Leviticus - Chapter 16
Holy Bible

1 : ಆರೋನನ ಇಬ್ಬರು ಮಕ್ಕಳು ಸರ್ವೇಶ್ವರಸ್ವಾಮಿಯ ಸನ್ನಿಧಿಗೆ ಬಂದು ನಾಶವಾದ ಮೇಲೆ
2 : ಮೋಶೆಯ ಸಂಗಡ ಸರ್ವೇಶ್ವರ ಮಾತಾಡಿ ಹೇಳಿದ್ದೇನೆಂದರೆ - “ನಿನ್ನ ಅಣ್ಣನಾದ ಆರೋನನು ಮನಸ್ಸಿಗೆ ಬಂದಾಗೆಲ್ಲಾ ತೆರೆಯನ್ನು ದಾಟಿ, ಮಹಾಪವಿತ್ರಸ್ಥಾನದೊಳಕ್ಕೆ ಮಂಜೂಷದ ಮೇಲಿನ ಕೃಪಾಸನದ ಹತ್ತಿರಕ್ಕೆ ಬರಬಾರದೆಂದು ಅವನಿಗೆ ಹೇಳು. ಬಂದರೆ ನಾಶವಾಗುವನು. ಏಕೆಂದರೆ ನಾನು ಕೃಪಾಸನದ ಮೇಲೆ ಮೇಘದಲ್ಲಿ ಕಾಣಿಸಿಕೊಳ್ಳುವೆನು.
3 : ಆರೋನನು ಮಹಾಪವಿತ್ರ ಸ್ಥಾನದೊಳಗೆ ಬರುವಾಗ ಈ ರೀತಿಯಾಗಿ ಬರಬೇಕು: ದೋಷಪರಿಹಾರಕ ಬಲಿಗಾಗಿ ಹೋರಿಯನ್ನೂ ದಹನಬಲಿಗಾಗಿ ಟಗರನ್ನೂ ತರಬೇಕು.
4 : ಅವನು ಪರಿಶುದ್ಧವಾದ ನಾರಿನ ನಿಲುವಂಗಿಯನ್ನೂ ತೊಟ್ಟುಕೊಂಡು ನಾರಿನ ಚಡ್ಡಿಯನ್ನು ಹಾಕಿಕೊಂಡು ನಾರಿನ ನಡುಕಟ್ಟನ್ನು ಕಟ್ಟಿಕೊಂಡು ತಲೆಗೆ ಪೇಟವನ್ನು ಸುತ್ತಿಕೊಳ್ಳಬೇಕು. ಅವು ದೀಕ್ಷಾವಸ್ತ್ರಗಳಾದುದರಿಂದ ಅವನು ಅವುಗಳನ್ನು ಧರಿಸಿಕೊಳ್ಳುವುದಕ್ಕೆ ಮುಂಚೆ ಸ್ನಾನ ಮಾಡಬೇಕು.
5 : ಇಸ್ರಯೇಲರ ಸಮಾಜದಿಂದ ದೋಷಪರಿಹಾರಕ ಬಲಿಗಾಗಿ ಎರಡು ಹೋತಗಳನ್ನೂ ದಹನಬಲಿಗಾಗಿ ಒಂದು ಟಗರನ್ನೂ ತೆಗೆದುಕೊಂಡು ಬರಬೇಕು
6 : ಆರೋನನು ತನಗಾಗಿ ತಂದ ಹೋರಿಯನ್ನು ಸಮರ್ಪಿಸಿ ತನ್ನ ಹಾಗು ತನ್ನ ಮನೆತನದವರ ಪರವಾಗಿ ಪಶ್ಚಾತ್ತಾಪ ವಿಧಿಯನ್ನು ನೆರವೇರಿಸಬೇಕು.
7 : ಆ ಎರಡು ಹೋತಗಳನ್ನು ಅವನು ದೇವದರ್ಶನದ ಗುಡಾರದ ಬಾಗಿಲಲ್ಲಿ ಸರ್ವೇಶ್ವರನ ಸನ್ನಿಧಿಯಲ್ಲಿ ನಿಲ್ಲಿಸಬೇಕು.
8 : ಆಗ ಅವನು ಆ ಹೋತಗಳಲ್ಲಿ ಯಾವುದು ಸರ್ವೇಶ್ವರನಿಗೆ, ಯಾವುದು ಅಜಾಜೇಲನಿಗೆ ಎಂದು ತಿಳಿದುಕೊಳ್ಳಲು ದಾಳಹಾಕಬೇಕು.
9 : ಯಾವ ಹೋತ ಸರ್ವೇಶ್ವರನದೆಂದು ಗೊತ್ತಾಗುವುದೋ ಅದನ್ನು ಆರೋನನು ದೋಷಪರಿಹಾರಕ ಬಲಿಯಾಗಿ ಸಮರ್ಪಿಸಬೇಕು.
10 : ಯಾವ ಹೋತ ಅಜಾಜೇಲನದೆಂದು ಗೊತ್ತಾಗುವುದೋ ಅದನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಸಜೀವವಾಗಿಯೇ ನಿಲ್ಲಿಸಿ, ಅದರ ಮೇಲೆ ದೋಷಹೊರಿಸಿ, ಮರುಭೂಮಿಗೆ ಅಜಾಜೇಲನಿಗಾಗಿ ಬಿಡಿಸಿಬಿಡಬೇಕು.
11 : “ಆರೋನನು ತನಗಾಗಿ ದೋಷಪರಿಹಾರಕ ಬಲಿಯ ಹೋರಿಯನ್ನು ಸಮರ್ಪಿಸಿ ತನ್ನ ಹಾಗು ತನ್ನ ಮನೆತನದವರ ಪರವಾಗಿ ಪ್ರಾಯಶ್ಚಿತ್ತವಿಧಿಯನ್ನು ನೆರವೇರಿಸಬೇಕು.
12 : ಅವನು ತನಗೋಸ್ಕರವಾದ ಆ ಹೋರಿಯನ್ನು ವಧಿಸಿದ ಮೇಲೆ ಸರ್ವೇಶ್ವರನ ಸನ್ನಿಧಿಯಲ್ಲಿರುವ ವೇದಿಕೆಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತುಂಬಿಸಿ ಪರಿಮಳ ಧೂಪದ್ರವ್ಯದ ಚೂರ್ಣದಲ್ಲಿ ಎರಡು ಹಿಡಿ ತೆಗೆದುಕೊಂಡು ತೆರೆಯನ್ನು ದಾಟಿ,
13 : ಆ ಧೂಪವನ್ನು ಸರ್ವೇಶ್ವರನ ಸನ್ನಿಧಿಯಲ್ಲಿಯೇ ಕೆಂಡಗಳ ಮೇಲೆ ಹಾಕಬೇಕು. ಅವನಿಗೆ ಪ್ರಾಣನಷ್ಟವಾಗದಂತೆ ಧೂಪದ ಹೊಗೆ ಮೇಘದೋಪಾದಿಯಲ್ಲಿ ಆಜ್ಞಾಶಾಸನಗಳ ಮೇಲಣ ಕೃಪಾಸನವನ್ನು ಮುಟ್ಟುವುದು.
14 : ಆಗ ಆ ಹೋರಿಯ ರಕ್ತದಲ್ಲಿ ಸ್ವಲ್ಪ ತೆಗೆದುಕೊಂಡು ಕೃಪಾಸನದ ಪೂರ್ವ ಭಾಗದ ಮೇಲೆ ಬೆರಳಿನಿಂದ ಚಿಮುಕಿಸಿ ಕೃಪಾಸನದ ಎದುರಾಗಿಯೂ ಏಳು ಸಾರಿ ಚಿಮುಕಿಸಬೇಕು.
15 : “ತರುವಾಯ ಅವನು ಜನರ ಪರವಾಗಿ ದೋಷಪರಿಹಾರಕ ಬಲಿಯ ಹೋತವನ್ನು ವಧಿಸಿ ಅದರ ರಕ್ತವನ್ನು ತೆರೆಯೊಳಗೆ ತಂದು ಹೋರಿಯ ರಕ್ತದಿಂದ ಮಾಡಿದಂತೆಯೇ ಇದರ ರಕ್ತದಿಂದಲೂ ಮಾಡಿ ಕೃಪಾಸನದ ಮೇಲೆಯೂ ಎದುರಾಗಿಯೂ ಚಿಮುಕಿಸಬೇಕು.
16 : ಹೀಗೆ ಇಸ್ರಯೇಲರು ನಾನಾ ವಿಧವಾದ ಅಶುದ್ಧತ್ವ, ಅಪರಾಧ, ದ್ರೋಹ ಇವುಗಳಿಂದ ಮಹಾಪವಿತ್ರ ಸ್ಥಾನಕ್ಕೆ ಉಂಟುಮಾಡಿದ ದೋಷವನ್ನು ಆರೋನನು ಪರಿಹರಿಸುವನು. ಅಶುದ್ಧರಾದ ಅವರ ನಡುವೆ ಇರುವ ದೇವದರ್ಶನದ ಗುಡಾರಕ್ಕೂ ಹಾಗೆಯೇ ದೋಷಪರಿಹಾರಮಾಡುವನು.
17 : ಅವನು ದೋಷಪರಿಹಾರ ಮಾಡುವುದಕ್ಕಾಗಿ ಮಹಾಪವಿತ್ರಸ್ಥಾನದೊಳಗೆ ಹೋಗಿ ಹೊರಗೆ ಬರುವ ತನಕ ಯಾರೂ ದೇವದರ್ಶನದ ಗುಡಾರದೊಳಗೆ ಹೋಗಕೂಡದು. ಹಾಗೆ ತನ್ನ ಹಾಗು ಮನೆತನದವರ ಪರವಾಗಿ ಮತ್ತು ಇಸ್ರಯೇಲರ ಇಡೀ ಸಮಾಜದ ಪರವಾಗಿ ಪ್ರಾಯಶ್ಚಿತ್ತ ಮಾಡುವನು.
18 : ತರುವಾಯ ಅವನು ಹೊರಗೆ ಬಂದು ಸರ್ವೇಶ್ವರನ ಸನ್ನಿಧಿಯಲ್ಲಿರುವ ಬಲಿಪೀಠದ ಬಳಿಗೆ ಹೋಗಿ ಅದಕ್ಕಾಗಿ ದೋಷಪರಿಹಾರ ಮಾಡಬೇಕು. ಆ ಹೋರಿಯ ರಕ್ತದಲ್ಲೂ ಆ ಹೋತದ ರಕ್ತದಲ್ಲೂ ಸ್ವಲ್ಪ ಸ್ವಲ್ಪ ತೆಗೆದುಕೊಂಡು ಪೀಠದ ಕೊಂಬುಗಳಿಗೆ ಸುತ್ತಲೂ ಹಚ್ಚಬೇಕು.
19 : ಅವನು ಆ ರಕ್ತದಲ್ಲಿ ಸ್ವಲ್ಪವನ್ನು ಅದರ ಮೇಲೆ ಏಳು ಸಾರಿ ಬೆರಳಿನಿಂದ ಚಿಮಕಿಸಿ ಇಸ್ರಯೇಲರಿಂದ ಅದಕ್ಕುಂಟಾದ ಅಶುದ್ಧತ್ವವನ್ನು ಹೋಗಲಾಡಿಸಿ ಅದನ್ನು ಪರಿಶುದ್ಧಪಡಿಸಬೇಕು.
20 : “ಮಹಾಪವಿತ್ರಸ್ಥಾನ, ದೇವದರ್ಶನದ ಗುಡಾರ, ಪೀಠ, ಇವುಗಳಿಗೋಸ್ಕರ ಆರೋನನು ದೋಷಪರಿಹಾರ ಮಾಡಿ ಮುಗಿಸಿದ ಮೇಲೆ, ಆ ಸಜೀವವಾದ ಹೋತವನ್ನು ತರಿಸಿ,
21 : ಅದರ ತಲೆಯ ಮೇಲೆ ಎರಡು ಕೈಗಳನ್ನೂ ಇಟ್ಟು ಇಸ್ರಯೇಲರ ಎಲ್ಲಾ ಪಾಪಗಳನ್ನೂ ದ್ರೋಹಗಳನ್ನೂ ಅಪರಾಧಗಳನ್ನೂ ಸರ್ವೇಶ್ವರನಿಗೆ ಅರಿಕೆಮಾಡಿ ಆ ಹೋತದ ತಲೆಯ ಮೇಲೆ ಹೊರಿಸಿ, ಅದನ್ನು ಆ ಕೆಲಸಕ್ಕೆ ನೇಮಕವಾದವನ ಕೈಯಿಂದ ಮರುಭೂಮಿಗೆ ಕಳಿಸಿಬಿಡಬೇಕು.
22 : ಆ ಹೋತ ಅವರ ಎಲ್ಲಾ ಪಾಪಗಳನ್ನೂ ತನ್ನ ಮೇಲೆ ಹೊತ್ತುಕೊಂಡು ದುರ್ಗಮವಾದ ಪ್ರದೇಶಕ್ಕೆ ಒಯ್ಯುವಂತೆ ಆ ಮನುಷ್ಯನು ಅದನ್ನು ಮರುಭೂಮಿಗೆ ತೆಗೆದುಕೊಂಡು ಹೋಗಿ ಅಲ್ಲೇ ಬಿಟ್ಟುಬಿಡಬೇಕು.
23 : “ತರುವಾಯ ಆರೋನನು ದೇವದರ್ಶನದ ಗುಡಾರದೊಳಗೆ ಬಂದು, ತಾನು ಮಹಾಪವಿತ್ರ ಸ್ಥಾನದೊಳಗೆ ಹೋಗುವುದಕ್ಕಾಗಿ ಧರಿಸಿಕೊಂಡಿದ್ದ ನಾರುಮಡಿಗಳನ್ನು ತೆಗೆದು ಅಲ್ಲೇ ಇಟ್ಟು,
24 ಪ್ರಾಕಾರದಲ್ಲಿ ಸ್ನಾನಮಾಡಿ ತನ್ನ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ಆಗ ಅವನು ಹೊರಗೆ ಬಂದು ತನ್ನ ಹಾಗು ಜನಸಮೂಹದ ಪರವಾಗಿ ದಹನಬಲಿಗಳನ್ನು ಸಮರ್ಪಿಸಿ ತನ್ನ ಮತ್ತು ಜನರ ಪರವಾಗಿ ಪ್ರಾಯಶ್ಚಿತ್ತ ವಿಧಿಯನ್ನು ನೆರವೇರಿಸಬೇಕು.
25 : ಅವನು ದೋಷಪರಿಹಾರಕ ಬಲಿಪ್ರಾಣಿಗಳ ಕೊಬ್ಬನ್ನು ಬಲಿಪೀಠದ ಮೇಲೆ ಹೋಮ ಮಾಡಬೇಕು.
26 : “ಅಜಾಜೇಲನಿಗೆ ಹೋತವನ್ನು ಬಿಟ್ಟು ಬಂದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯಕ್ಕೆ ಬರಬೇಕು.
27 : ದೋಷಪರಿಹಾರಕ ಬಲಿಪ್ರಾಣಿಗಳಾದ ಹೋರಿಹೋತಗಳ ರಕ್ತವನ್ನು ಮಹಾಪವಿತ್ರಸ್ಥಾನದಲ್ಲಿ ದೋಷಪರಿಹಾರ ಮಾಡುವುದಕ್ಕಾಗಿ ತಂದ ಮೇಲೆ ಅವುಗಳ ದೇಹಗಳನ್ನು ಪಾಳೆಯದ ಆಚೆಗೆ ತೆಗೆದುಕೊಂಡುಹೋಗಿ ಚರ್ಮ, ಮಾಂಸ, ಕಲ್ಮಷಗಳೆಲ್ಲವನ್ನೂ ಬೆಂಕಿಯಿಂದ ಸುಡಿಸಿಬಿಡಬೇಕು.
28 : ಅವುಗಳನ್ನು ಸುಟ್ಟವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯದೊಳಗೆ ಬರಬೇಕು.
29 : “ಇದು ನಿಮಗೆ ಶಾಶ್ವತವಾದ ನಿಯಮ: ಸ್ವದೇಶಿಯರಾದ ನೀವೂ ನಿಮ್ಮಲ್ಲಿ ವಾಸಮಾಡುವ ಅನ್ಯದೇಶದವರೆಲ್ಲರೂ ಏಳನೆಯ ತಿಂಗಳಿನ ಹತ್ತನೆಯ ದಿನ ಸಕಲ ವಿಧವಾದ ದುಡಿಮೆಗಳನ್ನು ಬಿಟ್ಟು ತಮ್ಮನ್ನೇ ಪರಿತ್ಯಜಿಸಿಕೊಳ್ಳಬೇಕು.
30 : ಏಕೆಂದರೆ ನೀವು ಪರಿಶುದ್ಧರಾಗುವಂತೆ ಈ ದಿನ ನಿಮ್ಮ ಪರವಾಗಿ ಪ್ರಾಯಶ್ಚಿತ್ತ ಮಾಡಲಾಗುವುದು. ಸರ್ವೇಶ್ವರನ ದೃಷ್ಟಿಯಲ್ಲಿ ನಿಮ್ಮ ಎಲ್ಲಾ ದೋಷಗಳು ನಿವಾರಣೆಯಾಗುವುವು.
31 : ಇದು ನಿಮಗೆ ಪೂರ್ತಿ ದುಡಿಮೆ ನಿಲ್ಲಿಸಬೇಕಾದ ಸಬ್ಬತ್ ದಿನವಾಗಿರಬೇಕು; ಇದರಲ್ಲಿ ನೀವು ಉಪವಾಸ ಇರಬೇಕು; ನಿಮಗಿದು ಶಾಶ್ವತ ನಿಯಮ.
32 : “ಆರೋನನ ವಂಶದವರಲ್ಲಿ ಯಾವನಿಗೆ ಪಿತೃಸ್ಥಾನದಲ್ಲಿ ಮಹಾಯಾಜಕನ ಸೇವಾವೃತ್ತಿ ಯನ್ನು ನಡೆಸುವುದಕ್ಕೆ ಪಟ್ಟಾಭಿಷೇಕವಾಗುವುದೋ ಅವನೇ ಈ ದೋಷಪರಿಹಾರ ಕಾರ್ಯವನ್ನು ನೆರವೇರಿಸಬೇಕು.
33 : ಅವನೇ ಆ ನಾರುಮಡಿಗಳನ್ನು ಧರಿಸಿಕೊಂಡು ಪರಿಶುದ್ಧವಾದ ದೇವಸ್ಥಾನ, ದೇವದರ್ಶನದ ಗುಡಾರ, ಬಲಿಪೀಠ, ಯಾಜಕರು, ಜನಸಮೂಹದವರು ಈ ಎಲ್ಲರ ಪರವಾಗಿ ಪ್ರಾಯಶ್ಚಿತ್ತ ವಿಧಿಯನ್ನು ನೆರವೇರಿಸಬೇಕು.
34 : ಇಸ್ರಯೇಲರ ಎಲ್ಲಾ ದೋಷಗಳನ್ನು ನಿವಾರಣೆ ಮಾಡುವುದಕ್ಕಾಗಿ ಅವರಿಗೋಸ್ಕರ ವರ್ಷಕ್ಕೆ ಒಂದಾವರ್ತಿ ಪ್ರಾಯಶ್ಚಿತ್ತ ಮಾಡಬೇಕಾದುದು ನಿಮಗೆ ಶಾಶ್ವತ ನಿಯಮವಾಗಿರಬೇಕು.” ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು.

Holydivine