Numbers - Chapter 23
Holy Bible

1 : ಆಗ ಬಿಳಾಮನು, “ಇಲ್ಲಿ ಏಳು ಬಲಿಪೀಠಗಳನ್ನು ಕಟ್ಟಿಸಿ ಏಳು ಹೋರಿಗಳನ್ನು ಮತ್ತು ಏಳು ಟಗರುಗಳನ್ನು ಸಿದ್ಧಪಡಿಸು,” ಎಂದು ಬಾಲಾಕನಿಗೆ ಹೇಳಿದನು.
2 : ಬಾಲಾಕನು ಹಾಗೆಯೇ ಮಾಡಿದನು. ಬಾಲಾಕನು ಮತ್ತು ಬಿಳಾಮನು ಪ್ರತಿ ಬಲಿಪೀಠದ ಮೇಲೆ ಒಂದು ಹೋರಿಯನ್ನು ಹಾಗು ಒಂದು ಟಗರನ್ನು ದಹನಬಲಿದಾನವಾಗಿ ಸಮರ್ಪಿಸಿದರು.
3 : ಬಳಿಕ ಬಿಳಾಮನು ಬಾಲಾಕನಿಗೆ, “ನೀನು ದಹನ ಬಲಿದಾನ ಮಾಡಿದ ಸ್ಥಳದಲ್ಲೇ ಇರು; ನಾನು ಸ್ವಲ್ಪ ದೂರ ಹೋಗಿ ಬರುತ್ತೇನೆ; ಸರ್ವೇಶ್ವರ ನನಗೆ ದರ್ಶನ ಕೊಟ್ಟರೂ ಕೊಡಬಹುದು. ಅವರು ಸೂಚಿಸುವ ಸಂಗತಿಗಳನ್ನು ನಿನಗೆ ತಿಳಿಸುತ್ತೇನೆ,” ಎಂದು ಹೇಳಿ ಮರಗಳಿಲ್ಲದ ಒಂದು ದಿಣ್ಣೆಗೆ ಹೋದನು.
4 : ದೇವರು ಬಿಳಾಮನಿಗೆ ಎದುರಾಗಿ ಬಂದರು. ಬಿಳಾಮನು ಅವರಿಗೆ, “ನಾನು ಏಳು ಬಲಿಪೀಠಗಳನ್ನು ಕಟ್ಟಿಸಿ ಒಂದೊಂದು ಪೀಠದಲ್ಲಿ ಒಂದು ಹೋರಿಯನ್ನೂ ಒಂದು ಟಗರನ್ನೂ ದಹನಬಲಿಯಾಗಿ ಸಮರ್ಪಿಸಿದ್ದೇನೆ,” ಎಂದು ಹೇಳಿದನು.
5 : ಸರ್ವೇಶ್ವರ ಬಿಳಾಮನಿಗೆ ಹೇಳಬೇಕಾದುದನ್ನು ಹೇಳಿ, “ನೀನು ಬಾಲಾಕನ ಬಳಿಗೆ ಹಿಂದಿರುಗಿ ಹೋಗಿ ನಾನು ಹೇಳಿದ್ದನ್ನು ತಿಳಿಸು,” ಎಂದು ಆಜ್ಞಾಪಿಸಿದರು.
6 : ಬಿಳಾಮನು ಬಾಲಾಕನ ಬಳಿಗೆ ಬಂದಾಗ ತಾನು ದಹನಬಲಿಯನ್ನು ಸಮರ್ಪಿಸಿದ್ದ ಪೀಠದ ಹತ್ತಿರವೆ ನಿಂತಿದ್ದನು. ಮೋವಾಬ್ಯರ ಮುಖ್ಯಸ್ಥರೆಲ್ಲರು ಅವನ ಬಳಿಯಲ್ಲೆ ಇದ್ದರು. ಆಗ ಬಿಳಾಮನು ಪದ್ಯರೂಪದಲ್ಲಿ ಹೀಗೆಂದು ನುಡಿದನು:
7 : “ಬಾಲಾಕನು ನನ್ನನ್ನು ಕರೆಸಿದ ಅರಾಮಿನಿಂದ ಮೋವಾಬರಸ ನನ್ನ ಬರಮಾಡಿದ ಮೂಡಲಗುಡ್ಡೆಗಳಿಂದ. ‘ನನ್ನ ಪರವಾಗಿ ಯಕೋಬವಂಶಜರನ್ನು ಶಪಿಸೆಂದ’ ‘ಹಾಕು ಇಸ್ರಯೇಲರಿಗೆ ಧಿಕ್ಕಾರ’ ಎಂದು ಹೇಳಿದ.
8 : ದೇವರೇ ಶಪಿಸಿಲ್ಲದವರನ್ನು ನಾನೇನೆಂತು ಶಪಿಸಲಿ? ಸರ್ವೇಶ್ವರನೇ ಧಿಕ್ಕರಿಸಿಲ್ಲದವರನ್ನು ನಾನೇನೆಂತು ಧಿಕ್ಕರಿಸಲಿ?
9 : ನಾನವರನ್ನು ಕಂಡೆ ಬೆಟ್ಟದ ಶಿಖರದಿಂದ ನೋಡಿದೆನವರನ್ನು ಗುಡ್ಡದೆತ್ತರದಿಂದ.
10 : ಯಕೋಬ್ಯರು ಧೂಳಿನಷ್ಟು ಅಸಂಖ್ಯ ಅವರನ್ನು ಲೆಕ್ಕಿಸಲು ಯಾರಿಂದ ಸಾಧ್ಯ? ಕಾಲ್ಭಾಗವನ್ನಾದರೂ ಹೇಳಲು ಯಾರಿಂದ ಸಾಧ್ಯ? ನಾ ಸಾಯಬೇಕು ಆ ಸಜ್ಜನರು ಸಾಯುವ ರೀತಿ ನನ್ನದಾಗಬೇಕು ಅವರಿಗಾಗುವ ಅಂತ್ಯಗತಿ,”
11 : ಈ ನುಡಿಗಳನ್ನು ಕೇಳಿದ ಬಾಲಾಕನು ಅವನಿಗೆ, “ಇದೇನು ನೀವು ಮಾಡಿದ್ದು? ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಾನು ನಿಮ್ಮನ್ನು ಕರೆದೆ. ಶಪಿಸುವುದಕ್ಕೆ ಬದಲು ಅವರನ್ನು ಆಶೀರ್ವದಿಸಿ ಬಿಟ್ಟಿರಲ್ಲಾ?” ಎಂದು ಹೇಳಿದನು.
12 : ಅದಕ್ಕೆ ಬಿಳಾಮನು “ಸರ್ವೇಶ್ವರ ನುಡಿಸುವುದನ್ನೇ ನಾನು ನುಡಿಯಬೇಕಾಗಿದೆಯಲ್ಲವೆ?” ಎಂದುಬಿಟ್ಟನು.
13 : ಆಗ ಬಾಲಾಕನು, “ದಯಮಾಡಿ ನನ್ನೊಡನೆ ಇನ್ನೊಂದು ಸ್ಥಳಕ್ಕೆ ಬನ್ನಿ. ಅಲ್ಲಿಂದಲೂ ಅವರನ್ನು ನೋಡಬಹುದು. ಆದರೆ ಅವರೆಲ್ಲರೂ ಕಾಣಿಸರು. ಅವರ ಒಂದು ಕೊನೆ ತುಣುಕು ಮಾತ್ರ ಕಾಣಿಸುವುದು.
14 : ಅಲ್ಲಿಂದ ನನ್ನ ಪರವಾಗಿ ಅವರನ್ನು ಶಪಿಸಬೇಕು,” ಎಂದು ಹೇಳಿ ಪಿಸ್ಗಾ ಬೆಟ್ಟದ ತುದಿಯಲ್ಲಿರುವ ‘ಚೋಫೀಮ್ ಬೈಲು’ ಎಂಬ ಸ್ಥಳಕ್ಕೆ ಕರೆದುಕೊಂಡು ಹೋದನು. ಅಲ್ಲಿಯೂ ಏಳು ಬಲಿಪೀಠಗಳನ್ನು ಕಟ್ಟಿಸಿ ಪ್ರತಿ ಒಂದು ಪೀಠದಲ್ಲಿ ಒಂದು ಹೋರಿ ಮತ್ತು ಟಗರನ್ನು ದಹನಬಲಿಯಾಗಿ ಸಮರ್ಪಿಸಿದನು.
15 : ಬಿಳಾಮನು ಅವನಿಗೆ, “ನೀನು ಇಲ್ಲಿ ದಹನಬಲಿಯರ್ಪಿಸುವ ಸ್ಥಳದಲ್ಲಿರು. ನಾನು ಅತ್ತ ಕಡೆಹೋಗಿ (ಸರ್ವೇಶ್ವರನನ್ನು) ಸಂದರ್ಶಿಸಿ ಬರುತ್ತೇನೆ,” ಎಂದು ಹೇಳಿಹೋದನು.
16 : ಸರ್ವೇಶ್ವರ ಬಿಳಾಮನಿಗೆ ದರ್ಶನಕೊಟ್ಟು ಅವನು ಹೇಳಬೇಕಾದುದನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ಹಿಂದಿರುಗಿ ನಾನು ಹೇಳಿದಂತೆಯೇ ತಿಳಿಸು,” ಎಂದರು.
17 : ಬಿಳಾಮನು ಬಾಲಾಕನ ಬಳಿಗೆ ಬಂದಾಗ ಬಾಲಾಕನು ತಾನು ದಹನಬಲಿಯನ್ನು ಸಮರ್ಪಿಸಿದ ಪೀಠದ ಹತ್ತಿರವೇ ನಿಂತಿದ್ದನು. ಮೋವಾಬ್ಯರ ಮುಖ್ಯಸ್ಥರು ಅವನ ಸಂಗಡವೇ ಇದ್ದರು.
18 : ಬಿಳಾಮನು ಪದ್ಯರೂಪವಾಗಿ ಹೀಗೆಂದು ನುಡಿದನು: “ಬಾಲಾಕನೇ, ಕಿವಿಗೊಟ್ಟು ಕೇಳು: ಚಿಪ್ಪೋರನ ಪುತ್ರನೇ, ನನ್ನ ಮಾತನ್ನು ಆಲಿಸು:
19 : ನರಮಾನವರಂತೆ ದೇವರು ಎರಡು ಮಾತಿನವರಲ್ಲ ನರಪುತ್ರರಂತೆ ಮನಸ್ಸನ್ನು ಬದಲಾಯಿಸಿಕೊಳ್ಳುವವರಲ್ಲ. ಆತ ನುಡಿದಂತೆ ನಡೆಯದಿರುತ್ತಾನೋ?
20 : ಆ ಜನರನ್ನು ಆಶೀರ್ವದಿಸಬೇಕೆಂಬ ಆದೇಶ ನನಗಿರುವುದು; ಸರ್ವೇಶ್ವರನಿತ್ತ ಆಶೀರ್ವಾದವನ್ನು ನಾನು ಮಾರ್ಪಡಿಸಲಾಗದು.
21 : ಈ ಯಕೋಬ್ಯರಲ್ಲಿಲ್ಲ ಆಪತ್ತಿನ ಸೂಚನೆ ಈ ಇಸ್ರಯೇಲರಲ್ಲಿಲ್ಲ ವಿಪತ್ತಿನ ಸಾಧ್ಯತೆ ಸರ್ವೇಶ್ವರನೇ ಇಹನು ಅವರ ಸಂಗಡ ದೇವರಾಗಿ ಜಯಘೋಷ ಕೇಳಿಸುತ್ತಿದೆ ಅವರ ಅರಸನಿಗಾಗಿ!
22 : ಅವರನ್ನು ದೇವರೇ ಕರೆದು ತಂದ ಈಜಿಪ್ಟಿನಿಂದ ಅವರಿಗಿದೆ ಕಾಡುಕೋಣದಂಥ ಶಕ್ತಿಸಾಮಥ್ರ್ಯ !
23 : ಯಕೋಬ್ಯರಿಗೆ ವಿರುದ್ಧವಾದ ಶಕುನವಿಲ್ಲ ಇಸ್ರಯೇಲರಿಗೆ ವಿರುದ್ಧವಾದ ತಂತ್ರಮಂತ್ರವಿಲ್ಲ. ತಾನು ಮಾಡುವುದನ್ನು ತತ್ಕಾಲದಲ್ಲೇ ದೇವ ತಿಳಿಸುತ್ತಾನೆ ಯಕೋಬ್ಯರಿಗೆ ಅದನ್ನು ಸೂಚಿಸುತ್ತಾನೆ ಸಮಯೋಚಿತವಾಗಿ ಆ ಇಸ್ರಯೇಲರಿಗೆ.
24 : ಈ ಜನಾಂಗ ಯುವಸಿಂಹದಂತೆ ನಿಂತಿಹುದು ಮೃಗೇಂದ್ರನಂತೆ ಮೃಗ ಕೊಂದು, ರಕ್ತ ಕುಡಿದು, ಮಾಂಸ ತಿಂದು, ತೃಪ್ತಿಹೊಂದದ ಹೊರತು ಆ ಸಿಂಹ ವಿರಮಿಸದು.”
25 : ಆಗ ಬಾಲಾಕನು ಅವನಿಗೆ, “ಹಾಗಾದರೆ ನೀನು ಅವರನ್ನು ಶಪಿಸಲೂ ಬೇಡ, ಆಶೀರ್ವದಿಸಲೂ ಬೇಡ,” ಎಂದನು.
26 : ಅದಕ್ಕೆ ಬಿಳಾಮನು, “ಸರ್ವೇಶ್ವರ ಆಜ್ಞಾಪಿಸಿದ್ದನ್ನೇ ನಾನು ಮಾಡಬೇಕೆಂದು ನಿನಗೆ ಹೇಳಲಿಲ್ಲವೆ?” ಎಂದನು.
27 : ಆ ಬಳಿಕ ಬಾಲಾಕನು, “ಬಾ, ನಿನ್ನನ್ನು ಬೇರೊಂದು ಸ್ಥಳಕ್ಕೆ ಕರೆದುಕೊಂಡು ಹೋಗುತ್ತೇನೆ. ಬಹುಶಃ ಅಲ್ಲಿಯಾದರು ನೀನು ಅವರನ್ನು ಶಪಿಸುವಂತೆ ದೇವರು ಅನುಮತಿಸ ಬಹುದು,” ಎಂದು ಹೇಳಿದನು.
28 : ಅಲ್ಲಿಂದ ಅವನನ್ನು ಪೆಗೋರ್ ಎಂಬ ಬೆಟ್ಟದ ತುದಿಗೆ ಕರೆದುಕೊಂಡು ಹೋದನು. ಆ ಬೆಟ್ಟದ ಕೆಳಗಿರುವ ‘ಯೆಷೀಮೋನ್’ ಎಂಬ ಮರುಭೂಮಿ ಕಾಣಿಸುತ್ತಿತ್ತು.
29 : ಬಿಳಾಮನು ಬಾಲಾಕನಿಗೆ, “ಇಲ್ಲೂ ಏಳು ಬಲಿಪೀಠಗಳನ್ನು ಕಟ್ಟಿಸಿ, ಏಳು ಹೋರಿಗಳನ್ನು ಹಾಗು ಏಳು ಟಗರುಗಳನ್ನು ಸಿದ್ಧಪಡಿಸು,” ಎಂದನು.
30 : ಬಾಲಾಕನು ಅಂತೆಯೇ ಮಾಡಿ ಪ್ರತಿಯೊಂದು ಪೀಠದಲ್ಲೂ ಒಂದು ಹೋರಿಯನ್ನೂ ಒಂದು ಟಗರನ್ನೂ ದಹನಬಲಿಯಾಗಿ ಸಮರ್ಪಿಸಿದನು.

Holydivine