Ecclesiastes - Chapter 4
Holy Bible

1 : ಇದಾದ ಮೇಲೆ ಈ ಜಗದಲ್ಲಿ ಎಲ್ಲಾ ತರದ ಚಿತ್ರಹಿಂಸೆಗಳನ್ನು ಕುರಿತು ಯೋಚಿಸಿದೆ. ಅಯ್ಯೋ, ಹಿಂಸೆಗೆ ಈಡಾದವರ ಕಣ್ಣೀರನ್ನು ಕುರಿತು ಏನೆಂದು ಹೇಳಲಿ? ಅವರನ್ನು ಸಂತೈಸುವವರು ಯಾರೂ ಇಲ್ಲ. ಹಿಂಸಾಚಾರಿಗಳು ಶಕ್ತಿಸಾಮಥ್ರ್ಯ ಉಳ್ಳವರು. ಸಂತೈಸುವವರಾದರೋ ಒಬ್ಬರೂ ಇರಲಿಲ್ಲ.
2 : ಇದನ್ನು ನೋಡಿ ಜೀವದಿಂದ ಇರುವವರಿಗಿಂತ ಸತ್ತವರೇ ಧನ್ಯರೆಂದು ಹೊಗಳಿದೆ.
3 : ಹೌದು, ಉಭಯರಿಗಿಂತಲೂ ಇನ್ನೂ ಹುಟ್ಟದೆ, ಜಗದಲ್ಲಿನ ಅಧರ್ಮವನ್ನು ಕಾಣದೆ ಇರುವವನು ಮತ್ತಷ್ಟು ಭಾಗ್ಯವಂತನೆಂದು ತಿಳಿದುಕೊಂಡೆ.
4 : ಮಾನವನು ಪಡುವ ಸಮಸ್ತ ಪರಿಶ್ರಮವನ್ನು ಹಾಗೂ ಸಾಧಿಸುವ ಸಕಲ ಕಾರ್ಯಗಳನ್ನು ಅವಲೋಕಿಸಿದೆ. ಇವಕ್ಕೆಲ್ಲ ಪರರ ಬಗ್ಗೆ ಅವನಿಗಿರುವ ಮತ್ಸರವೇ ಕಾರಣವೆಂದು ತೋರಿಬಂತು. ಇದೂ ಕೂಡ ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ವ್ಯರ್ಥ.
5 : ಕೈಕಟ್ಟಿಕೊಂಡು ಕುಳಿತುಕೊಳ್ಳುವ ಮೈಗಳ್ಳನಾದ ಮೂಢನಿಗೆ ಅವನ ಒಡಲೇ ಊಟ.
6 : ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ಎರಡು ಕೈಹಿಡಿ ವ್ಯರ್ಥ ಪರಿಶ್ರಮಕ್ಕಿಂತ ಒಂದೇ ಕೈಹಿಡಿಯಷ್ಟು ಸಂಪಾದನೆ ಪಡೆದು ನೆಮ್ಮದಿಯಿಂದಿರುವುದು ಲೇಸು.
7 : ಲೋಕದಲ್ಲಿ ಮತ್ತೊಂದು ವ್ಯರ್ಥ ವಿಷಯವನ್ನು ಕಂಡೆ. ಒಬ್ಬಂಟಿಗನಾದ ಮನುಷ್ಯನೊಬ್ಬ ಇದ್ದ. ಅವನಿಗೆ ಅಣ್ಣತಮ್ಮಂದಿರು ಇರಲಿಲ್ಲ. ಮಕ್ಕಳುಮರಿ ಇರಲಿಲ್ಲ. ಆದರೂ ಅವನ ದುಡಿಮೆಗೆ ಎಲ್ಲೆ ಇರಲಿಲ್ಲ. ಆಸ್ತಿಪಾಸ್ತಿಯಿಂದ ಅವನ ಕಣ್ಣಿಗೆ ತೃಪ್ತಿ ಇರಲಿಲ್ಲ.
8 : “ನಾನು ಸುಖಾನುಭವವನ್ನು ತೊರೆದು ಯಾರಿಗೋಸ್ಕರ ಒಂದೇ ಸಮನೆ ದುಡಿಯುತ್ತಾ ಇದ್ದೇನೆ?” ಎಂದುಕೊಂಡ. ಇದೂ ಕೂಡ ವ್ಯರ್ಥ, ಕೇವಲ ಪ್ರಯಾಸವೇ ಸರಿ.
9 : ಒಬ್ಬನಿಗಿಂತ ಇಬ್ಬರು ಲೇಸು; ಅವರ ಪ್ರಯಾಸಕ್ಕೆ ಹೆಚ್ಚಿನ ಲಾಭ.
10 : ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುತ್ತಾನೆ; ಬಿದ್ದಾಗ ಎತ್ತುವವನು ಇಲ್ಲದಿದ್ದರೆ ಅವನ ಗತಿ ದುರ್ಗತಿಯೇ ಸರಿ.
11 : ಇದಲ್ಲದೆ, ಒಬ್ಬನ ಮಗ್ಗುಲಲ್ಲಿ ಇನ್ನೊಬ್ಬನು ಮಲಗಿಕೊಂಡರೆ ಇಬ್ಬರಿಗೂ ಬೆಚ್ಚಗಾದೀತು!
12 : ಒಬ್ಬಂಟಿಗನನ್ನು ಜಯಿಸಬಲ್ಲವನಿಗೆ ಇಬ್ಬರು ಕೂಡ ಎದುರಾಗಿ ನಿಲ್ಲಬಹುದು. ಮೂರು ಹುರಿಗಳಿಂದ ಹೆಣೆದ ಹಗ್ಗ ಸುಲಭವಾಗಿ ಕಿತ್ತು ಹೋಗುವುದಿಲ್ಲ.
13 : ಬುದ್ಧಿಮಾತಿಗೆ ಕಿವಿಗೊಡದ ಮೂರ್ಖನಾದ ಮುದಿಯರಸನಿಗಿಂತ ಜ್ಞಾನಿಯಾದ ಬಡಯುವಕನೇ ಮೇಲು.
14 : ಇಂಥ ಯುವಕನೊಬ್ಬನನ್ನು ರಾಜನನ್ನಾಗಿಸಲು ಸೆರೆಮನೆಯಿಂದ ಕರೆ ತರಲಾಯಿತು. ರಾಜ್ಯದಲ್ಲಿ ಒಬ್ಬ ಬಡ ಪ್ರಜೆಯಾಗಿ ಹುಟ್ಟಿದವನು ಆತ.
15 : ಜಗತ್ತಿನಲ್ಲಿ ಬದುಕಿದ್ದ ಜೀವಂತರೆಲ್ಲರು ರಾಜನಿಗೆ ಪ್ರತಿಯಾಗಿ ನಿಂತ ಆ ಯುವಕನ ಪಕ್ಷವಹಿಸುವುದನ್ನು ಕಂಡೆ.
16 : ಇವನ ಅಧಿಪತ್ಯಕ್ಕೆ ಒಳಪಟ್ಟ ಜನಜಂಗುಳಿಯ ಸಂಖ್ಯೆ ಅಪಾರವಾಗಿತ್ತು. ಇವನ ನಂತರ ಬಂದವರಾದರೋ ಇವನ ಬಗ್ಗೆ ಅಭಿಮಾನ ತೋರಲಿಲ್ಲ. ಇದು ಸಹ ವ್ಯರ್ಥ, ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ವ್ಯರ್ಥ.

Holydivine