Wisdom - Chapter 17
Holy Bible

1 : ನಿಮ್ಮ ನ್ಯಾಯವಿಧಿಗಳು ದೇವಾ, ಮಹತ್ತರವಾದುವು ವಿವರಿಸಲು ಕಷ್ಟ ಸಾಧ್ಯವಾದುವು. ಎಂದೇ, ಅಶಿಕ್ಷಿತ ಆತ್ಮಗಳು ಅಡ್ಡಹಾದಿ ಹಿಡಿವುವು.
2 : ದುರುಳರು ಪವಿತ್ರ ಜನಾಂಗವನು ಅಧೀನದಲ್ಲಿರಿಸಿದ್ದೇವೆಂದು ಭಾವಿಸಿದರು. ಆದರೆ ತಾವೇ ಕಾರ್ಗತ್ತಲಿನ ಸೆರೆಯಾಳಾದರು, ಭೀಕರ ಇರುಳಿನ ಖೈದಿಗಳಾದರು.
3 : ತಮ್ಮ ಗುಪತ್ತಪಾಪಗಳನು ಯಾರು ಪತ್ತೆ ಹಚ್ಚಾರೆಂದುಕೊಂಡಿದ್ದರು ಮರೆವು ಎಂಬ ಕಪ್ಪಾದ ತೆರೆಯು ಅವರನು ಮುಚ್ಚಿಕೊಂಡಿತ್ತು. ಆದರೆ ಭಯಂಕರ ದರ್ಶನಗಳ ನಿಮಿತ್ತ ಕಂಗೆಟ್ಟು ದಿಗಿಲುಗೊಂಡರು.
4 : ಆ ಭಯದಿಂದ ತಪ್ಪಿಸಿ ಕಾಪಾಡಲಿಲ್ಲ ಅವರನು ಸೆರೆಹಿಡಿದಿದ್ದಾ ಗುಪ್ತಸ್ಥಳವು ಬದಲಿಗೆ ಕಳವಳಗೊಳಿಸುವ ಸಪ್ಪಳಗಳು ಕೇಳಿಸಿದವು ಸುತ್ತಲು ಅವರಿಗೆ ಕಾಣಿಸಿಕೊಂಡವು ಆ ಪ್ರಸನ್ನ ವಿಕಾರ ಮುಖದ ಬೇತಾಳಗಳು.
5 : ಯಾವ ಬೆಂಕಿಯ ಬಲವೂ ಅವರಿಗೆ ಬೆಳಕು ನೀಡಲಾರದೆ ಹೋಯಿತು ಥಳಥಳಿಸುವ ನಕ್ಷತ್ರಗಳ ಜ್ವಾಲೆಗೂ ಆ ರಾತ್ರಿಯನು ಬೆಳಗಿಸಲಾಗದೆ ಹೋಯಿತು.
6 : ತಾನಾಗಿಯೇ ಉರಿಯುತ್ತಿದ್ದ ದೊಡ್ಡ ಪಂಜೊಂದು ಅವರ ಮುಂದಿತ್ತು ದೃಷ್ಟಿಸಿ ನೋಡಲು ಅಸಾಧ್ಯವಾದಾ ನೋಟಕ್ಕೆ ಅವರು ಅಳುಕಿದರು ತಾವು ಕಂಡುದು ಕಾಣುವುದಕ್ಕಿಂತಲೂ ಭಯಂಕರವಾಗಿದೆ ಎಂದುಕೊಂಡರು.
7 : ಅವರ ಮಂತ್ರವಾದಿಗಳ ಕೈವಾಡವೆಲ್ಲವು ಕುಸಿದು ಬಿದ್ದಿತು ಅವರ ತಂತ್ರಮಂತ್ರಗಳಾಂಬರವು ನಿಂದೆ ಅವಮಾನಕ್ಕೀಡಾಯಿತು.
8 : ಸಂಕಟಪಡುವವರ ಭಯಬಾಧೆಗಳನು ದೂರವಾಗಿಸುವುದಾಗಿ ಹೇಳಿದ್ದರು ಆದರೀಗ ತಾವೇ ನಗೆಪಾಟಲಿಗೆ ಈಡಾಗುವಷ್ಟು ಅಂಜಿಕೊಂಡಿದ್ದರು.
9 : ಅವರನು ಗಾಬರಿಪಡಿಸುವಂಥ ಘಟನೆ ಯಾವುದು ನಡೆಯದಿದ್ದರೂ ಕ್ರಿಮಿಕೀಟಗಳ ಹರಿದಾಟಕ್ಕೂ, ಹಾವುಗಳ ಬುಸುಗುಟ್ಟುವಿಕೆಗೂ ಬೆದರಿದರು.
10 : ಯಾವ ವಿಧದಲ್ಲೂ ತಪ್ಪಿಸಿಕೊಳ್ಳಲಾಗದ ಗಾಳಿಯನು ಕೂಡ ನೋಡಲೊಲ್ಲದೆ ನಡುನಡುಗಿ ಸತ್ತರು ಭಯಭೀತಿಯಿಂದ.
11 : ಮನಸ್ಸಾಕ್ಷಿ ಖಂಡಿಸುವ ದುಷ್ಟತನವು ಸಹಜವಾಗಿ ತರುತ್ತದೆ ಅಂಜಿಕೆಯನ್ನೇ ಅದು ಮನಸ್ಸಾಕ್ಷಿಯ ಒತ್ತಡದಿಂದ ಮುಂದಿಡುತ್ತದೆ ಕೆಟ್ಟದ್ದನ್ನೇ.
12 : ವಿವೇಕ ನೀಡುವ ನೆರವನು ಕೈಬಿಡುವುದು, ಅಂಜಿಕೆಯೆಂಬುದು ಒಂದೇ ಆಗಿರುವುವು.
13 : ವಿವೇಕದ ಮೇಲಿರುವ ನಂಬಿಕೆಯನು ಕಳೆದುಕೊಂಡಷ್ಟು ಕಷ್ಟಗಳಿಗೆ ಕಾರಣ ತಿಳಿಯದಿರುವುದು ಸಂಕಟವಾಗುವುದು ಮತ್ತಷ್ಟು.
14 : ಶಕ್ತಿಯಿಲ್ಲದ ಬಲಹೀನ ಪಾತಾಳದಿಂದ ಬಂದ ಆ ಕತ್ತಲಲಿ ಅವರೆಲ್ಲರು ಒಂದಾಗಿದ್ದರು ಅದೇ ನಿದ್ರೆಯಲಿ.
15 : ಒಮ್ಮೆ ಭಯಾನಕ ರೂಪಗಳನ್ನು ಕಂಡು ಬೆಚ್ಚುಬೀಳುತ್ತಿದ್ದರು ಇನ್ನೊಮ್ಮೆ ಎದೆಗುದಿಯಿಂದ ಕಳವಳಪಡುತ್ತಿದ್ದರು. ಅಂಥ ಆಕಸ್ಮಿಕ ಹಾಗು ಅನಿರೀಕ್ಷಿತ ಭಯ ಅವರ ಮೇಲೆ ಬಂದಿತ್ತು.
16 : ಹೀಗೆ ಪ್ರತಿಯೊಬ್ಬನು ಇದ್ದಲ್ಲಿಯೇ ಬಿದ್ದುಕೊಂಡಿದ್ದನು ಕಬ್ಬಿಣದ ಕಂಬಿಗಳಿಲ್ಲದ ಸೆರೆಯಲಿ ಬಂಧಿತನಾಗಿದ್ದನು.
17 : ರೈತನಾಗಲಿ, ಕುರುಬನಾಗಲಿ, ಅಡವಿ ಯಲ್ಲಿನ ಆಳಾಗಲಿ, ಎಲ್ಲರು ತಪ್ಪಿಸಿಕೊಳ್ಳಲಾಗದಂಥ ಬಂಧನವನು ಅನುಭವಿಸುತ್ತಿದ್ದರು ಎಲ್ಲರನು ಕತ್ತಲೆಂಬ ಒಂದೇ ಸರಪಣಿಯಿಂದ ಬಿಗಿಯಲಾಗಿತ್ತು.
18 : ಸಿಳ್ಳು ಗಾಳಿಯಾಗಲಿ, ಹರಿವ ಪ್ರವಾಹದ ಭೋರ್ಗರೆತವಾಗಲಿ ಹರಡಿದ ಕೊಂಬೆಗಳ ಮೇಲಿನ ಹಕ್ಕಿಗಳ ಇಂಚರವಾಗಲಿ,
19 : ಕೆಳಕ್ಕೆ ಉರುಳಿದ ಬಂಡೆಗಳ ಕರ್ಕಶ ನಾದವಾಗಲಿ ಕಣ್ಣಿಗೆ ಕಾಣದಂತೆ ಜಿಗಿದು ಓಡಾಡುವ ಪ್ರಾಣಿಗಳ ಸದ್ದಾಗಲಿ ಕಾಡುಮೃಗಗಳು ಗೂಳಿಡುವ ಗರ್ಜನೆ ಆಗಲಿ ಗುಡ್ಡದ ಬಿರುಕುಗಳಿಂದ ಬರುವ ಮಾರ್ದನಿಯಾಗಲಿ, ಇವೆಲ್ಲವು ಸಾಕಾಗಿದ್ದವು ಅವರನು ಮೂರ್ಛೆಗೊಳಿಸಲು ಭಯಹುಟ್ಟಿಸಿ.
20 : ಜಗದ ಬೇರೆ ಕಡೆಯಲ್ಲಾದರೋ ತಿಳಿಬೆಳಕು ಹರಡಿತ್ತು ನಿರಾತಂಕ ಕೆಲಸಕಾರ್ಯಗಳಲ್ಲಿ ತೊಡಗಿದ್ದರು ಜನರೆಲ್ಲರು.
21 : ಇವರ ಮೇಲೆ ಮಾತ್ರ ಕವಿದಿತ್ತು ಕಾರ್ಗತ್ತಲು ಮುಂದೆ ಬರಲಿರುವ ಗಾಢಕತ್ತಲ ಛಾಯೆಯಾಗಿತ್ತದು ಇವರು ತಮಗೆ ತಾವೇ ಹೊರಲಾಗದ ಹೊರೆಯಾಗಿದ್ದರು ಆ ಕತ್ತಲಿಗಿಂತಲು. ಇಸ್ರಯೇಲರಿಗೆ ಬೆಳಕು

Holydivine