Judges - Chapter 21
Holy Bible

1 : ಇಸ್ರಯೇಲರೆಲ್ಲರೂ ಮಿಚ್ಫೆಯಲ್ಲಿ ಇದ್ದಾಗ ತಾವು ಬೆನ್ಯಾವಿೂನ್ಯರಿಗೆ ತಮ್ಮ ಹೆಣ್ಣುಗಳನ್ನು ಕೊಡುವುದಿಲ್ಲವೆಂದು ಆಣೆಯಿಟ್ಟಿದ್ದರು.
2 : ಅವರು ಬೇತೇಲಿಗೆ ಬಂದು ಸಾಯಂಕಾಲದವರೆಗೆ ದೇವರ ಮುಂದೆ ಕುಳಿತು ಗಟ್ಟಿಯಾಗಿ ಅಳುತ್ತಾ
3 : “ಸರ್ವೇಶ್ವರಾ, ಇಸ್ರಯೇಲರ ದೇವರೇ, ನಮ್ಮಲ್ಲಿ ಹೀಗೆ ಏಕಾಯಿತು? ಇಸ್ರಯೇಲರ ಒಂದು ಕುಲ ಹಾಳಾಗಿಹೋಯಿತಲ್ಲಾ!” ಎಂದು ಕೂಗಿಕೊಂಡರು.
4 : ಮರುದಿವಸ ಅವರು ಬೆಳಿಗ್ಗೆ ಎದ್ದು ಬಲಿಪೀಠವನ್ನು ಕಟ್ಟಿ ದಹನಬಲಿಗಳನ್ನೂ ಶಾಂತಿಸಮಾಧಾನಬಲಿಗಳನ್ನೂ ಸಮರ್ಪಿಸಿದರು.
5 : ಮತ್ತು ಸರ್ವೇಶ್ವರನ ಮುಂದೆ ಸಭೆ ನೆರೆದಾಗ ಅದಕ್ಕೆ ಬಾರದೆ ಇದ್ದಂಥ ಇಸ್ರಯೇಲರು ಯಾರಾರೆಂದು ವಿಚಾರಮಾಡಿದರು. ಏಕೆಂದರೆ ಮಿಚ್ಫೆಯಲ್ಲಿ, “ಸರ್ವೇಶ್ವರನ ಸನ್ನಿಧಿಗೆ ಬಾರದವರನ್ನು ಕೊಂದುಹಾಕುವೆವೆಂದು ಆಣೆಯಿಟ್ಟು ಅವರು ದೃಢಪ್ರಮಾಣ ಮಾಡಿದ್ದರು.
6 : ಇಸ್ರಯೇಲರು ತಮ್ಮ ಬಂಧುಗಳಾದ ಬೆನ್ಯಾವಿೂನ್ಯರ ಅವಸ್ಥೆಯನ್ನು ನೆನೆಸಿ ದುಃಖದಿಂದ, “ಅಯ್ಯೋ, ಇಸ್ರಯೇಲರಾದ ನಮ್ಮಲ್ಲಿ ಒಂದು ಕುಲ ಕಡಿಮೆಯಾಯಿತಲ್ಲಾ;
7 : ಜೀವದಿಂದುಳಿದವರಿಗೆ ಹೆಂಡತಿಯರನ್ನು ದೊರಕಿಸಿಕೊಡುವುದು ಹೇಗೆ? ನಮ್ಮ ಹೆಣ್ಣುಗಳನ್ನು ಅವರಿಗೆ ಕೊಡುವುದಿಲ್ಲವೆಂದು ಸರ್ವೇಶ್ವರನ ಹೆಸರಿನಲ್ಲಿ ಆಣೆಯಿಟ್ಟೆವಲ್ಲಾ,” ಎಂದು ಗೋಳಾಡಿದರು.
8 : ಮಿಚ್ಫೆಯಲ್ಲಿ ಸರ್ವೇಶ್ವರನ ಮುಂದೆ ಸಭೆಸೇರಿದ್ದಾಗ ಅದಕ್ಕೆ ಬಾರದಿದ್ದ ಇಸ್ರಯೇಲರು ಯಾರಾದರೂ ಇದ್ದಾರೋ ಎಂದು ವಿಚಾರಿಸುವಲ್ಲಿ, ಯಾಬೇಷ್ ಗಿಲ್ಯಾದಿನಿಂದ ಒಬ್ಬನೂ ಬರಲಿಲ್ಲವೆಂದು ಗೊತ್ತಾಯಿತು.
9 : ಜನರನ್ನು ಲೆಕ್ಕಿಸಿದಾಗ ಯಾಬೇಷ್ ಗಿಲ್ಯಾದಿನಿಂದ ಯಾರೂ ಬರಲಿಲ್ಲವೆಂಬುದು ದೃಢವಾಯಿತು.
10 : ಆಗ ಅವರು ತಮ್ಮಲ್ಲಿಂದ ಹನ್ನೆರಡು ಸಾವಿರಮಂದಿ ಪರಾಕ್ರಮ ಶಾಲಿಗಳನ್ನು ಆರಿಸಿಕೊಂಡು ಅವರಿಗೆ, “ನೀವು ಯಾಬೇಷ್ ಗಿಲ್ಯಾದಿಗೆ ಹೋಗಿ ಎಲ್ಲ ನಿವಾಸಿಗಳನ್ನೂ ಸ್ತ್ರೀಯರನ್ನೂ ಚಿಕ್ಕಮಕ್ಕಳನ್ನೂ ಬಿಡದೆ ಸಂಹರಿಸಬೇಕು;
11 : ಹೇಗೂ ಪುರುಷರೆಲ್ಲರನ್ನೂ ಮದುವೆಯಾದ ಸ್ತ್ರೀಯರನ್ನೂ ನಿರ್ಮೂಲಮಾಡುವುದು ನಿಮ್ಮ ಕೆಲಸ.” ಎಂದು ಆಜ್ಞಾಪಿಸಿ ಕಳುಹಿಸಿದರು.
12 : ಯಾಬೇಷ್ ಗಿಲ್ಯಾದಿನಲ್ಲಿ ಇನ್ನೂ ಮದುವೆಯಾಗದಿದ್ದ ನಾನೂರು ಮಂದಿ ಯುವತಿಯರು ಇದ್ದರು. ಪಟ್ಟಣವನ್ನು ನಾಶಪಡಿಸುವುದಕ್ಕೆ ಹೋದವರು ಇವರನ್ನು ಉಳಿಸಿ ಕಾನಾನ್ ನಾಡಿನ ಶಿಲೋವಿನಲ್ಲಿದ್ದ ಪಾಳೆಯಕ್ಕೆ ತೆಗೆದುಕೊಂಡು ಬಂದರು.
13 : ಅನಂತರ ಸರ್ವ ಸಭೆಯವರು ರಿಮ್ಮೋನ್ ಗಿರಿಯಲ್ಲಿದ್ದ ಬೆನ್ಯಾವಿೂನ್ಯರ ಬಳಿಗೆ ದೂತರನ್ನು ಕಳುಹಿಸಿ ಅವರಲ್ಲಿ ಸಮಾಧಾನ ವಾಕ್ಯವನ್ನು ಪ್ರಕಟಿಸಲು ಅವರು ತಿರುಗಿಬಂದರು.
14 : ಇಸ್ರಯೇಲರು ತಾವು ಯಾಬೇಷ್ ಗಿಲ್ಯಾದಿನಿಂದ ಉಳಿಸಿತಂದ ಕನ್ಯೆಯರನ್ನು ಅವರಿಗೆ ಮದುವೆ ಮಾಡಿಕೊಟ್ಟರು; ಅವರು ಸಾಯಲಿಲ್ಲ.
15 : ಸರ್ವೇಶ್ವರ ನಮ್ಮಲ್ಲಿ ಒಂದು ಲೋಪವನ್ನುಂಟುಮಾಡಿದ್ದಾರೆಂದು ಇಸ್ರಯೇಲರು ಬೆನ್ಯಾವಿೂನ್ಯರ ವಿಷಯದಲ್ಲಿ ದುಃಖಪಟ್ಟರು.
16 : ಸಭೆಯ ಹಿರಿಯರು, “ಉಳಿದಿರುವ ಬೆನ್ಯಾವಿೂನ್ಯರಿಗೆ ಹೆಂಡತಿಯರನ್ನು ದೊರಕಿಸುವುದು ಹೇಗೆ? ಅವರ ಸ್ತ್ರೀಯರೆಲ್ಲ ಸಂಹೃತರಾದರಲ್ಲಾ.
17 : ಇಸ್ರಯೇಲರ ಒಂದು ಕುಲ ಸಂಪೂರ್ಣವಾಗಿ ಅಳಿದು ಹೋಗಬಾರದು. ತಪ್ಪಿಸಿಕೊಂಡು ಉಳಿದಿರುವ ಬೆನ್ಯಾವಿೂನ್ಯರಿಗೆ ಬಾಧ್ಯಸ್ತರು ಹುಟ್ಟಬೇಕಲ್ಲವೆ?
18 : ಬೆನ್ಯಾವಿೂನ್ಯರಿಗೆ ತಮ್ಮ ಹೆಣ್ಣುಗಳನ್ನು ಕೊಡುವ ಇಸ್ರಯೇಲರು ಶಾಪಗ್ರಸ್ತರಾಗಲಿ! ಎಂದು ಆಣೆಯಿಟ್ಟು ಕೊಂಡಿದ್ದೇವೆ ಇದರಿಂದ ನಾವು ಅವರಿಗೆ ನಮ್ಮ ಹೆಣ್ಣುಗಳನ್ನು ಕೊಡುವುದಕ್ಕಾಗುವುದಿಲ್ಲ”
19 : ಎಂದು ಮಾತನಾಡಿಕೊಳ್ಳುತ್ತಿರುವಾಗ ಶಿಲೋವಿನಲ್ಲಿ ವರ್ಷ ವರ್ಷ ಸರ್ವೇಶ್ವರನ ಉತ್ಸವ ನಡೆಯುತ್ತದೆಂಬುದು ಅವರಿಗೆ ನೆನಪಿಗೆ ಬಂದಿತು. (ಶಿಲೋ ಎಂಬುದು ಬೇತೇಲಿನ ಉತ್ತರಕ್ಕೂ ಬೇತೇಲಿನಿಂದ ಶೆಕೆಮಿಗೆ ಹೋಗುವ ರಾಜಮಾರ್ಗದ ಪೂರ್ವಕ್ಕೂ ಲೇಬೋನದ ದಕ್ಷಿಣಕ್ಕೂ ಇರುತ್ತದೆ.)
20 : ಆಗ ಅವರು ಬೆನ್ಯಾವಿೂನ್ಯರನ್ನು ಕರೆದು ಅವರಿಗೆ, “ಇಗೋ, ನೀವು ದ್ರಾಕ್ಷೀ ತೋಟಗಳಲ್ಲಿ ಅಡಗಿಕೊಳ್ಳಿರಿ;
21 : ಶಿಲೋಮಿನ ಕನ್ಯೆಯರು ಹೊರಗೆ ಬಂದು ನಾಟ್ಯವಾಡುವಾಗ ನೀವು ತೋಟಗಳಿಂದ ಹೊರಗೆ ಬಂದು ಪ್ರತಿಯೊಬ್ಬನು ತನ ತನಗೆ ಶಿಲೋವಿನ ಕನ್ನಿಕೆಗಳಿಂದ ಒಬ್ಬಳನ್ನು ಹೆಂಡತಿಯಾಗಿ ತೆಗೆದುಕೊಂಡು ನಿಮ್ಮ ಪ್ರಾಂತ್ಯಕ್ಕೆ ಓಡಿ ಹೋಗಿರಿ.
22 : ಅವರ ತಂದೆಗಳೂ ಅಣ್ಣತಮ್ಮಂದಿರೂ ನಮ್ಮ ಹತ್ತಿರ ದೂರುತಂದರೆ ನಾವು ಅವರಿಗೆ, ‘ನಮ್ಮನ್ನು ನೋಡಿ ಅವರಿಗೆ ಕೃಪೆತೋರಿಸಿ; ಯುದ್ಧ ನಿಮಿತ್ತ ಪ್ರತಿಯೊಬ್ಬನಿಗೆ ಹೆಣ್ಣನ್ನು ದೊರಕಿಸುವುದು ನಮ್ಮಿಂದಾಗಲಿಲ್ಲ; ಮತ್ತು ನಿಮ್ಮ ಹೆಣ್ಣುಮಕ್ಕಳನ್ನು ನೀವೇ ಕೊಡಲಿಲ್ಲವಾದ್ದರಿಂದ ನೀವು ನಿರಪರಾಧಿಗಳು’ ಎಂದು ಹೇಳಿ ಸಮಾಧಾನಪಡಿಸುವೆವು” ಎಂದರು.
23 : ಅದರಂತೆಯೇ ಬೆನ್ಯಾವಿೂನ್ಯರು ನಾಟ್ಯವಾಡುವುದಕ್ಕಾಗಿ ಹೊರಗೆ ಬಂದಿದ್ದ ಕನ್ಯೆಯರಲ್ಲಿ ತಮ್ಮ ಸಂಖ್ಯೆಗೆ ಸರಿದೂಗುವಷ್ಟು ಮಂದಿಯನ್ನು ಹೆಂಡತಿಯರನ್ನಾಗಿ ಹಿಡಿದುಕೊಂಡು ತಮ್ಮ ಸ್ವಾಸ್ತ್ಯಭೂಮಿಗೆ ಹೋಗಿ ಅಲ್ಲಿ ಪಟ್ಟಣಗಳನ್ನು ಕಟ್ಟಿ ವಾಸಮಾಡಿದರು.
24 : ಅನಂತರ ಇಸ್ರಯೇಲರು ತಮ್ಮ ತಮ್ಮ ಕುಲಗೋತ್ರಗಳಿಗೆ ಸೊತ್ತಾಗಿ ಸಿಕ್ಕಿದ ಪ್ರದೇಶಗಳಿಗೆ ಹಿಂದಿರುಗಿ ಹೋದರು.
25 : ಆ ಕಾಲದಲ್ಲಿ ಇಸ್ರಯೇಲರಲ್ಲಿ ಅರಸನಿರಲಿಲ್ಲ; ಪ್ರತಿಯೊಬ್ಬನು ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದನು.

Holydivine