Jeremiah - Chapter 29
Holy Bible

1 : ಜೆರುಸಲೇಮಿನಿಂದ ಬಾಬಿಲೋನಿಗೆ ನೆಬೂಕದ್ನೆಚ್ಚರನು ಸೆರೆ ಒಯ್ದಿದ್ದ ಹಿರಿಯರಿಗೂ ಯಾಜಕರಿಗೂ ಪ್ರವಾದಿಗಳಿಗೂ ಸಕಲ ಜನರಿಗೂ ಪ್ರವಾದಿ ಯೆರೆಮೀಯನು ಜೆರುಸಲೇಮಿನಿಂದ ಒಂದು ಪತ್ರವನ್ನು ಬರೆದನು.
2 : ಅರಸ ಯೆಕೋನ್ಯನು, ರಾಜಮಾತೆಯು, ಕಂಚುಕಿಗಳು, ಜುದೇಯದ ಮತ್ತು ಜೆರುಸಲೇಮಿನ ಪದಾಧಿಕಾರಿಗಳು, ಶಿಲ್ಪಿಗಳು, ಕಮ್ಮಾರರು, ಇವರೆಲ್ಲರು ಜೆರುಸಲೇಮನ್ನು ಬಿಟ್ಟು ಹೋದ ಮೇಲೆ ಈ ಪತ್ರವನ್ನು ಬರೆದನು.
3 : ಅದನ್ನು ಶಾಫಾನನ ಮಗ ಎಲ್ಲಾಸ, ಹಿಲ್ಕೀಯನ ಮಗ ಗೆಮರ್ಯ ಇವರ ಕೈಯಲ್ಲಿ ಕಳಿಸಿದನು. ಇವರು ಜುದೇಯದ ಅರಸ ಚಿದ್ಕೀಯನಿಂದ ಬಾಬಿಲೋನಿಗೆ ಅದರ ಅರಸ ನೆಬೂಕದ್ನೆಚ್ಚರನ ಬಳಿಗೆ ಕಳಿಸಲಾಗಿದ್ದ ರಾಯಭಾರಿಗಳು. ಆ ಪತ್ರದ ಮಾತುಗಳು ಇವು:
4 : “ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರಸ್ವಾಮಿ ಜೆರುಸಲೇಮಿನಿಂದ ಬಾಬಿಲೋನಿಗೆ ಸಾಗಿಸಲಾಗಿರುವ ಸೆರೆಯವರೆಲ್ಲರಿಗೆ ಹೀಗೆಂದು ತಿಳಿಸುತ್ತಾರೆ:
5 : ‘ನೀವು ಮನೆಗಳನ್ನು ಕಟ್ಟಿಕೊಂಡು ಅವುಗಳಲ್ಲಿ ವಾಸಿಸಿರಿ. ತೋಟಗಳನ್ನು ಮಾಡಿಕೊಂಡು ಅವುಗಳ ಫಲಗಳನ್ನು ಅನುಭವಿಸಿರಿ.
6 : ಸಂಸಾರಿಗಳಾಗಿ ಗಂಡು ಹೆಣ್ಣು ಮಕ್ಕಳನ್ನು ಪಡೆಯಿರಿ. ನಿಮ್ಮ ಗಂಡು ಮಕ್ಕಳಿಗೆ ಹೆಣ್ಣುಗಳನ್ನು ತೆಗೆದುಕೊಳ್ಳಿ. ನಿಮ್ಮ ಹೆಣ್ಣುಗಳನ್ನು ಗಂಡುಗಳಿಗೆ ಕೊಡಿ. ಅವರೂ ಗಂಡುಹೆಣ್ಣು ಮಕ್ಕಳನ್ನು ಪಡೆಯಲಿ. ನೀವು ಇರುವಲ್ಲಿಯೇ ವೃದ್ಧಿಯಾಗಿರಿ, ಕಡಿಮೆಯಾಗದಿರಿ.
7 : ನಾನು ಯಾವ ನಗರಕ್ಕೆ ನಿಮ್ಮನ್ನು ಸಾಗಿಸಿದ್ದೇನೋ ಅದರ ಕ್ಷೇಮವನ್ನು ಹಾರೈಸಿ, ಅದಕ್ಕಾಗಿ ಸರ್ವೇಶ್ವರನಾದ ನನ್ನನ್ನು ಪ್ರಾರ್ಥಿಸಿರಿ. ಅದರ ಕ್ಷೇಮವೇ ನಿಮ್ಮ ಕ್ಷೇಮ.
8 : ಇಸ್ರಯೇಲರ ದೇವರೂ ಸೇನಾಧೀಶ್ವರ ಸರ್ವೇಶ್ವರನೂ ಆದ ನಾನು ನಿಮಗೆ ಹೇಳುತ್ತೇನೆ: ನಿಮ್ಮ ಮಧ್ಯೆ ಇರುವ ಪ್ರವಾದಿಗಳಿಗೂ ಶಕುನದವರಿಗೂ ಕಿವಿಗೊಟ್ಟು ಮೋಸಹೋಗದಿರಿ. ನಿಮಗಾಗಿ ಕನಸುಕಂಡು ಹೇಳುವವರನ್ನು ನಂಬಬೇಡಿ
9 : ಅವರು ನನ್ನ ಹೆಸರಿನಲ್ಲಿ ನಿಮಗೆ ಸುಳ್ಳನ್ನೇ ಸಾರುತ್ತಾರೆ. ಅವರು ನನ್ನಿಂದ ಕಳಿಸಿದವರಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ.
10 : “ಸರ್ವೇಶ್ವರ ಹೀಗೆನ್ನುತ್ತಾರೆ: ‘ಬಾಬಿಲೋನಿನ ರಾಜ್ಯ ಎಪ್ಪತ್ತು ವರ್ಷ ಪ್ರಬಲಿಸಿದ ಮೇಲೆ ನಾನು ನಿಮ್ಮನ್ನು ಸಂಧಿಸಿ ಈ ಸ್ಥಳಕ್ಕೆ ಮರಳಿ ಬರಮಾಡುವೆನು. ಈ ಶುಭವಾಕ್ಯವನ್ನು ನಿಮ್ಮ ಮೇಲ್ಮೆಗಾಗಿ ನೆರವೇರಿಸುವೆನು.
11 : ನಿಮಗೆ ಇಂಥ ಗತಿ ಬರಲಿ ಎಂದಲ್ಲ, ನಿರೀಕ್ಷೆ ಇರಲಿ ಎಂದೇ ನಾನು ನಿಮ್ಮ ವಿಷಯದಲ್ಲಿ ಮಾಡಿಕೊಂಡ ಆಲೋಚನೆಗಳನ್ನು ನಾನು ಮಾತ್ರ ಬಲ್ಲೆ. ಅವು ಅಹಿತ ಯೋಜನೆಗಳೇನೂ ಅಲ್ಲ, ಹಿತಕರವಾದ ಯೋಜನೆಗಳೇ.
12 : ನೀವು ನನಗೆ ಮೊರೆಯಿಡುವಿರಿ, ನನ್ನನ್ನು ಪ್ರಾರ್ಥಿಸಲು ಬರುವಿರಿ; ನಾನು ಕಿವಿಗೊಡುವೆನು.
13 : ನೀವು ನನ್ನನ್ನು ಹುಡುಕುವಿರಿ. ಮನಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ.
14 : ಹೌದು, ನಾನು ನಿಮಗೆ ದೊರೆಯುವೆನು. ನಿಮ್ಮನ್ನು ನಿಮ್ಮ ದುರವಸ್ಥೆಯಿಂದ ತಪ್ಪಿಸಿ, ನಿಮ್ಮನ್ನು ಅಟ್ಟಲಾಗಿದ್ದ ಸಮಸ್ತ ದೇಶಗಳಿಂದಲೂ ಸಕಲ ರಾಷ್ಟ್ರಗಳ ಮಧ್ಯೆಯಿಂದಲೂ ಒಟ್ಟುಗೂಡಿಸಿ, ನಿಮ್ಮನ್ನು ಯಾವ ಸ್ಥಳದಿಂದ ಸೆರೆಗೆ ಸಾಗಿಸಿದೆನೋ ಅಲ್ಲಿಗೆ ಮರಳಿ ಬರಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.’
15 : “ನೀವೋ, ‘ಸರ್ವೇಶ್ವರ ನಮಗಾಗಿ ಬಾಬಿಲೋನಿನಲ್ಲೇ ಪ್ರವಾದಿಗಳನ್ನು ಏರ್ಪಡಿಸಿದ್ದಾರೆ’ ಎಂದುಕೊಂಡಿದ್ದೀರಿ.
16 : ಸೇನಾಧೀಶ್ವರ ಸರ್ವೇಶ್ವರಸ್ವಾಮಿ, ದಾವೀದನ ಸಿಂಹಾಸನವನ್ನು ಅಲಂಕರಿಸಿದ್ದ ಅರಸನ ವಿಷಯವಾಗಿ ಹಾಗೂ ನಿಮ್ಮೊಂದಿಗೆ ಸೆರೆಹೋಗದ ನಿಮ್ಮ ಸೋದರರೂ ಈ ನಗರದ ನಿವಾಸಿಗಳೂ ಆದವರ ವಿಷಯವಾಗಿ ಹೇಳಿರುವುದನ್ನು ಕೇಳಿ:
17 : ಇಗೋ, ನಾನು ಅವರ ಮೇಲೆ ಖಡ್ಗ – ಕ್ಷಾಮ-ವ್ಯಾಧಿಗಳನ್ನು ಬರಮಾಡುವೆನು. ಯಾರೂ ತಿನ್ನಲಾಗದಷ್ಟು ಕೆಟ್ಟು ಅಸಹ್ಯವಾದ ಅಂಜೂರದ ಹಣ್ಣಿನ ಗತಿಗೆ ಅವರನ್ನು ಇಳಿಸುವೆನು.
18 : ಖಡ್ಗ-ಕ್ಷಾಮ-ವ್ಯಾಧಿಗಳಿಂದ ಅವರನ್ನು ಹಿಂದಟ್ಟುತ್ತಾ ಲೋಕದ ಎಲ್ಲ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು. ಅವರನ್ನು ಅಟ್ಟಲಾಗಿರುವ ಎಲ್ಲ ರಾಷ್ಟ್ರಗಳಲ್ಲಿ ಅವರು ಶಾಪ, ಪರಿಹಾಸ್ಯ, ದೂಷಣೆಗಳಿಗೆ ಗುರಿಯಾಗುವಂತೆ ಮಾಡುವೆನು.
19 : ಏಕೆಂದರೆ ಅವರು ನನ್ನ ಮಾತುಗಳನ್ನು ಕೇಳದೆ ಹೋದರು. ನನ್ನ ದಾಸರಾದ ಪ್ರವಾದಿಗಳನ್ನು ಪದೇಪದೇ ಅವರ ಬಳಿಗೆ ಕಳಿಸಿದರೂ ಕೇಳಲೊಲ್ಲದೆ ಹೋದರು. ಇದು ಸರ್ವೇಶ್ವರನಾದ ನನ್ನ ನುಡಿ.
20 : ಜೆರುಸಲೇಮಿನಿಂದ ಬಾಬಿಲೋನಿಗೆ ಸಾಗಿಸಲಾಗಿರುವ ಸೆರೆಯವರೇ, ನೀವೆಲ್ಲರು ಸರ್ವೇಶ್ವರನಾದ ನನ್ನ ವಾಕ್ಯಕ್ಕೆ ಕಿವಿಗೊಡಿ.’
21 : “ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ತಮ್ಮ ಹೆಸರೆತ್ತಿ ಸುಳ್ಳನ್ನು ಸಾರುವ ಕೊಲಾಯನ ಮಗ ಅಹಾಬ ಮತ್ತು ಮಾಸೇಯನ ಮಗ ಚಿದ್ಕೀಯ ಇವರ ವಿಷಯವಾಗಿ ಹೀಗೆನ್ನುತ್ತಾರೆ: ‘ಇಗೋ ನಾನು ಇವರನ್ನು ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನ ಕೈಗೆ ಬಿಡುವೆನು. ಅವನು ನಿಮ್ಮ ಕಣ್ಣೆದುರಿಗೆ ಇವರನ್ನು ಕೊಲ್ಲಿಸುವನು.
22 : ಇವರಿಗೆ ಒದಗಿದ ಗತಿಯನ್ನು ನೆನೆದು, ಬಾಬಿಲೋನಿಯದಲ್ಲಿ ಸೆರೆಯಾಗಿರುವ ಯೆಹೂದ್ಯರೆಲ್ಲರು ಯಾರನ್ನಾದರು ಶಪಿಸುವಾಗ, ‘ಬಾಬಿಲೋನಿಯದ ಅರಸ ಬೆಂಕಿಯಲ್ಲಿ ಸುಟ್ಟು ಭಸ್ಮಮಾಡಿದ ಚಿದ್ಕೀಯನ ಹಾಗು ಅಹಾಬನ ಗತಿಯನ್ನೆ ಸರ್ವೇಶ್ವರ ನಿನಗೂ ತರಲಿ’ ಎಂದು ಶಾಪ ಹಾಕುವರು.
23 : ಏಕೆಂದರೆ ಇವರು ಇಸ್ರಯೇಲಿನಲ್ಲಿ ದುರಾಚಾರವನ್ನು ನಡೆಸಿದರು. ನೆರೆಯವರ ಹೆಂಡಿರಲ್ಲಿ ವ್ಯಭಿಚಾರ ಮಾಡಿದರು. ನಾನು ಆಜ್ಞಾಪಿಸಿದ ಮಾತುಗಳನ್ನು ನನ್ನ ಹೆಸರೆತ್ತಿಯೇ ಸುಳ್ಳಾಗಿ ಸಾರಿದರು. ಇದೆಲ್ಲ ನನಗೆ ಗೊತ್ತಿದೆ, ಇದಕ್ಕೆಲ್ಲಾ ನಾನೇ ಸಾಕ್ಷಿ’ ಎನ್ನುತ್ತಾರೆ ಸರ್ವೇಶ್ವರ.”
24 : ನೆಹೆಲಾಮ್ಯನಾದ ಶೆಮಾಯನಿಗೆ ಹೀಗೆ ತಿಳಿಸಬೇಕೆಂದು ಸರ್ವೇಶ್ವರ ಯೆರೆಮೀಯನಿಗೆ ಅಪ್ಪಣೆಕೊಟ್ಟರು:
25 : “ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಇಂತೆನ್ನುತ್ತಾರೆ – ‘ನೀನು ಜೆರುಸಲೇಮಿನಲ್ಲಿರುವ ಜನರೆಲ್ಲರಿಗೂ ಯಾಜಕನಾದ ಮಾಸೇಯನ ಮಗ ಚೆಫನ್ಯನಿಗೂ ಸಮಸ್ತ ಯಾಜಕರಿಗೂ ನಿನ್ನ ಹೆಸರಿನಲ್ಲೆ ಪತ್ರ ಬರೆದು ಕಳಿಸಿರುವೆ. ಚೆಫನ್ಯನಿಗೆ ನೀನು ಹೀಗೆಂದು ಬರೆದಿರುವೆ:
26 : ‘ಸರ್ವೇಶ್ವರ ನಿನ್ನನ್ನು ಯೆಹೋಯಾದನ ಸ್ಥಾನದಲ್ಲಿ ದೇವಾಲಯದ ಯಾಜಕನನ್ನಾಗಿ ನೇಮಿಸಿದ್ದಾರೆ. ಯಾವನಾದರು ಮೈದುಂಬಿ ಪ್ರವಾದಿಯಾಗಿ ನಟಿಸಿದ್ದೇ ಆದರೆ ಅವನನ್ನು ಕೊಳಕ್ಕೆಹಾಕಿ, ಕೊರಳಿಗೆ ಕವೆಯೊಡ್ಡುವ ಅಧಿಕಾರವನ್ನು ನಿನಗೆ ವಹಿಸಿದ್ದಾರೆ.
27 : ಹೀಗಿರುವಲ್ಲಿ, ನಿಮ್ಮ ಮಧ್ಯೆ ಪ್ರವಾದಿಯಾಗಿ ನಟಿಸುವ ಅನಾತೋತಿನವನಾದ ಯೆರೆಮೀಯನನ್ನು ನೀನು ಖಂಡಿಸಲಿಲ್ಲವೇಕೆ?
28 : ಅವನು ಬಾಬಿಲೋನಿನಲ್ಲಿರುವ ನಮಗೆ ಪತ್ರ ಕಳಿಸಿ, ‘ಪರದೇಶ ವಾಸವು ನಿಮಗೆ ದೀರ್ಘವಾಗುವುದು, ನೀವು ಮನೆಗಳನ್ನು ಕಟ್ಟಿಕೊಂಡು ಅವುಗಳಲ್ಲಿ ವಾಸಿಸಿರಿ, ತೋಟಗಳನ್ನು ಮಾಡಿಕೊಂಡು ಫಲವನ್ನು ಅನುಭವಿಸಿರಿ’ ಎಂದು ತಿಳಿಸಿದ್ದಾನೆ.”
29 : ಯಾಜಕನಾದ ಚೆಫನ್ಯನು ಈ ಪತ್ರವನ್ನು ನನ್ನ ಮುಂದೆ ಓದಿದನು.
30 : “ಸರ್ವೇಶ್ವರ ನನಗೆ ಹೀಗೆಂದು ಅಪ್ಪಣೆ ಮಾಡಿದ್ದಾರೆ:
31 : ಸೆರೆಯಲ್ಲಿ ಇರುವ ಎಲ್ಲರಿಗೆ ಹೀಗೆಂದು ಹೇಳಿಕಳಿಸು - ನೆಹೆಲಾಮ್ಯನಾದ ಶೆಮಾಯನ ವಿಷಯದಲ್ಲಿ ಸರ್ವೇಶ್ವರ ಇಂತೆನ್ನುತ್ತಾರೆ: ನಾನು ಕಳಿಸದೆ ಇದ್ದರೂ ಶೆಮಾಯನು ನಿಮಗೆ ಪ್ರವಾದನೆ ಮಾಡಿ ಸುಳ್ಳನ್ನು ನಂಬುವಂತೆ ಮಾಡಿದ್ದಾನೆ.
32 : ಈ ಕಾರಣ, ಇಗೋ, ನಾನು ಆ ನೆಹೆಲಾಮ್ಯನಾದ ಶೆಮಾಯನನ್ನು ಮತ್ತು ಅವನ ಸಂತತಿಯವರನ್ನು ದಂಡಿಸುವೆನು. ಈ ಜನರ ಮಧ್ಯೆ ಅವನಿಗೆ ಯಾವ ಸಂತಾನವೂ ಇರದು. ಜನರಿಗೆ ‘ನಾನು ಮಾಡಬೇಕೆಂದಿರುವೆ ಒಳಿತನ್ನು ಅವನು ನೋಡದೆ ಹೋಗುವನು. ಏಕೆಂದರೆ ಅವನು ನನಗೆ ವಿರುದ್ದ ಪ್ರಚೋದನೆಯ ಮಾತನ್ನು ಆಡಿದ್ದಾನೆ. ಇದು ಸರ್ವೇಶ್ವರನಾದ ನನ್ನ ನುಡಿ’.”

Holydivine