Judith - Chapter 5
Holy Bible

1 : ಇಸ್ರಯೇಲರು ಯುದ್ಧಕ್ಕೆ ಸಿದ್ಧರಾಗುತ್ತಿದ್ದಾರೆ, ಬೆಟ್ಟದ ಸಂದಿಗಳನ್ನು ಮುಚ್ಚಿ ಬಿಟ್ಟಿದ್ದಾರೆ; ಬೆಟ್ಟದ ತುದಿಗಳಲ್ಲಿ ಕಾವಲು ಪಡೆಗಳನ್ನಿಟ್ಟಿದ್ದಾರೆ; ಬಯಲುಗಳಲ್ಲಿ ಅಡಚಣೆಗಳನ್ನು ತಂದೊಡ್ಡಿದ್ದಾರೆ ಎಂಬ ರಹಸ್ಯ ಸುದ್ದಿ ಅಸ್ಸೀರಿಯರ ಪ್ರಧಾನ ಸೇನಾಧಿಪತಿ ಹೊಲೊಫರ್ನೆಸನ ಕಿವಿಗೆ ಮುಟ್ಟಿತು.
2 : ಹೊಲೊಫರ್ನೆಸ್ ಕೋಪೋದ್ರೇಕದಿಂದ ಮೊವಾಬ್ಯ ಅರಸರನ್ನೂ ಅಮ್ಮೋನ್ಯರ ದಳಪತಿಗಳನ್ನೂ ಕರಾವಳಿಯ ಪಾಳೆಯಗಾರರನ್ನೂ ಕರೆಸಿದನು.
3 : “ಕಾನಾನಿನ ಜನರೇ, ಹೇಳಿ; ಗುಡ್ಡಗಾಡಲ್ಲಿ ನೆಲಸಿರುವ ಆ ಜನರು ಯಾರು? ಅವರ ನಿವಾಸ ಪಟ್ಟಣಗಳು ಯಾವುವು? ಅವರ ಸೈನ್ಯದ ಗಾತ್ರವೆಷ್ಟು? ಅದರ ಶಕ್ತಿಸಾಮಥ್ರ್ಯದ ಮೂಲ ಯಾವುದು? ಅವರ ಸೈನ್ಯವನ್ನು ಪಾಲಿಸಿ ನಡೆಸುವಂಥ ಒಡೆಯನು ಯಾರು?
4 : ಇತರ ಪಾಶ್ಚಾತ್ಯರಂತೆ ಇವರು ನಮ್ಮೊಡನೆ ಸಂಧಾನ ಮಾಡಿಕೊಳ್ಳಲು ಬರದೆ ಇರಲು ಕಾರಣವೇನು?” ಎಂದು ಕೇಳಿದನು.
5 : ಅಮ್ಮೋನ್ಯರ ಮುಖಂಡನಾದ ಆಕಿಯೋರ ಹೀಗೆಂದು ಪ್ರತ್ಯುತ್ತರವಿತ್ತನು: “ಒಡೆಯಾ, ದಾಸನಾದ ನಾನು ಹೇಳುವುದನ್ನು ದಯವಿಟ್ಟು ಕೇಳಿ: ನಿಮಗೆ ಹತ್ತಿರವೇ ಮನೆಮಾಡಿಕೊಂಡು ಇರುವ ಈ ಗುಡ್ಡಗಾಡಿನ ಜನರ ವಿಷಯವನ್ನು ನಿಮಗೆ ತಿಳಿಸುತ್ತೇನೆ. ಸತ್ಯವಲ್ಲದೆ ಬೇರೇನನ್ನೂ ನಿಮ್ಮ ದಾಸನಾದ ನಾನು ನುಡಿಯಲಾರೆ.
6 : ಈ ಜನ ಬಾಬಿಲೋನಿಯರ ಸಂತತಿಗೆ ಸೇರಿದವರು. ಬಾಬಿಲೋನಿಯದಲ್ಲಿ ವಾಸಮಾಡಿದ ಅವರ ಪಿತೃಗಳ ದೇವರುಗಳನ್ನು ಪೂಜಿಸಲು ಇಚ್ಛಿಸಲಿಲ್ಲ. ಆದುದರಿಂದ ಮೆಸಪಟೋಮಿಯಕ್ಕೆ ಬಂದು ನೆಲೆಸಿದರು.
7 : ಅವರ ಪಿತೃಗಳ ಮಾರ್ಗಗಳನ್ನು ತೊರೆದು, ಪರಲೋಕದ ದೇವರನ್ನು ಅಂಗೀಕರಿಸಿ, ಅವರಿಗೆ ಮಾತ್ರ ಆರಾಧನೆ ಸಲ್ಲಿಸಿದರು. ತಮ್ಮ ಸ್ವಂತ ದೇವದೇವತೆಗಳ ಸನ್ನಿಧಿಯಿಂದ ಬಹಿಷ್ಕøತರಾಗಿ ಮೆಸಪಟೋಮಿಯಕ್ಕೆ ಪಲಾಯನ ಮಾಡಿ ಅಲ್ಲಿ ದೀರ್ಘಕಾಲ ವಾಸಮಾಡಿದರು.
8 : ಅವರ ಪಿತೃಗಳ ಮಾರ್ಗಗಳನ್ನು ತೊರೆದು, ಪರಲೋಕದ ದೇವರನ್ನು ಅಂಗೀಕರಿಸಿ, ಅವರಿಗೆ ಮಾತ್ರ ಆರಾಧನೆ ಸಲ್ಲಿಸಿದರು. ತಮ್ಮ ಸ್ವಂತ ದೇವದೇವತೆಗಳ ಸನ್ನಿಧಿಯಿಂದ ಬಹಿಷ್ಕøತರಾಗಿ ಮೆಸಪಟೋಮಿಯಕ್ಕೆ ಪಲಾಯನ ಮಾಡಿ ಅಲ್ಲಿ ದೀರ್ಘಕಾಲ ವಾಸಮಾಡಿದರು.
9 : ತರುವಾಯ ಅವರ ಸ್ವಂತ ಮನೆಯನ್ನು ಬಿಟ್ಟು ಕಾನಾನಿಗೆ ಹೋಗಬೇಕೆಂದು ದೇವರು ಆಜ್ಞಾಪಿಸಲಾಗಿ ಅವರು ಕಾನಾನಿಗೆ ಹೋಗಿ ಅಲ್ಲಿ ನೆಲೆಸಿದರು. ಬೇಕಾದಷ್ಟು ಬೆಳ್ಳಿಬಂಗಾರವನ್ನೂ ದನಕುರಿಗಳನ್ನೂ ಸಂಪಾದಿಸಿಕೊಂಡರು.
10 : ಕಾನಾನ್ ನಾಡಿನಾದ್ಯಂತ ಕ್ಷಾಮ ಬಂದಾಗ ಅಲ್ಲಿಂದ ಈಜಿಪ್ಟಿಗೆ ವಲಸೆ ಹೋದರು. ಚೆನ್ನಾಗಿ ಪೋಷಣೆ ಪಡೆಯುವವರೆಗೆ ಅಲ್ಲೇ ತಂಗಿದರು. ಅಲ್ಲಿ ಅವರು ಅತಿಯಾಗಿ ವೃದ್ಧಿಯಾದರು, ಎಣಿಸಲಾಗದಷ್ಟು ಹೆಚ್ಚು ಸಂಖ್ಯೆಯುಳ್ಳವರಾದರು.
11 : ಆಗ ಈಜಿಪ್ಟಿನ ಅರಸ ಅವರಿಗೆ ವಿರೋಧಿಯಾದ; ಶೋಷಣೆಗೆ ಗುರಿಪಡಿಸಿದ; ತನ್ನ ಪ್ರಯೋಜನಕ್ಕಾಗಿ ಬಲವಂತದಿಂದ ದುಡಿಸಿಕೊಂಡ; ಇಟ್ಟಿಗೆ ಕಲ್ಲುಗಳನ್ನು ಸುಡುವ ಕೆಲಸಕ್ಕೆ ನೇಮಿಸಿದ; ಹೀಗೆ ಕೀಳಾಗಿ ಕಂಡು ಅವರನ್ನು ದಾಸ್ಯಕ್ಕೆ ಇಳಿಸಿದ.
12 : ಆಗ ಅವರು ತಮ್ಮ ದೇವರಿಗೆ ಮೊರೆ ಇಟ್ಟರು. ಆ ದೇವರಾದರೋ ಈಜಿಪ್ಟಿನ ಮೇಲೆಲ್ಲಾ ಗುಣಪಡಿಸಲಾಗದ ಘೋರವಾದ ವಿಪತ್ತುಗಳು ಎರಗುವಂತೆ ಮಾಡಿದರು. ಈಜಿಪ್ಟಿನವರು ಅವರನ್ನು ನಾಡಿನಿಂದ ಅಟ್ಟಿಬಿಟ್ಟರು.
13 : ದೇವರು ಅವರ ದಾರಿಗೆ ಅಡ್ಡವಾಗಿದ್ದ ಕೆಂಪು ಸಮುದ್ರವನ್ನು ಒಣಗಿಸಿ, ಸೀನಾಯಿ ಮತ್ತು ಕಾದೇಶ್-ಬರ್ನೆಯಾ ಮೂಲಕ ನಡೆಸಿಕೊಂಡು ಹೋದರು.
14 : ಮರುಭೂಮಿಯಲ್ಲಿ ನೆಲೆಸಿದ್ದವರನ್ನೇ ದೂರ ಅಟ್ಟಿಬಿಟ್ಟು ಅಮೋರಿಯರ ನಾಡಿನಲ್ಲಿ ನೆಲೆಸಿದರು.
15 : ಆಗ ಹೆಷ್ಬೋನಿನ ಜನಾಂಗವನ್ನೇ ನಾಶಗೊಳಿಸಿದರು. ಅಷ್ಟು ಶಕ್ತಿ ಅವರಿಗಿತ್ತು. ಅನಂತರ ಜೋರ್ಡನ್ ನದಿಯನ್ನು ದಾಟಿ, ಅಲ್ಲಿದ್ದ ಗುಡ್ಡಗಾಡಿನ ಪ್ರದೇಶವನ್ನೆಲ್ಲಾ ಆಕ್ರಮಿಸಿಕೊಂಡರು.
16 : ಅಲ್ಲಿಂದ ಕಾನಾನ್ಯರು, ಪೆರಿಜೀಯರು, ಯೆಬೂಸಿಯರು, ಶೆಕೆಮಿನವರು, ಗಿರ್ಗಷಿಯರು ಮುಂತಾದವರನ್ನೆಲ್ಲ ಓಡಿಸಿಬಿಟ್ಟು, ಅನೇಕ ವರ್ಷಗಳವರೆಗೆ ಅಲ್ಲೇ ಜೀವಿಸಿದರು.
17 : ಇಸ್ರಯೇಲಿನ ದೇವರು ಕೇಡನ್ನು ಸಹಿಸರು. ಜನರು ಅವರ ವಿರುದ್ಧ ಯಾವ ಪಾಪವನ್ನು ಮಾಡದಿದ್ದಾಗ ಅವರಿಗೆ ಶುಭವಾಗುತ್ತಿತ್ತು.
18 : ಆದರೆ ಯಾವಾಗ ಜನರು ಆ ದೇವರು ಸೂಚಿಸಿದ ಸನ್ಮಾರ್ಗವನ್ನು ಬಿಟ್ಟು ಬೇರೆ ದೇವದೇವತೆಗಳನ್ನು ಪೂಜಿಸತೊಡಗಿದರೋ, ಆಗ ಅವರಿಗೆ ವಿಪತ್ತು ಬಂದೊದಗುತ್ತಿತ್ತು. ಅವರಲ್ಲಿ ಅನೇಕರು ಹಲವಾರು ಕಾಳಗಗಳಲ್ಲಿ ಮಡಿದರು. ಇತರರು ಬೇರೆ ದೇಶಕ್ಕೆ ಸೆರೆಹೋದರು. ಅವರ ಮಹಾದೇವಾಲಯ ನೆಲಸಮವಾಯಿತು. ಅವರ ಪಟ್ಟಣಗಳು ಶತ್ರುಗಳ ವಶವಾದುವು.
19 : ಆಗ ಪುನಃ ಇಸ್ರಯೇಲರು ತಮ್ಮ ದೇವರ ಕಡೆಗೆ ತಿರುಗಿಕೊಂಡು ಸ್ವಂತ ನಾಡಿಗೆ ಹಿಂದಿರುಗಿದರು. ಗಡೀಪಾರಾಗಿ ಚದುರಿ ಹೋದವರು ಮರಳಿಬಂದು, ತಮ್ಮ ಮಹಾದೇವಾಲಯವಿರುವ ಜೆರುಸಲೇಮ್ ಪಟ್ಟಣವನ್ನು ವಶಪಡಿಸಿಕೊಂಡಿದ್ದಾರೆ. ಹೀಗೆ ನಿರ್ಜನವಾಗಿದ್ದ ಆ ಗುಡ್ಡಗಾಡಿನ ನಾಡಿನಲ್ಲಿ ಅವರು ಜೀವಿಸುತ್ತಾ ಇದ್ದಾರೆ.
20 : ಆದುದರಿಂದ ಒಡೆಯಾ, ದೊರೆಯೇ, ಈ ಜನರು ಯಾವುದಾದರೂ ತಪ್ಪನ್ನು ಮಾಡಿದ್ದರೆ, ಅವರ ದೇವರಿಗೆ ದ್ರೋಹಬಗೆದಿದ್ದರೆ, ಖಂಡಿತವಾಗಿ ನಮ್ಮ ಕೈಗೆ ಸಿಕ್ಕಿಬೀಳುವರು. ಇದನ್ನು ನಿಗದಿ ಮಾಡಿಕೊಂಡರೆ ನಾವು ಅವರಿಗೆ ಇದಿರಾಗಿ ಹೋಗಿ, ಮುತ್ತಿಗೆ ಹಾಕಬಹುದು.
21 : ಆದರೆ, ಅವರ ರಾಷ್ಟ್ರ ನಿರ್ದೋಷವಾಗಿದ್ದರೆ, ಒಡೆಯಾ, ನಾವು ಸುಮ್ಮನಿರುವುದು ಒಳಿತು. ಏಕೆಂದರೆ, ಅವರ ದೇವರಾದ ಸರ್ವೇಶ್ವರ ಅವರನ್ನು ಸಂರಕ್ಷಿಸುತ್ತಾರೆಂಬ ಭಯವಿದೆ. ಆಗ ನಾವು ಸೋತು ಇಡೀ ವಿಶ್ವಕ್ಕೇ ನಗೆಪಾಟಲಾಗಬೇಕಾಗುವುದು.”
22 : ಆಕಿಯೋರನು ತನ್ನ ಭಾಷಣವನ್ನು ಮುಗಿಸಿದಾಗ, ಗುಡಾರದ ಸುತ್ತಲಿದ್ದ ಜನರೆಲ್ಲರು ಪ್ರತಿಭಟಿಸಲು ಪ್ರಾರಂಭಿಸಿದರು. ಹೊಲೊಫರ್ನೆಸನ ಕೈಕೆಳಗಿನ ಹಿರಿಯ ಅಧಿಕಾರಿಗಳು, ಕರಾವಳಿಯ ಜನರು ಮತ್ತು ಮೋವಾಬ್ಯರು ಅವನ ಅಂಗಾಂಗಳನ್ನು ಕಿತ್ತುಹಾಕಬೇಕೆಂದು ಬೆದರಿಕೆ ಹಾಕಿದರು.
23 : “ನಾವು ಇಸ್ರಯೇಲರಿಗೆ ಭಯಪಡುವುದೇಕೆ? ಅವರು ದುರ್ಬಲರು, ಅಶಕ್ತರು; ನಮ್ಮ ಬಲವಂತ ಸೈನ್ಯವನ್ನು ಎದುರಿಸಲಾರರು. ನಡೆಯಿರಿ, ಹೋಗೋಣ, ಹೊಲೊಫರ್ನೆಸರೇ, ನಮ್ಮೊಡೆಯರೇ, ನಿಮ್ಮ ಸೈನ್ಯವು ಅವರನ್ನೆಲ್ಲ ಒಂದೇ ತುತ್ತಿಗೆ ಕಬಳಿಸಬಲ್ಲದು,” ಎಂದರು.

Holydivine