Leviticus - Chapter 7
Holy Bible

1 : “ಪ್ರಾಯಶ್ಚಿತ್ತ ಬಲಿನಿಯಮಗಳು ಹೀಗಿವೆ: ಈ ಬಲಿ ಮಹಾಪರಿಶುದ್ಧವಾದುದು.
3 : ದಹನ ಬಲಿಪ್ರಾಣಿಯನ್ನು ವಧಿಸಿದ ಸ್ಥಳದಲ್ಲೇ ಈ ಪ್ರಾಯಶ್ಚಿತ್ತ ಬಲಿಪ್ರಾಣಿಯನ್ನು ವಧಿಸಬೇಕು. ಯಾಜಕನು ಅದರ ರಕ್ತವನ್ನು ಬಲಿಪೀಠದ ಸುತ್ತಲು ಚಿಮುಕಿಸಬೇಕು.
3 : ಅವನು ಅದರ ಕೊಬ್ಬನ್ನೆಲ್ಲ, ಅಂದರೆ ಬಾಲದ ಕೊಬ್ಬನ್ನು, ಕರುಳಿನ ಸುತ್ತಲಿರುವ ಕೊಬ್ಬನ್ನು,
4 : ಮೂತ್ರಪಿಂಡಗಳನ್ನು, ಅದರ ಮೇಲಿರುವ ಕೊಬ್ಬನ್ನು ಹಾಗು ಕಾಳಿಜದ ಉತ್ತಮ ಭಾಗವನ್ನು ತೆಗೆದು
5 : ಬಲಿಪೀಠದ ಮೇಲೆ ಸರ್ವೇಶ್ವರನಿಗೆ ಹೋಮಮಾಡಬೇಕು. ಇದು ಪ್ರಾಯಶ್ಚಿತ್ತ ಬಲಿ.
6 : ಹೋಮಶೇಷವನ್ನು ಯಾಜಕರಲ್ಲಿ ಗಂಡಸರೆಲ್ಲರು ತಿನ್ನಬಹುದು; ಅದು ಮಹಾ ಪರಿಶುದ್ಧವಾದುದರಿಂದ ಪವಿತ್ರ ಸ್ಥಳದೊಳಗೇ ಅದನ್ನು ತಿನ್ನಬೇಕು.
7 : ಈ ಪ್ರಾಯಶ್ಚಿತ್ತ ಹಾಗು ದೋಷಪರಿಹಾರಕ ಬಲಿ ಹೋಮಶೇಷಗಳಿಗೆ ಇರುವ ವಿಧಿ ಒಂದೇ; ಈ ಹೋಮಶೇಷಗಳು ದೋಷಪರಿಹಾರವನ್ನು ಮಾಡಿಸುವ ಯಾಜಕನಿಗೆ ಸಲ್ಲತಕ್ಕವು.
8 : ಯಾರಾದರು ದಹನಬಲಿಗಾಗಿ ಒಂದು ಪ್ರಾಣಿಯನ್ನು ತಂದಾಗ, ಅದರ ಚರ್ಮ ಆ ಪಶುವನ್ನು ಸಮರ್ಪಿಸುವ ಯಾಜಕನಿಗೆ ಸೇರಬೇಕು.
9 : ಒಲೆಯಲ್ಲಾಗಲಿ, ಕಬ್ಬಿಣದ ಹಂಚಿನಲ್ಲಾಗಲಿ, ಬಾಂಡ್ಲಿಯಲ್ಲಾಗಲಿ, ಬೇಯಿಸಿದ ನೈವೇದ್ಯ ಪದಾರ್ಥವೆಲ್ಲ ಅದನ್ನು ಸಮರ್ಪಿಸುವ ಯಾಜಕನಿಗೆ ಸೇರತಕ್ಕದ್ದು.
10 : ಆದರೆ ಎಣ್ಣೆ ಹೊಯ್ದ ಹಿಟ್ಟನ್ನಾಗಲಿ, ಬರಿ ಹಿಟ್ಟನ್ನಾಗಲಿ, ಯಾರಾದರು ನೈವೇದ್ಯಕ್ಕಾಗಿ ತಂದಾಗ ಅದನ್ನು ಆರೋನನ ವಂಶದವರೆಲ್ಲರು ಸಮವಾಗಿ ಅನುಭವಿಸತಕ್ಕದ್ದು.
11 : “ಶಾಂತಿಸಮಾಧಾನದ ಬಲಿನಿಯಮಗಳು ಇವು:
12 : ಯಾರಾದರು ಕೃತಜ್ಞತೆಯನ್ನು ಸಲ್ಲಿಸುವುದಕ್ಕಾಗಿ ಶಾಂತಿಸಮಾಧಾನದ ಬಲಿಯನ್ನು ಸರ್ವೇಶ್ವರನಿಗೆ ಅರ್ಪಿಸಲಾಶಿಸಿದರೆ ಆ ಬಲಿಪ್ರಾಣಿಯ ಸಮೇತ ಎಣ್ಣೆಮಿಶ್ರವಾದ ಹುಳಿಯಿಲ್ಲದ ಹೋಳಿಗೆಗಳನ್ನು, ಎಣ್ಣೆಹಾಕಿದ ಹುಳಿಯಿಲ್ಲದ ಕಡುಬುಗಳನ್ನು ಹಾಗು ಎಣ್ಣೆಯಿಂದ ಪೂರ್ತಿಯಾಗಿ ತೋಯಿಸಿದ ಗೋದಿಹಿಟ್ಟಿನ ಹೋಳಿಗೆಗಳನ್ನು ಸಮರ್ಪಿಸಬೇಕು.
13 : ಅದೂ ಅಲ್ಲದೆ ಹುಳಿರೊಟ್ಟಿಗಳನ್ನು ಕೂಡ ಸಮರ್ಪಿಸಬೇಕು.
14 : ಸಮರ್ಪಿಸುವ ಪ್ರತಿಯೊಂದು ವಿಧವಾದ ಪದಾರ್ಥಗಳಲ್ಲಿಯೂ ಒಂದೊಂದನ್ನು ಸರ್ವೇಶ್ವರನಿಗೋಸ್ಕರ ಪ್ರತ್ಯೇಕಿಸಬೇಕು. ಅವು ಪೀಠಕ್ಕೆ ಬಲಿಪ್ರಾಣಿಯ ರಕ್ತವನ್ನು ಚಿಮುಕಿಸಿದ ಯಾಜಕನಿಗೆ ಸೇರಬೇಕು.
15 : ಕೃತಜ್ಞತಾಬಲಿ ಪ್ರಾಣಿಯ ಮಾಂಸವನ್ನು ಬಲಿ ನಡೆದ ದಿನದಲ್ಲೇ ಭೋಜನ ಮಾಡಬೇಕು. ಮರುದಿನದವರೆಗೆ ಕಿಂಚಿತ್ತನ್ನೂ ಉಳಿಸಬಾರದು.
16 : “ಯಾರಾದರು ಹರಕೆಯನ್ನು ಸಲ್ಲಿಸುವುದಕ್ಕಾಗಿ ಅಥವಾ ಸ್ವೇಚ್ಛೆಯಿಂದ ಅಂಥ ಬಲಿಯನ್ನು ಒಪ್ಪಿಸಿದರೆ ಅದನ್ನು ಸಮರ್ಪಿಸಿದ ದಿನದಲ್ಲೇ ಅದರ ಮಾಂಸವನ್ನು ಪೂರ್ತಿಯಾಗಿ ಊಟ ಮಾಡಬೇಕಾಗಿಲ್ಲ; ಮಿಕ್ಕದ್ದನ್ನು ಮರುದಿನ ತಿನ್ನಬಹುದು.
17 : ಆದರೆ ಮೂರನೆಯ ದಿನದವರೆಗೆ ಉಳಿದಿದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
18 : ಆ ಬಲಿಪ್ರಾಣಿಯ ಮಾಂಸದಲ್ಲಿ ಸ್ವಲ್ಪವನ್ನಾದರೂ ಮೂರನೆಯ ದಿನದಲ್ಲಿ ಊಟ ಮಾಡಿದ್ದೇ ಆದರೆ ಆ ಬಲಿ ಸ್ವೀಕೃತವಾಗುವುದಿಲ್ಲ. ಅರ್ಪಿಸಿದವನಿಗೆ ಅದರಿಂದ ಫಲವೇನೂ ದೊರಕುವುದಿಲ್ಲ. ಅದು ಹೇಯವಾದುದರಿಂದ ಅದನ್ನು ತಿಂದವನು ಆ ಪಾಪದ ಫಲವನ್ನು ಅನುಭವಿಸಬೇಕು.
19 : “ಶುದ್ಧವಾದ ವಸ್ತುವಿಗೆ ಸೋಂಕಿದ ಮಾಂಸವನ್ನು ಬೆಂಕಿಯಲ್ಲಿ ಸುಟ್ಟುಬಿಡಬೇಕು.
20 : “ಶುದ್ಧವಾಗಿರುವವರೆಲ್ಲರು ಬಲಿಪ್ರಾಣಿಯ ಮಾಂಸವನ್ನು ತಿನ್ನಬಹುದು.
21 : “ಯಾರಾದರು ಅಶುದ್ಧರಾಗಿದ್ದು ಸರ್ವೇಶ್ವರನಿಗೆ ಸಮರ್ಪಿತವಾದ ಶಾಂತಿ ಸಮಾಧಾನದ ಬಲಿಪ್ರಾಣಿಯ ಮಾಂಸವನ್ನು ತಿಂದರೆ ಅಂಥವರನ್ನು ತಮ್ಮ ಕುಲದಿಂದ ತೆಗೆದುಹಾಕಬೇಕು.
22 : ಯಾರಿಗಾದರು ಮನುಷ್ಯ ದೇಹದಿಂದುಂಟಾದ ಅಶುದ್ಧ ವಸ್ತು, ಅಶುದ್ಧ ಮೃಗ, ನಿಷಿದ್ಧವಸ್ತು, ಇವುಗಳಲ್ಲಿ ಯಾವುದಾದರೂ ಸೋಂಕಿದರೆ ಅಂಥವರು ಸರ್ವೇಶ್ವರನಿಗೆ ಸಮರ್ಪಿತವಾದ ಬಲಿಪ್ರಾಣಿಯ ಮಾಂಸವನ್ನು ತಿನ್ನಕೂಡದು; ತಿಂದರೆ ಕುಲದಿಂದ ಬಹಿಷ್ಕøತರಾಗಬೇಕು”.
23 : ಸರ್ವೇಶ್ವರ ಮೋಶೆಗೆ ಇಂತೆಂದರು: “ನೀನು ಇಸ್ರಯೇಲರಿಗೆ ಹೀಗೆ ಆಜ್ಞೆ ಮಾಡು: ನೀವು ಎತ್ತು, ಕುರಿ ಹಾಗು ಆಡುಗಳ ಕೊಬ್ಬನ್ನು ತಿನ್ನಬಾರದು.
24 : ಅಂಥ ಪ್ರಾಣಿ ರೋಗದಿಂದ ಸತ್ತರೆ, ಇಲ್ಲವೆ ಕಾಡುಮೃಗದಿಂದ ಕೊಲ್ಲಲ್ಪಟ್ಟರೆ ಅದರ ಕೊಬ್ಬನ್ನು ಬೇರೆ ಕೆಲಸಕ್ಕೆ ಉಪಯೋಗಿಸಿ ಕೊಳ್ಳಬಹುದು; ಆದರೆ ಎಷ್ಟುಮಾತ್ರಕ್ಕೂ ತಿನ್ನಬಾರದು.
25 : ಜನರು ಸರ್ವೇಶ್ವರನಿಗೆ ಹೋಮ ಮಾಡುವಂಥ ಪ್ರಾಣಿಪಶುಗಳ ಕೊಬ್ಬನ್ನು ಯಾರಾದರು ತಿಂದರೆ ಅವರು ಕುಲದಿಂದ ಬಹಿಷ್ಕøತರಾಗಬೇಕು.
26 : ಪಕ್ಷಿಯದಾಗಲಿ, ಪ್ರಾಣಿಯದಾಗಲಿ ಯಾವ ರಕ್ತವನ್ನೂ ನೀವು ಎಲ್ಲಿಯೂ ಊಟಮಾಡಬಾರದು.
27 : ರಕ್ತವನ್ನು ಭೋಜನ ಮಾಡಿದವನು ಕುಲದಿಂದ ಬಹಿಷ್ಕøತನಾಗಬೇಕು.”
28 : ಮೋಶೆಗೆ ಸರ್ವೇಶ್ವರ ಹೇಳಿದ್ದೇನೆಂದರೆ:
29 : “ಇಸ್ರಯೇಲರಿಗೆ ಹೀಗೆಂದು ಆಜ್ಞಾಪಿಸು: ಶಾಂತಿಸಮಾಧಾನದ ಬಲಿಪ್ರಾಣಿಯನ್ನು ಸರ್ವೇಶ್ವರನಿಗೆ ಸಮರ್ಪಿಸುವವನು ಆ ಬಲಿದ್ರವ್ಯಗಳಲ್ಲಿ ಸರ್ವೇಶ್ವರನಿಗೆ ಸಲ್ಲಬೇಕಾದುದನ್ನು ತಂದು ಕೊಡಬೇಕು.
30 : ಸರ್ವೇಶ್ವರನಿಗೆ ಹೋಮರೂಪವಾಗಿ ಸಮರ್ಪಿಸಬೇಕಾದುದನ್ನು ಅಂದರೆ ಪ್ರಾಣಿಯ ಕೊಬ್ಬನ್ನು ತನ್ನ ಕೈಯಿಂದಲೆ ಕೊಡಬೇಕು. ಅದರೊಂದಿಗೆ ಅದರ ಎದೆಯ ಭಾಗವನ್ನು ನೈವೇದ್ಯರೂಪವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿಯೆತ್ತಲು ತಂದು ಸಮರ್ಪಿಸಬೇಕು.
31 : ಯಾಜಕನು ಆ ಕೊಬ್ಬನ್ನು ಬಲಿಪೀಠದ ಮೇಲೆ ಹೋಮಮಾಡಬೇಕು. ಎದೆಯ ಭಾಗ ಆರೋನನಿಗೂ ಅವನ ವಂಶಜರಿಗೂ ಸೇರಬೇಕು.
32 : ನೀವು ಶಾಂತಿಸಮಾಧಾನದ ಬಲಿದ್ರವ್ಯಗಳಲ್ಲಿ ಪ್ರಾಣಿಯ ಬಲತೊಡೆಯನ್ನು ಯಾಜಕನಿಗಾಗಿ ಪ್ರತ್ಯೇಕಿಸಿ ಕೊಡಬೇಕು.
33 : ಆರೋನನ ವಂಶಜರಲ್ಲಿ ಯಾವನು ಆ ಬಲಿಪ್ರಾಣಿಯ ರಕ್ತವನ್ನು ಹಾಗು ಕೊಬ್ಬನ್ನು ಅರ್ಪಿಸುತ್ತಾನೋ, ಆ ಪ್ರಾಣಿಯ ಬಲತೊಡೆ ಅವನ ಪಾಲಿಗೆ ಸೇರಬೇಕು.
34 : ಶಾಂತಿಸಮಾಧಾನದ ಬಲಿಪ್ರಾಣಿಯ ಮಾಂಸದಲ್ಲಿ ನೈವೇದ್ಯರೂಪವಾಗಿ ಆರತಿಯೆತ್ತುವ ಎದೆಯ ಭಾಗವನ್ನು ಮತ್ತು ಯಾಜಕನಿಗಾಗಿ ಪ್ರತ್ಯೇಕಿಸುವ ತೊಡೆಯನ್ನು ಸರ್ವೇಶ್ವರ ಇಸ್ರಯೇಲ್ ಜನರಿಂದ ತೆಗೆದುಕೊಂಡು ಮಹಾಯಾಜಕ ಆರೋನನಿಗೂ ಅವನ ವಂಶಜರಿಗೂ ಕೊಟ್ಟು, ಅದು ಶಾಶ್ವತ ನಿಯಮವಾಗಿ ಅವರಿಗೆ ಸಲ್ಲುವಂತೆ ಮಾಡಿದ್ದಾರೆ.
35 : ಸರ್ವೇಶ್ವರನಿಗೆ ಹೋಮರೂಪವಾಗಿ ಅರ್ಪಿತವಾದ ದ್ರವ್ಯಗಳಲ್ಲಿ ಇವೇ ಆರೋನನಿಗೂ ಅವನ ವಂಶಜರಿಗೂ ಶಾಶ್ವತವಾಗಿ ಸಲ್ಲತಕ್ಕ ಭಾಗಗಳು.” ಮೋಶೆ ಅವರನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಯಾಜಕ ಸೇವಾವೃತ್ತಿಗಾಗಿ ಪ್ರತಿಷ್ಠಾಪಿಸಿದ ದಿನದಂದೇ ಇದು ನೇಮಕವಾಯಿತು.
36 : ಇಸ್ರಯೇಲರು ಇವುಗಳನ್ನು ಯಾಜಕರಿಗೆ ಸಲ್ಲಿಸಬೇಕೆಂದು ಸರ್ವೇಶ್ವರ ಅವರನ್ನು ಮೋಶೆಯ ಮುಖಾಂತರ ಪ್ರತಿಷ್ಠಿಸಿ ಅಭಿಷೇಕಿಸಿದ ದಿನದಲ್ಲೇ ವಿಧಿಸಿದರು.
37 : ದಹನಬಲಿದಾನ, ಧಾನ್ಯನೈವೇದ್ಯ, ದೋಷಪರಿಹಾರಕಬಲಿ, ಪ್ರಾಯಶ್ಚಿತ್ತಬಲಿ, ಯಾಜಕ ಅಭ್ಯಂಜನಬಲಿ, ಶಾಂತಿಸಮಾಧಾನಬಲಿ ಎಂಬ ಇವುಗಳ ವಿಷಯದಲ್ಲಿ ಮೇಲೆ ಹೇಳಿದ್ದೇ ಬಲಿದಾನ ವಿಧಿಗಳು.
38 : ಸರ್ವೇಶ್ವರ ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಈ ಆಜ್ಞೆಗಳನ್ನು ಕೊಟ್ಟರು. ಸೀನಾಯಿ ಮರುಭೂಮಿಯಲ್ಲಿ ಇಸ್ರಯೇಲರು ಅರ್ಪಿಸಬೇಕಾದುದನ್ನು ಸರ್ವೇಶ್ವರನಿಗೆ ಅರ್ಪಿಸಬೇಕೆಂದು ಮೋಶೆ ಆಜ್ಞಾಪಿಸಿ ಮೇಲ್ಕಂಡ ವಿಧಿಗಳನ್ನು ಕೊಟ್ಟನು.

Holydivine