Judges - Chapter 20
Holy Bible

1 : ದಾನ್ ಪಟ್ಟಣದಿಂದ ಬೇರ್ಷೆಬದವರೆಗಿರುವ ಪ್ರಾಂತ್ಯಗಳಲ್ಲಿಯೂ ಗಿಲ್ಯಾದಿನಲ್ಲಿಯೂ ಇರುವ ಇಸ್ರಯೇಲರೆಲ್ಲರು ಏಕ ಮನಸ್ಸಿನಿಂದ ಹೊರಟು ಮಿಚ್ಫೆಗೆ ಬಂದು ಸರ್ವೇಶ್ವರನ ಸನ್ನಿಧಿಯಲ್ಲಿ ಸಭೆ ಸೇರಿದರು.
2 : ಆ ದೇವಪ್ರಜಾಸಭೆಯಲ್ಲಿ ಎಲ್ಲಾ ಕುಲಾಧಿಪತಿಗಳೂ ಯುದ್ಧಸನ್ನದ್ಧರಾದ ನಾಲ್ಕು ಲಕ್ಷ ಕಾಲಾಳುಗಳೂ ಇದ್ದರು.
3 : (ಇಸ್ರಯೇಲರು ಕೂಡಿಕೊಂಡು ಮಿಚ್ಫೆಗೆ ಬಂದಿದ್ದಾರೆಂಬ ವರ್ತಮಾನ ಬೆನ್ಯಾವಿೂನ್ಯರಿಗೆ ಮುಟ್ಟಿತು.) ಇಸ್ರಯೇಲರು, “ಈ ದುಷ್ಟತನ ಹೇಗೆ ನಡೆಯಿತೆಂದು ತಿಳಿಸಿರಿ,” ಎಂದು ಕೇಳಿದರು.
4 : ಹತಳಾದ ಸ್ತ್ರೀಯ ಗಂಡನಾದ ಆ ಲೇವಿಯನು, “ನಾನು ನನ್ನ ಉಪಪತ್ನಿಯ ಸಹಿತನಾಗಿ ಬೆನ್ಯಾವಿೂನ್ಯರ ಊರಾದ ಗಿಬೆಯದಲ್ಲಿ ಒಂದು ರಾತ್ರಿ ಇಳಿದುಕೊಂಡಿದ್ದೆ.
5 : ಆ ಊರಿನ ಜನರು ಅದೇ ರಾತ್ರಿ ನಾನು ಇಳಿದುಕೊಂಡಿದ್ದ ಮನೆಯನ್ನು ಸುತ್ತಿಕೊಂಡು ನನ್ನನ್ನು ಕೊಲ್ಲಬೇಕೆಂದಿದ್ದರು; ಮತ್ತು ನನ್ನ ಉಪಪತ್ನಿಯ ಮೇಲೆ ಅತ್ಯಾಚಾರಮಾಡಿದರು. ಆಕೆ ಸತ್ತಳು.
6 : ಅವರು ಇಸ್ರಯೇಲರಲ್ಲಿ ನಡೆಸಿದ ಇಂಥ ಕೆಟ್ಟ ಹಾಗು ಹುಚ್ಚುಗೆಲಸ ಎಲ್ಲರಿಗೂ ಗೊತ್ತಾಗಲೆಂದು ನಾನು ಆಕೆಯ ಶವವನ್ನು ತುಂಡುಮಾಡಿ ಇಸ್ರಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿದೆನು.
7 : ಇಲ್ಲಿ ಕೂಡಿರುವ ಎಲ್ಲ ಇಸ್ರಯೇಲರೇ, ಈಗ ನಿಮ್ಮ ಆಲೋಚನೆಗಳನ್ನೂ ಅಭಿಪ್ರಾಯಗಳನ್ನೂ ಹೇಳಿ,” ಎಂದನು.
8 : ಇದನ್ನು ಕೇಳಿ ಆ ಜನರು ಏಕಮನಸ್ಸಿನಿಂದ, “ನಮ್ಮಲ್ಲಿ ಯಾವನೂ ತನ್ನ ಗುಡಾರಕ್ಕೆ ಹೋಗಬಾರದು; ತನ್ನ ಮನೆಗೆ ಹಿಂದಿರುಗಕೂಡದು.
9 : ನಾವು ಚೀಟು ಹಾಕೋಣ; ಅದು ಬಿದ್ದ ಪ್ರಕಾರವೇ ಗಿಬೆಯದವರಿಗೆ ವಿರುದ್ಧ ಯುದ್ಧಕ್ಕೆ ಹೋಗೋಣ.
10 : ಇಸ್ರಯೇಲರ ಕುಲಗಳಲ್ಲಿ ನೂರಕ್ಕೆ ಹತ್ತು, ಸಾವಿರಕ್ಕೆ ನೂರು, ಹತ್ತು ಸಾವಿರಕ್ಕೆ ಸಾವಿರ ಈ ಪ್ರಕಾರವೇ ಜನರನ್ನು ಆರಿಸಿಕೊಂಡು ಅವರನ್ನು ಆಹಾರ ತರುವುದಕ್ಕಾಗಿ ಕಳುಹಿಸೋಣ. ಅವರು ಬಂದ ಮೇಲೆ ಬೆನ್ಯಾವಿೂನ್ಯರಾದ ಗಿಬೆಯದವರು ಇಸ್ರಯೇಲರಲ್ಲಿ ನಡೆಸಿದ ದುಷ್ಕರ್ಮಕ್ಕಾಗಿ ಅವರನ್ನು ದಂಡಿಸೋಣ,” ಎಂದುಕೊಂಡರು.
11 : ಹೀಗೆ ಅವರೆಲ್ಲರೂ ಏಕಮನಸ್ಸಿನಿಂದ ಆ ಪಟ್ಟಣಕ್ಕೆ ವಿರುದ್ಧವಾಗಿ ಕೂಡಿಕೊಂಡರು.
12 : ಅವರು ಬೆನ್ಯಾವಿೂನ್ಯರ ಸಮಸ್ತ ಕುಲಸ್ಥರ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ, “ನಿಮ್ಮಲ್ಲಿ ನಡೆದ ಈ ದುಷ್ಕರ್ಮ ಎಂಥದು?
13 : ಈಗ ಗಿಬೆಯ ಊರಲ್ಲಿರುವ ಆ ನೀಚರನ್ನು ನಮಗೆ ಒಪ್ಪಿಸಿರಿ; ನಾವು ಅವರನ್ನು ಕೊಂದು ಇಸ್ರಯೇಲರ ಮಧ್ಯೆಯಿಂದ ಇಂಥ ದುಷ್ಟತನವನ್ನು ತೆಗೆದು ಹಾಕುತ್ತೇವೆ,” ಎಂದು ಹೇಳಿಸಿದರು.
14 : ಆದರೆ ಬೆನ್ಯಾವಿೂನ್ಯರು ತಮ್ಮ ಬಂಧುಗಳ ಮಾತಿಗೆ ಕಿವಿಗೊಡದೆ ತಮ್ಮ ಎಲ್ಲ ಊರುಗಳಿಂದ ಗಿಬೆಯಕ್ಕೆ ಬಂದು ಇಸ್ರಯೇಲರ ವಿರುದ್ಧ ಯುದ್ಧಕ್ಕೆ ನಿಂತರು.
15 : ಆ ದಿವಸದಲ್ಲಿ ಆಯಾ ಊರುಗಳಿಂದ ಯುದ್ಧಸನ್ನದ್ದರಾಗಿ ಕೂಡಿಬಂದ ಬೆನ್ಯಾವಿೂನ್ಯರ ಸಂಖ್ಯೆ ಇಪ್ಪತ್ತಾರು ಸಾವಿರ. ಇವರಲ್ಲದೆ ಗಿಬೆಯದಲ್ಲಿಯೇ ಏಳುನೂರು ಮಂದಿ ಯುದ್ಧವೀರರಿದ್ದರು.
16 : ಈ ಎಲ್ಲ ಜನರಲ್ಲಿ ಏಳುನೂರು ಮಂದಿ ಎಡಚರಾದ ಯುದ್ಧವೀರರಿದ್ದರು. ಅವರಲ್ಲಿ ಪ್ರತಿಯೊಬ್ಬನು ಕೂದಲ ಎಳೆಯಷ್ಟೂ ಗುರಿತಪ್ಪದ ಹಾಗೆ ಕವಣೆಯನ್ನು ಹೊಡೆಯುವುದರಲ್ಲಿ ನಿಪುಣನು;
17 : ಬೆನ್ಯಾವಿೂನ್ಯರಲ್ಲದ ಇಸ್ರಯೇಲರಲ್ಲಿ ನಾಲ್ಕು ಲಕ್ಷ ಯೋಧರು ಇದ್ದರು; ಇವರೆಲ್ಲರು ವೀರರೇ.
18 : ಇಸ್ರಯೇಲರು ಬೇತೇಲಿಗೆ ಹೋಗಿ, ಬೆನ್ಯಾವಿೂನ್ಯರ ಮೇಲೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು ಎಂದು ದೇವರಾದ ಸರ್ವೇಶ್ವರನನ್ನು ಕೇಳಲು ಅವರು, “ಮೊದಲು ಯೆಹೂದಕುಲದವರು ಹೋಗಲಿ,” ಎಂದು ಹೇಳಿದರು.
19 : .ಇಸ್ರಯೇಲರು ಬೆಳಿಗ್ಗೆ ಹೊರಟುಹೋಗಿ ಗಿಬೆಯರ ಎದುರಿನಲ್ಲಿ ಪಾಳೆಯ ಮಾಡಿಕೊಂಡರು.
20 : ಬೆನ್ಯಾವಿೂನ್ಯರೊಡನೆ ಯುದ್ಧ ಮಾಡುವುದಕ್ಕೆ ಸಿದ್ಧರಾಗಿ ಗಿಬೆಯದ ಎದುರಿನಲ್ಲಿ ವ್ಯೂಹ ಕಟ್ಟಿ ನಿಂತರು.
21 : ಆ ದಿನ ಬೆನ್ಯಾವಿೂನ್ಯರು ಗಿಬೆಯದಿಂದ ಹೊರಗೆ ಬಂದು ಇಸ್ರಯೇಲರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ನೆಲಕ್ಕುರುಳಿಸಿದರು.
22 : ಇಸ್ರಯೇಲರು ಪುನಃ ಧೈರ್ಯ ತಂದುಕೊಂಡು ಮೊದಲನೆಯ ದಿನ ವ್ಯೂಹಕಟ್ಟಿದ ಸ್ಥಳದಲ್ಲೇ ಮತ್ತೆ ವ್ಯೂಹಕಟ್ಟಿ ಯುದ್ಧಕ್ಕೆ ನಿಂತರು.
23 : (ಇಸ್ರಯೇಲರು ಹೋಗಿ ಸರ್ವೇಶ್ವರನ ಮುಂದೆ ದುಃಖಿಸುತ್ತಾ, “ನಾವು ನಮ್ಮ ಬಂದುಗಳಾದ ಬೆನ್ಯಾವಿೂನ್ಯರೊಡನೆ ಯುದ್ಧಮಾಡಬೇಕೆ?” ಎಂದು ಕೇಳಲು ಅವರು, “ಹೋಗಿ ಯುದ್ಧಮಾಡಿ”, ಎಂದರು.
24 : ಆದ್ದರಿಂದ ಅವರು ಎರಡನೆಯ ದಿನದಲ್ಲಿ ಯುದ್ಧಕ್ಕೆ ಸಿದ್ಧರಾಗಿ ಬೆನ್ಯಾವಿೂನ್ಯರ ಸವಿೂಪಕ್ಕೆ ಬಂದರು.)
25 : ಬೆನ್ಯಾವಿೂನ್ಯರು ಎರಡನೆಯ ದಿನದಲ್ಲಿಯೂ ಗಿಬೆಯದಿಂದ ಹೊರಗೆ ಬಂದು ಇಸ್ರಯೇಲರಲ್ಲಿ ಹದಿನೆಂಟು ಸಾವಿರ ಮಂದಿ ಯುದ್ಧವೀರರನ್ನು ನೆಲಕ್ಕೆ ಬೀಳಿಸಿದರು.
26 : ಆಗ ಎಲ್ಲ ಜನರು ಬೇತೇಲಿಗೆ ಹೋಗಿ ಅಲ್ಲಿ ಸರ್ವೇಶ್ವರನ ಮುಂದೆ ಅಳುತ್ತಾ ಕುಳಿತು. ಸಾಯಂಕಾಲದವರೆಗೆ ಉಪವಾಸಮಾಡಿದರು. ಇದಲ್ಲದೆ ಅವರು ಸರ್ವೇಶ್ವರನಿಗೆ ದಹನಬಲಿಗಳನ್ನೂ ಶಾಂತಿಸಮಾಧಾನ ಬಲಿಗಳನ್ನೂ ಸಮರ್ಪಿಸಿದರು.
27 : ಆ ಕಾಲದಲ್ಲಿ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವು ಆ ಊರೊಳಗೆ ಇತ್ತು.
28 : ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸನು ಯಾಜಕ ಸೇವೆಮಾಡುತ್ತಿದ್ದನು. ಇಂತಿರಲು ಇಸ್ರಯೇಲರು, “ನಾವು ನಮ್ಮ ಬಂಧುಗಳಾದ ಬೆನ್ಯಾವಿೂನ್ಯರೊಡನೆ ಯುದ್ಧಕ್ಕೆ ಹೋಗಬೇಕೋ ಬೇಡವೋ” ಎಂದು ಸರ್ವೇಶ್ವರನನ್ನು ಕೇಳಿದರು. ಸರ್ವೇಶ್ವರನು ಅವರಿಗೆ, “ಹೋಗಿ, ನಾಳೆ ಅವರನ್ನು ನಿಮ್ಮ ಕೈಗೆ ಒಪ್ಪಿಸುವೆನು,” ಎಂದರು.
29 : ಆಗ ಇಸ್ರಯೇಲರು ಗಿಬೆಯದ ಸುತ್ತಲೂ ಕೆಲವರನ್ನು ಹೊಂಚುಹಾಕುವುದಕ್ಕೆ ಇರಿಸಿ,
30 : ಉಳಿದವರು ಬೆನ್ಯಾವಿೂನ್ಯರ ಸಂಗಡ ಕಾದಾಡುವುದಕ್ಕೋಸ್ಕರ ಮುಂಚಿನಂತೆ ಮೂರನೆಯ ದಿನ ಗಿಬೆಯದ ಸವಿೂಪದಲ್ಲಿ ವ್ಯೂಹಕಟ್ಟಿದರು.
31 : ಬೆನ್ಯಾವಿೂನ್ಯರು ಇಸ್ರಯೇಲರೊಡನೆ ಯುದ್ಧ ಮಾಡುವುದಕ್ಕಾಗಿ ಪಟ್ಟಣವನ್ನು ಬಿಟ್ಟು ದೂರಕ್ಕೆ ಬಂದರು. ಅವರು ಮುಂಚಿನಂತೆ ಜನರನ್ನು ವಧಿಸುವುದಕ್ಕೆ ಪ್ರಾರಂಭಿಸಿ ಬೇತೇಲಿಗೂ ಬೈಲಿನಲ್ಲಿರುವ ಗಿಬೆಯಕ್ಕೂ ಹೋಗುವ ರಾಜಮಾರ್ಗಗಳಲ್ಲಿ ಸುಮಾರು ಮೂವತ್ತು ಮಂದಿಯನ್ನು ಹತಿಸಿದರು.
32 : ಬೆನ್ಯಾವಿೂನ್ಯರು, “ಅವರು ಮುಂಚಿನಂತೆ ಈಗಲೂ ಸೋತುಹೋಗುತ್ತಾರೆ” ಎಂದು ನೆನೆಸಿದರು. ಇಸ್ರಯೇಲರಾದರೋ, “ಅವರು ತಮ್ಮ ಪಟ್ಟಣಕ್ಕೆ ದೂರವಾಗುವಂತೆ ನಾವು ಸ್ವಲ್ಪ ದೂರ ಓಡಿ ಹೋಗೋಣ,” ಎಂದು ಮಾತನಾಡಿಕೊಂಡು
33 ತಾವು ಮೊದಲು ನಿಂತ ಸ್ಥಳದಿಂದ ಓಡತೊಡಗಿದರು. ಬಾಳ್ ತಾಮಾರಿಗೆ ಮುಟ್ಟಿದ ಕೂಡಲೆ ಅಲ್ಲಿ ನಿಂತು ಮತ್ತೆ ಯುದ್ಧವನ್ನು ಪ್ರಾರಂಭಿಸಿದರು. ಅಷ್ಟರಲ್ಲಿ ಹೊಂಚುಹಾಕುತ್ತಿದ್ದವರು ತಾವು ಅಡಗಿಕೊಂಡಿದ್ದ ಗಿಬೆಯದ ಮೈದಾನಿನಿಂದ ಎದ್ದು ಪಟ್ಟಣದ ಮುಂದೆ ಬಂದರು;
34 : ಅವರ ಸಂಖ್ಯೆ ಸುಮಾರು ಹತ್ತು ಸಾವಿರ ಮಂದಿ ಯುದ್ಧವೀರರು. ಯುದ್ಧ ಬಹಳ ಘೋರವಾಯಿತು. ತಮಗೆ ಅಪಾಯ ಒದಗಿ ಬಂದಿದೆ ಎಂಬುದು ಬೆನ್ಯಾವಿೂನ್ಯರಿಗೆ ಇನ್ನೂ ಗೊತ್ತಾಗಲಿಲ್ಲ.
35 : ಸರ್ವೇಶ್ವರ ಇಸ್ರಯೇಲರಿಗೆ ಜಯಕೊಟ್ಟದ್ದರಿಂದ ಅವರು ಆ ದಿನದಲ್ಲಿ ಇಪ್ಪತ್ತೈದು ಸಾವಿರದ ನೂರು ಮಂದಿ ಬೆನ್ಯಾವಿೂನ್ಯ ಯೋಧರನ್ನು ಕೊಂದುಹಾಕಿದರು. 36ತಾವು ಸೋತುಹೋದೆವೆಂಬುದು ಬೆನ್ಯಾವಿೂನ್ಯರಿಗೆ ಆಗ ತಿಳಿಯಿತು.
36 : ತಾವು ಸೋತುಹೋದೆವೆಂಬುದು ಬೆನ್ಯಾವಿೂನ್ಯರಿಗೆ ಆಗ ತಿಳಿಯಿತು. ಇಸ್ರಯೇಲರ ವಿಜಯ (ಇಸ್ರಯೇಲರಿಗೆ ತಾವು ಗಿಬೆಯದ ಸವಿೂಪದಲ್ಲಿ ಹೊಂಚುಹಾಕುವುದಕ್ಕಾಗಿ ಇಟ್ಟ ಜನರಲ್ಲಿ ಭರವಸೆಯಿತ್ತು. ಆದುದರಿಂದ ತಮ್ಮ ಸ್ಥಳವನ್ನು ಬಿಟ್ಟು ಬೆನ್ಯಾವಿೂನ್ಯರ ಮುಂದೆ ಓಡಿಹೋದರು.
37 : ಅಷ್ಟರಲ್ಲಿ ಅಡಗಿಕೊಂಡಿದ್ದವರು ಎದ್ದು ಗಿಬೆಯಕ್ಕೆ ಶೀಘ್ರವಾಗಿ ಹೋಗಿ ಅದರೊಳಗಿದ್ದ ಎಲ್ಲರನ್ನು ಕತ್ತಿಯಿಂದ ಸಂಹರಿಸಿದರು.
38 : ಅಡಗಿದ್ದವರು ಊರಿಗೆ ಬೆಂಕಿಹೊತ್ತಿಸಿ ಹೊಗೆ ಏರಿಹೋಗುವಂತೆ ಮಾಡಿದ ಮೇಲೆ ಓಡಿ ಹೋಗುತ್ತಿದ್ದವರು ತಿರುಗಿಕೊಂಡು ಯುದ್ಧಕ್ಕೆ ನಿಲ್ಲಬೇಕೆಂದು ಹೊಂಚುಗಾರರೂ ಉಳಿದ ಇಸ್ರಯೇಲರೂ ತಮ್ಮತಮ್ಮೊಳಗೆ ಗೊತ್ತುಮಾಡಿದ್ದರು.
39 : ಬೆನ್ಯಾವಿೂನ್ಯರಾದರೋ, ಇಸ್ರಯೇಲರು ಮುಂಚಿನಂತೆ ನಮ್ಮ ಮುಂದೆ ಸೋತು ಹೋದರೆಂದು ನೆನೆಸಿ ಅವರನ್ನು ಸಂಹರಿಸಲು ಪ್ರಾರಂಭಿಸಿ ಸುಮಾರು ಮೂವತ್ತು ಮಂದಿಯನ್ನು ಕೊಂದು ಹಾಕಿದರು.
40 : ಆದರೆ ಪಟ್ಟಣದಿಂದ ಹೊಗೆಯೆದ್ದು ಸ್ತಂಭದೋಪಾದಿಯಲ್ಲಿ ಕಾಣಿಸಲು ಇಸ್ರಯೇಲರು ತಿರುಗಿ ನಿಂತರು.
41 : ಬೆನ್ಯಾವಿೂನ್ಯರು ಹಿಂದಿರುಗಿ ನೋಡಿ ತಮ್ಮ ಪಟ್ಟಣ ಅಗ್ನಿಗೆ ಆಹುತಿ ಆದದ್ದನ್ನು ಕಂಡು ತಮಗೆ ಅಪಾಯ ಪ್ರಾಪ್ತ ಆಯಿತೆಂದು ಕಳವಳಗೊಂಡರು.
42 : ಅವರು ಇಸ್ರಯೇಲರಿಗೆ ಬೆನ್ನುತೋರಿಸಿ ಅರಣ್ಯಮಾರ್ಗವಾಗಿ ಓಡಿಹೋದರು. ಆದರೆ ಸೈನಿಕರು ಅವರನ್ನು ಹಿಂದಟ್ಟಿದ್ದರಿಂದಲೂ ಪಟ್ಟಣಕ್ಕೆ ಬೆಂಕಿಹೊತ್ತಿಸಿದವರು ಬಂದುಬಿಟ್ಟದ್ದರಿಂದಲೂ ಅವರು ಉಭಯರ ಮಧ್ಯದಲ್ಲಿ ಸಿಕ್ಕಿಹಾಳಾದರು.
43 : ಇಸ್ರಯೇಲರು ಅವರನ್ನು ಸುತ್ತಿಕೊಂಡು ಎಲ್ಲಿಯೂ ಓಡಗೊಡದೆ ಗಿಬೆಯ ಊರಿನ ಪೂರ್ವದಿಕ್ಕಿನಲ್ಲಿ ಇರುವ ಮೆನೂಹದಲ್ಲಿ ತುಳಿದುಬಿಟ್ಟರು.
44 : ಈ ಪ್ರಕಾರ ಬೆನ್ಯಾವಿೂನ್ಯರಲ್ಲಿ ಹದಿನೆಂಟು ಸಾವಿರ ಮಂದಿ ಯುದ್ಧವೀರರು ಹತರಾದರು.
45 : ಇದಲ್ಲದೆ ಅವರು ಮರುಭೂಮಿಯಲ್ಲಿರುವ ರಿಮ್ಮೋನ್ ಗಿರಿಗೆ ಓಡಿಹೋಗುವಾಗ ಹಕ್ಕಲು ತೆನೆಗಳನ್ನೋ ಎಂಬಂತೆ ಐದು ಸಾವಿರ ಜನರನ್ನು ರಾಜಮಾರ್ಗಗಳಲ್ಲಿ ಕೊಂದುಹಾಕಿದರು. ಅಲ್ಲಿಂದ ಗಿದೋಮಿನವರೆಗೆ ಹಿಂದಟ್ಟಿ ಇನ್ನೂ ಎರಡು ಸಾವಿರ ಜನರನ್ನು ಹತಮಾಡಿದರು.
46 : ಹೀಗೆ ಆ ದಿವಸ ಬೆನ್ಯಾವಿೂನ್ಯರಲ್ಲಿ ಇಪ್ಪತ್ತೈದು ಸಾವಿರ ಯುದ್ದಸನ್ನದ್ಧರಾದ ಯೋಧರು ಸಂಹೃತರಾದರು.)
47 : ಆದರೆ ಆರುನೂರು ಮಂದಿ ಮರುಭೂಮಿಮಾರ್ಗವಾಗಿ ಓಡಿಹೋಗಿ ರಿಮ್ಮೋನ್ ಗಿರಿಯನ್ನು ಸೇರಿ ಅಲ್ಲಿ ನಾಲ್ಕು ತಿಂಗಳಿದ್ದರು.
48 : ಇಸ್ರಯೇಲರು ತಿರುಗಿಕೊಂಡು ಬೆನ್ಯಾವಿೂನ್ಯ ಪ್ರಾಂತ್ಯದ ಉಳಿದ ಗ್ರಾಮನಗರಗಳಿಗೆ ಹೋಗಿ ಅವುಗಳ ನಿವಾಸಿಗಳನ್ನೂ ದನಕುರಿಗಳನ್ನೂ ಸಿಕ್ಕಿದ್ದೆಲ್ಲವನ್ನೂ ಸಂಹರಿಸಿ ಎಲ್ಲ ಊರುಗಳಿಗೆ ಬೆಂಕಿ ಹೊತ್ತಿಸಿದರು.

Holydivine