Exodus - Chapter 35
Holy Bible

1 : ಮೋಶೆ ಇಸ್ರಯೇಲರ ಸಮಾಜವನ್ನೆಲ್ಲ ಸೇರಿಸಿ ಅವರಿಗೆ, “ನೀವು ಅನುಸರಿಸಬೇಕೆಂದು ಸರ್ವೇಶ್ವರ ಹೀಗೆ ಆಜ್ಞಾಪಿಸಿದ್ದಾರೆ:
2 : ಆರು ದಿನಗಳು ದುಡಿಯಬೇಕು; ಏಳನೆಯ ದಿನ ಪರಿಶುದ್ಧವಾದ ದಿನ. ಅದು ಸರ್ವೇಶ್ವರನಿಗೆ ವಿೂಸಲಾದ ಸಬ್ಬತ್ ದಿನ. ಆದ್ದರಿಂದ ನೀವು ಸಂಪೂರ್ಣವಾಗಿ ದುಡಿಮೆ ನಿಲ್ಲಿಸಬೇಕು. ಆ ದಿನ ದುಡಿಯುವವನಿಗೆ ಮರಣದಂಡನೆಯಾಗಬೇಕು
3 : ನೀವು ವಾಸಿಸುವ ಯಾವ ಮನೆಯಲ್ಲೇ ಆಗಲಿ, ಸಬ್ಬತ್ ದಿನದಂದು ಬೆಂಕಿಯನ್ನು ಹೊತ್ತಿಸಬಾರದು,” ಎಂದು ಹೇಳಿದನು.
4 : ಮೋಶೆ ಇಸ್ರಯೇಲರ ಇಡೀ ಸಮಾಜವನ್ನು ಉದ್ದೇಶಿಸಿ: “ಸರ್ವೇಶ್ವರನ ಆಜ್ಞೆ ಇದು: ನೀವು ನಿಮ್ಮ ನಿಮ್ಮ ಆಸ್ತಿಪಾಸ್ತಿಯಿಂದ ಸರ್ವೇಶ್ವರನಿಗೆ ಕಾಣಿಕೆಯನ್ನು ಕೊಡಬೇಕು. ಮನಃಪೂರ್ವಕವಾಗಿ ಕೊಡಬೇಕು. ಸರ್ವೇಶ್ವರನಿಗೆ ತರಬೇಕಾದಂಥ ಕಾಣಿಕೆಗಳು ಇವು: ಚಿನ್ನ, ಬೆಳ್ಳಿ, ತಾಮ್ರ,
5 : ನೀಲಿ, ಊದ, ಕಡುಗೆಂಪು ವರ್ಣಗಳುಳ್ಳ ದಾರಗಳು
6 : ನಯವಾದ ನಾರುಬಟ್ಟೆಗಳು, ಆಡುಕೂದಲಿನ ಬಟ್ಟೆಗಳು
7 : ಹದಮಾಡಿದ ಕೆಂಪುಬಣ್ಣದ ಕುರಿದೊಗಲುಗಳು, ಕಡಲು ಹಂದಿಯ ತೊಗಲುಗಳು, ಜಾಲೀಮರ
8 : ದೀಪಕ್ಕೆ ಬೇಕಾದ ಎಣ್ಣೆ, ಅಭಿಷೇಕತೈಲಕ್ಕೆ ಹಾಗು ಪರಿಮಳ ಧೂಪಕ್ಕೆ ಬೇಕಾದ ಸುಗಂಧ ದ್ರವ್ಯಗಳು,
9 : ಮಹಾ ಯಾಜಕನ ಕವಚಕ್ಕೆ ಬೇಕಾದ ರತ್ನಗಳು ಮತ್ತು ವಕ್ಷಪದಕದಲ್ಲಿ ಖಚಿಸಬೇಕಾದ ನಾನಾ ರತ್ನಗಳು
10 : “ನಿಮ್ಮಲ್ಲಿರುವ ಶಿಲ್ಪಕಾರರೆಲ್ಲರು ಬಂದು ಸರ್ವೇಶ್ವರನು ಆಜ್ಞಾಪಿಸಿದವುಗಳನ್ನೆಲ್ಲ ಮಾಡಬೇಕು.
11 : ಅವರು ಮಾಡಬೇಕಾದವುಗಳು ಇವು: ದೇವದರ್ಶನದ ಗುಡಾರ,
12 : ಅದರ ಮೇಲ್ಹೊದಿಕೆಗಳು, ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೆ ಕಲ್ಲುಗಳು, ಕೃಪಾಸನ, ಅದನ್ನು ಮರೆಮಾಡುವ ತೆರೆ,
13 : ಮೇಜು, ಅದರ ಗದ್ದಿಗೆಗಳು, ಅದರ ಉಪಕರಣಗಳು, ಅದರ ಮೇಲೆ ಇಡತಕ್ಕ ಕಾಣಿಕೆಯ ರೊಟ್ಟಿಗಳು,
14 : ದೀಪವೃಕ್ಷ, ಅದರ ಉಪಕರಣಗಳು, ಹಣತೆಗಳು, ದೀಪಕ್ಕೆ ಬೇಕಾದ ಎಣ್ಣೆ, ಧೂಪವೇದಿಕೆ, ಅದರ ಗದ್ದಿಗೆಗಳು,
15 : ಅಭಿಷೇಕ ತೈಲ, ಪರಿಮಳ ದ್ರವ್ಯ, ಗುಡಾರದ ಬಾಗಿಲಿನ ಪರದೆ,
16 : ಬಲಿಪೀಠ, ಅದರ ತಾಮ್ರದ ಜಾಳಿಗೆ, ಗದ್ದಿಗೆಗಳು, ಉಪಕರಣಗಳು, ನೀರಿನ ತೊಟ್ಟಿ, ಅದರ ಪೀಠ,
17 : ಅಂಗಳದ ತೆರೆಗಳು, ಕಂಬಗಳು,
18 : ಅಂಗಳದ ಬಾಗಿಲಿನ ಪರದೆ, ಗುಡಾರದ ಗೂಟಗಳು, ಅಂಗಳದ ಗೂಟಗಳು, ಅವುಗಳ ಹಗ್ಗಗಳು,
19 : ಪವಿತ್ರಸ್ಥಾನದ ಸೇವೆಗೆ ಸುಂದರವಾದ ದೀಕ್ಷಾವಸ್ತ್ರಗಳು, ಅಂದರೆ ಮಹಾಯಾಜಕ ಆರೋನನಿಗೆ ಹಾಗು ಅವನ ಮಕ್ಕಳಿಗೆ ಬೇಕಾದ ವಸ್ತ್ರಗಳು.”
20 : ಇದಾದ ಮೇಲೆ ಇಸ್ರಯೇಲ್ ಸಮಾಜದವರೆಲ್ಲರು ಮೋಶೆಯ ಹತ್ತಿರದಿಂದ ಹೊರಟು ಹೋದರು.
21 : ಅವರಲ್ಲಿ ಉದಾರ ಹೃದಯಿಗಳು ಸ್ವಂತ ಇಷ್ಟದಿಂದ ಮುಂದೆಬಂದು ದೇವದರ್ಶನದ ಗುಡಾರದ ಕೆಲಸಕ್ಕೂ ಅದರ ಸಮಸ್ತಸೇವೆಗೂ ಹಾಗು ದೀಕ್ಷಾವಸ್ತ್ರಗಳಿಗೂ ಬೇಕಾದವುಗಳನ್ನು ಸರ್ವೇಶ್ವರನಿಗೆ ಕಾಣಿಕೆಯಾಗಿ ತಂದರು.
22 : ಹೆಂಗಸರು ಹಾಗು ಗಂಡಸರು ಧಾರಾಳ ಮನಸ್ಸಿನಿಂದ ಸರ್ವೇಶ್ವರನಿಗೆ ಚಿನ್ನದ ಕಾಣಿಕೆಗಳನ್ನು ಅಂದರೆ ಕಡಗ, ಮೂಗುತಿ, ಮುದ್ರೆಯುಂಗುರ, ಕಂಠಮಾಲೆ ಮೊದಲಾದ ಚಿನ್ನದ ಒಡವೆಗಳನ್ನು ಸಮರ್ಪಿಸಿದರು.
23 : ಯಾರಲ್ಲಿ ನೀಲಿ, ಧೂಮ, ಹಾಗು ರಕ್ತವರ್ಣಗಳುಳ್ಳದಾರಗಳು, ನಯವಾದ ನಾರುಬಟ್ಟೆ, ಆಡುಕೂದಲಿನ ಬಟ್ಟೆ, ಹದಮಾಡಿದ ಕೆಂಪುಬಣ್ಣದ ಕುರಿದೊಗಲು ಹಾಗು ಕಡಲು ಹಂದಿಯ ತೊಗಲು ಇದ್ದವೋ ಅವರು ಅವುಗಳನ್ನು ತಂದುಕೊಟ್ಟರು.
24 : ಯಾರಲ್ಲಿ ಬೆಳ್ಳಿ ಇಲ್ಲವೆ ತಾಮ್ರ ಇತ್ತೋ ಅವರು ಅವುಗಳನ್ನೇ ತಂದು ಸರ್ವೇಶ್ವರನಿಗೆ ಸಮರ್ಪಿಸಿದರು. ಯಾರ ಬಳಿಯಲ್ಲಿ ಗುಡಾರದ ಕೆಲಸಕ್ಕೆ ಬೇಕಾದ ಜಾಲಿಮರವಿತ್ತೋ ಅವರು ಅದನ್ನು ತಂದುಕೊಟ್ಟರು.
25 : ನಿಪುಣೆಯರಾದ ಮಹಿಳೆಯರು ತಮ್ಮ ಕೈಗಳಿಂದ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ನೂಲನ್ನು ಹಾಗು ನಯವಾದ ನಾರಿನ ನೂಲನ್ನು, ನೇಯ್ದ ಆ ನೂಲುಗಳನ್ನು ತಂದುಕೊಟ್ಟರು.
26 : ನಿಪುಣೆಯರಾದ ಬೇರೆ ಮಹಿಳೆಯರು ಆಡಿನ ತಪ್ಪಟವನ್ನು ನೇಯ್ದು ತಂದುಕೊಟ್ಟರು.
27 : ಜನ ನಾಯಕರು ಮಹಾಯಾಜಕನ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳನ್ನು, ವಕ್ಷ ಕವಚದಲ್ಲಿ ಖಚಿಸಬೇಕಾದ ರತ್ನಗಳನ್ನು,
28 : ದೀಪಕ್ಕೆ ಬೇಕಾದ ಎಣ್ಣೆಯನ್ನು, ಅಭಿಷೇಕ ತೈಲಕ್ಕೆ ಮತ್ತು ಪರಿಮಳ ಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳನ್ನು ತಂದುಕೊಟ್ಟರು.
29 : ಮೋಶೆಯ ಮುಖಾಂತರ ಸರ್ವೇಶ್ವರ ಆಜ್ಞಾಪಿಸಿದ ಎಲ್ಲ ಕೆಲಸಕಾರ್ಯಗಳಿಗೆ ಬೇಕಾದವುಗಳನ್ನು ಇಸ್ರಯೇಲಿನ ಸ್ತ್ರೀಪುರುಷರೆಲ್ಲರು ಹೃದಯ ಪೂರ್ವಕವಾಗಿಯೇ ತಂದೊಪ್ಪಿಸಿದರು.
30 : ಮೋಶೆ ಇಸ್ರಯೇಲರಿಗೆ ಹೀಗೆಂದನು: “ಸರ್ವೇಶ್ವರಸ್ವಾಮಿ ಯೆಹೂದಕುಲದವನಾದ ಹೂರನ ಮೊಮ್ಮಗನೂ ಉರಿಯ ಮಗನೂ ಆದ ಬಿಚಲೇಲನೆಂಬವನನ್ನು ಹೆಸರಿಸಿ ಆಯ್ಕೆ ಮಾಡಿದ್ದಾರೆ. ನಯನವಿರಾದ ಕೆಲಸಗಳನ್ನು ನಿಯೋಜಿಸುವುದಕ್ಕೂ,
31 : ಚಿನ್ನ, ಬೆಳ್ಳಿ, ತಾಮ್ರಗಳಿಂದ ಕೆಲಸ ನಡೆಸುವುದಕ್ಕೂ, ರತ್ನಗಳನ್ನು ಕೆತ್ತುವುದಕ್ಕೂ, ಮರದಲ್ಲಿ ವಿಚಿತ್ರ ಕೆತ್ತನೆ ಕೆಲಸ ನಡೆಸುವುದಕ್ಕೂ
32 : ಬೇರೆ ವಿವಿಧ ಶೃಂಗಾರದ ಕೆಲಸ ಮಾಡುವುದಕ್ಕೂ ಅವನನ್ನು ಆರಿಸಿಕೊಂಡಿದ್ದಾರೆ.
33 : ಅವನಿಗೆ ದೈವಾತ್ಮಶಕ್ತಿಯನ್ನು ಕೊಟ್ಟು ಬೇಕಾದ ಜ್ಞಾನ, ವಿದ್ಯೆ, ವಿವೇಕ ಇವುಗಳನ್ನೂ ಸಕಲ ಶಿಲ್ಪಶಾಸ್ತ್ರ ಜ್ಞಾನವನ್ನೂ ಅನುಗ್ರಹಿಸಿದ್ದಾರೆ.
34 : ಅದೂ ಅಲ್ಲದೆ, ಮತ್ತೊಬ್ಬರಿಗೆ ಕಲಿಸಿಕೊಡುವುದಕ್ಕೆ ಸಹ ಅವನಿಗೆ ಮತ್ತು ದಾನ್ ಕುಲದ ಅಹೀಸಾ ಮಾಕನ ಮಗ ಒಹೋಲೀಯಾಬನಿಗೆ ವಿಶೇಷ ವರವನ್ನು ಕೊಟ್ಟಿದ್ದಾರೆ.
35 : ಶಿಲ್ಪಿಗಳು, ಚಮತ್ಕಾರವಾದ ಕೆಲಸ ನಿಯೋಜಿಸುವವರು ಹಾಗು ನೀಲಿ, ಊದ ಹಾಗು ಕಡುಗೆಂಪು ವರ್ಣದ ದಾರದಿಂದಲೂ ನಯವಾದ ನಾರುಬಟ್ಟೆಯಿಂದಲೂ ಕಸೂತಿ ಕೆಲಸ ಮಾಡುವವರು, ನೇಯುವವರು, ಅಂತೂ ಎಲ್ಲ ಕಸುಬುದಾರರು ನಡೆಸುವ ಕೆಲಸಗಳನ್ನು ನಿಯೋಜಿಸುವುದಕ್ಕೂ ಹಾಗು ಕಾರ್ಯಗತ ಮಾಡುವುದಕ್ಕೂ ಸರ್ವೇಶ್ವರ ಅವರಿಗೆ ಜ್ಞಾನವನ್ನು ಪೂರ್ತಿಯಾಗಿ ಅನುಗ್ರಹಿಸಿದ್ದಾರೆ.

Holydivine