Judges - Chapter 4
Holy Bible

1 : ಏಹೂದನು ನಿಧನನಾದ ನಂತರ ಇಸ್ರಯೇಲರು ಪುನಃ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಗಳಾದರು.
2 : ಈ ಕಾರಣ ಸರ್ವೇಶ್ವರ ಅವರನ್ನು ಹಾಚೋರಿನಲ್ಲಿ ಆಳುತ್ತಿದ್ದ ಕಾನಾನ್ಯ ರಾಜನಾದ ಯಾಬೀನನಿಗೆ ವಶಪಡಿಸಿದರು. ಮ್ಲೇಚ್ಛರ ಹರೋಷೆತ್ ಎಂಬ ಪಟ್ಟಣದಲ್ಲಿ ವಾಸವಾಗಿದ್ದ ಸೀಸೆರನು ಅವನ ಸೇನಾಪತಿ ಆಗಿದ್ದನು.
3 : ಒಂಬೈನೂರು ಕಬ್ಬಿಣದ ರಥಗಳನ್ನು ಪಡೆದಿದ್ದ ಇವನು ಇಸ್ರಯೇಲರನ್ನು ಇಪ್ಪತ್ತು ವರ್ಷಕಾಲ ದಬ್ಬಾಳಿಕೆಗೆ ಈಡುಪಡಿಸಿದನು. ಆಗ ಅವರು ಸರ್ವೇಶ್ವರನಿಗೆ ಮೊರೆಯಿಟ್ಟರು.
4 : ಆ ಕಾಲದಲ್ಲಿ ಲಪ್ಪೀದೋತನ ಹೆಂಡತಿ, ದೆಬೋರಳೆಂಬ ಪ್ರವಾದಿನಿ ಇಸ್ರಯೇಲರಲ್ಲಿ ನ್ಯಾಯ ತೀರಿಸುತ್ತಿದ್ದಳು.
5 : ಆಕೆ ಎಫ್ರಯಿಮ್ ಬೆಟ್ಟದ ಸೀಮೆಯಲ್ಲಿ ರಾಮಕ್ಕೂ ಬೇತೇಲಿಗೂ ಮಧ್ಯದಲ್ಲಿರುವ ‘ದೆಬೋರಳ ಖರ್ಜೂರ ವೃಕ್ಷ’ವೆಂದು ಹೆಸರುಗೊಂಡ ಮರದ ಕೆಳಗೆ ಆಸೀನಳಾಗಿರುತ್ತಿದ್ದಳು. ಇಸ್ರಯೇಲರು ನ್ಯಾಯತೀರ್ಪಿಗಾಗಿ ಆಕೆಯ ಬಳಿಗೆ ಬರುತ್ತಿದ್ದರು.
6 : ಆಕೆ ನಫ್ತಾಲಿ ದೇಶದ ಕೆದೆಷ್ ಊರಿನಲ್ಲಿದ್ದ ಅಬೀನೋವಮನ ಮಗ ಬಾರಾಕನನ್ನು ಬರಹೇಳಿ ಅವನಿಗೆ, “ನಿಶ್ಚಯವಾಗಿ ಇಸ್ರಯೇಲರ ದೇವರಾದ ಸರ್ವೇಶ್ವರ ನಿನಗೆ ಆಜ್ಞಾಪಿಸಿದ್ದಾರೆ: ‘ನೀನೆದ್ದು ನಫ್ತಾಲಿ ಮತ್ತು ಜೆಬುಲೂನ್ ಕುಲಗಳಿಂದ ಹತ್ತುಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್ ಬೆಟ್ಟಕ್ಕೆ ಹೋಗು;
7 : ಯಾಬೀನನ ಸೇನಾಪತಿ ಸೀಸೆರನನ್ನು ನಿನ್ನ ಬಳಿಗೆ ಕೀಷೋನ್ ಹಳ್ಳಕ್ಕೆ ಎಳೆದುಕೊಂಡು ಬರುವರು. ಅವನಿಗೆ ರಥಗಳೂ ಸೇನಾಪಡೆಗಳೂ ಇದ್ದರೂ ನಾನು ನಿನಗೆ ಜಯವನ್ನು ದೊರಕಿಸುವೆನು’,” ಎಂದಳು.
8 : ಬಾರಾಕನು ಆಕೆಗೆ, “ನೀನು ನನ್ನ ಸಂಗಡ ಬರುವುದಾದರೆ ಹೋಗುತ್ತೇನೆ; ಇಲ್ಲವಾದರೆ ಹೋಗುವುದಿಲ್ಲ,” ಎಂದನು.
9 : ಆಕೆ, “ನಾನು ಹೇಗೂ ನಿನ್ನ ಸಂಗಡ ಬರುವೆನು; ಆದರೆ ಈ ಯುದ್ಧದಿಂದ ನಿನಗೆ ಗೌರವಗಿಟ್ಟದು; ಏಕೆಂದರೆ ಸರ್ವೇಶ್ವರ ಸೀಸೆರನನ್ನು ಒಬ್ಬ ಮಹಿಳೆಗೆ ಒಪ್ಪಿಸಿಕೊಡುವರು,” ಎಂದು ಹೇಳಿ ಬಾರಾಕನೊಡನೆ ಕೆದೆಷಿಗೆ ಹೋದಳು.
10 : ಬಾರಾಕನು ಜೆಬುಲೂನ್ಯರನ್ನೂ, ನಫ್ತಾಲ್ಯರನ್ನೂ ಕೆದೆಷಿಗೆ ಕರೆಸಿದನು. ಅವರಲ್ಲಿ ಹತ್ತು ಸಾವಿರ ಮಂದಿ ಅವನ ಹೆಜ್ಜೆಹಿಡಿದು ಯುದ್ಧಕ್ಕೆ ಹೋದರು. ದೆಬೋರಳೂ ಹೋದಳು.
11 : ಕೇನ್ಯನಾದ ಹೆಬೆರನು ಮೋಶೆಯ ಮಾವ ಹೋಬಾಬನ ವಂಶದ ಉಳಿದ ಕೇನ್ಯರನ್ನು ಬಿಟ್ಟು ಕೆದೆಷಿನ ಹತ್ತಿರ ಇರುವ ‘ಚಾನನ್ನೀಮ್’ ಎಂಬ ಊರಿನ ಏಲೋನ್ ವೃಕ್ಷದವರೆಗೆ ಬಂದು ಅಲ್ಲಿ ಗುಡಾರ ಹಾಕಿಕೊಂಡಿದ್ದನು.
12 : ಅಬೀನೋವಮನ ಮಗ ಬಾರಾಕನು ತಾಬೋರ್ ಬೆಟ್ಟವನ್ನೇರಿ ಬಂದಿದ್ದಾನೆಂಬ ವರ್ತಮಾನ ಸೀಸೆರನಿಗೆ ಮುಟ್ಟಿದಾಗ
13 : ಅವನು ತನ್ನ ಒಂಬೈನೂರು ಕಬ್ಬಿಣದ ರಥಗಳನ್ನೂ ಎಲ್ಲಾ ಸೈನ್ಯವನ್ನೂ ತೆಗೆದುಕೊಂಡು ಮ್ಲೇಚ್ಫರ ಹರೋಷೆತಿನಿಂದ ಕೀಷೋನ್ ಹಳ್ಳಕ್ಕೆ ಬಂದನು.
14 : ಆಗ ದೆಬೋರಳು ಬಾರಾಕನಿಗೆ, “ಏಳು, ಸರ್ವೇಶ್ವರ ಸೀಸೆರನನ್ನು ನಿನ್ನ ಕೈಗೆ ಒಪ್ಪಿಸುವ ದಿನ ಇದೇ; ನಿಶ್ಚಯವಾಗಿ ಅವರು ತಾವೇ ನಿನ್ನ ಮುಂದಾಗಿ ಯುದ್ಧಕ್ಕೆ ಹೊರಡುವರು,” ಎಂದಳು. ಬಾರಾಕನು ಬೇಗನೆ ಹತ್ತು ಸಾವಿರ ಜನರ ಸಹಿತ ತಾಬೋರ್ ಬೆಟ್ಟದಿಂದಿಳಿದನು.
15 : ಸರ್ವೇಶ್ವರ ಸೀಸೆರನನ್ನೂ ಅವನ ಎಲ್ಲಾ ಸೈನ್ಯರಥಗಳನ್ನೂ ಬಾರಾಕನ ಮುಂದೆ ಗಲಿಬಿಲಿಪಡಿಸಿ ಕತ್ತಿಗೆ ತುತ್ತಾಗಿಸಿದರು. ಸೀಸೆರನು ರಥದಿಂದ ಹಾರಿ ಓಡಿ ಹೋದನು.
16 : ಬಾರಾಕನು ಅವನ ಸೈನ್ಯರಥಗಳನ್ನು ಮ್ಲೇಚ್ಫರ ಹರೋಷೆತಿನವರೆಗೂ ಹಿಂದಟ್ಟಿದನು. ಸೀಸೆರನ ಸೈನ್ಯದವರೆಲ್ಲರು ಕತ್ತಿಯಿಂದ ಹತರಾದರು; ಒಬ್ಬನೂ ಉಳಿಯಲಿಲ್ಲ.
17 : ಹಾಚೋರಿನ ಅರಸ ಯೂಬೀನನಿಗೂ ಕೇನ್ಯನಾದ ಹೆಬೆರನ ಮನೆಯವರಿಗೂ ಸಮಾಧಾನ ಇದ್ದುದರಿಂದ ಸೀಸೆರನು ಕಾಲುನಡೆಯಾಗಿ ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳ ಗುಡಾರದ ಕಡೆಗೆ ಹೋದನು.
18 : ಯಾಯೇಲಳು ಹೊರಗೆಹೋಗಿ ಸೀಸೆರನನ್ನು ಎದುರುಗೊಂಡು ಅವನಿಗೆ, “ಒಡೆಯಾ, ಒಳಗೆ ಬನ್ನಿ; ಹೆದರಬೇಡಿ, ನಮ್ಮಲ್ಲಿಗೆ ಬನ್ನಿ,” ಎನ್ನಲು ಅವನು ಗುಡಾರದೊಳಗೆ ಹೋದನು. ಆಗ ಆಕೆ ಅವನನ್ನು ಕಂಬಳಿಯಿಂದ ಮುಚ್ಚಿದಳು.
19 ಅವನು ಆಕೆಗೆ, “ದಯವಿಟ್ಟು ಸ್ವಲ್ಪ ನೀರನ್ನು ಕೊಡು, ನನಗೆ ಬಹಳ ದಾಹವಾಗಿದೆ,” ಎಂದನು. ಆಕೆ ಬುದ್ದಲಿಯನ್ನು ಬಿಚ್ಚಿ ಹಾಲನ್ನು ಕುಡಿಯಕೊಟ್ಟು ಅವನನ್ನು ಮತ್ತೆ ಮುಚ್ಚಿದಳು.
20 : ಅವನು ಆಕೆಗೆ, “ನೀನು ಗುಡಾರದ ಬಾಗಿಲಲ್ಲೇ ನಿಂತಿರು; ಯಾರಾದರೂ ಬಂದು ‘ಇಲ್ಲಿ ಒಬ್ಬ ಮನುಷ್ಯ ಇರುವನೇ?’ ಎಂದು ವಿಚಾರಿಸಿದರೆ, ‘ಇಲ್ಲ’ ಎನ್ನು” ಎಂದು ಹೇಳಿದನು.
21 : ಆದರೆ ಹೆಬೆರನ ಹೆಂಡತಿ ಯಾಯೇಲಳು ಕೈಯಲ್ಲಿ ಗುಡಾರದ ಗೂಟವನ್ನೂ ಒಂದು ಕೊಡತಿಯನ್ನೂ ತೆಗೆದುಕೊಂಡು ಅವನು ಆಯಾಸದಿಂದ ಗಾಢನಿದ್ರೆಯಲ್ಲಿದ್ದಾಗ ಮೆಲ್ಲಗೆ ಹತ್ತಿರ ಹೋಗಿ ಅವನ ಕಣತಲೆಯಲ್ಲಿ ಆ ಗೂಟವನ್ನು ಹೊಡೆದು ನೆಲಕ್ಕೆ ನಾಟಿಸಿದಳು; ಅವನು ಸತ್ತನು.
22 : ಅದೇ ಕ್ಷಣದಲ್ಲಿ ಸೀಸೆರನನ್ನ ಹಿಂದಟ್ಟುತ್ತಿದ್ದ ಬಾರಾಕನು ಅಲ್ಲಿಗೆ ಬಂದನು. ಯಾಯೇಲಳು ಹೊರಗೆ ಹೋಗಿ ಅವನನ್ನು ಎದುರುಗೊಂಡು, “ಬಾ, ನೀನು ಹುಡುಕುವ ಮನುಷ್ಯನನ್ನು ತೋರಿಸುತ್ತೇನೆ,” ಎಂದು ಹೇಳಲು ಅವನು ಒಳಗೆ ಹೋಗಿ ಸೀಸೆರನು ಸತ್ತುಬಿದ್ದದ್ದನ್ನು ಕಂಡನು. ಅವನ ತಲೆಯಲ್ಲಿ ಗೂಟವು ಜಡಿದಿತ್ತು.
23 : ಆ ದಿನದಂದು ದೇವರು ಕಾನಾನ್ಯ ರಾಜನಾದ ಯಾಬೀನನನ್ನು ಇಸ್ರಯೇಲರಿಗೆ ಶರಣಾಗತನಾಗುವಂತೆ ಮಾಡಿದರು.
24 : ಇಸ್ರಯೇಲರು ಹೆಚ್ಚು ಹೆಚ್ಚು ಬಲಗೊಂಡದ್ದರಿಂದ ಕಾನಾನ್ಯರ ಅರಸ ಯಾಬೀನನು ಪೂರ್ಣವಾಗಿ ಸೋತು ನಿರ್ನಾಮವಾದನು.

Holydivine