Leviticus - Chapter 21
Holy Bible

1 : ಆರೋನನ ಮಕ್ಕಳಾದ ಯಾಜಕರಿಗೆ ಈ ಕೆಳಕಂಡಂತೆ ಆಜ್ಞಾಪಿಸಬೇಕೆಂದು ಸರ್ವೇಶ್ವರಸ್ವಾಮಿ ಮೋಶೆಗೆ ತಿಳಿಸಿದರು:
2 : “ಯಾಜಕರಲ್ಲಿ ಯಾವನೂ ತನ್ನ ಕುಲದಲ್ಲಿ ಸತ್ತವರ ನಿಮಿತ್ತ ತನ್ನನ್ನೇ ಅಪವಿತ್ರಮಾಡಿ ಕೊಳ್ಳಬಾರದು. ಆದರೂ ಸವಿೂಪ ರಕ್ತಸಂಬಂಧಿಗಳಾದ ತಾಯಿ, ತಂದೆ, ಮಕ್ಕಳು ಹಾಗು ಅಣ್ಣತಮ್ಮಂದಿರು ಇವರ ವಿಷಯದಲ್ಲಿ ಈ ವಿಧಿ ಅನ್ವಯಿಸುವುದಿಲ್ಲ:
3 : “ಇದಲ್ಲದೆ ಮದುವೆಯಾಗದೆ ತನ್ನ ಆಶ್ರಯದಲ್ಲಿರುವ ತಂಗಿಯ ವಿಷಯದಲ್ಲೂ ಈ ವಿಧಿ ಅನ್ವಯಿಸುವುದಿಲ್ಲ.
4 : ಅವನು ಕುಲನಾಯಕ ಆಗಿರುವುದರಿಂದ ತನ್ನನ್ನೇ ಅಪವಿತ್ರಮಾಡಿ ಕೊಳ್ಳಕೂಡದು. ಮಾಡಿಕೊಂಡರೆ ಯಾಜಕ ಸೇವಾವೃತ್ತಿಗೆ ಅಯೋಗ್ಯನಾಗುವನು.
5 : “ಯಾಜಕರು ತಲೆ ಬೋಳಿಸಿಕೊಳ್ಳಬಾರದು; ಗಡ್ಡವನ್ನು ಕತ್ತರಿಸಿ ವಿಕಾರಗೊಳಿಸಿ ಕೊಳ್ಳಬಾರದು; ದೇಹವನ್ನು ಗಾಯಮಾಡಿಕೊಳ್ಳಬಾರದು.
6 : ಅವರು ದೇವರಿಗೆ ವಿೂಸಲಾಗಿರಬೇಕು; ತಾವು ಸೇವೆಮಾಡುವ ದೇವರ ಹೆಸರಿಗೆ ಅಪಕೀರ್ತಿತರಬಾರದು. ತಮ್ಮ ದೇವರ ಆಹಾರವನ್ನು, ಅಂದರೆ ಸರ್ವೇಶ್ವರನ ಹೋಮದ್ರವ್ಯಗಳನ್ನು ಅವರು ಸಮರ್ಪಿಸುವವರಾಗಿರುವುದರಿಂದ ಪವಿತ್ರರಾಗಿರಬೇಕು.
7 : ಯಾಜಕರು ತಮ್ಮ ದೇವರಿಗೆ ವಿೂಸಲಾಗಿರುವುದರಿಂದ ವೇಶ್ಯೆಯನ್ನಾಗಲಿ, ಶೀಲಭ್ರಷ್ಟ ಸ್ತ್ರೀಯನ್ನಾಗಲಿ, ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ ಹೆಂಡತಿಯನ್ನಾಗಿ ತೆಗೆದುಕೊಳ್ಳಬಾರದು.
8 : ಯಾಜಕರು ನಿಮ್ಮ ದೇವರಾದ ನನಗೆ ಆಹಾರವನ್ನು ಸಮರ್ಪಿಸುವವರಾದ ಕಾರಣ ನೀವು ಅವರನ್ನು ದೇವರ ದಾಸರೆಂದು ಭಾವಿಸಬೇಕು. ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡಿರುವ ಸರ್ವೇಶ್ವರನೆಂಬ ನಾನು ಪರಿಶುದ್ಧನಾಗಿರುವುದರಿಂದ ಅವರನ್ನೂ ಪರಿಶುದ್ಧರೆಂದು ನೀವು ಭಾವಿಸಬೇಕು.
9 : ಯಾಜಕನ ಮಗಳು ಸೂಳೆತನದಿಂದ ನಿಂದೆಗೆ ಒಳಗಾದರೆ ತನ್ನ ತಂದೆಯನ್ನೂ ನಿಂದೆಗೆ ಒಳಪಡಿಸಿದವಳಾದಳು; ಅವಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
10 : “ಯಾಜಕರಲ್ಲಿ ಪ್ರಧಾನನು, ಅಂದರೆ ಯಾವನು ತೈಲಾಭಿಷೇಕ ಹೊಂದಿ ದೀಕ್ಷಾವಸ್ತ್ರಗಳನ್ನು ಧರಿಸಿ, ಪಟ್ಟಕ್ಕೆ ಬರುವನೋ ಅವನು ಸಂತಾಪಸೂಚನೆಗಾಗಿ ತನ್ನ ತಲೆಗೂದಲನ್ನು ಕೆದರಿಕೊಳ್ಳಬಾರದು; ಬಟ್ಟೆಗಳನ್ನು ಹರಿದುಕೊಳ್ಳಬಾರದು.
11 : ಅವನು ಶವವಿರುವ ಯಾವ ಸ್ಥಳಕ್ಕೂ ಹೋಗಬಾರದು. ತಂದೆತಾಯಿಗಳ ಮರಣದ ನಿಮಿತ್ತ ತನ್ನನ್ನು ಅಪವಿತ್ರಮಾಡಿಕೊಳ್ಳಬಾರದು.
12 : ಇದಕ್ಕಾಗಿ ದೇವಸ್ಥಾನವನ್ನು ಬಿಡಲೇಬಾರದು; ಬಿಟ್ಟು ಹೋದರೆ ತಾನು ಸೇವೆ ಮಾಡುವ ದೇವಮಂದಿರದ ಗೌರವಕ್ಕೆ ಕುಂದುಬರುವುದು. ಏಕೆಂದರೆ ತನ್ನ ದೇವರ ಅಭಿಷೇಕ ತೈಲವನ್ನು ತಲೆಯ ಮೇಲೆ ಹೊಯ್ಯಿಸಿಕೊಂಡು ಪ್ರತಿಷ್ಠಿತನಾಗಿದ್ದಾನೆ. ನಾನು ಸರ್ವೇಶ್ವರ.
13 : ಅವನು ಪುರುಷಸಂಪರ್ಕವೇ ಇಲ್ಲದ ಯುವತಿಯನ್ನು ಮದುವೆಮಾಡಿಕೊಳ್ಳಬೇಕೇ ಹೊರತು
14 : ವಿಧವೆಯನ್ನಾಗಲಿ, ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ, ಶೀಲಭ್ರಷ್ಟ ಸ್ತ್ರೀಯನ್ನಾಗಲಿ, ವೇಶ್ಯೆಯನ್ನಾಗಲಿ ಮದುವೆ ಮಾಡಿಕೊಳ್ಳಬಾರದು. ಸ್ವದೇಶದವರಲ್ಲಿಯೇ ಹೆಣ್ಣನ್ನು ಪರಿಗ್ರಹಿಸಬೇಕು;
15 : ಇಲ್ಲವಾದರೆ ಅವನ ಸಂತತಿ ಸ್ವಜನರೊಳಗೆ ಅಪವಾದಕ್ಕೆ ಗುರಿಯಾಗುವುದು. ಅವನನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಸರ್ವೇಶ್ವರ ನಾನು.”
16 : ಆರೋನನಿಗೆ ಹೀಗೆ ಆಜ್ಞಾಪಿಸಬೇಕೆಂದು ಮೋಶೆಗೆ ಸರ್ವೇಶ್ವರ ತಿಳಿಸಿದರು:
17 : “ನಿನ್ನ ಸಂತತಿಯವರಲ್ಲಿ, ತಲತಲಾಂತರದವರೆಗೂ, ಯಾವ ಅಂಗವಿಕಲನೂ ದೇವ ಆಹಾರವನ್ನು ಸಮರ್ಪಿಸಲು ನನ್ನ ಸನ್ನಿಧಿಗೆ ಬರಬಾರದು. ಅಂಗವಿಕಲನು ಈ ಸೇವೆಯನ್ನು ವಹಿಸಿಕೊಳ್ಳಲೇ ಕೂಡದು.
18 : ಅವನು ಕುರುಡನಾಗಲಿ, ಕುಂಟನಾಗಲಿ, ಕೊರೆಮೂಗನಾಗಲಿ,
19 : ಕೈಕಾಲು ಮುರುಕನಾಗಲಿ,
20 : ಗೂನುಗುಜ್ಜಾರಿಯಾಗಲಿ, ಹೂಗಣ್ಣ ಕಾಯಿಗಣ್ಣನಾಗಲಿ, ಕಜ್ಜಿತುರಿಗಳುಳ್ಳವನಾಗಲಿ,
21 : ನಪುಂಸಕನಾಗಲಿ, ಬೇರೆ ಯಾವ ಕಳಂಕವಿದ್ದವನಾಗಲಿ ಸರ್ವೇಶ್ವರನಿಗೆ ಹೋಮದ್ರವ್ಯಗಳನ್ನು ಸಮರ್ಪಿಸುವುದಕ್ಕೆ ಸನ್ನಿಧಿಗೆ ಬರಬಾರದು. ಅಂಥವನು ದೇಹದಲ್ಲಿ ದೋಷವಿರುವುದರಿಂದ ದೇವರ ಆಹಾರವನ್ನು ಸಮರ್ಪಿಸಲೇಬಾರದು.
22 : ದೇವರಿಗೆ ನೈವೇದ್ಯವಾದ ಆಹಾರದಲ್ಲಿ ಪರಿಶುದ್ಧವಾದುದನ್ನೂ ಮಹಾಪರಿಶುದ್ಧವಾದುದನ್ನೂ ಅವನು ಊಟಮಾಡಬಹುದು.
23 : ಆದರೆ ಅವನಿಗೆ ಕಳಂಕ ಇರುವುದರಿಂದ ತೆರೆಯನ್ನು ದಾಟಿ ಒಳಗೆ ಬರಬಾರದು; ಬಲಿಪೀಠದ ಬಳಿಗೆ ಬರಬಾರದು; ನನ್ನ ಪವಿತ್ರಸ್ಥಾನಗಳ ಗೌರವಕ್ಕೆ ಅವನಿಂದ ಕುಂದು ಉಂಟಾಗಬಾರದು; ಆ ಸ್ಥಾನಗಳನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಸರ್ವೇಶ್ವರ ನಾನು.”
24 : ಮೋಶೆ ಆರೋನನಿಗೂ ಅವನ ಮಕ್ಕಳಿಗೂ ಇಸ್ರಯೇಲರೆಲ್ಲರಿಗೂ ಈ ಆಜ್ಞೆಗಳನ್ನು ತಿಳಿಸಿದನು.

Holydivine