರ್ಭಟವಾಗಿಯೇ ಮೊಳಗಿಸಬೇಕು.
7 : ಜನರನ್ನು ಸಭೆ ಸೇರಿಸಬೇಕಾದಾಗ ಸಾಧಾರಣವಾಗಿ ಊದಿಸಬೇಕೇ ಹೊರತು ಆರ್ಭಟವಾಗಿ ಮೊಳಗಿಸಬೇಕಾಗಿಲ್ಲ.
8 : ಆರೋನನ ವಂಶಸ್ಥರಾದ ಯಾಜಕರೇ ಆ ಕಹಳೆಗಳನ್ನು ಊದಬೇಕು. “ನಿಮಗೂ ನಿಮ್ಮ ಸಂತತಿಯವರಿಗೂ ಇದು ಶಾಶ್ವತ ನಿಯಮವಾಗಿರಲಿ.
9 : ನೀವು ಸ್ವದೇಶವನ್ನು ಸೇರಿದ ಮೇಲೆ ನಿಮ್ಮನ್ನು ಪೀಡಿಸುವ ಶತ್ರುಗಳ ಮೇಲೆ ಯುದ್ಧಕ್ಕೆ ಹೊರಡುವಾಗ ಆ ಕಹಳೆಗಳನ್ನು ಆರ್ಭಟವಾಗಿ ಮೊಳಗಿಸಬೇಕು. ಆಗ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ನೆನಪಿಗೆ ತಂದುಕೊಂಡು ಶತ್ರುಗಳ ಕೈಯಿಂದ ನಿಮ್ಮನ್ನು ಬಿಡಿಸುವರು.
10 : ಇದಲ್ಲದೆ, ಉತ್ಸವದಿನಗಳಲ್ಲೂ ಹಬ್ಬದಿನಗಳಲ್ಲೂ ಅಮಾವಾಸ್ಯೆಯಲ್ಲೂ ಮತ್ತು ದಹನಬಲಿಗಳನ್ನೂ ಸಮಾಧಾನಬಲಿಗಳನ್ನೂ ಅರ್ಪಿಸುವಾಗಲೂ ಆ ಕಹಳೆಗಳನ್ನು ಮೊಳಗಿಸಬೇಕು. ಆ ಧ್ವನಿ ನಿಮ್ಮನ್ನು ನಿಮ್ಮ ದೇವರ ನೆನಪಿಗೆ ತರಲು ನೆರವಾಗುವುದು. ನಾನೇ ನಿಮ್ಮ ದೇವರಾದ ಸರ್ವೇಶ್ವರ.”
11 : ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿನ ದೇವದರ್ಶನದ ಗುಡಾರದ ಮೇಲಿದ್ದ ಮೇಘವು ಮೇಲಕ್ಕೆ ಎದ್ದಿತು.
12 : ಆದ್ದರಿಂದ ಇಸ್ರಯೇಲರು ಸೀನಾಯಿ ಮರುಭೂಮಿಯನ್ನು ಬಿಟ್ಟು ಮುಂದೆ ಮುಂದೆ ಪ್ರಯಾಣ ಮಾಡಿದರು. ಬಳಿಕ ಆ ಮೇಘ ಪಾರಾನ್ ಮರುಭೂಮಿಯಲ್ಲಿ ನಿಂತಿತು.
13 : ಸರ್ವೇಶ್ವರ ಮೋಶೆಯ ಮುಖಾಂತರ ಆಜ್ಞಾಪಿಸಿದ ಕ್ರಮಾನುಸಾರ ದಂಡುಗಳು ಪ್ರಯಾಣ ಮಾಡಿದ್ದು ಇದೇ ಮೊದಲನೆಯ ಸಾರಿ.
14 : ಮುಂಭಾಗದಲ್ಲಿ ಯೆಹೂದ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕನಾಗಿ ಇದ್ದವನು ಅವಿ್ಮೂನದಾಬನ ಮಗ ನಹಶೋನನು.
15 : ಇಸ್ಸಾಕಾರ್ ಕುಲಕ್ಕೆ ಸೇನಾನಾಯಕನಾಗಿ ಇದ್ದವನು ಚೂವಾರನ ಮಗ ನೆತನೇಲನು.
16 : ಜೆಬುಲೂನ್ ಕುಲಕ್ಕೆ ಹೇಲೋನನ ಮಗ ಎಲೀಯಾಬನು ಸೇನಾನಾಯಕನಾಗಿದ್ದನು.
17 : ಬಳಿಕ ದೇವದರ್ಶನದ ಗುಡಾರವನ್ನು ಇಳಿಸಿದ್ದೇ ಗೇರ್ಷೋನ್ಯರೂ ಮೆರಾರೀಯರೂ ಅದನ್ನು ಹೊತ್ತುಕೊಂಡು ಹೊರಟರು.
18 : ಆಮೇಲೆ ರೂಬೇನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕ ಶೆದೇಯೂರನ ಮಗ ಎಲೀಚೂರನು.
19 : ಸಿಮೆಯೋನ್ ಕುಲದ ಸೇನಾನಾಯಕನು ಚೂರಿಷದ್ದೈಯನ ಮಗ ಶೆಲುವಿೂಯೇಲನು.
20 : ಗಾದ್ ಕುಲದ ಸೇನಾನಾಯಕ ರೇಗೂವೇಲನ ಮಗ ಎಲ್ಯಾಸಾಫನು.
21 : ಅವರ ಹಿಂದೆ ಕೆಹಾತ್ಯರು ದೇವಸ್ಥಾನದ ಸಾಮಾಗ್ರಿಗಳನ್ನು ಹೊತ್ತುಕೊಂಡು ಹೊರಟರು. ಅವರು ಬರುವಷ್ಟರೊಳಗೆ ಮಿಕ್ಕ ಲೇವಿಯರು ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.
22 : ತದನಂತರ ಎಫ್ರಯಿಮ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರ ಸೇನಾನಾಯಕ ಅವಿ್ಮೂಹೂದನ ಮಗ ಎಲೀಷಾಮನು.
23 : ಮನಸ್ಸೆ ಕುಲದ ಸೇನಾನಾಯಕ ಪೆದಾಚೂರನ ಮಗ ಗವಿ್ಮೂಯೇಲನು.
24 : ಬೆನ್ಯಾವಿೂನ್ ಕುಲದ ಸೇನಾನಾಯಕ ಗಿದ್ಯೋನಿಯ ಮಗ ಅಬೀದಾನನು.
25 : ಈ ಎಲ್ಲಾ ದಂಡುಗಳ ಹಿಂಭಾಗದಲ್ಲಿ ದಾನ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕ ಅವಿ್ಮೂಷದ್ದೈಯನ ಮಗ ಅಹೀಗೇಜೆರನು.
26 : ಆಶೇರ್ ಕುಲಕ್ಕೆ ಸೇನಾನಾಯಕ ಒಕ್ರಾನನ ಮಗ ಪಗೀಯೇಲನು.
27 : ನಫ್ತಾಲಿ ಕುಲಕ್ಕೆ ಸೇನಾನಾಯಕ ಏನಾನನ ಮಗ ಅಹೀರನು.
28 : ಈ ಕ್ರಮದಲ್ಲಿ ಇಸ್ರಯೇಲರು ಸೈನ್ಯ ಸೈನ್ಯವಾಗಿ ಹೊರಟು ಪ್ರಯಾಣಮಾಡಿದರು.
29 : ಮೋಶೆ ತನ್ನ ಮಾವನಾಗಿದ್ದ ಮಿದ್ಯಾನ್ಯನಾದ ರೆಗೂವೇಲನ ಮಗ ಹೋಬಾಬನಿಗೆ, “ಸರ್ವೇಶ್ವರ ನಮಗೆ ಕೊಡುವುದಾಗಿ ವಾಗ್ದಾನ ಮಾಡಿದ ನಾಡಿಗೆ ನಾವು ಪ್ರಯಾಣ ಮಾಡುತ್ತಿದ್ದೇವೆ. ಇಸ್ರಯೇಲರಿಗೆ ಒಳಿತನ್ನೇ ಮಾಡುವುದಾಗಿ ಸರ್ವೇಶ್ವರಸ್ವಾಮಿಯೇ ಹೇಳಿದ್ದಾರೆ. ಆದ್ದರಿಂದ ನೀನೂ ನಮ್ಮ ಸಂಗಡ ಬಾ; ನಮ್ಮಿಂದ ನಿನಗೂ ಒಳ್ಳೆಯದಾಗುವುದು,” ಎಂದು ಹೇಳಿದ.
30 : ಅದಕ್ಕೆ ಅವನು, “ನಾನು ಬರುವುದಿಲ್ಲ; ನನ್ನ ಸ್ವದೇಶಕ್ಕೆ, ನನ್ನ ಸ್ವಜನರ ಬಳಿಗೆ ಹೋಗುತ್ತೇನೆ,” ಎಂದು ಉತ್ತರಿಸಿದ.
31 : ಅದಕ್ಕೆ ಮೋಶೆ, “ನಮ್ಮನ್ನು ಬಿಟ್ಟು ಹೋಗಬೇಡ ಎಂದು ಬೇಡಿಕೊಳ್ಳುತ್ತೇನೆ. ಈ ಮರುಭೂಮಿಯಲ್ಲಿ ಡೇರೆಗಳನ್ನು ಹಾಕುವ ಸ್ಥಳಗಳು ನಿನಗೆ ಮಾತ್ರ ತಿಳಿದಿವೆ.
32 : ಆದ್ದರಿಂದ ನೀನು ನಮಗೆ ಕಣ್ಣಾಗಿರಬೇಕು. ನೀನು ನಮ್ಮ ಸಂಗಡ ಬಂದರೆ ಸರ್ವೇಶ್ವರ ನಮಗೆ ಮಾಡುವ ಒಳಿತೆಲ್ಲವನ್ನು ನಿನ್ನೊಂದಿಗೆ ಹಂಚಿಕೊಳ್ಳುತ್ತೇವೆ,” ಎಂದು ಉತ್ತರಕೊಟ್ಟನು.
33 : ಅವರು ಸರ್ವೇಶ್ವರನ ಬೆಟ್ಟವನ್ನು ಬಿಟ್ಟು ಮೂರುದಿನದ ಪ್ರಯಾಣದಷ್ಟು ದೂರ ಹೋದರು. ಇಳಿದುಕೊಳ್ಳಲು ಸೂಕ್ತವಾದ ಸ್ಥಳವನ್ನು ನೋಡಲು ಸರ್ವೇಶ್ವರನ ಒಡಂಬಡಿಕೆಯ ಮಂಜೂಷವು ಆ ಮೂರು ದಿವಸ ಅವರಿಗೆ ಮುಂದಾಗಿ ಹೋಗುತ್ತಿತ್ತು.
34 : ಅವರು ಪಾಳೆಯದಿಂದ ಹೊರಡುವಾಗ ಹಗಲಲ್ಲಿ ಸರ್ವೇಶ್ವರನ ಮೇಘವು ಅವರ ಮೇಲೆ ಇರುತ್ತಿತ್ತು.
35 : ಸರ್ವೇಶ್ವರನ ಮಂಜೂಷ ಹೊರಡುವಾಗ ಮೋಶೆ, “ಹೊರಡೋಣವಾಗಲಿ ಸರ್ವೇಶ್ವರಾ, ಎಚ್ಚೆತ್ತು, ಚದರಿಹೋಗಲಿ ನಿಮ್ಮ ಶತ್ರುಗಳು ಬೆಂಗೊಟ್ಟು, ಓಡಿಹೋಗಲಿ ನಿಮ್ಮ ಹಗೆಗಾರರು” ಎಂದು ಹೇಳುತ್ತಿದ್ದನು.
36 : ಆ ಮಂಜೂಷ ನಿಂತಾಗ: “ಮರಳಿ ಬರೋಣವಾಗಲಿ, ಸರ್ವೇಶ್ವರಾ, ಸಹಸ್ರಾರು ಇಸ್ರಯೇಲ್ ಕುಟುಂಬಗಳ ಬಳಿಗೆ”, ಎಂದು ಹೇಳುತ್ತಿದ್ದನು.

Holydivine