Jeremiah - Chapter 25
Holy Bible

1 : ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಮೊದಲನೇ ವರ್ಷದಲ್ಲಿ, ಅಂದರೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಮೊದಲನೇ ವರ್ಷದಲ್ಲಿ, ಪ್ರವಾದಿ ಯೆರೆಮೀಯನಿಗೆ ಯೆಹೂದ್ಯರೆಲ್ಲರ ವಿಷಯವಾಗಿ ದೈವೋಕ್ತಿಯೊಂದು ಉಂಟಾಯಿತು.
2 : ಅದನ್ನು ಯೆರೆಮೀಯನು ಯೆಹೂದ್ಯರೆಲ್ಲರಿಗೂ ಸಮಸ್ತ ಜೆರುಸಲೇಮಿನವರಿಗೂ ಸಾರಿದನು:
3 : “ಆಮೋನನ ಮಗನೂ ಜುದೇಯದ ಅರಸನೂ ಆದ ಯೋಷೀಯನ ಆಳ್ವಿಕೆಯ ಹದಿಮೂರನೇ ವರ್ಷದಿಂದ ಈ ದಿನದವರೆಗೆ, ಅಂದರೆ ಕಳೆದ ಇಪ್ಪತ್ತು ಮೂರು ವರ್ಷಗಳಿಂದ ಸರ್ವೇಶ್ವರಸ್ವಾಮಿ ತಮ್ಮ ವಾಕ್ಯವನ್ನು ನನಗೆ ತಿಳಿಸಿದ್ದಾರೆ. ಅದನ್ನು ನಾನು ನಿಮಗೆ ತಡಮಾಡದೆ ಪ್ರಕಟಿಸುತ್ತಾ ಬಂದಿದ್ದೇನೆ. ಆದರೆ ನೀವು ಅದಕ್ಕೆ ಕಿವಿಗೊಡಲಿಲ್ಲ.
4 : ಸರ್ವೇಶ್ವರ ತಮ್ಮ ದಾಸರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ನಿರಂತರವಾಗಿ ಕಳಿಸುತ್ತಿದ್ದರು. ಆದರೂ ನೀವು ಗಮನಿಸಲಿಲ್ಲ; ಕಿವಿಗೊಡಲೂ ಇಲ್ಲ.
5 : ಅವರು ತಂದ ಸಮಾಚಾರ ಇದು: ‘ನೀವೆಲ್ಲರು ನಿಮ್ಮ ನಿಮ್ಮ ದುರ್ಮಾರ್ಗದಿಂದಲೂ ದುಷ್ಕøತ್ಯಗಳಿಂದಲೂ ಹಿಂದಿರುಗಬೇಕು. ಆಗ, ಸರ್ವೇಶ್ವರ ನಿಮಗೂ ನಿಮ್ಮ ಪೂರ್ವಜರಿಗೂ ಶಾಶ್ವತ ಸೊತ್ತಾಗಿ ಅನುಗ್ರಹಿಸಿದ ನಾಡಿನಲ್ಲಿ ನೀವು ನೆಲೆಗೊಳ್ಳುವಿರಿ.
6 : ಬೇರೆ ದೇವರುಗಳನ್ನು ಹಿಂಬಾಲಿಸಿ, ಅವರನ್ನು ಸೇವಿಸಿ ಪೂಜಿಸಬೇಡಿ. ನಿಮ್ಮ ಕೈ ಕೃತಿಗಳಾದ ವಿಗ್ರಹಗಳನ್ನು ಆರಾಧಿಸಿ, ನನ್ನನ್ನು ರೇಗಿಸಬೇಡಿ. ಆಗ ನಾನು ನಿಮಗೆ ಯಾವ ಕೇಡನ್ನೂ ಮಾಡೆನು.’
7 : ಆದರೆ ಸರ್ವೇಶ್ವರಸ್ವಾಮಿಯೇ ಹೇಳುವಂತೆ ನೀವು ಅವರಿಗೆ ಕಿವಿಗೊಡದೆ ನಿಮ್ಮ ಕೈಕೃತಿಗಳಾದ ವಿಗ್ರಹಗಳಿಂದ ಅವರನ್ನು ಕೆಣಕಿ ನಿಮಗೇ ಕೇಡನ್ನು ತಂದುಕೊಂಡಿದ್ದೀರಿ.
8 : “ಆದುದರಿಂದ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ಈ ನುಡಿಯನ್ನು ಕೇಳಿರಿ:
9 : “ನೀವು ನನ್ನ ಮಾತನ್ನು ಕೇಳದ ಕಾರಣ ನಾನು ಉತ್ತರ ಭಾಗದ ರಾಷ್ಟ್ರಗಳನ್ನೆಲ್ಲ ಕರೆಯಿಸುವೆನು. ಬಾಬಿಲೋನಿನ ಅರಸ ಹಾಗು ನನ್ನ ಸೇವಕನಾದ ನೆಬೂಕದ್ನೆಚ್ಚರನನ್ನೂ ಬರಮಾಡುವೆನು. ಅವರು ಈ ನಾಡಿನ, ಇದರ ನಿವಾಸಿಗಳ, ಮತ್ತು ಸುತ್ತ ಮುತ್ತಲಿನ ನಾಡುಗಳ ಮೇಲೂ ಬೀಳುವರು. ಹೀಗೆ ಇವುಗಳನ್ನು ತೀರ ಹಾಳುಮಾಡುವೆನು. ನಿರಂತರ ಪರಿಹಾಸ್ಯಕ್ಕೂ ಪರಿವಿನಾಶಕ್ಕೂ ಇವನ್ನು ಗುರಿಪಡಿಸುವೆನು.
10 : ಇವುಗಳಲ್ಲಿ ಸಂಭ್ರಮ ಸಡಗರಗಳ ಧ್ವನಿಯಾಗಲಿ, ವಧುವರರ ಸ್ವರವಾಗಲಿ ಏಳದಂತೆ ಮಾಡುವೆನು. ಬೀಸುಕಲ್ಲಿನ ಸದ್ದನ್ನು ಅಡಗಿಸುವೆನು. ದೀಪಕ್ಕೆ ಎಣ್ಣೆ ಇಲ್ಲದಂತೆ ಮಾಡುವೆನು.
11 : ಈ ನಾಡೆಲ್ಲ ಹಾಳಾಗಿ ಇದನ್ನು ನೋಡುವವರು ನಿಬ್ಬೆರಗಾಗುವರು. ಇದರ ಜನರು ಎಪ್ಪತ್ತು ವರ್ಷ ಕಾಲ ಬಾಬಿಲೋನಿನ ಅರಸನಿಗೆ ಗುಲಾಮರಾಗಿ ಇರುವರು.
12 : ಆ ಅವಧಿಯ ತರುವಾಯ ನಾನು ಬಾಬಿಲೋನನ್ನೂ ಅದರ ಅರಸನನ್ನೂ ದಂಡಿಸುವೆನು. ಅದರ ದ್ರೋಹದ ನಿಮಿತ್ತ ಆ ಬಾಬಿಲೋನಿನ ನಾಡನ್ನು ನಿತ್ಯ ವಿನಾಶಕ್ಕೆ ಗುರಿಪಡಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.
13 : ನಾನು ಈ ನಾಡಿನ ವಿಷಯದಲ್ಲಿ ನುಡಿದುದೆಲ್ಲವನ್ನು, ಅಂದರೆ ಯೆರೆಮೀಯನ ಮುಖಾಂತರ ಸಕಲ ರಾಷ್ಟ್ರಗಳ ವಿರುದ್ಧ ನುಡಿದಿರುವ ಹಾಗು ಪ್ರವಾದನೆಗಳ ಗ್ರಂಥದಲ್ಲಿ ಬರೆದುದೆಲ್ಲವನ್ನು ಅದರ ಮೇಲೆ ಬರಮಾಡುವೆನು
14 : ಅನೇಕ ರಾಷ್ಟ್ರಗಳೂ ಮಹಾರಾಜರೂ ಅವರನ್ನು ಗುಲಾಮರನ್ನಾಗಿಸಿಕೊಳ್ಳುವರು. ಅವರ ಕೃತ್ಯಗಳಿಗೂ ಕೈಕೆಲಸಗಳಿಗೂ ತಕ್ಕಂತೆ ಅವರಿಗೆ ಮುಯ್ಯಿ ತೀರಿಸುವೆನು.”
15 : ಇಸ್ರಯೇಲರ ದೇವರಾದ ಸರ್ವೇಶ್ವರಸ್ವಾಮಿ ನನಗೆ ಹೀಗೆಂದರು: “ಕೋಪವೆಂಬ ಮದ್ಯದಿಂದ ತುಂಬಿರುವ ಈ ಪಾತ್ರೆಯನ್ನು ನೀನು ನನ್ನ ಕೈಯಿಂದ ತೆಗೆದುಕೊ. ಯಾವ ರಾಷ್ಟ್ರಗಳ ಬಳಿಗೆ ನಿನ್ನನ್ನು ಕಳಿಸುತ್ತೇನೋ ಆ ರಾಷ್ಟ್ರಗಳೆಲ್ಲ ಈ ಪಾತ್ರೆಯಿಂದ ಕುಡಿಯುವಂತೆ ಮಾಡು.
16 : ಅವರು ಅದನ್ನು ಕುಡಿದು ಓಲಾಡುವರು, ನಾನು ಕಳಿಸುವ ಖಡ್ಗದಿಂದ ಹುಚ್ಚುಚ್ಚಾಗುವರು.”
17 : ನಾನು ಸರ್ವೇಶ್ವರನ ಕೈಯಿಂದ ಆ ಪಾತ್ರೆಯನ್ನು ತೆಗೆದುಕೊಂಡೆ. ಸರ್ವೇಶ್ವರ ಯಾವ ರಾಷ್ಟ್ರಗಳ ಬಳಿಗೆ ನನ್ನನ್ನು ಕಳಿಸಿದರೋ, ಆ ಎಲ್ಲ ರಾಷ್ಟ್ರಗಳು ಅದರಿಂದ ಕುಡಿಯುವಂತೆ ಮಾಡಿದೆ.
18 : ಜೆರುಸಲೇಮಿಗೂ ಜುದೇಯದ ನಗರಗಳಿಗೂ, ಅರಸರುಗಳಿಗೂ ಕುಡಿಸಿದೆ. ಇದರಿಂದ ಅವರು ಹಾಳಾಗಿ ಇಂದು ಪರಿಹಾಸ್ಯಕ್ಕೂ ಶಾಪಕ್ಕೂ ಗುರಿಯಾಗುವಂತಾಯಿತು.
19 : ಆ ಕೊಡದಿಂದ ಕುಡಿದ ಮತ್ತಿತರರು ಇವರು: ಈಜಿಪ್ಟಿನ ಅರಸ ಫರೋಹನು ಅವನ ಸೇವಕರು, ಮಂತ್ರಿಗಳು, ಎಲ್ಲ ಪ್ರಜೆಗಳು ಮತ್ತು ಅಲ್ಲಿನ ವಿದೇಶೀಯರು;
20 : ಊಚ್ ನಾಡಿನ ಎಲ್ಲ ಅರಸರು, ಫಿಲಿಷ್ಟಿಯ ದೇಶದ ಎಲ್ಲ ಅರಸರು, ಅಷ್ಕೆಲೋನ್, ಗಾಜಾ, ಎಕ್ರೋನ್, ಅಷ್ಟೋದಿನ ಶೇಷ, ಈ ಪ್ರಾಂತ್ಯಗಳ ಎಲ್ಲ ಅರಸರು;
21 : ಎದೋಮ್, ಮೋವಾಬ್, ಅಮ್ಮೋನ್ ಜನರೆಲ್ಲರು;
22 : ಟೈರ್ ಮತ್ತು ಸಿದೋನ್ ಇವುಗಳ ಅರಸರೆಲ್ಲರು;
23 : ಸಮುದ್ರದ ಆಚಿನ ಕರಾವಳಿಯ ಅರಸರು, ದೆದಾನ್ಯರು, ತೇಮಾ, ಬೂಜ್ ನಾಡಿನವರು, ಮುಂದಲೆಗೂದಲು ಕತ್ತರಿಸಿಕೊಳ್ಳುವವರೆಲ್ಲರು;
24 : ಅರಬೀಯದ ಎಲ್ಲ ಅರಸರು, ಅರಣ್ಯವಾಸಿಗಳಾದ ಮಿಶ್ರ ಜಾತಿಯ ಎಲ್ಲ ನಾಯಕರು;
25 : ಏಲಾಮಿನ ಎಲ್ಲ ಅರಸರು, ಮೇದ್ಯರ ಎಲ್ಲ ಅರಸರು;
26 : ದೂರ - ಹತ್ತಿರವಿರುವ ಉತ್ತರ ನಾಡಿನ ಎಲ್ಲ ಅರಸರು, ಲೋಕದ ಸಕಲ ರಾಜ್ಯಗಳು. ಇವರೆಲ್ಲರು ಕುಡಿದ ಮೇಲೆ ಬಾಬಿಲೋನಿನ ಅರಸನು ಕುಡಿಯುವನು.
27 : ಸರ್ವೇಶ್ವರಾ: “ನೀನು ಅವರಿಗೆ ಹೀಗೆಂದು ಹೇಳು: ‘ಇಸ್ರಯೇಲಿನ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರ ಹೇಳಿದ್ದಾರೆ - ನೀವು ಕುಡಿಯಬೇಕು, ಕುಡಿದು ಕಕ್ಕಬೇಕು. ನಾನು ಕಳಿಸುವ ಖಡ್ಗಕ್ಕೆ ತುತ್ತಾಗಿ ಬೀಳಬೇಕು, ಬಿದ್ದು ಏಳಬಾರದು.’
28 : ಒಂದು ವೇಳೆ ಅವರು ಆ ಪಾತ್ರೆಯನ್ನು ನಿನ್ನ ಕೈಯಿಂದ ತೆಗೆದುಕೊಳ್ಳಲಿಕ್ಕೂ ಕುಡಿಯಲಿಕ್ಕೂ ಒಪ್ಪದಿದ್ದರೆ ಅವರಿಗೆ ಹೀಗೆಂದು ಹೇಳು – ‘ಸರ್ವಶಕ್ತ ಸರ್ವೇಶ್ವರನ ನುಡಿ ಇವು: ನೀವು ಕುಡಿಯಲೇಬೇಕು;
29 : ಇಗೋ, ನನ್ನ ಹೆಸರುಗೊಂಡಿರುವ ನಗರದಲ್ಲಿ ಬಾಧಿಸಲು ಪ್ರಾರಂಭಿಸುತ್ತೇನೆ. ನೀವು ಆ ದಂಡನೆಗೆ ತಪ್ಪಿಸಿಕೊಳ್ಳುವಿರೊ? ಆಗುವುದೇ ಇಲ್ಲ. ಏಕೆಂದರೆ ಭೂನಿವಾಸಿಗಳೆಲ್ಲರಿಗೆ ವಿರದ್ಧವಾಗಿ ಖಡ್ಗವನ್ನು ಬರಮಾಡುವೆನು. ಇದು ಸರ್ವಶಕ್ತ ಸರ್ವೇಶ್ವರನ ನುಡಿ.’
30 : “(ಯೆರೆಮೀಯನೇ), ನೀನು ಪ್ರವಾದಿಸುತ್ತಾ ಅವರಿಗೆ ಈ ಮಾತುಗಳನ್ನು ಹೇಳು: ‘ಸರ್ವೇಶ್ವರ ಗರ್ಜಿಸುವನು ಮೇಲಣ ಲೋಕದಿಂದ ದನಿಗೈವನು ತನ್ನ ಘನ ನಿವಾಸದಿಂದ ಗಟ್ಟಿಯಾಗಿ ಕೂಗುವನು ತನ್ನ ಹುಲ್ಲುಗಾವಲಿನ ಮಂದೆಯ ವಿರುದ್ಧ ಕೂಗಾಡುವನು ದ್ರಾಕ್ಷೆಯ ಹಣ್ಣನ್ನು ತುಳಿಯುವವರಂತೆ ಭೂನಿವಾಸಿಗಳೆಲ್ಲರು ಭಯಭ್ರಾಂತರಾಗುವಂತೆ.
31 : ಆತನ ಶಬ್ದ ವ್ಯಾಪಿಸುವುದು ಭೂಮಿಯ ಕಟ್ಟಕಡೆಗೆ ಸರ್ವೇಶ್ವರನೆ ಆಪಾದನೆ ಹೊರಿಸುವನು ಜನಾಂಗಗಳ ಮೇಲೆ ನರಮಾನವರನ್ನೆಲ್ಲ ಗುರಿಮಾಡುವನು ತೀರ್ಪಿಗೆ ದುರುಳರನ್ನು ತುತ್ತಾಗಿಸುವನು ಕತ್ತಿಗೆ - ಇದು ಸರ್ವೇಶ್ವರನ ನುಡಿ’.”
32 : ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: ‘ಹರಡುವುದು ಕೇಡು ಜನಾಂಗದಿಂದ ಜನಾಂಗಕ್ಕೆ ಏಳುವುದು ಚಂಡಮಾರುತ ಲೋಕದ ಕಟ್ಟಕಡೆಯಿಂದ’.”
33 : ಆ ದಿನದಲ್ಲಿ ಸರ್ವೇಶ್ವರನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಬಿದ್ದಿರುವರು. ಅವರಿಗಾಗಿ ಯಾರೂ ಗೋಳಾಡರು, ಅವರನ್ನು ಯಾರೂ ಒಟ್ಟುಗೂಡಿಸರು, ಯಾರೂ ಹೂಣರು. ಭೂಮಿಯ ಮೇಲೆ ಗೊಬ್ಬರವಾಗಿ ಬಿದ್ದಿರುವರು.
34 : ‘ಕುರಿಗಾಹಿಗಳೇ, ಅರಚಿಗೋಳಾಡಿ ಮೇಷಪಾಲರೇ, ಬೂದಿಯಲ್ಲಿ ಬಿದ್ದು ಹೊರಳಾಡಿ. ನಿಮ್ಮನ್ನು ವಧಿಸುವ ಕಾಲ ಬಂದಿದೆ ನಾನು ನಿಮ್ಮನ್ನು ಭಂಗಪಡಿಸುವೆ. ನೀವು ಚೂರುಚೂರಾಗುವಿರಿ ಒಡೆದು ಹೋದ ಅಂದವಾದ ಪಾತ್ರೆಯಂತೆ.
35 : ಕುರಿಗಾಹಿಗಳು ಓಡಿಹೋಗುವುದಕ್ಕೆ ದಾರಿ ಸಿಕ್ಕದು ಮೇಷಪಾಲರು ತಲೆತಪ್ಪಿಸಿಕೊಳ್ಳಲಿಕ್ಕೆ ಆಸ್ಪದ ದೊರಕದು.
36 : ಅಕಟಕಟಾ, ಕುರಿಗಾಹಿಗಳ ಕೂಗಾಟ ಮೇಷಪಾಲರ ಕಿರುಚಾಟ ಸರ್ವೇಶ್ವರನಿಂದಲೆ ಆ ಹುಲ್ಲುಗಾವಲಿನ ವಿನಾಶ !
37 : ಆತನ ಕೋಪಾಗ್ನಿಯ ನಿಮಿತ್ತ ಹಾಯಾದ ಗೋಮಾಳಗಳ ಧ್ವಂಸ !
38 : ಗುಹೆಬಿಟ್ಟು ಬಂದ ಸಿಂಹದಂತೆ ಬಂದಿರುವನಾತ. ಆತನ ಕೋಪಾಗ್ನಿಯ ನಿಮಿತ್ತ ತುಂಡರಿಸುವಾ ಖಡ್ಗದ ಪ್ರಯುಕ್ತ ಅವರ ನಾಡಾಗಿದೆ ಬೆಂಗಾಡು.

Holydivine