Leviticus - Chapter 27
Holy Bible

1 : ಇಸ್ರಯೇಲರಿಗೆ ಈ ಕೆಳಕಂಡಂತೆ ಆಜ್ಞಾಪಿಸಬೇಕೆಂದು ಸರ್ವೇಶ್ವರಸ್ವಾಮಿ ಮೋಶೆಗೆ ತಿಳಿಸಿದರು:
2 : “ಯಾರಾದರು ನರಮಾನವರ ಪ್ರಾಣವನ್ನು ಸರ್ವೇಶ್ವರನಿಗೆ ಹರಕೆಮಾಡಿ ಪ್ರತಿಷ್ಠಿಸಿದ್ದರೆ, ಅವುಗಳನ್ನು ಬಿಡಿಸುವುದಕ್ಕೆ ದೇವರ ಸೇವೆಗೆ ನೇಮಕವಾದ ಬೆಳ್ಳಿನಾಣ್ಯದ ಮೇರೆಗೆ ನೀವು ಅವರಿಂದ ಕೊಡಿಸಬೇಕಾದ ಈಡಿನ ವಿವರ ಹೀಗಿದೆ:
3 : ಇಪ್ಪತ್ತರಿಂದ ಅರವತ್ತು ವರ್ಷ ವಯಸ್ಸುಳ್ಳ ಪುರುಷನ ಪರವಾಗಿ ಐವತ್ತು ಬೆಳ್ಳಿನಾಣ್ಯಗಳನ್ನು ಹಾಗು
4 : ಸ್ತ್ರೀಯ ಪರವಾಗಿ ಮೂವತ್ತು ಬೆಳ್ಳಿನಾಣ್ಯಗಳನ್ನು ಕೊಡಿಸಬೇಕು.
5 : ಐದರಿಂದ ಇಪ್ಪತ್ತು ವರ್ಷ ವಯಸ್ಸುಳ್ಳ ಪುರುಷನ ಪರವಾಗಿ ಇಪ್ಪತ್ತು ಬೆಳ್ಳಿ ನಾಣ್ಯಗಳನ್ನು ಹಾಗು ಸ್ತ್ರೀಯ ಪರವಾಗಿ ಹತ್ತು ಬೆಳ್ಳಿನಾಣ್ಯಗಳನ್ನು ಕೊಡಿಸಬೇಕು.
6 : ಒಂದು ತಿಂಗಳ ವಯಸ್ಸಿನಿಂದ ಐದು ವರ್ಷ ವಯಸ್ಸಿನ ಹುಡುಗನ ಪರವಾಗಿ ಐದು ಬೆಳ್ಳಿನಾಣ್ಯಗಳನ್ನು ಹಾಗು ಹುಡುಗಿಯ ಪರವಾಗಿ ಮೂರು ಬೆಳ್ಳಿನಾಣ್ಯಗಳನ್ನೂ ಕೊಡಿಸಬೇಕು.
7 : ಅರವತ್ತು ವರ್ಷ ವಯಸ್ಸು ದಾಟಿದ ಪುರುಷನ ಪರವಾಗಿ ಹದಿನೈದು ಬೆಳ್ಳಿ ನಾಣ್ಯಗಳನ್ನು ಹಾಗು ಸ್ತ್ರೀಯ ಪರವಾಗಿ ಹತ್ತು ಬೆಳ್ಳಿನಾಣ್ಯಗಳನ್ನು ಕೊಡಿಸಬೇಕು.
8 : ಯಾವನಾದರು ಬಡವನಾಗಿದ್ದು ನೇಮಕವಾದ ನಾಣ್ಯವನ್ನು ಕೊಡಲಾಗದೆ ಹೋದರೆ ಅವನು ಹರಕೆಮಾಡಿ ಪ್ರತಿಷ್ಠಿಸಿದ ವ್ಯಕ್ತಿಯನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಹರಕೆ ಮಾಡಿದವನ ಸ್ಥಿತಿಗಳಿಗೆ ತಕ್ಕಂತೆ ಅವನು ತೆರಬೇಕಾದ ನಾಣ್ಯ ಇಷ್ಟೆಂದು ನಿಗದಿಮಾಡಬೇಕು.
9 : “ಸರ್ವೇಶ್ವರನಿಗೆ ಸಮರ್ಪಿಸಬಹುದಾದ ಪ್ರಾಣಿಯನ್ನು ಯಾವನಾದರೂ ಹರಕೆಮಾಡಿ ಪ್ರತಿಷ್ಟಿಸಿದ್ದರೆ ಅದು ದೇವರ ಸೊತ್ತಾಗಿರಬೇಕು.
10 : ಅದನ್ನು ಬದಲಾಯಿಸಕೂಡದು, ಕೆಟ್ಟದ್ದಕ್ಕೆ ಬದಲಾಗಿ ಒಳ್ಳೆಯದನ್ನು, ಒಳ್ಳೆಯದಕ್ಕೆ ಬದಲಾಗಿ ಕೆಟ್ಟದ್ದನ್ನು ಹಾಗು ಒಂದಕ್ಕೆ ಬದಲಾಗಿ ಮತ್ತು ಒಂದನ್ನು ಕೊಡಕೂಡದು. ಅವನು ಗೊತ್ತು ಮಾಡಿದ ಪ್ರಾಣಿಗೆ ಬದಲಾಗಿ ಬೇರೊಂದು ಪ್ರಾಣಿಯನ್ನು ಪ್ರತ್ಯೇಕಿಸಿಟ್ಟಿದ್ದರೆ ಮೊದಲನೆಯ ಪ್ರಾಣಿ ಹಾಗು ಅದಕ್ಕೆ ಬದಲಾಗಿ ಇಟ್ಟ ಪ್ರಾಣಿ ಎರಡೂ ಸರ್ವೇಶ್ವರನಿಗೆ ಸೇರಬೇಕು.
11 : ಸರ್ವೇಶ್ವರನಿಗೆ ಸಮರ್ಪಿಸಕೂಡದ ಬೇರೆ ಜಾತಿಯ ಪ್ರಾಣಿಯನ್ನು ಪ್ರತಿಷ್ಠಿಸಿದ್ದರೆ ಅದನ್ನು ಯಾಜಕನ ಮುಂದೆ ನಿಲ್ಲಿಸಬೇಕು.
12 : ಅದು ಒಳ್ಳೆಯದೋ ಕೆಟ್ಟದ್ದೋ ಎಂದು ಯಾಜಕನು ನೋಡಿ ಅದರ ಬೆಲೆ ಇಷ್ಟೆಂದು ನಿರ್ಧರಿಸಬೇಕು. ಯಾಜಕನು ನಿರ್ಧರಿಸಿದ ಬೆಲೆಯೇ ಅಂತಿಮವಾದುದು.
13 : ಹರಕೆ ಮಾಡುವವನು ಬಿಡಿಸಿಕೊಳ್ಳಬೇಕು ಎಂದಿದ್ದರೆ ಅದರ ಕ್ರಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು.
14 : “ಯಾವನಾದರು ತನ್ನ ಮನೆಯನ್ನು ಸರ್ವೇಶ್ವರನಿಗೆ ವಿೂಸಲಾಗಿ ಪ್ರತಿಷ್ಠಿಸಿದ್ದರೆ ಯಾಜಕನು ಅದು ಉತ್ತಮವಾದ ಮನೆಯೋ ಅಲ್ಲವೋ ಎಂದು ಪರೀಕ್ಷಿಸಿ ಬೆಲೆಯನ್ನು ಗೊತ್ತು ಮಾಡಬೇಕು; ಯಾಜಕನು ಗೊತ್ತುಮಾಡಿದ ಬೆಲೆಯನ್ನು ಬದಲಾಯಿಸುವಂತಿಲ್ಲ.
15 : ಹರಕೆ ಮಾಡಿದವನು ಆ ಮನೆಯನ್ನು ಬಿಡಿಸಿಕೊಳ್ಳಬೇಕೆಂದಿದ್ದರೆ ಅದರ ಕ್ರಯದ ಜೊತೆಗೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು. ಆಗ ಆ ಮನೆ ಅವನದಾಗುವುದು.
16 : “ಯಾವನಾದರು ಪಿತ್ರಾರ್ಜಿತ ಭೂಮಿಯಲ್ಲಿ ಒಂದು ಭಾಗವನ್ನು ಸರ್ವೇಶ್ವರನಿಗೆ ಹರಕೆಮಾಡಿ ಪ್ರತಿಷ್ಠಿಸಿದ್ದರೆ ಅದಕ್ಕೆ ಬಿತ್ತನೆಬೀಜ ಎಷ್ಟು ಬೇಕಾಗುತ್ತದೆ ಎಂಬುದರ ಆಧಾರದ ಮೇಲೆ ನೀವು ಅದರ ಬೆಲೆಯನ್ನು ನಿರ್ಣಯಿಸಬೇಕು. ಇಪ್ಪತ್ತು ಕಿಲೋಗ್ರಾಂ ಜವೆಗೋದಿಯನ್ನು ಬಿತ್ತಬಹುದಾದಂಥ ಭೂಮಿಗೆ ಐವತ್ತು ಬೆಳ್ಳಿ ನಾಣ್ಯಗಳನ್ನು ಕೊಡಬೇಕಾಗುವುದು.
17 : ಅವನು ಜೂಬಿಲಿ ಸಂವತ್ಸರದಿಂದ ಆ ಹೊಲವನ್ನು ಪ್ರತಿಷ್ಠಿಸಿದ್ದರೆ ಈ ಕ್ರಯ ಅಂತಿಮವಾಗಿರುವುದು.
18 : ಜೂಬಿಲಿ ಸಂವತ್ಸರದ ತರುವಾಯ ಭೂಮಿಯನ್ನು ಹರಕೆ ಮಾಡಿದರೆ, ಮುಂದಿನ ಜೂಬಿಲಿ ಸಂವತ್ಸರಕ್ಕೆ ಕಳೆಯಬೇಕಾದ ವರ್ಷಗಳ ಸಂಖ್ಯೆಯ ಮೇರೆಗೆ ಅದರ ಬೆಲೆಯನ್ನು ಕಮ್ಮಿ ಮಾಡಬೇಕು.
19 : ಹರಕೆಮಾಡಿದವನು ಅದನ್ನು ಬಿಡಿಸಿಕೊಳ್ಳಲಾಶಿಸಿದರೆ, ಅದರ ಕ್ರಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು. ಆಗ ಆ ಹೊಲ ಅವನದಾಗುವುದು.
20 : ತಾನು ಅದನ್ನು ಬಿಡಿಸಿ ಕೊಳ್ಳದೆ ಮತ್ತೊಬ್ಬನಿಗೆ ಮಾರಿದರೆ ಮುಂದೆ ಅದನ್ನು ಬಿಡಿಸಿಕೊಳ್ಳುವ ಹಕ್ಕು ಇರುವುದಿಲ್ಲ.
21 : ಬಿಡುಗಡೆಯಾಗುವ ಜೂಬಿಲಿ ಸಂವತ್ಸರದಲ್ಲಿ ಆ ಹೊಲ ಸರ್ವೇಶ್ವರನ ಸ್ವಕೀಯ ಹೊಲವಾದಂತೆ ಅವರ ಸೊತ್ತಾಗಿಯೇ ಇರಬೇಕು. ಅದು ಯಾಜಕರ ವಶದಲ್ಲಿ ಇರಬೇಕು.
22 : “ಯಾವನಾದರು ಕ್ರಯಕ್ಕೆ ತೆಗೆದುಕೊಂಡ ಹೊಲವನ್ನು, ಅಂದರೆ ಪಿತ್ರಾರ್ಜಿತ ಭೂಮಿಗೆ ಸೇರದಿರುವ ಹೊಲವನ್ನು ಹರಕೆ ಮಾಡಿ ಪ್ರತಿಷ್ಠಿಸಿದರೆ
23 : ಯಾಜಕನು ಮುಂದಿನ ಜೂಬಿಲಿ ಸಂವತ್ಸರದ ತನಕ ಇರುವ ವರ್ಷಗಳಿಗೆ ತಕ್ಕಂತೆ ಅದರ ಬೆಲೆಯನ್ನು ನಿರ್ಣಯಿಸಬೇಕು. ಪ್ರತಿಷ್ಠಿಸಿದವನು ನಿರ್ಣಯಿಸಲಾದ ಹಣವನ್ನು ಸರ್ವೇಶ್ವರನಿಗೆ ವಿೂಸಲಾದುದೆಂದು ಭಾವಿಸಿ ಅದೇ ದಿನದಲ್ಲಿ ಕೊಟ್ಟುಬಿಡಬೇಕು.
24 : ಜೂಬಿಲಿ ಸಂವತ್ಸರದಲ್ಲಿ ಆ ಹೊಲವು ಮಾರಿದವನಿಗೆ, ಅಂದರೆ ಯಾರ ಪಿತ್ರಾರ್ಜಿತ ಭೂಮಿಗೆ ಸೇರಿದೆಯೋ ಅವರಿಗೆ ಅದನ್ನು ಮರಳಿಸಬೇಕು.
25 : ದೇವರ ಸೇವೆಯಲ್ಲಿ ಬಳಕೆಯಲ್ಲಿರುವ ‘ಶೆಕೆಲ್’ ಒಂದಕ್ಕೆ ಇಪ್ಪತ್ತು ‘ಗೇರಾ’ ತೂಕದ ನಾಣ್ಯದ ಮೇರೆಗೆ ಬೆಲೆಯನ್ನು ನಿಗದಿಮಾಡಬೇಕು.
26 : “ಶುದ್ಧ ಪ್ರಾಣಿಯಲ್ಲಿ ಚೊಚ್ಚಲಾಗಿ ಹುಟ್ಟಿದ್ದು ಸರ್ವೇಶ್ವರನಿಗೆ ಸೇರಿದ್ದು. ಆದ್ದರಿಂದ ಅದನ್ನು ಯಾರೂ ಹರಕೆಯಾಗಿ ಕೊಡಕೂಡದು. ಚೊಚ್ಚಲುಮರಿ ಹೋರಿಯೇ ಆಗಿರಲಿ, ಆಡುಕುರಿಯೇ ಆಗಿರಲಿ, ಅದು ಸರ್ವೇಶ್ವರನ ಸೊತ್ತು.
27 : ಅಶುದ್ಧ ಪ್ರಾಣಿಯಲ್ಲಿ ಹುಟ್ಟಿದ ಚೊಚ್ಚಲು ಮರಿಯನ್ನು ಹರಕೆ ಮಾಡಿದ್ದರೆ, ಹರಕೆಮಾಡಿದವನು ನಿಗದಿಯಾದ ಬೆಲೆಯೊಂದಿಗೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಟ್ಟು ಅದನ್ನು ಬಿಡಿಸಿಕೊಳ್ಳಬಹುದು. ಅವನು ಬಿಡಿಸದೆ ಹೋದರೆ ಅದನ್ನು ನಿಗದಿಯಾದಕ್ಕೆ ಮಾರಬೇಕು.
28 : “ಯಾರಾದರು ನರಮಾನವನನ್ನಾಗಲಿ, ಪಶುಪ್ರಾಣಿಯನ್ನಾಗಲಿ, ಪಿತ್ರಾರ್ಜಿತ ಭೂಮಿಯನ್ನಾಗಲಿ, ಬೇರೆ ಯಾವುದನ್ನೇ ಆಗಲಿ ಯಾವ ಷರತ್ತೂ ಇಲ್ಲದೆ ಸಂಪೂರ್ಣವಾಗಿ ಸರ್ವೇಶ್ವರನದಾಗಿರಲು ಹರಕೆ ಮಾಡಿಕೊಟ್ಟರೆ ಅದನ್ನು ಮಾರಲೂಕೂಡದು, ಬಿಡಿಸಿಕೊಳ್ಳಲೂಬಾರದು. ಸಂಪೂರ್ಣ ಸರ್ವೇಶ್ವರನದಾಗಿರಲು ಸಮರ್ಪಿಸುವಂಥದೆಲ್ಲಾ ಸರ್ವೇಶ್ವರನಿಗೆ ವಿೂಸಲಾಗಿಯೇ ಇರಬೇಕು.
29 : ಸಂಪೂರ್ಣ ಸರ್ವೇಶ್ವರನ ಸೊತ್ತಾಗುವುದಕ್ಕೆ ಒಪ್ಪಿಸಲಾದದ್ದು ನರಜಾತಿಯಾದಾದರೆ ಬಿಡಿಸುವುದಕ್ಕಾಗದು; ಅವನಿಗೆ ಮರಣವೇ ಆಗಬೇಕು.
30 : “ಹೊಲದ ದವಸಧಾನ್ಯವಾಗಲಿ, ತೋಟದ ಹಣ್ಣುಹಂಪಲು ಆಗಲಿ, ಭೂಮಿಯಿಂದುಂಟಾದ ಎಲ್ಲ ಆದಾಯದಲ್ಲಿ ಹತ್ತನೆಯ ಒಂದು ಪಾಲು ಸರ್ವೇಶ್ವರನದಾಗಿರಬೇಕು. ಅದು ಸರ್ವೇಶ್ವರನಿಗೆ ವಿೂಸಲಾದದ್ದು.
31 : ಯಾವನಾದರು ತಾನು ಕೊಡಬೇಕಾದ ಹತ್ತನೆಯ ಪಾಲಿನಲ್ಲಿ ಏನಾದರು ಬಿಡಿಸಿಕೊಳ್ಳ ಬೇಕೆಂದಿದ್ದರೆ ಅದರ ಮೌಲ್ಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು.
32 : ದನಕರುಗಳೇ ಆಗಲಿ, ಆಡುಕುರಿಗಳೇ ಆಗಲಿ, ಒಡೆಯನು ಲೆಕ್ಕಿಸಿದ ಎಲ್ಲ ಪಶುಪ್ರಾಣಿಗಳಲ್ಲಿ ಪ್ರತಿ ಹತ್ತನೆಯದು ಸರ್ವೇಶ್ವರನಿಗೆ ವಿೂಸಲಾಗಿರಬೇಕು.
33 : ಆ ಪಶುಪ್ರಾಣಿ ಒಳ್ಳೆಯದೋ ಕೆಟ್ಟದೋ ಎಂದು ನೋಡಬಾರದು. ಅದನ್ನು ಬದಲಾಯಿಸಬಾರದು. ಕೊಡಬೇಕಾದವನು ಅದನ್ನು ಬದಲಾಯಿಸಿದ್ದಾದರೆ ಅವನು ಮೊದಲು ಲೆಕ್ಕಿಸಿದ್ದು ಹಾಗು ಅದಕ್ಕೆ ಬದಲಾಗಿ ಇಟ್ಟಿದ್ದು ಎರಡೂ ಸರ್ವೇಶ್ವರನದಾಗಿರಬೇಕು. ಅದನ್ನು ಬಿಡಿಸಿಕೊಳ್ಳುವ ಹಕ್ಕು ಇರುವುದಿಲ್ಲ.”
34 : ಇವೇ ಸರ್ವೇಶ್ವರನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮುಖಾಂತರ ಇಸ್ರಯೇಲರಿಗೆ ಕೊಟ್ಟ ಆಜ್ಞೆಗಳು.

Holydivine