Jeremiah - Chapter 18
Holy Bible

1 : ಸರ್ವೇಶ್ವರಸ್ವಾಮಿ ನನಗೆ:
2 : “ನೀನೆದ್ದು ಕುಂಬಾರನ ಮನೆಗೆ ಇಳಿದುಹೋಗು, ಅಲ್ಲೇ ನನ್ನ ನುಡಿಯನ್ನು ನಿನಗೆ ಕೇಳಮಾಡುತ್ತೇನೆ,” ಎಂದು ತಿಳಿಸಿದರು.
3 : ಅಂತೆಯೇ ನಾನು ಕುಂಬಾರನ ಮನೆಗೆ ಹೋದೆ. ಅಲ್ಲಿ ಆ ಕುಂಬಾರನು ತಿರುಗುತ್ತಿದ್ದ ಚಕ್ರದ ಮೇಲೆ ಕೆಲಸ ಮಾಡುತ್ತಿದ್ದ.
4 : ಅವನು ಜೇಡಿಮಣ್ಣಿನಿಂದ ಮಾಡುತ್ತಿದ್ದ ಒಂದು ಪಾತ್ರೆ ಕೆಟ್ಟು ಹೋಗುತ್ತಿದ್ದಾಗಲೆಲ್ಲ ಅದನ್ನು ಮತ್ತೆ ತನಗೆ ಸರಿತೋಚಿದ ಹಾಗೆ ಹೊಸ ಪಾತ್ರೆಯನ್ನಾಗಿ ಮಾಡುತ್ತಿದ್ದ.
5 : ಆಗ ಸರ್ವೇಶ್ವರ ನನಗೆ ಅನುಗ್ರಹಿಸಿದ ಸಂದೇಶ:
6 : “ಇಸ್ರಯೇಲಿನ ವಂಶಜರೇ, ಈ ಕುಂಬಾರನು ಮಾಡಿದಂತೆ ನಾನು ನಿಮ್ಮನ್ನು ಮಾಡಕೂಡದೇ? ಇಸ್ರಯೇಲಿನ ಮನೆತನದವರೇ, ಜೇಡಿಮಣ್ಣು ಕುಂಬಾರನ ಕೈಯಲ್ಲಿ ಹೇಗೋ ಹಾಗೆಯೇ ನೀವು ನನ್ನ ಕೈಯಲ್ಲಿ ಇದ್ದೀರಿ.
7 : ಒಂದು ಜನಾಂಗವನ್ನು ಅಥವಾ ಒಂದು ರಾಜ್ಯವನ್ನು ಕಿತ್ತು, ಕೆಡವಿ, ನಾಶಪಡಿಸಿ ಎಂದು ನಾನು ಎಂದಾದರೂ ಅಪ್ಪಣೆ ಕೊಡಲು ಸಾಧ್ಯ.
8 : ದಂಡನೆಗೆ ನಿರ್ಣಯಿಸಲಾದ ಆ ಜನಾಂಗದವರು ತಮ್ಮ ಕೆಟ್ಟತನವನ್ನು ಬಿಟ್ಟು ಹಿಂತಿರುಗಿದ್ದೇ ಆದರೆ ನಾನು ಬರಮಾಡಬೇಕೆಂದಿದ್ದ ಆ ವಿಪತ್ತನ್ನು ನಾನು ಮನಮರುಗಿ ಬರಮಾಡದಿರುವೆನು.
9 : ಹಾಗೆಯೇ ಒಂದು ಜನಾಂಗವನ್ನು ಅಥವಾ ಒಂದು ರಾಜ್ಯವನ್ನು ನೆಟ್ಟು ಕಟ್ಟಬೇಕೆಂದು ನಾನು ಎಂದಾದರೂ ಅಪ್ಪಣೆಕೊಡಲು ಸಾಧ್ಯ.
10 : ಅದು ನನ್ನ ಮಾತನ್ನು ಕೇಳದೆ ನನ್ನ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ್ದೇ ಆದರೆ ನಾನು ಮನಸ್ಸನ್ನು ಬದಲಾಯಿಸುವೆನು. ಅದಕ್ಕೆ ಮಾಡಬೇಕೆಂದಿದ್ದ ಒಳಿತನ್ನು ಮಾಡದಿರುವೆನು.
11 : ಈಗ ನೀನು ಜುದೇಯದ ಹಾಗು ಜೆರುಸಲೇಮಿನ ಜನರಿಗೆ ಈ ಸಂದೇಶವನ್ನು ತಿಳಿಸು – ‘ಸರ್ವೇಶ್ವರ ಹೀಗೆನ್ನುತ್ತಾರೆ: ನಾನು ನಿಮಗೆ ವಿರುದ್ಧ ವಿಪತ್ತನ್ನು ಕಲ್ಪಿಸುತ್ತಿದ್ದೇನೆ. ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ದುರ್ಮಾರ್ಗವನ್ನು ಬಿಟ್ಟು ಹಿಂದಿರುಗಲಿ, ನಡತೆಯನ್ನೂ ಕೃತ್ಯಗಳನ್ನೂ ಸರಿಪಡಿಸಿಕೊಳ್ಳಲಿ.’
12 : “ಆದರೆ ಅವರು, ‘ಇದೆಲ್ಲ ಹೇಳಿ ಏನು ಪ್ರಯೋಜನವಿಲ್ಲ; ನಾವು ನಮ್ಮ ಆಲೋಚನೆ ಪ್ರಕಾರ ನಡೆಯುತ್ತೇವೆ. ನಮ್ಮಲ್ಲಿ ಪ್ರತಿಯೊಬ್ಬರು ನಮ್ಮ ನಮ್ಮ ಹೃದಯದ ಚಟದಂತೆಯೇ ನಡೆಯುತ್ತೇವೆ’ ಎಂದು ಹೇಳುವರು.”
13 : ಸರ್ವೇಶ್ವರ ಇಂತೆಂದರು: “ಇಂಥ ಸುದ್ದಿಯನ್ನು ಯಾರು ಕೇಳಿದ್ದಾರೆಂದು ಅನ್ಯಜನಾಂಗಗಳಲ್ಲೆ ವಿಚಾರಿಸಿರಿ. ಇಸ್ರಯೇಲೆಂಬ ಯುವತಿ ಕೇವಲ ಅಸಹ್ಯಕಾರ್ಯವನ್ನೆ ಎಸಗಿದ್ದಾಳೆ.
14 : ಲೆಬನೋನಿನ ಹಿಮವು ಅರಣ್ಯದಾ ಶಿಖರದಿಂದ ತಪ್ಪುವುದುಂಟೆ? ಅಲ್ಲಿಂದ ಇಳಿದು ಹರಿಯುವ ತೊರೆಯ ನೀರು ಬತ್ತುವುದುಂಟೆ?
15 : ನನ್ನ ಜನರಾದರೋ ನನ್ನನ್ನು ಮರೆತು ವ್ಯರ್ಥವಿಗ್ರಹಗಳಿಗೆ ಧೂಪಾರತಿ ಎತ್ತಿದ್ದುಂಟು. ಸನಾತನ ಸನ್ಮಾರ್ಗಗಳಲ್ಲಿ ಮುಗ್ಗರಿಸಿ ಸರಿಯಲ್ಲದ ಸೀಳುದಾರಿಯಲ್ಲಿ ಅಲೆದದ್ದುಂಟು.
16 : ಆದ್ದರಿಂದ ನಾಡನ್ನು ಭಯಾನಕವಾಗಿ ಸುವರು ಹಾದು ಹೋಗುವವರೆಲ್ಲ ಬೆಬ್ಬೆರಗಾಗಿ ತಲೆದೂಗುವರು, ಸಿಳ್ಳು ಹಾಕಿ ಅದನ್ನು ಪರಿಹಾಸ್ಯ ಮಾಡುವರು.
17 : ಶತ್ರುಗಳು ಮೇಲೆ ಬಿದ್ದು ದಾಳಿಮಾಡಲು ಬಂದಾಗ ಮೂಡಣ ಬಿರುಗಾಳಿ ಮುಂದೆ ಧೂಳಿ ಮಣ್ಣಿನಂತೆ ನನ್ನ ಜನರನ್ನು ದಿಕ್ಕುಪಾಲಾಗಿ ಚದರಿಸುವೆನು. ಅವರ ಆ ವಿಪತ್ತಿನ ದಿನದಂದು ಅವರತ್ತ ಮುಖತಿರುಗಿಸದೆ ಬೆನ್ನು ಮಾಡುವೆನು.”
18 : ಆಗ ಜನರು, “ಬನ್ನಿ, ಈ ಯೆರೆವಿೂಯನ ವಿರುದ್ಧ ಒಳಸಂಚುಮಾಡೋಣ. ಧರ್ಮೋಪದೇಶಕ್ಕೆ ಯಾಜಕರಿದ್ದಾರೆ. ಮಂತ್ರಾಲೋಚನೆಗೆ ಜ್ಞಾನಿಗಳಿದ್ದಾರೆ. ದೈವೋಕ್ತಿಗೆ ಪ್ರವಾದಿಯ ಕೊರತೆ ಎಂದಿಗೂ ಇಲ್ಲ. ಬನ್ನಿ, ಇವನ ಬಾಯಿ ಬಡಿಯೋಣ. ಇವನ ಯಾವ ಮಾತಿಗೂ ನಾವು ಕಿವಿಗೊಡಬೇಕಾಗಿಲ್ಲ,” ಎಂದುಕೊಂಡರು.
19 : ಯೆರೆವಿೂಯ: “ಸರ್ವೇಶ್ವರಾ, ನನ್ನ ಕಡೆಗೆ ಕಿವಿಗೊಡಿ. ನನ್ನೊಡನೆ ವಾದಿಸುವವರ ಮಾತನ್ನು ಗಮನಿಸಿ ನೋಡಿ.
20 : ಮಾಡಿದ ಮೇಲಿಗೆ ಕೇಡಿನ ಪ್ರತಿಫಲವೆ? ನನ್ನ ಪ್ರಾಣ ಹಿಡಿಯಲು ಗುಂಡಿಯನ್ನು ತೋಡಿದ್ದಾರೆ. ಅವರ ಮೇಲೆ ನಿಮಗಿದ್ದ ಕೋಪಾವೇಶವನ್ನು ಶಮನಗೊಳಿಸಲು ನಿಮ್ಮ ಮುಂದೆ ನಿಂತು ನಾನು ವಿನಂತಿಸಿದ್ದನ್ನು ನೆನಪಿಗೆ ತಂದುಕೊಳ್ಳಿ.
21 : ಆದರೆ ಈಗ ಅವರ ಮಕ್ಕಳು ಕ್ಷಾಮಕ್ಕೆ ಗುರಿಯಾಗಲಿ, ಕತ್ತಿಗೆ ತುತ್ತಾಗಲಿ. ಅವರ ಮಡದಿಯರು ವಿಧವೆಯರಾಗಲಿ, ಮಕ್ಕಳನ್ನು ಕಳೆದುಕೊಳ್ಳಲಿ, ಅವರ ಗಂಡಂದಿರು ಸತ್ತು ಬೀಳಲಿ. ಯುವಕರು ಕಾಳಗ-ಕತ್ತಿಗೆ ಬಲಿಯಾಗಲಿ.
22 : ಕಳ್ಳಕಾಕರ ಗುಂಪು ಫಕ್ಕನೆ ಅವರ ಮೇಲೆ ಬೀಳಲಿ. ಅವರ ಮನೆಮಠಗಳಿಂದ ಕಿರಿಚಾಟ ಕೇಳಿಬರಲಿ. ಅವರು ನನ್ನನ್ನು ಕೆಡವಲು ಗುಂಡಿಯನ್ನು ತೋಡಿದ್ದಾರೆ. ನನ್ನ ಕಾಲುಗಳಿಗೆ ಉರುಲನ್ನು ಗುಟ್ಟಾಗಿ ಒಡ್ಡಿದ್ದಾರೆ.
23 : ಸರ್ವೇಶ್ವರಾ, ನನ್ನನ್ನು ಕೊಲ್ಲಲು ಅವರು ಮಾಡಿಕೊಂಡಿರುವ ಸಂಚು ನಿಮಗೆ ತಿಳಿದಿದೆ. ಅವರ ಅಪರಾಧವನ್ನು ಕ್ಷಮಿಸಬೇಡಿ, ಅವರ ಪಾಪವನ್ನು ಅಳಿಸಬೇಡಿ, ಅದು ನಿಮ್ಮ ಕಣ್ಣೆದುರಿಗೇ ಇರಲಿ. ಅವರು ನಿಮ್ಮ ಮುಂದೆ ಎಡವಿಬೀಳಲಿ. ನಿಮ್ಮ ಕೋಪ ವ್ಯಕ್ತವಾಗುವಾಗ ಅವರಿಗೆ ತಕ್ಕುದನ್ನು ಮಾಡಿ.”

Holydivine