Wisdom - Chapter 3
Holy Bible

1 : ಸಜ್ಜನರ ಆತ್ಮಗಳಿರುವುವು ದೇವರ ಕೈಯೊಳು ಅವರನ್ನು ಮುಟ್ಟದು ಮಹಾಯಾತನೆ ಯಾವುದು.
2 : ಮಂದಮತಿಯ ಕಣ್ಣಿಗೆ ಸತ್ತವರಂತೆ ಅವರು ಕಾಣಿಸಿಕೊಂಡರು ಅವರು ಗತಿಸಿ ಹೋದುದು ಅವನಿಂದ ತೊಲಗಿದ ಕೇಡಂತಿತ್ತು.
3 : ಸಜ್ಜನರಿಗಾದ ಸಾವು ಮಹಾ ವಿಪತ್ತು ಎಂದವನಿಗೆ ತೋರಿತು ಅವರಾದರೋ ಶಾಂತಿಸಮಾಧಾನದಿಂದ ನೆಮ್ಮದಿಯಾಗಿರುವರು.
4 : ಮಾನವನ ದೃಷ್ಟಿಯಲ್ಲಿ ಅವರು ಕಂಡುಬಂದರು ಶಿಕ್ಷಿಸಲ್ಪಟ್ಟವರಂತೆ ಅವರಲ್ಲಾದರೋ ತುಂಬಿತ್ತು ಅಮರತ್ವದ ನಂಬಿಕೆ ನಿರೀಕ್ಷೆ.
5 : ಅವರು ಅನುಭವಿಸಿದ ಶಿಕ್ಷೆ ಅಲ್ಪ, ಹೊಂದುವ ಸೌಭಾಗ್ಯ ಅಪಾರ ಶೋಧಿಸಿದ ತರುವಾಯ ದೇವರಿಗೆ ಅವರು ಕಂಡುಬಂದರು ಯೋಗ್ಯಾರ್ಹ.
6 : ಶೋಧಿಸಿದರವರನು ಪುಟಕ್ಕಿಟ್ಟ ಚಿನ್ನದಂತೆ ಅಂಗೀಕೃತರಾದರು ಪೂರ್ಣ ದಹನಬಲಿಯಂತೆ.
7 : ಪ್ರಕಾಶಿಸುವರು ದೇವರನು ಸಂದರ್ಶಿಸುವ ಕಾಲದಲಿ ಹೊಳೆಯುವರು ಒಣಹುಲ್ಲಿನೊಳಗಿನ ಕಿಡಿಗಳೋಪಾದಿ.
8 : ನ್ಯಾಯತೀರಿಸುವರವರು ಜನಾಂಗಗಳಿಗೆ ದೊರೆತನ ಮಾಡುವರವರು ಜನಗಳ ಮೇಲೆ ದೇವರ ಪ್ರಜೆಗಳಾಗಿರುವರು ಸದಾಕಾಲಕೆ.
9 : ಸತ್ಯವನು ಅರಿವರು ದೇವರಲಿ ಭರವಸೆಯಿಡುವವರು ಅವರೊಂದಿಗೆ ಪ್ರೀತಿಯಿಂದ ಬಾಳುವರು ನಂಬಿಗಸ್ತರು. ದೇವರಿಂದ ಆಯ್ಕೆಯಾದವರಿಗಿರುವುದು ಕೃಪಾನುಗ್ರಹವು ದೇವರೇ ಕಾಪಾಡುವರು ಸಜ್ಜನರನು. ದುರುಳರ ದುರ್ಗತಿ
10 : ಸಜ್ಜನರನು ತುಚ್ಛವಾಗಿ ಪರಿಗಣಿಸಿದವರು, ಸರ್ವೇಶ್ವರನಿಗೆ ಇದಿರಾಗಿ ಪ್ರತಿಭಟಿಸಿದವರು, ತಮ್ಮ ವಾದಕ್ಕೆ ತಕ್ಕಂತೆ ಶಿಕ್ಷೆಗೆ ಗುರಿಯಾಗುವರು.
11 : ಜ್ಞಾನೋಪದೇಶವನು ತೃಣೀಕರಿಸುವವನು ನಿರ್ಭಾಗ್ಯಸ್ತ ಅವನ ನಂಬಿಕೆ ವ್ಯರ್ಥ, ದುಡಿತ ದುರ್ಲಭ, ನಿಷ್ಪ್ರಯೋಜಕ.
12 : ಅವರ ಮಡದಿಯರು ಮತಿಹೀನರು ಅವರ ಮಕ್ಕಳು ದಾರಿತಪ್ಪಿದಂಥವರು ಅವರ ಜನನವು ಶಾಪಗ್ರಸ್ತವಾದುದು.
13 : ವ್ಯಭಿಚಾರಕ್ಕೊಪ್ಪದ ನಿಷ್ಕಳಂಕಿ ಬಂಜೆಯಾದರು ಧನ್ಯಳು ! ಸತ್ಯಾತ್ಮಗಳನು ದೇವರು ಸಂದರ್ಶಿಸುವಾಗ ಫಲಪಡೆಯುವಳು.
14 : ಅನ್ಯಾಯವೆಸಗದ, ಸರ್ವೇಶ್ವರನನು ಪ್ರತಿಭಟಿಸದ, ನಪುಂಸಕನು ಧನ್ಯನು ! ಅವನ ನೀತಿಸತ್ಯತೆಗನುಸಾರ ಸಿಗುವುದು ವಿಶೇಷ ಕೃಪಾವರವು; ದೊರಕುವುದು ಪವಿತ್ರ ಸ್ಥಾನದಲಿ ಸಂತೋಷಕರವಾದ ಅಂತಸ್ತು.
15 : ಸತ್ಕಾರ್ಯಗಳ ಫಲವು ಕೀರ್ತಿದಾಯಕವಾದುದು ಅರಿವಿನ ಬೇರು ಎಂದಿಗೂ ಒಣಗಿಹೋಗದು.
16 : ವ್ಯಭಿಚಾರಿಗಳ ಮಕ್ಕಳು ಅಭಿವೃದ್ಧಿಯಾಗರು ಅಕ್ರಮ ಸಂಸರ್ಗದಿಂದಾದ ಸಂತಾನ ನಾಶವಾಗುವುದು.
17 : ಇಂಥವರು ಬಹುದಿನ ಬದುಕಿದರೂ ಯಾರ ಗಣನೆಗೂ ಬಾರರು ಮುದಿತನದಲ್ಲೂ ಅವರು ಸನ್ಮಾನಹೀನರಾಗಿರುವರು.
18 : ಚಿಕ್ಕವರಾಗಿಯೇ ಅವರು ಸತ್ತರೆ ಯಾವ ನಿರೀಕ್ಷೆಯೂ ಇರದು ನ್ಯಾಯನಿರ್ಣಯ ದಿನದಲ್ಲಿ ಯಾವ ಆದರಣೆಯೂ ದೊರಕದು.
19 : ದುರ್ಜನರ ಸಂತಾನದ ಅಂತ್ಯ ಎಂದೆಂದಿಗೂ ಶೋಚನೀಯ.

Holydivine